ಕರೋಕೆ ಸಂಗೀತವು ಒಂದು ಸಂಗೀತ ಮಾಧ್ಯಮವಾಗಿ ಪರಿವರ್ತನೆಗೊಳ್ಳುತ್ತಿದ್ದು, ಕರೋಕೆ ಸಂಗೀತಗಾರರ ಪ್ರಯತ್ನ ಮತ್ತು ವಿಶ್ವಾಸವನ್ನು ನಾವೆಲ್ಲರೂ ಮೆಚ್ಚಲೆಬೇಕು. ಇವರೆಲ್ಲರೂ ಮುಂಬರುವ ದಿನಗಳಲ್ಲಿ ಕನ್ನಡ, ನಾಡು, ನುಡಿ ಹಾಗೂ ಜಾನಪದ, ಭಾವಗೀತೆ, ಹಂತಿಪದ ಇವುಗಳನ್ನು ಸಹ ಕಲಿತು ಹಾಡಬೇಕು. ಇಂತಹ ಕಾರ್ಯಕ್ರಮಗಳನ್ನು ಗ್ರಾಮೀಣ ಪ್ರದೇಶಗಲ್ಲಿ ಆಯೋಜಿಸಬೇಕು ಎಂದು ಕ.ವಿ.ವ. ಸಂಘದ ಕೋಶಾಧ್ಯಕ್ಷ ಸತೀಶ ತುರಮರಿ ಹೇಳಿದರು.
ಸಂಗೀತ ವರ್ಷಿಣಿ ಕಲಾ ಸಂಸ್ಥೆಯ ವತಿಯಿಂದ ಡಾ. ಪಾಟೀಲ ಪುಟ್ಟಪ್ಪ ಸಭಾಭವನದಲ್ಲಿ ಆಯೋಜಿಸಿದ್ದ ರಾಜ್ಯಮಟ್ಟದ ಕರೋಕೆ ಸಂಗೀತ ಕಾರ್ಯಕ್ರಮವನ್ನು ಉದ್ಘಾಟಿಸಿ, ಮಾತನಾಡಿದ ಅವರು, ಕರೋಕೆ ಸಂಗೀತಗಾರರು ಹುಟ್ಟಿನಿಂದ ಸಂಗೀತಾಭ್ಯಾಸ ಮಾಡಿರುವುದಿಲ್ಲ. ಅವರ ವೃತ್ತಿ ಜೀವನದೊಂದಿಗೆ ಸಂಗೀತವನ್ನು ಹವ್ಯಾಸವಾಗಿ ಕಲಿತು ಯಾವ ಗುರುಗಳಿಲ್ಲದೆ ತಾವೇ ಸ್ವತಃ ಮನೆಯಲ್ಲಿ ಸ್ಟುಡಿಯೋಗಳಿಗೆ ಹೋಗಿ ಹಾಡಿನ ಟ್ರ್ಯಾಕ್ ಮುಖಾಂತರ ಸಂಗೀತವನ್ನು ಕಲಿತು ಮೂಲ ಸಂಗೀತಗಾರರಗಿಂತ ಚೆನ್ನಾಗಿ ಹಾಡುತ್ತಾರೆ. ಅಲ್ಲಿಯ ಜನರಿಗೆ ಸಹ ಇದೊಂದು ಮನರಂಜನೆ ಕಾರ್ಯಕ್ರಮವಾಗುತ್ತದೆ.
ಸಂಗೀತವರ್ಷಿಣಿಯ ಅಧ್ಯಕ್ಷೆ ವೀಣಾ ಪತ್ತಾರ ಅವರು ಸುಮಾರ 8 ವರ್ಷಗಳಿಂದ ರಾಜ್ಯದ ಎಲ್ಲ ಜಿಲ್ಲೆಗಳ ಪ್ರಸಿದ್ಧ ಕರೋಕೆ ಗಾಯಕರನ್ನು ಕರೆಯಿಸಿ ಇಲ್ಲಿ ಕಾರ್ಯಕ್ರಮ ನಡೆಸುತ್ತಿರುವುದು ಶ್ಲಾಘನೀಯವಾದುದು. ಈ ಕಾರ್ಯಕ್ರಮಕ್ಕೆ ಅವರ ಪತಿ ಅನಂತ ಪತ್ತಾರ ಅವರು ಬೆನ್ನೆಲುಬಾಗಿ ನಿಂತು ಸಹಾಯ ಸಹಕಾರ ನೀಡಿ ಕಾರ್ಯಕ್ರಮ ಯಶಸ್ಸಿಗೆ ಕಾರಣರಾಗಿದ್ದಾರೆ. ಇಂತಹ ಕಾರ್ಯಕ್ರಮಗಳನ್ನು ಆಯೋಜಿಸುವುದು ಸುಲಭವಲ್ಲ. ಎಂಟು ಹತ್ತು ದಿನಗಳ ಮೊದಲೇ ಸಂಗೀತಗಾರರ ಜೊತೆ ಮಾತನಾಡಿ, ಜೊತೆಗಾರರನ್ನು, ಯಾವ ಟ್ರ್ಯಾಕಿಗೆ ಹಾಡುತ್ತಾರೆ ಎನ್ನುವುದನ್ನು ಮೊದಲೇ ತಿಳಿದುಕೊಳ್ಳಬೇಕು. ಇಂತಹ ಕಾರ್ಯಕ್ರಮಗಳು ಮೇಲಿಂದ ಮೇಲೆ ಜರುಗಬೇಕು. ರಾಜ್ಯ ಮೂಲೆ ಮೂಲೆಯಿಂದ ಬಂದಂತಹ ಗಾಯಕರು ಅತ್ಯುತ್ತಮವಾಗಿ ಹಾಡಿದ್ದಾರೆ. ಅವರು ತಮ್ಮ ಖರ್ಚಿನಿಂದ ಬಂದು ಹಾಡುಗಳನ್ನು ಪ್ರಸ್ತುತಪಡಿಸಿರುವದು ಶ್ಲಾಘನೀಯ ಎಂದರು.
ಇದನ್ನೂ ಓದಿ ಧಾರವಾಡ | ಸರ್ಕಾರಿ ಶಾಲೆಗಳನ್ನು ಕೊಲ್ಲುವ ಕೆಪಿಎಸ್ ಮ್ಯಾಗ್ನೆಟ್ ನ್ನು ಖಂಡಿಸಿ ಪ್ರತಿಭಟನೆ
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವೀಣಾ ಅನಂತ ಪತ್ತಾರ ವಹಿಸಿದ್ದರು. ಮಾರುತಿ ಬಡೆಣ್ಣವರ ಸ್ವಾಗತಿಸಿದರು. ಪ್ರಹ್ಲಾದ ಕಡೆಚೂರ ನಿರೂಪಿಸಿದರು. ಅನಂತ ಪತ್ತಾರ ವಂದಿಸಿದರು. ಕಾರ್ಯಕ್ರಮದಲ್ಲಿ ತಿಪ್ಪಣ್ಣ ಭಾಂಡಗೆ, ಸಂಜೀವ ಸಾಂಬ್ರಾಣಿ, ರಾಜಶ್ರೀ ಗುಂಡಮಿ, ಆನಂದ ಕಲ್ಲಾಪುರ ಸೇರಿದಂತೆ ಮುಂತಾದವರಿದ್ದರು.





