‘ತಾಳಿದವರನು ಬಾಳಿಯಾನು’ ಎಂಬಂತೆ ರಾಜಕಾರಣ ಮಾಡಲು ಮುಖ್ಯವಾಗಿ ತಾಳ್ಮೆ ಬೇಕಾಗುತ್ತದೆ. ನಾನು ಇವತ್ತು ಕಾಂಗ್ರೆಸ್ ಅಭ್ಯರ್ಥಿ ಎನ್ನುವುದಕ್ಕಿಂದ ನವಲಗುಂದ ಕ್ಷೇತ್ರದ ಮಗನಾಗಿ ನಿಮ್ಮಮುಂದೆ ನಿಂತಿದ್ದೇನೆ. ನನಗೆ ಆಶಿರ್ವಾದ ಮಾಡಬೇಕು ಎಂದು ಧಾರವಾಡ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ವಿನೋದ್ ಅಸೂಟಿ ವಿನಂತಿಸಿದರು.
ಧಾರವಾಡ ಜಿಲ್ಲೆಯ ನವಲಗುಂದದ ಅಪ್ಪಾಜಿ ಗಾರ್ಡನ್ನಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ನವಲಗುಂದ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಮುಖಂಡರ ಹಾಗೂ ಕಾರ್ಯಕರ್ತರ ಸಭೆಯಲ್ಲಿ ಅವರು ಮಾತನಾಡಿದರು.
“ಯಾರೂ ಕೂಡಾ ಯಾರ ಅಭಿಮಾನಿಗಳಾಗದೆ ಕಾಂಗ್ರೆಸ್ ಪಕ್ಷದ ಅಭಿಮಾನಿಗಳಾಗಿರಿ. ಬಿಜೆಪಿಯು ಜಾತಿ, ಮತ, ಧರ್ಮದಿಂದ ಒಡೆದಾಳುವ ಕೆಲಸ ಮಾಡುತ್ತಿರುವ ಕಾರಣ ಎಲ್ಲ ಸಮುದಾಯಗಳಿಗೂ ಸಮಾನ ನ್ಯಾಯ ದೊರಕಿಸಿಕೊಡುವ ಕಾಂಗ್ರೆಸ್ಗೆ ಮತ ನೀಡಬೇಕು” ಎಂದು ಕೋರಿದರು.
ಮರಾಠಾ ಸಮಾಜದ ಮುಖಂಡ ನೀರಲಕಟ್ಟಿ ಮಾತನಾಡಿ, ಶೇ.97ರಷ್ಟು ಶೋಷಿತ ಸಮುದಾಯಗಳ ಧ್ವನಿಯಾಗಿ ವಿನೋದ್ ಅಸೂಟಿ ಕಣಕ್ಕಿಳಿದಿದ್ದಾರೆ. ನಾವೆಲ್ಲ ಸೇರಿ ಶೇ.3ರಷ್ಟು ಇರುವ ದಬ್ಬಾಳಿಕೆ ಮತ್ತು ಕೋಮುವಾದಿಗಳನ್ನು ಸದೆಬಡಿಯುವ ಕಾರ್ಯ ಮಾಡುತ್ತೇವೆ. ಬಿಜೆಪಿಗರು ಹಿಂದುತ್ವ ಕುರಿತು ಮಾತನಾಡಿದರೆ ನಾವು ಕಾಂಗ್ರೆಸಿಗರು ಬಹುತ್ವದ ಕುರಿತು ಮಾತನಾಡಿ, ಎಲ್ಲರನ್ನೂ ಒಳಗೊಂಡು ಒಡೆದಾಳುವ ನೀತಿಯ ವಿರುದ್ಧ ಮತಹಾಕಿ ಧಾರವಾಡ ಲೋಕಸಭಾ ಕ್ಷೇತ್ರವನ್ನು ಶಾಂತಿ ಮತ್ತು ಸೌಹಾರ್ದತೆಯ ಕ್ಷೇತ್ರವನ್ನಾಗಿ ರೂಪಿಸಲು ಕಾಂಗ್ರೆಸ್ ಪಕ್ಷವನ್ನು ಗೆಲ್ಲಿಸಬೇಕಿದೆ” ಎಂದು ಕರೆಕೊಟ್ಟರು.
“ನಮ್ಮ ಮೇಲೆ ಬುದ್ಧ ಬಸವ ಅಂಬೇಡ್ಕರ್ ಆಶಿರ್ವಾದ ಸದಾ ಇದ್ದೇ ಇರುತ್ತದೆ. ಈಗಾಗಲೇ ಬಿಜೆಪಿ ಭದ್ರಕೋಟೆಯಾಗಿದ್ದ ನವಲಗುಂದ ಕ್ಷೇತ್ರವನ್ನು ಕಾಂಗ್ರೆಸ್ ತೆಕ್ಕೆಗೆ ವಶಪಡಿಸಿಕೊಂಡಿದ್ದೇವೆ. ಇನ್ನು ಧಾರವಾಡ ಲೋಕಸಭಾ ಕ್ಷೇತ್ರವನ್ನು ವಶಪಡಿಸಿಕೊಳ್ಳುವುದರಲ್ಲಿ ಯಾವುದೇ ಸಂಶಯವಿಲ್ಲ” ಎಂದು ಪಕ್ಷದ ಕಾರ್ಯಕರ್ತರು ಹೇಳಿದರು.
ಮುಸ್ಲಿಂ ಮುಖಂಡರೊಬ್ಬರು ಮಾತನಾಡಿ, “ನಮ್ಮ ನವಲಗುಂದದಲ್ಲಿ ಬಹುತೇಕ ಹಿಂದೂ ದೇವಸ್ಥಾನಗಳಿಗೇ ಜೋಶಿಯವರ ಒಂದು ರೂಪಾಯಿ ಅನುದಾನ ಸಿಕ್ಕಿಲ್ಲ. ಉದಾಹರಣೆಗೆ ನಾಗಲಿಂಗಜ್ಜನಮಠಕ್ಕೆ ಅವರ ಅನುದಾನ ಶೂನ್ಯ, ನೀಲಮ್ಮನ ಜಲಾಶಯಕ್ಕೆ ಜೋಶಿಯವರ ಅನುದಾನ ಇಲ್ಲವೇ ಇಲ್ಲ. ನಮ್ಮ ಕ್ಷೇತ್ರಕ್ಕೆ ಪ್ರಲ್ಹಾದ್ ಜೋಶಿ ಎಲೆಕ್ಷನ್ ಬಂದಾಗ ಮಾತ್ರ ಕಾಲಿಡುತ್ತಾರೆ. ಮಹದಾಯಿ ಯೋಜನೆ ಜಾರಿಯಾಗದಂತೆ ಅಡ್ಡವಾಗಿ ನಿಂತಿರುವುದೇ ಪ್ರಲ್ಹಾದ್ ಜೋಶಿ” ಎಂದು ಆರೋಪಿಸಿದರು.
“ಪ್ರಲ್ಹಾದ್ ಜೋಶಿಯವರಿಗೆ ಅಷ್ಟೊಂದು ಖಾಳಜಿ ಇದ್ದಿದ್ದರೆ ಇಷ್ಟೊತ್ತಿಗಾಗಲೇ ಕಳಸಾ ಬಂಡೂರಿ ಹೋರಾಟಕ್ಕೆ ಪೂರ್ಣವಿರಾಮ ಸಿಕ್ಕು, ನಮಗೆಲ್ಲ ನ್ಯಾಯ ಸಿಗುತ್ತಿತ್ತು. ಅವರಿಗೆ ಕೋಮುವಾದಿ ರಾಜಕಾರಣ ಮಾಡದ ಹೊರತು ಮತ್ತೇನೂ ಗೊತ್ತಿಲ್ಲ” ಎಂದು ಕಿಡಿಕಾರಿದರು.
ಶಾಸಕ ಎನ್ ಎಚ್ ಕೋನರಡ್ಡಿ ಮಾತನಾಡಿ, “ಐದು ಗ್ಯಾರಂಟಿ ಯೋಜನೆಗಳನ್ನು ಕೇವಲ ಎಂಟು ತಿಂಗಳಿನಲ್ಲಿ ಕಾಂಗ್ರೆಸ್ ಜಾರಿಗೆ ತಂದಿದೆ. ನಮ್ಮ ಬೆನ್ನೆಲುಬಾಗಿ ಐದು ಗ್ಯಾರಂಟಿ ಯೋಜನೆಗಳಿವೆ. ಆದ್ದರಿಂದ ಈ ಬಾರಿ ವಿನೋದ್ ಅಸೂಟಿ ಗೆಲುವು ನಿಶ್ಚಿತ ಮತ್ತು ಅಸೂಟಿ ಗೆಲವಿಗಾಗಿ ನಾವು ಅವಿರತ ಶ್ರಮೀಸುತ್ತೇವೆ” ಎಂದು ಭರವಸೆ ನೀಡಿದರು.
“ಜಾತ್ಯಾತೀತ ಮತ್ತು ಪಕ್ಷಾತೀತವಾಗಿ ಮನೆ ಮನೆಗೂ ತೆರಳಿ ಮತವನ್ನು ಕೇಳಿರಿ” ಎಂದು ಕಾರ್ಯಕರ್ತರಿಗೆ ಕರೆಕೊಟ್ಟ ಅವರು, “ಪ್ರತಿಬಾರಿಗಿಂತ ಈ ಸಲದ ಚುನಾವಣೆ ಬಹಳ ಅಮೂಲ್ಯವಾದದ್ದು. ಈ ಸಲದ ಚುನಾವಣೆಯನ್ನು ಅಷ್ಟೊಂದು ಸುಲಭವಾಗಿ ತೆಗೆದುಕೊಳ್ಳಬಾರದು. ಎಲ್ಲರೂ ನಾನೂ ಅಸೂಟಿ ಎಂಬ ಭಾವನೆಯಿಂದ ಚುನಾವಣೆ ಪ್ರಚಾರ ಮಾಡೋಣ. ಹುಬ್ಬಳ್ಳಿ ಶಾಸಕ ಪ್ರಸಾದ್ ಅಬ್ಬಯ್ಯ, ಕಾರ್ಮಿಕ ಸಚಿವ ಸಂತೋಷ್ ಲಾಡ್, ಧಾರವಾಡ ಶಾಸಕ ವಿನಯ ಕುಲಕರ್ಣಿ ಮತ್ತು ಅವರ ಪತ್ನಿ ಶಿವಲೀಲಾ ಕುಲಕರ್ಣಿ ಎಲ್ಲರೂ ನಮ್ಮ ಬೆಂಬಲಕ್ಕಿದ್ದಾರೆ. ಹಾಗಾಗಿ ನಾವೆಲ್ಲ ಹೆದರುವ ಅವಶ್ಯವಿಲ್ಲ” ಎಂದು ಹೇಳಿದರು.
ಈ ಸುದ್ದಿ ಓದಿದ್ದೀರಾ? ದಾವಣಗೆರೆ | ಬಿಜೆಪಿಯ ಸಿದ್ದೇಶ್ವರ್ ಕುಟುಂಬವನ್ನು ಸೋಲಿಸಿ ಕಾಂಗ್ರೆಸ್ ಗೆಲ್ಲಿಸಿ; ಪ್ರಭಾ ಮಲ್ಲಿಕಾರ್ಜುನ್ ಕರೆ
“ಯಾರೂ ವ್ಯಯಕ್ತಿಕ ದ್ವೇಷ, ಭಿನ್ನಾಭಿಪ್ರಾಯಗಳನ್ನು ಮನದಲ್ಲಿಟ್ಟುಕೊಳ್ಳದೆ, ಎಲ್ಲವನ್ನೂ ಬದಿಗಿಟ್ಟು ವಿನೋದ್ ಅಸೂಟಿಯವರನ್ನು ಗೆಲ್ಲಿಸಬೇಕಿದೆ. ಸಿಎಂ ಮತ್ತು ಡಿಸಿಎಂ ಈಗಾಗಲೇ ಕಳಸಾ ಬಂಡೂರಿ ಯೋಜನೆಗೆ ಟಂಡರ್ ಕರೆದಿದ್ದಾರೆ. ಕೇಂದ್ರ ಸಚಿವರು ಈ ಕುರಿತು ಮೀನಾಮೇಷ ಪಾಲಿಸಿ ಈಗ ಮತ ಕೇಳಲು ಬರುತ್ತಿರುವುದು ದುರಂತ. ಆದರೂ ಬಿಜೆಪಿ ಟೀಕೆ ನಮಗೀಗ ಬೇಕಿಲ್ಲ. ಅದರ ಬದಲು ಪ್ರಾಮಾಣಿಕಾಗಿ ದುಡಿದು, ನಿರಂತರ ಒಂದು ತಿಂಗಳ ಶ್ರಮಿಸಿ ಅಸೂಟಿಯವರನ್ನು ಗೆಲ್ಲಿಸೋಣ ಎಂದು ಕರೆ ಕೊಟ್ಟರು.




