ವಿದ್ಯಾರ್ಥಿಗಳು ಸುಳ್ಳು ಹರಡುವ ಶಕ್ತಿಗಳಿಂದ ಎಚ್ಚರ ವಹಿಸಬೇಕು. ವಾಟ್ಸಾಪ್ ಗಳು ಸುಳ್ಳು ಹರಡುವ ಫ್ಯಾಕ್ಟರಿಗಳಾಗಿವೆ. ಅದರ ಬಗ್ಗೆ ಜಾಗರೂಕತೆಯಿಂದ ಇರಬೇಕು ಎಂದು ಅಂಜುಮನ್ ಕಾಲೇಜಿನಲ್ಲಿ ಏರೋಡಿಸಿದ್ದ ಟಿಪ್ಪು ಸುಲ್ತಾನ್ ಜಯಂತಿ ಕಾರ್ಯಕ್ರಮದಲ್ಲಿ ಗೊಟಗೋಡಿ ಜಾನಪದ ವಿಶ್ವವಿದ್ಯಾಲಯದ ಡಾ. ವೆಂಕನಗೌಡ ಪಾಟೀಲ್ ಮಾತನಾಡಿದರು.
ನಾವಿಂದು ಅತ್ಯಂತ ದುರಂತದ ದಿನಗಳಲ್ಲಿ ಬದುಕುತ್ತಿದ್ದೇವೆ. ಆದ್ದರಿಂದ ಇತಿಹಾಸ ಪ್ರಚಾರದ ವಾರಸುದಾರರು ಆಗಬೇಕಿದೆ. ದಲಿತರು, ಮಹಿಳೆಯರ ಮೇಲಿನ ದೌರ್ಜನ್ಯವನ್ನು ತಡೆದ ಟಿಪ್ಪು ಸುಲ್ತಾನ್ ನಂತಹ ರಾಜನ ಹೆಸರು ಕೆಡಿಸುವ ಕೆಲಸವಾಗುತ್ತಿದೆ. ಸ್ವಾತಂತ್ರ್ಯ ಹೋರಾಟವನ್ನು ವಿರೋಧಿಸಿದ್ದವರು ಇವತ್ತು ಮೆರೆಯುತ್ತಿದ್ದಾರೆ. ಇದು ದುರಂತದ ಸಂಗತಿ. ಇತಿಹಾಸದ ಪ್ರಜ್ಞೆ ಎಲ್ಲರಲ್ಲೂ ಮೂಡಬೇಕಿದೆ. ಟಿಪ್ಪು ಸುಲ್ತಾನರ ಇತಿಹಾಸವನ್ನು ನಾಶ ಮಾಡುವ ಸಲುವಾಗಿ ಕೆಲವರು ಅವರ ವಿರುದ್ಧ ಪ್ರಚಾರ ಶುರು ಮಾಡಿದರು. ಟಿಪ್ಪು ಸುಲ್ತಾನ್ ಕೇವಲ ವ್ಯಕ್ತಿ ಮಾತ್ರವಲ್ಲ. ಅವರ ಆಡಳಿತ, ಆದರ್ಶದ ಬದುಕನ್ನು ಇವತ್ತಿನ ರಾಜಕಾರಣಿಗಳು ಪ್ರೇರಣೆಯಾಗಿ ಸ್ವೀಕರಿಸಬೇಕು. ಟಿಪ್ಪು ಸುಲ್ತಾನ್ ಇವತ್ತಿಗೂ ಪ್ರಸ್ತುತವಾಗಿದ್ದಾರೆ ಎಂದು ಹೇಳಿದರು.
ಇದನ್ನೂ ಓದಿ ಧಾರವಾಡ | ಉಳುವವನೇ ಭೂಮಿಯ ಒಡೆಯ ಎಂದು ಮೊಟ್ಟ ಮೊದಲು ಸಾರಿದ್ದು, ಟಿಪ್ಪು ಸುಲ್ತಾನ್: ರಂಜಾನ್ ದರ್ಗಾ
ಅಧ್ಯಕ್ಷತೆ ವಹಿಸಿದ್ದ ಬಿ.ಎ.ಜಾಗಿರದಾರ್ ಮಾತನಾಡಿ, ನಾವೆಲ್ಲರೂ ಒಗ್ಗಟ್ಟಿನಿಂದ ಇದ್ದರೆ ದೇಶ ಒಂದಾಗುತ್ತದೆ. ಇತಿಹಾಸದ ಪ್ರಜ್ಞೆಯಿಂದ ಬದುಕಬೇಕು. ಸಂವಿಧಾನದ ಅಡಿಯಲ್ಲಿ ನಡೆಯಬೇಕು ಎಂದರು.





