ಉಡುಪಿ ಜಿಲ್ಲಾಧಿಕಾರಿ ಟಿ.ಕೆ. ಸ್ವರೂಪ ಅವರು ದಲಿತರ ಯಾವುದೇ ಸಮಸ್ಯೆಗಳಿಗೆ ಸಮರ್ಪಕವಾಗಿ ಸ್ಪಂದಿಸುತ್ತಿಲ್ಲ ಎಂದು ದಲಿತ ನಾಯಕರು ಗಂಭೀರ ಆರೋಪ ಮಾಡಿದ್ದಾರೆ. ದಲಿತರ ಮೇಲೆ ದೌರ್ಜನ್ಯ ನಡೆದ ಸಂದರ್ಭದಲ್ಲಿಯೂ ಅವರು ಘಟನೆ ನಡೆದ ಸ್ಥಳಗಳಿಗೆ ಭೇಟಿ ನೀಡುತ್ತಿಲ್ಲ. ಮನೆ ಬಿದ್ದು ಸೂರಿಲ್ಲದೆ ಹೆಬ್ರಿ ಅಂಬೇಡ್ಕರ್ ಭವನದಲ್ಲಿ ತಿಂಗಳುಗಳಿಂದ ಜೀವನ ನಡೆಸುತ್ತಿರುವ ಬಡ ದಲಿತ ಕುಟುಂಬವನ್ನು ಭೇಟಿಮಾಡಿ ಪುನರ್ವಸತಿ ಕಲ್ಪಿಸುವಲ್ಲಿಯೂ ಜಿಲ್ಲಾಡಳಿತ ಸಂಪೂರ್ಣ ವಿಫಲವಾಗಿದೆ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು.
ಜಿಲ್ಲೆಯಲ್ಲಿ ಅನೇಕ ಭೂಮಿ ಸಂಬಂಧಿತ ಸಮಸ್ಯೆಗಳಿದ್ದರೂ ಜಿಲ್ಲಾಧಿಕಾರಿಗಳು ಅವುಗಳತ್ತ ಗಮನ ಹರಿಸುತ್ತಿಲ್ಲ. ಕೇವಲ ದೇವಸ್ಥಾನಗಳ ಸುತ್ತಾಟದಲ್ಲೇ ಕಾಲ ಕಳೆಯುತ್ತಿದ್ದಾರೆ ಎಂದು ದಲಿತ ಮುಖಂಡರು ಆರೋಪಿಸಿದರು. ಶನಿವಾರ ಉಡುಪಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಯವರ ಕಚೇರಿಯಲ್ಲಿ ನಡೆದ ದಲಿತರ ಪೊಲೀಸ್ ಕುಂದುಕೊರತೆಗಳ ಸಭೆಯಲ್ಲಿ ಜಿಲ್ಲಾಡಳಿತ ದಲಿತರ ಪಾಲಿಗೆ ಸಂಪೂರ್ಣವಾಗಿ ನಿಷ್ಕ್ರಿಯವಾಗಿದೆ ಎಂಬ ಅಭಿಪ್ರಾಯ ವ್ಯಕ್ತವಾಯಿತು.
ಜಿಲ್ಲಾಧಿಕಾರಿ ಕಚೇರಿಯಲ್ಲಿರುವ ವಿವಿಧ ಇಲಾಖೆಗಳ ಅಧಿಕಾರಿಗಳೂ ಸಹ ದಲಿತರ ಸಮಸ್ಯೆಗಳಿಗೆ ಸ್ಪಂದಿಸುತ್ತಿಲ್ಲ ಎಂದು ಸಭೆಯಲ್ಲಿ ದೂರಲಾಯಿತು. ಜಿಲ್ಲಾ ಸಹಕಾರ ಸಂಘದ ಅಧಿಕಾರಿಯವರು ತಮ್ಮನ್ನು ಭೇಟಿಯಾಗಲು ಸಂಜೆ 3.30ರಿಂದ 5.30ರೊಳಗೆ ಮಾತ್ರ ಸಮಯವಿದೆ ಎಂದು ನಾಮಫಲಕ ಅಳವಡಿಸಿರುವುದು ಅಧಿಕಾರಿಗಳ ನಿರ್ಲಕ್ಷ್ಯದ ಉದಾಹರಣೆಯಾಗಿದೆ ಎಂದು ಆರೋಪಿಸಲಾಯಿತು.
ಜಿಲ್ಲಾಧಿಕಾರಿಗಳ ಕಾರ್ಯವೈಖರಿಯ ಪರಿಣಾಮವಾಗಿ ಇತರ ಅಧಿಕಾರಿಗಳೂ ಸಹ ದಲಿತರ ಕೆಲಸಗಳನ್ನು ನಿರ್ಲಕ್ಷಿಸುತ್ತಿದ್ದಾರೆ ಎಂದು ದಲಿತ ನಾಯಕರು ತಿಳಿಸಿದರು. ದಲಿತ ದೌರ್ಜನ್ಯ ಪ್ರಕರಣಗಳಲ್ಲಿ ತನಿಖಾಧಿಕಾರಿಗಳು ಗಂಭೀರತೆ ವಹಿಸದೆ ತನಿಖೆ ನಡೆಸಿ ಬಿ–ರಿಪೋರ್ಟ್ ಸಲ್ಲಿಸುತ್ತಿರುವುದು ನ್ಯಾಯಕ್ಕೆ ಧಕ್ಕೆ ತರುತ್ತಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಕೊರಗ ಸಮುದಾಯದವರು ತಮಗಾದ ಅನ್ಯಾಯಗಳ ವಿರುದ್ಧ ಹತ್ತು ದಿನಗಳಿಂದ ಜಿಲ್ಲಾಧಿಕಾರಿ ಕಚೇರಿ ಎದುರು ಅಹೋರಾತ್ರಿ ಧರಣಿ ನಡೆಸುತ್ತಿದ್ದರೂ ಅವರ ಸಮಸ್ಯೆಗಳನ್ನು ಬಗೆಹರಿಸುವತ್ತ ಜಿಲ್ಲಾಡಳಿತ ಯಾವುದೇ ಆಸಕ್ತಿ ತೋರಿಸುತ್ತಿಲ್ಲ ಎಂದು ಸಭೆಯಲ್ಲಿ ಕಿಡಿಕಾರಲಾಯಿತು. ದಲಿತರ ಮೇಲಿನ ದೌರ್ಜನ್ಯ ಪ್ರಕರಣಗಳಿಗಾಗಿ ಸ್ಥಾಪಿಸಲಾದ ವಿಶೇಷ ಪೊಲೀಸ್ ಠಾಣೆಯೂ ಸಮರ್ಪಕವಾಗಿ ಕಾರ್ಯನಿರ್ವಹಿಸುತ್ತಿಲ್ಲ ಹಾಗೂ ಅಗತ್ಯ ಸಿಬ್ಬಂದಿ ನೇಮಕವಾಗಿಲ್ಲ ಎಂದು ದೂರಲಾಯಿತು.
ಜಿಲ್ಲಾಧಿಕಾರಿಗಳು ಕೇವಲ ರಾಜಕೀಯ ವ್ಯಕ್ತಿಗಳ ಕೈಗೊಂಬೆಯಂತೆ ವರ್ತಿಸುತ್ತಿದ್ದಾರೆ ಎಂದು ಆರೋಪಿಸಿದ ದಲಿತ ನಾಯಕರು, ಅವರನ್ನು ತಕ್ಷಣ ವರ್ಗಾವಣೆ ಮಾಡುವ ನಿರ್ಣಯವನ್ನು ಈ ಸಭೆಯಲ್ಲೇ ಕೈಗೊಂಡು ಸರ್ಕಾರಕ್ಕೆ ಕಳುಹಿಸಬೇಕೆಂದು ಒಕ್ಕೊರಳಾಗಿ ಆಗ್ರಹಿಸಿದರು.
ಈ ಕುಂದುಕೊರತೆಗಳ ಸಭೆಯಲ್ಲಿ ದಲಿತ ಸಂಘರ್ಷ ಸಮಿತಿ ರಾಜ್ಯ ಸಂಘಟನಾ ಸಂಚಾಲಕ ಸುಂದರ ಮಾಸ್ತರ್, ಮೈಸೂರು ವಿಭಾಗೀಯ ಸಂಘಟನಾ ಸಂಚಾಲಕ ಶ್ಯಾಮರಾಜ್ ಬಿರ್ತಿ, ಜಿಲ್ಲಾ ಸಂಚಾಲಕ ಮಂಜುನಾಥ ಗಿಳಿಯಾರು ಸೇರಿದಂತೆ ಉದಯಕುಮಾರ್ ತಲ್ಲೂರು, ಜಯನ್ ಮಲ್ಪೆ, ವಿಶ್ವನಾಥ್ ಪೇತ್ರಿ, ಸಂಜೀವ ಬಳ್ಕೂರು, ರಮೇಶ್ ಕೋಟ್ಯಾನ್, ಶ್ಯಾಮಸುಂದರ ತೆಕ್ಕಟ್ಟೆ, ಸುರೇಶ್ ಹಕ್ಲಾಡಿ, ಚಂದ್ರ ಆಲ್ತಾರು, ಮಂಜುನಾಥ ಬಾಳ್ಕುದ್ರು, ಸುರೇಶ್ ಬಾರ್ಕೂರು ಹಾಗೂ ವಡ್ಡರ್ಸೆ ಶ್ರೀನಿವಾಸ್ ಮೊದಲಾದ ದಲಿತ ಮುಖಂಡರು ಉಪಸ್ಥಿತರಿದ್ದರು.





