ಇವತ್ತು ಮಹಿಳೆಯರು ಉಡುವ ರವಿಕೆಯು ಟಿಪ್ಪುವಿನ ಕೊಡುಗೆಯಾಗಿದೆ. ರಣರಂಗದಲ್ಲಿ ಹೋರಾಡಿ ಮಡಿದ ಒಬ್ಬರೇ ಒಬ್ಬ ರಾಜರೆಂದರೆ; ಟಿಪ್ಪು ಸುಲ್ತಾನ್. ಅದರಂತೆ ಒಬ್ಬರೇ ಒಬ್ಬ ರಾಣಿಯೆಂದರೆ; ಜಾನ್ಸಿ ರಾಣಿ ಲಕ್ಷ್ಮೀಬಾಯಿ ಎಂದು ಹೇಳಬೇಕು. ಉಳುವವನೇ ಭೂಮಿಯ ಒಡೆಯ ಎಂದು ಮೊಟ್ಟ ಮೊದಲು ಸಾರಿದ್ದು ಟಿಪ್ಪು ಸುಲ್ತಾನ್. ಅಂತಹ ರಾಜನನ್ನು ಅರ್ಥೈಸಿಕೊಳ್ಳುವಲ್ಲಿ ಸೋತಿದ್ದೇವೆ ಎಂದು ಧಾರವಾಡದ ಅಂಜುಮನ್ ಕಾಲೇಜಿನಲ್ಲಿ ಏರ್ಪಡಿಸಿದ್ದ ಟಿಪ್ಪು ಸುಲ್ತಾನ್ ಜನ್ಮದಿನಾಚರಣೆ ಕಾರ್ಯಕ್ರಮದಲ್ಲಿ ಕರ್ನಾಟಕ ಕುಲಪುರೋಹಿತ ರಾಷ್ಟ್ರೀಯ ಆಲೂರು ವೆಂಕಟರಾವ್ ಸ್ಮಾರಕ ಟ್ರಸ್ಟ್ ನ ಅಧ್ಯಕ್ಷ ರಂಜಾನ್ ದರ್ಗಾ ಹೇಳಿದರು.
ಅಂಜುಮನ್ ಕಾಲೇಜಿನಲ್ಲಿ ಟಿಪ್ಪು ಸುಲ್ತಾನ್ ಜನ್ಮದಿನಾಚರಣೆಯ ಅಂಗವಾಗಿ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಮಾತನಾಡುತ್ತಾ, ಸಾಮಾನ್ಯವಾಗಿ ಕಂದಾಯ ತೆರಿಗೆ ಕಡಿಮೆ ಮಾಡಲು ಧ್ವನಿ ಕೇಳಿಬರುತ್ತದೆ. ಆದರೆ ಟಿಪ್ಪು ಸುಲ್ತಾನರ ಕಾಲದಲ್ಲಿ ಬ್ರಿಟಿಷರಲ್ಲಿ ಒತ್ತೆಯಿಟ್ಟ ಮಕ್ಕಳನ್ನು ಬಿಡಿಸಿಕೊಂಡು ಬರುವ ಸಲುವಾಗಿ ರೈತರು ಬಂದು ಅವರಿಗೆ ಕಂದಾಯ ತೆರಿಗೆ ಹೆಚ್ಚಿಸಲು ವಿನಂತಿಸಿದ್ದರು. 1799 ರಲ್ಲಿ ಈಸ್ಟ್ ಇಂಡಿಯಾ ಕಂಪನಿಯು ಟಿಪ್ಪು ಗೆದ್ದರೆ ಇಂಡಿಯಾ ಗೆದ್ದಂತೆ ಎಂದು ಹೇಳಿತ್ತು. ಟಿಪ್ಪು ಸುಲ್ತಾನ್ ಸ್ವಂತ ಮಕ್ಕಳಿಗಾಗಿ ರಾಜ್ಯದ ಮಕ್ಕಳನ್ನು ಅನಾಥ ಮಾಡಲಾರೆ ಎಂದಿದ್ದರು ಎಂದು ಹೇಳಿದರು.
ಇದನ್ನೂ ಓದಿ ಧಾರವಾಡ | ಟಿಪ್ಪು ಸುಲ್ತಾನ್ ಯಾವತ್ತೂ ಆಂಗ್ಲರಿಗೆ ಗುಲಾಮನಾಗಿ ಬದುಕಲಿಲ್ಲ: ಪ್ರಮೀಳಾ ಮೇಟಿ
ಇದೇ ವೇಳೆ ರಾಷ್ಟ್ರೀಯ ಬಸವದಳದ ಪ್ರಧಾನ ಕಾರ್ಯದರ್ಶಿ ಗಂಗಾಧರ್ ದೊಡ್ಡವಾಡ ಮಾತನಾಡಿ, ಇತಿಹಾಸವನ್ನು ತಿರುಚುವ ಕೆಲಸವಾಗುತ್ತಿದೆ ಇದರಿಂದ ಯುವಕರನ್ನು ದಾರಿ ತಪ್ಪಿಸುವ ಹುನ್ನಾರ ನಡೆಯುತ್ತಿದೆ. ಯುವಕರು ಮನಸ್ಸು ಮಾಡಿದರೆ ಮತ್ತೊಂದು ಕ್ರಾಂತಿಯೇ ಆಗಬಹುದು. ಮೊಹರಂ ಸಂದರ್ಭದಲ್ಲಿ ಪ್ರಧಾನಿ ಮೋದಿಯವರನ್ನು ಕರೆತರಬೇಕಿದೆ. ಅದರಿಂದ ನಾವೆಲ್ಲ ಒಗ್ಗಟ್ಟಿನಿಂದ, ಭಾವೈಕ್ಯತೆಯಿಂದ ಬದುಕುತ್ತಿದ್ದೇವೆ ಎಂಬುದು ಅವರಿಗೆ ಅರ್ಥೈವಾಗುತ್ತದೆ. ಸರ್ಕಾರವು ಏಕೆ ಟಿಪ್ಪುವನ್ನು ಭಾವೈಕ್ಯತಾ ವೀರನೆಂದು ನೆನಪಿಸಿಕೊಳ್ಳುತ್ತಿಲ್ಲ. ಮತ್ತು ಟಿಪ್ಪು ಸುಲ್ತಾನ್ ಹೆಸರಿನಲ್ಲಿ ಸರ್ಕಾರವು ಪ್ರಶಸ್ತಿ ಸ್ಥಾಪನೆ ಮಾಡಬೇಕು ಎಂದು ಒತ್ತಾಯಿಸಿದರು.





