ಧಾರವಾಡ ನಗರದಲ್ಲಿ ಹೆಚ್ಚುವರಿ ಪೊಲೀಸ್ ಠಾಣೆ ನಿರ್ಮಿಸಲು ಕರ್ನಾಟಕ ರಕ್ಷಣಾ ವೇದಿಕೆ (ಪ್ರವೀಣ್ ಶೆಟ್ಟಿ ಬಣ) ಒತ್ತಾಯಿಸಿದೆ. ಜಿಲ್ಲಾಧಿಕಾರಿಗಳ ಮೂಲಕ ರಾಜ್ಯ ಸರ್ಕಾರಕ್ಕೆ ಮನವಿ ಸಲ್ಲಿಸಿದೆ.
ಧಾರವಾಡ ನಗರ ಪ್ರದೇಶದಲ್ಲಿ ಹೆಚ್ಚುವರಿಯಾಗಿ 2 ಪೊಲೀಸ್ ಸ್ಟೇಶನ್ ( ಕಾನೂನು ಸುವ್ಯವಸ್ಥೆ ಹಾಗೂ ಸಂಚಾರಿ ಪೊಲೀಸ್ ಠಾಣೆ) ಮಂಜೂರು ಮಾಡಿ ಅತಿ ಶೀಘ್ರವೇ ನಿರ್ಮಿಸುವಂತೆ ಆಗ್ರಹಿಸಿ ಕರ್ನಾಟಕ ರಕ್ಷಣಾ ವೇದಿಕೆ ಪ್ರವೀಣ್ ಕುಮಾರ್ ಶೆಟ್ಟಿ ಬಣ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದೆ.
ಬೆಳಗಾವಿ ವಿಭಾಗೀಯ ಅಧ್ಯಕ್ಷರಾದ ಪಾಪು ಧಾರೆ ಹಾಗೂ ಧಾರವಾಡ ಜಿಲ್ಲಾಧ್ಯಕ್ಷರಾದ ಮಂಜುನಾಥ ಲೂತಿಮಠ ಇವರ ಮುಖಂಡತ್ವದಲ್ಲಿ ಕರ್ನಾಟಕ ರಕ್ಷಣಾ ವೇದಿಕೆ ಪ್ರವೀಣ್ ಕುಮಾರ್ ಶೆಟ್ಟಿ ಬಣ ಜಿಲ್ಲಾಧಿಕಾರಿ ಗುರುದತ್ ಹೆಗಡೆಯವರಿಗೆ ಮನವಿ ಸಲ್ಲಿಸಿದ್ದು, ಈ ಸಂದರ್ಭದಲ್ಲಿ ಕರ್ನಾಟಕ ರಕ್ಷಣಾ ವೇದಿಕೆ ಪ್ರವೀಣ್ ಕುಮಾರ್ ಶೆಟ್ಟಿ ಬಣದ ಬೆಳಗಾವಿ ವಿಭಾಗೀಯ ಅಧ್ಯಕ್ಷ ಪಾಪು ಧಾರೆ ಮಾತನಾಡಿದರು.
ಧಾರವಾಡ ನಗರವು ಅತಿ ವೇಗವಾಗಿ ಬೆಳೆಯುತ್ತಿರುವ ನಗರ ಪ್ರದೇಶವಾಗಿದೆ. ವಿದ್ಯಾಕಾಶಿ ಹಾಗೂ ಸಾಹಿತಿಗಳ ತವರೂರೆಂದೆ ಧಾರವಾಡ ನಗರ ಪ್ರಸಿದ್ಧಿಯನ್ನು ಹೊಂದಿದೆ. ಈ ನಗರ ಪ್ರದೇಶ ಸಾಕಷ್ಟು ವಿಶಾಲವಾಗಿದ್ದು, ಈ ವಿಶಾಲತೆಯ ಅನುಗುಣಕ್ಕಿಂತಲೂ ಹೆಚ್ಚಿನ ಜನಸಾಂದ್ರತೆ ಹೊಂದಿದೆ. ಇದಷ್ಟೇ ಅಲ್ಲದೆ ಉತ್ತರ ಕರ್ನಾಟಕದಲ್ಲಿಯೇ ಧಾರವಾಡ ನಗರ ಶೈಕ್ಷಣಿಕತೆಯ ಮುಖ್ಯ ಕೇಂದ್ರವಾಗಿದೆ. ಈ ಧಾರವಾಡ ನಗರ ಪ್ರದೇಶದಲ್ಲಿ ನೂರಾರು ವಿದ್ಯಾ ಸಂಸ್ಥೆಗಳು, ಶಾಲಾ ಕಾಲೇಜುಗಳು, ತರಬೇತಿ ಸಂಸ್ಥೆ-ಕೇಂದ್ರಗಳು ಇದ್ದಾವೆ.
ಅತಿ ಹೆಚ್ಚು ವಿದ್ಯಾರ್ಥಿಗಳನ್ನು ಒಳಗೊಂಡ ಕರ್ನಾಟಕ ವಿಶ್ವವಿದ್ಯಾಲಯ, ಕರ್ನಾಟಕ ಕೃಷಿ ವಿಶ್ವವಿದ್ಯಾಲಯ, ಹಿಂದಿ ಪ್ರಚಾರ ಸಭಾ ಕರ್ನಾಟಕ ಕಾಲೇಜು, ಉಪನಗರ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿವೆ. ಅದೇ ರೀತಿ ಸಾವಿರಾರು ಜನ ಪ್ರತಿದಿನ ತಮ್ಮ ದಿನ ನಿತ್ಯದ ಸರ್ಕಾರಿ ಕೆಲಸಗಳಿಗಾಗಿ ಬರುವ ಜಿಲ್ಲಾಧಿಕಾರಿಗಳ ಕಚೇರಿ, ತಹಸೀಲ್ದಾರ್ ಕಚೇರಿ, ಉಪನೊಂದಣಾಧಿಕಾರಿ ಕಚೇರಿ, ಧಾರವಾಡ ಜಲಮಂಡಳಿ, ಆಕಾಶವಾಣಿ ದೂರದರ್ಶನ ಕೇಂದ್ರ, ರಾಜ್ಯ ಸರ್ಕಾರದ 18 ಸರ್ಕಾರಿ ಕಚೇರಿಗಳು ಒಳಗೊಂಡ ಮಿನಿ ವಿಧಾನಸೌಧ, ಅಬಕಾರಿ ಇಲಾಖೆ, ಉಪ ಜಿಲ್ಲಾಧಿಕಾರಿಗಳ ಕಚೇರಿ, ಜಿಲ್ಲಾ ಪಂಚಾಯತ ಹಾಗೂ ತಾಲೂಕಾ ಪಂಚಾಯತ ಕಚೇರಿಗಳು, ಸಾರಿಗೆ ಇಲಾಖೆ, ಸಣ್ಣ ನೀರಾವರಿ ಕಚೇರಿ, ಡಿಡಿಪಿಐ ಕಚೇರಿ, ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ, ಕರ್ನಾಟಕ ಯುನಿವರ್ಸಿಟಿ ಸರ್ ಸಿದ್ದಪ್ಪ ಕಂಬಳಿ ಕಾನೂನು ವಿಶ್ವವಿದ್ಯಾಲಯ, ಕೆಪಿಎಸ್ಸಿ ಲಾ ಕಾಲೇಜ್.
ಧಾರವಾಡದ ಮಾನಸಿಕ ಆಸ್ಪತ್ರೆ, ಧಾರವಾಡದ ಜಿಲ್ಲಾ ಆಸ್ಪತ್ರೆ, ಬಿಎಸ್ಎನ್ಎಲ್ ದೂರವಾಣಿಕೇಂದ್ರ ಕಚೇರಿ ಹಾಗೂ ಇನ್ನೂ ಹಲವು ಕೇಂದ್ರ ಸರ್ಕಾರದ ಕಚೇರಿಗಳು, ಹೊಸ ಬಸ್ ನಿಲ್ದಾಣ, ಈ ರೀತಿಯ ವಿದ್ಯಾಸಂಸ್ಥೆಗಳ ಸಂಖ್ಯೆ ಹಾಗೂ ರಾಜ್ಯ ಸರ್ಕಾರ ಹಾಗೂ ಕೇಂದ್ರ ಸರ್ಕಾರದ ಜನಸಂಪರ್ಕ ಕಚೇರಿಗಳ ಪೈಕಿ ಶೇ.80ರಷ್ಟು ಧಾರವಾಡ ಉಪನಗರ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿವೆ ಎಂದು ಹೇಳಿದರು.
ಧಾರವಾಡ ಶಹರ ಜನಸಂಖ್ಯೆಯು, ಅದರ ವಾಸ ಪ್ರದೇಶಕ್ಕಿಂತಲೂ ದುಪ್ಪಟ್ಟು ಪ್ರಮಾಣದಲ್ಲಿ ಇದೆ. ಧಾರವಾಡ ಶಹರದ ಜನಸಂಖ್ಯೆಯ ಪರಿಸ್ಥಿತಿ ಹೀಗಿರುವಾಗ ಉತ್ತರ ಕರ್ನಾಟಕ ಹಾಗೂ ಇನ್ನುಳಿದ ಕರ್ನಾಟಕ ಜಿಲ್ಲೆಗಳಿಂದ ಪ್ರತಿ ವರ್ಷ 2ಲಕ್ಷಕ್ಕಿಂತಲೂ ಅಧಿಕ ವಿದ್ಯಾರ್ಥಿ ವಿದ್ಯಾರ್ಥಿನಿಯರು ಹಾಗೂ ಶಾಲಾ ಮಕ್ಕಳು ಇಲ್ಲಿ ತಮ್ಮ ವಿದ್ಯಾರ್ಜನೆಗಾಗಿ ಬರುತ್ತಾರೆ. ಇವರ ಬರುವಿಕೆಯಿಂದ ಧಾರವಾಡ ನಗರ ಪ್ರದೇಶದ ಜನಸಂಖ್ಯೆ ಅಸಂಖ್ಯಾತವಾಗಿ ಹೆಚ್ಚಳವಾಗಿದೆ.
ಈ ಹಿಂದೆ 2011ರ ಜನಸಂಖ್ಯೆಯ ಪ್ರಕಾರ ಧಾರವಾಡದ ನಗರ ಪ್ರದೇಶದಲ್ಲಿ ಮೂರು ಕಾನೂನು ಸುವ್ಯವಸ್ಥೆ ಹಾಗೂ ಒಂದು ಸಂಚಾರಿ ಪೊಲೀಸ್ ಠಾಣೆ ಇದ್ದವು. ಈಗ 13 ವರ್ಷಗಳ ನಂತರ ಅಂದರೆ 2023-24ರಲ್ಲಿ ಧಾರವಾಡ ನಗರ ಪ್ರದೇಶದ ಜನಸಂಖ್ಯೆ ಹಾಗೂ ವಿದ್ಯಾರ್ಜನೆಗಾಗಿ ಬಂದಂತಹ ವಿದ್ಯಾರ್ಥಿ-ವಿದ್ಯಾರ್ಥಿನಿಯರು ಹಾಗೂ ಅವರ ಪೋಷಕರ ಸಂಖ್ಯೆ ನೋಡಿದಾಗ 2011ರಲ್ಲಿ ಇದ್ದ ಜನಸಂಖ್ಯೆಗಿಂತ 5ಪಟ್ಟು ಹೆಚ್ಚಳವಾಗಿದೆ. ಈ ಜನಸಂಖ್ಯೆ ಹೆಚ್ಚಾದಂತೆ ಜನಸಂಖ್ಯೆಗನುಗುಣವಾಗಿ ದ್ವಿಚಕ್ರ ವಾಹನ ಹಾಗೂ ನಾಲ್ಕು ಚಕ್ರ ವಾಹನಗಳು, ಆಟೋರಿಕ್ಷಾ ಹಾಗೂ ಗೂಡ್ಸ್ ಗಾಡಿಗಳು ಹಾಗೂ ಇನ್ನಿತರ ವಾಹನಗಳ ಸಂಖ್ಯೆ ಕೂಡ ಮಿತಿಮೀರಿದ ಸಂಖ್ಯೆಯಲ್ಲಿವೆ.
ವಾಹನಗಳ ಸಂಖ್ಯೆಗಳ ಹೆಚ್ಚಳದಿಂದ ಹೆಚ್ಚು ಹೆಚ್ಚು ಅಪಘಾತಗಳು ಸಂಭವಿಸುತ್ತಿವೆ. ಮಿತಿಮೀರಿದ ವಾಹನ ಹಾಗೂ ವಾಹನ ಚಾಲಕರಿಂದ ಸಂಚಾರಿ ನಿಯಮಗಳು ಹೆಚ್ಚು ಹೆಚ್ಚು ಉಲ್ಲಂಘನೆ ಆಗುತ್ತಿವೆ. ಜನಸಂಖ್ಯೆ ಹಾಗೂ ವಾಹನಗಳ ಜನದಟ್ಟಣೆಯಿಂದ ಈಗಿರುವ ಸಂಚಾರಿ ಪೊಲೀಸ್ ಸಿಬ್ಬಂದಿಗಳಿಂದ ಆಗುತ್ತಿರುವ ರಸ್ತೆ ಅನಾಹುತ, ಜನ ಸಾಮಾನ್ಯರ ಮೇಲೆ ಆಗುತ್ತಿರುವ ಸಂಚಾರಿ ದೌರ್ಜನ್ಯ ತಡೆಗಟ್ಟಲು ಅಸಾಧ್ಯವಾಗುತ್ತಿದೆ.
ನಿಗದಿತ ಜನವಸತಿ ಪ್ರದೇಶದಲ್ಲಿ 5 ಪಟ್ಟು ಜನಸಂಖ್ಯೆ ಹೆಚ್ಚಳವಾಗಿರುವುದರಿಂದ ಕಾನೂನು ವ್ಯವಸ್ಥೆ ಕಾಪಾಡಲು ಈಗಿರುವ ಪೊಲೀಸ್ ಠಾಣೆಗಳ ಅಧಿಕಾರಿಗಳಿಗೆ ಹಾಗೂ ಸಿಬ್ಬಂದಿಗಳಿಗೆ ಬಲು ಕಷ್ಟವಾಗುತ್ತಿದೆ ಎಂದು ಹೇಳಿದ ಅವರು, ಪೊಲೀಸ್ ಇಲಾಖೆಯ ಧೇಯ್ಯೋದ್ದೇಶಗಳಸನ್ನು ಪ್ರಸ್ತಾಪಿಸಿದರು.
- ಸಮಾಜ ವಿರೋಧಿ ಶಕ್ತಿಗಳಿಂದ ಜನರ ಪ್ರಾಣಗಳನ್ನು, ಹಕ್ಕುಗಳನ್ನು ರಕ್ಷಿಸಲು ಕಾನೂನಿನ ಪ್ರಕಾರ ಶ್ರಮಿಸುತ್ತೇವೆ.
- ಅಪರಾಧಿಗಳನ್ನು ಪತ್ತೆ ಹಚ್ಚುವುದರಲ್ಲಿ ಹಾಗೂ ಸಾರ್ವಜನಿಕ ನೆಮ್ಮದಿಯನ್ನು ಕಾಪಾಡುವುದರಲ್ಲಿ ಸಮಾಜದ ಸಹಕಾರವನ್ನು ಗಳಿಸಿಕೊಳ್ಳುತ್ತೇವೆ.
- ಎಲ್ಲರಿಗೂ ವಿಳಂಬವಿಲ್ಲದೆ ನ್ಯಾಯ ದೊರಕುವಂತೆ ಮಾಡಲು ನ್ಯಾಯ ವ್ಯವಸ್ಥೆಯ ಇತರ ಎಲ್ಲಾ ಇಲಾಖೆಗಳೊಡನೆ ಸಹಕರಿಸುತ್ತೇವೆ.
- ಜಾತಿ, ಮತ ಮುಂತಾದ ಭೇದಗಳನ್ನು ರಾಜಕೀಯ, ಸಾಮಾಜಿಕ ಮುಂತಾದ ವ್ಯತ್ಯಾಸಗಳನ್ನೂ ಎಣಿಸದೆ ಎಲ್ಲಾ ನಾಗರೀಕರನ್ನು ಸಮಾನವಾಗಿ ನೋಡುತ್ತೇವೆ.
- ಸಮಾಜದ ದುರ್ಬಲ ವರ್ಗಗಳಿಗೆ, ವಯೋವೃದ್ಧರಿಗೆ, ಮಕ್ಕಳಿಗೆ ಹಾಗೂ ಮಹಿಳೆಯರಿಗೆ ಸಮುಚಿತವಾದ ಸೌಜನ್ಯವನ್ನು, ಉದಾರತೆಯನ್ನು ತೋರಿಸುತ್ತೇವೆ.
- ವೃತ್ತಿಪರ ಜ್ಞಾನವನ್ನೂ, ಕುಶಲತೆಯನ್ನೂ ಹೆಚ್ಚಿಸಿಕೊಳ್ಳಲು ಸತತವಾಗಿ ಶ್ರಮಿಸುತ್ತೇವೆ ಹಾಗೂ ಪೊಲೀಸ್ ಇಲಾಖೆಯ ಕೆಲಸದಲ್ಲಿ ಆಧುನಿಕ ವಿಧಾನಗಳನ್ನು ಅಳವಡಿಸಿಕೊಳ್ಳುತ್ತೇವೆ.
- ಪ್ರಾಮಾಣಿಕತೆ, ನೇರನಡೆ ಹಾಗೂ ವೃತ್ತಿಮೌಲ್ಯಗಳನ್ನು ಕಾಪಾಡಿಕೊಂಡು ಬರುತ್ತೇವೆ ಮತ್ತು ಮಾನವ ಹಕ್ಕುಗಳನ್ನು ರಕ್ಷಿಸುತ್ತೇವೆ.
- ಸಾಮಾಜಿಕ ಬದಲಾವಣೆಯಲ್ಲಿ ನಮ್ಮ ಪಾತ್ರವನ್ನು ಒಪ್ಪಿಕೊಂಡು ಅದನ್ನು ಸರಿಯಾಗಿ ನಿರ್ವಹಿಸಿ, ಸಮಾಜದೊಳಗೆ ಜೀವನದ ಗುಣಮಟ್ಟದಲ್ಲಿ ಪ್ರಗತಿಯನ್ನು ಸಾಧಿಸುತ್ತೇವೆ.
ಎಂದು ಕರ್ನಾಟಕ ಪೊಲೀಸ್ ಸಾರ್ವಜನಿಕ ಹಕ್ಕುಗಳನ್ನು ರಕ್ಷಿಸಿ, ಕಾನೂನನ್ನು ಎತ್ತಿಹಿಡಿಯಲು ಪ್ರತಿಜ್ಞಾ ಬದ್ಧರಾಗಿದ್ದೇವೆ, ಎಂದು ಪ್ರಮಾಣ ಮಾಡಿದ್ದನ್ನು ಧಾರವಾಡ ನಗರ ಪ್ರದೇಶದಲ್ಲಿ ಪೊಲೀಸ್ ಠಾಣೆಗಳು ಹಾಗೂ ಸಿಬ್ಬಂದಿಗಳ ಕೊರತೆಯಿಂದ ನುಡಿದಂತೆ ನಡೆಯಲು ಪೊಲೀಸ್ ಇಲಾಖೆಗೆ ಆಗುತ್ತಿಲ್ಲ ಎಂದು ಆರೋಪಿಸಿದರು.
ಈ ಹಿಂದೆ 2013ರಲ್ಲಿ ಕರ್ನಾಟಕ ವಿಶ್ವವಿದ್ಯಾಲಯದ ವಿ ಸಿ ಯವರಾದ ವಾಲೇಕರ ಇವರು ಉಪನಗರ ಪೊಲೀಸ್ ಠಾಣೆಯ ಆರಕ್ಷಕ ನಿರೀಕ್ಷಕರಾದ ರಾಮನಗೌಡ ಹಟ್ಟಿ ಅವರೊಂದಿಗೆ ಕರ್ನಾಟಕ ವಿಶ್ವವಿದ್ಯಾಲಯದ ಸಿಂಡಿಕೇಟ್ ಸದಸ್ಯರುಗಳ ಒಪ್ಪಿಗೆಯೊಂದಿಗೆ ಹೆಚ್ಚುವರಿ ಪೊಲೀಸ್ ಠಾಣೆ ನಿರ್ಮಾಣಕ್ಕಾಗಿ ಕರ್ನಾಟಕ ಯೂನಿವರ್ಸಿಟಿಯ ಪ್ರದೇಶದಲ್ಲಿ 20 ಗುಂಟೆ ಜಾಗವನ್ನು ಹಸ್ತಾಂತರಿಸುವುದಾಗಿ ನಡೆದ ಸಿಂಡಿಕೇಟ್ ಸದಸ್ಯರುಗಳ ಸಭೆಯಲ್ಲಿ ಅಂತಿಮ ತೀರ್ಮಾನಕ್ಕೆ ಬಂದಿದ್ದನ್ನು ಗಮನಕ್ಕೆ ತಂದರು.
ಧಾರವಾಡ ನಗರದ ವಸ್ತು ಚಿತ್ರಣವನ್ನು ಗಮನಿಸಿ ಧಾರವಾಡ ನಗರ ಪ್ರದೇಶಕ್ಕೆ ಹೆಚ್ಚುವರಿ ಯಾಗಿ ಎರಡು ಪೊಲೀಸ್ ಠಾಣೆಗಳನ್ನು ಮಂಜೂರು ಮಾಡಿ ಶೀಘ್ರವೇ ನಿರ್ಮಿಸಿ ಕೊಡಬೇಕೆಂದು, ಇದರೊಂದಿಗೆ ಈಗಿರುವ ಧಾರವಾಡ ನಗರ ಪೊಲೀಸ್ ಠಾಣೆಗಳಲ್ಲಿನ ಸಿಬ್ಬಂದಿ ಕೊರತೆಯನ್ನು ಸಹ ಸರಿಪಡಿಸಿ ಕೊಡಬೇಕೆಂದು ಧಾರವಾಡ ಜಿಲ್ಲೆಯ ಪ್ರಜ್ಞಾವಂತ ಜನತೆಯ ಪರವಾಗಿ ಮನು ಜಿಲ್ಲಾಧಿಕಾರಿಗಳ ಮುಖಾಂತರ ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ, ರಾಜ್ಯದ ಗೃಹ ಮಂತ್ರಿಗಳಾದ ಜಿ.ಪರಮೇಶ್ವರಯ್ಯನವರಿಗೆ, ಧಾರವಾಡ ಜಿಲ್ಲಾ ಉಸ್ತುವಾರಿ ಮಂತ್ರಿಗಳಾದ ಸಂತೋಷ್ ಲಾಡ್ ಅವರಿಗೆ, ಧಾರವಾಡ ಗ್ರಾಮೀಣ ಪ್ರದೇಶದ ಶಾಸಕ ವಿನಯ್ ಕುಲಕರ್ಣಿಯವರಿಗೆ, ಧಾರವಾಡ ಶಹರ ಶಾಸಕರಾದ ಅರವಿಂದ ಬೆಲ್ಲದ ಹಾಗೂ ಹುಬ್ಬಳ್ಳಿ-ಧಾರವಾಡ ಮಹಾನಗರದ ಆಯುಕ್ತರಾದ ರೇಣುಕಾ ಸುಕುಮಾರನವರಿಗೆ ಮನವಿ ಕಳುಹಿಸಿರುವುದಾಗಿ ಹೇಳಿದರು.
ಈ ಸಂದರ್ಭದಲ್ಲಿ ಕರ್ನಾಟಕ ರಕ್ಷಣಾ ವೇದಿಕೆ ಪ್ರವೀಣ್ ಕುಮಾರ್ ಶೆಟ್ಟಿ ಬಣದಿಂದ ಧಾರವಾಡ ಜಿಲ್ಲಾಧ್ಯಕ್ಷ ಮಂಜುನಾಥ, ಜಿಲ್ಲಾ ಮಹಿಳಾ ಅಧ್ಯಕ್ಷರಾದ ಮಮ್ತಾಜ್ ನೀಲಿ ವಾಲೆ, ಜಿಲ್ಲಾ ಸಂಘಟನಾ ಕಾರ್ಯದರ್ಶಿ ಸುರೇಶ್ ಕಮ್ಮಾರ, ತಾಲೂಕ ಅಧ್ಯಕ್ಷ ಸಾಧಿಕ್ ಶೆರೇವಾಡ, ಯುವ ಘಟಕದ ತಾಲೂಕಾಧ್ಯಕ್ಷ ಮಾರುತಿ ನುಗ್ಗಿಗೇರಿ, ಮಹಿಳಾ ಉಪಾಧ್ಯಕ್ಷರು ಶೈಲಾ ಚಿಕ್ಕನಗೌಡ್ರು, ಮಹಿಳಾ ಸಂಘಟನಾ ಕಾರ್ಯದರ್ಶಿ ಪಾರ್ವತಿ, ಜಿಲ್ಲಾ ಸಂಚಾಲಕ ಪ್ರಕಾಶ ಶಿಂಧೆ, ಇನ್ನಿತರರು ಪಾಲ್ಗೊಂಡಿದ್ದರು.




