ರಾಜ್ಯದ ಪ್ರತಿಷ್ಠಿತ ರಾಣಿ ಚನ್ನಮ್ಮ ವಿವಿ ಅಧೀನದಲ್ಲಿ ಕಾರ್ಯನಿರ್ವಹಿಸುತ್ತಿರುವ ಬಿ.ಇಡಿ ಹಾಗೂ ಇತರ ವೃತ್ತಿಪರ ಕೋರ್ಸ್ಗಳಲ್ಲಿ ಅಕ್ರಮವಾಗಿ ಹೆಚ್ಚುವರಿ ಹಣ ವಸೂಲಿ ಮಾಡುತ್ತಿರುವ ಖಾಸಗಿ ಶಿಕ್ಷಣ ಸಂಸ್ಥೆಗಳ ಸಂಪೂರ್ಣ ಪಟ್ಟಿಯನ್ನು ಕುಲಸಚಿವರಿಗೆ ಸಲ್ಲಿಸಲಾಗಿದೆ ಎಂದು ದಲಿತ ವಿದ್ಯಾರ್ಥಿ ಪರಿಷತ್(DVP) ತಿಳಿಸಿದೆ.
ಹಣ ವಸೂಲಿಯಲ್ಲಿ ತೊಡಗಿರುವ, ಭ್ರಷ್ಟಾಚಾರ ನಡೆಸುತ್ತಿರುವ ಹಾಗೂ ಸರಿಯಾದ ಶೈಕ್ಷಣಿಕ ವ್ಯವಸ್ಥೆ ಇಲ್ಲದ ಮೋನಿಕಾ ಬಸವರಾಜ್ ಕಣ್ಣಿ ಬಿ.ಇಡ್ ಮತ್ತು ಕಲ್ಲೂರ ಬಿ.ಇಡ್ ಕಾಲೇಜುಗಳಾದ ಖಾಸಗಿ ಸಂಸ್ಥೆಗಳ ವಿರುದ್ಧ ತನಿಖೆ ನಡೆಸಲು ಸಮಿತಿ ರಚನೆ ಮಾಡಲಾಗಿದ್ದು, ತನಿಖಾ ವರದಿಯ ಆಧಾರದಲ್ಲಿ ಸಿಂಡಿಕೆಟ್ ಸಭೆಯಲ್ಲಿ ಕ್ರಮ ಕೈಗೊಳ್ಳಲು ಅನುಮೋದನೆ ಕೂಡ ದೊರೆತಿದೆ.
ನಿನ್ನೆ ಡಿವಿಪಿ ನೇತೃತ್ವದಲ್ಲಿ ನಡೆದ ಸತತ ನಾಲ್ಕು ಗಂಟೆಗಳ ಚರ್ಚೆಯಲ್ಲಿ, ಸಂಬಂಧಪಟ್ಟ ಅಧಿಕಾರಿಗಳು ಹಾಗೂ ಪ್ರತಿನಿಧಿಗಳು, ಈ ಅಕ್ರಮಗಳಲ್ಲಿ ತೊಡಗಿರುವ ಸಂಸ್ಥೆಗಳನ್ನು ಬಂದ್ ಮಾಡುವ ಕುರಿತು ಸರ್ಕಾರ ಕೆಲವೇ ದಿನಗಳಲ್ಲಿ ಅಂತಿಮ ತೀರ್ಮಾನ ಕೈಗೊಳ್ಳಲಿದೆ ಎಂಬ ಭರವಸೆ ನೀಡಿದೆ.
ಈ ಸಂದರ್ಭದಲ್ಲಿ ವಿದ್ಯಾರ್ಥಿ ಹಾಗೂ ಯುವಜನರಿಗೆ ಡಿವಿಪಿ ಮನವಿ ಮಾಡಿದ್ದು, “ಯಾವುದೇ ಶಿಕ್ಷಣ ಸಂಸ್ಥೆಗಳು ನಿಯಮದ ವಿರುದ್ಧವಾಗಿ ಹೆಚ್ಚುವರಿ ಹಣ ವಸೂಲಿ ಮಾಡುತ್ತಿದ್ದರೆ. ಅದರ ಸಂಪೂರ್ಣ ಮಾಹಿತಿಯನ್ನು ನಿರ್ಭಯವಾಗಿ ನಮ್ಮ ಗಮನಕ್ಕೆ ತರಬೇಕು. ಯಾರೂ ಭಯಪಡುವ ಅಗತ್ಯವಿಲ್ಲ. ಕಾನೂನುಗಳು ಸಂಪೂರ್ಣವಾಗಿ ವಿದ್ಯಾರ್ಥಿಗಳ ಪರವಾಗಿವೆ. ಹಿಂಜರಿಕೆ ಪಡದೆ, ಧೈರ್ಯವಾಗಿ ಧ್ವನಿ ಎತ್ತಿ. ನಿಮ್ಮ ಹಕ್ಕುಗಳ ಹೋರಾಟದಲ್ಲಿ ದಲಿತ ವಿದ್ಯಾರ್ಥಿ ಪರಿಷತ್ ನಿಮ್ಮ ಜೊತೆಯಲ್ಲೇ ಇರುತ್ತದೆ” ಎಂದಿದ್ದಾರೆ.
ಈ ಸುದ್ದಿ ಓದಿದ್ದೀರಾ? ತುಮಕೂರು | ಡಿ.20ರಂದು ಕೆ ದೊರೈರಾಜ್ ಅವರ ‘ನಮ್ಮ ಹಟ್ಟಿ’ ಕೃತಿ ಬಿಡುಗಡೆ
ಈ ಸಂದರ್ಭದಲ್ಲಿ ದಲಿತ ವಿದ್ಯಾರ್ಥಿ ಪರಿಷತ್ ಸಂಸ್ಥಾಪಕ ರಾಜ್ಯಾಧ್ಯಕ್ಷ ಶ್ರೀನಾಥ್ ಪೂಜಾರಿ, ರಾಜ್ಯ ಮುಖಂಡ ಅಜಿತ ಮಾದರ, ಜಿಲ್ಲಾ ಸಂಚಾಲಕ ಅಕ್ಷಯ್ ಕುಮಾರ್ ಅಜಮಾನಿ, ಆದರ್ಶ್ ಗಸ್ತಿ, ಸಹ ಸಂಚಾಲಕ ಮಾದೇಶ ಚಲವಾದಿ, ಸುದೀಪ್, ರಾಹುಲ್ ಸೇರಿದಂತೆ ಇತರರು ಇದ್ದರು.





