ಪ್ರಸ್ತುತ ಸಮಾಜಕ್ಕೆ ನಾರಾಯಣ ಗುರುಗಳ ತತ್ವ, ಸಿದ್ದಾಂತ ಮತ್ತು ಅವರ ಗುಣಗಳ ಅಗತ್ಯವಿದೆ ಎಂದು ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಅಭಿಪ್ರಾಯಪಟ್ಟರು.
ಧಾರವಾಡದಲ್ಲಿ ಗುರುವಾರ ಜಿಲ್ಲಾಡಳಿತ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಯೋಗದಲ್ಲಿ ಆಯೋಜಿಸಿದ್ದ ನಾರಾಯಣಗುರು ಜಯಂತಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
“ನಾರಾಯಣ ಗುರುಗಳು ಜಾತಿ ಮತ್ತು ಧರ್ಮದ ಗುರುವಲ್ಲ. ಅವರು ಲೋಕದ ಗುರು. ಅಸ್ಪೃಶ್ಯತೆ ವಿರುದ್ಧ ಹೋರಾಡಿದ ಮಹಾನ್ ನಾಯಕ. ಸಮಾಜದಲ್ಲಿನ ಅಸ್ಪೃಶ್ಯತೆ ವಿರುದ್ಧ ಹೋರಾಡಿದ ಮಹಾನ್ ದಾರ್ಶನಿಕ. ಮೇಲು, ಕೀಳು ತೊಡೆದುಹಾಕಿ ಸಮಾನತೆಯ ಸಮಾಜಕ್ಕೆ ಪ್ರಯತ್ನಿಸಿದ ಗುರುಗಳು. ಸಮಾಜಕ್ಕೆ ದಾರಿ ತೋರುವ ಪ್ರಯತ್ನವನ್ನು ನಾರಾಯಣ ಗುರು ಮಾಡಿದರು” ಎಂದು ಹೇಳಿದರು.
“ದುಶ್ಚಟಗಳನ್ನು ಬಿಟ್ಟು, ಪರಿಶುದ್ಧ ಬದುಕು ನಡೆಸುವಂತೆ ಸಮಾಜಕ್ಕೆ ಸಂದೇಶ ಕೊಟ್ಟಿದ್ದಾರೆ. ಒಳ್ಳೆಯ ಶಿಕ್ಷಣ ಪಡೆದುಕೊಂಡು ಗುರುಗಳು ತೋರಿದ ದಾರಿಯಲ್ಲಿ ಸಾಗಿ ಅವರ ಹೆಸರಿಗೆ ಗೌರವ ಬರುವಂತೆ ನಡೆದುಕೊಂಡರೆ ಅದುವೇ ನಿಜವಾದ ಗುರುದಕ್ಷಿಣೆ ಆಗಿದೆ. ಸಾಮಾಜಿಕ ಪರಿವರ್ತನೆಯ ಹರಿಕಾರ ಬ್ರಹ್ಮಶ್ರೀ ನಾರಾಯಣ ಗುರುಗಳು, ತಿಳಿವಳಿಕೆಯೇ ಜ್ಞಾನ, ಜ್ಞಾನದ ಆನುಭವವೇ ದೇವರು. ದೇವರನ್ನು ಹುಡುಕಬೇಡಿ, ಆತ ನಿಮ್ಮಲ್ಲಿಯೇ ಇದ್ದಾನೆಂದು ಹೇಳಿದ್ದಾರೆ. ಹಾಗಾಗಿ ಅವರು ತೋರಿದ ಮಾರ್ಗದಲ್ಲಿಯೇ ದೇವರನ್ನು ಹುಡುಕೋಣ” ಎಂದರು.
ಈ ಸುದ್ದಿ ಓದಿದ್ದೀರಾ? ಬಿಜೆಪಿಯ ಪೊಳ್ಳು ಆಡಳಿತ, ಕಣ್ಕಟ್ಟಿನ ತಂತ್ರ ಮುಂದುವರಿಯಲ್ಲ: ಸಿಎಂ ಸಿದ್ದರಾಮಯ್ಯ ಕಿಡಿ
ಜಿಲ್ಲಾ ಆರ್ಯ ಈಡಿಗ ಸಂಘದ ಅಧ್ಯಕ್ಷ ಚಂದ್ರಶೇಖರ ಡವಳಗಿ, ಹುಬ್ಬಳ್ಳಿ ಧಾರವಾಡ ನಾಮಧಾರಿ ಸಂಘದ ಅಧ್ಯಕ್ಷ ತಿಮ್ಮಪ್ಪ ನಾಯ್ಕ, ಹುಬ್ಬಳ್ಳಿ ಧಾರವಾಡ ಬಿಲ್ಲವ ಸಂಘದ ಅಧ್ಯಕ್ಷ ಆನಂದ ಪೂಜಾರಿ ಮತ್ತು ಸಮುದಾಯದ ಶಂಕರ್ ಕೊಟ್ಟಿನ, ಶ್ರೀನಾಥ ಬಿ ಐ ಈಳಿಗೆರ, ನಾಗಕಲಾಲ ಈಳಿಗೇರ, ಕುಮಾರ ಬೆಕ್ಕೇರಿ, ಆರತಿ ದೇವಶಿಖಾಮಣಿ ಸೇರಿದಂತೆ ಹಲವು ಜನಪ್ರತಿನಿಧಿಗಳು, ಮುಖಂಡರು, ಹಲವು ಸಮುದಾಯಗಳ ಸದಸ್ಯರು ಇದ್ದರು.




