ಚಿಂತಾಮಣಿ:ಜಿಲ್ಲೆಯಲ್ಲಿ ಶಿಕ್ಷಣ ಮತ್ತು ಆರೋಗ್ಯಕ್ಕೆ ಹೆಚ್ಚಿನ ಆದ್ಯತೆ ನೀಡಲಾಗುತ್ತಿದೆ. ಕೇಂದ್ರ ಮತ್ತು ರಾಜ್ಯ ಸರ್ಕಾರದ ಸಹಭಾಗಿತ್ವದ ಮಹತ್ವಾಕಾಂಕ್ಷಿ ಯೋಜನೆ ಎಚ್ ಪಿ ವಿ ಲಸಿಕೆ ನೀಡುವ ಅಭಿಯಾನವನ್ನು ವಿದ್ಯುಕ್ತವಾಗಿ ಆರಂಭಿಸಲಾಗಿದೆ ಎಂದು ಜಿಲ್ಲಾಧಿಕಾರಿ ಜಿ.ಪ್ರಭು ತಿಳಿಸಿದರು.
ನಗರದ ಸರ್ಕಾರಿ ಆಸ್ಪತ್ರೆಯಲ್ಲಿ ಆಯೋಜಿಸಿದ್ದ ಜಿಲ್ಲಾ ಮಟ್ಟದ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಹೆಣ್ಣುಮಕ್ಕಳಿಗೆ ಕ್ಯಾನ್ಸರ್ ನಂತಹ ಮಾರಕ ಕಾಯಿಲೆಗಳಿಗೆ ವೈರಸ್ ಕಾರಣವಾಗುತ್ತದೆ.ಮುನ್ನೆಚ್ಚರಿಕೆಯ ಕ್ರಮವಾಗಿ ಅನೇಕ ಕಾಯಿಲೆಗಳನ್ನು ತಡೆಗಟ್ಟಲು ಸುಮಾರು 10 ವಿವಿಧ ಲಸಿಕೆಗಳನ್ನು ನೀಡಲಾಗುತ್ತಿದೆ.ಮಗು ಮುಂದೆ ಯಾವುದೇ ರೋಗಗಳಿಗೆ ತುತ್ತಾಗದೆ ಸದೃಢವಾಗಿ ಸ್ವಾಸ್ಥ್ಯವನ್ನು ಕಾಪಾಡಿಕೊಳ್ಳಬೇಕು ಎನ್ನುವುದು ಸರ್ಕಾರದ ಉದ್ದೇಶವಾಗಿದೆ. ಜಿಲ್ಲೆಯಲ್ಲಿ ಎಚ್.ಪಿ.ವಿ ಲಸಿಕಾ ಅಭಿಯಾನವನ್ನು ಚಿಂತಾಮಣಿಯಿಂದ ಆರಂಭಿಸಲಾಗುತ್ತಿದೆ.
ಹೆಣ್ಣುಮಕ್ಕಳಿಗೆ ಗರ್ಭಕಂಠ ಕ್ಯಾನ್ಸರ್ ತಡೆಗಟ್ಟಲು 14 ರಿಂದ 15 ವರ್ಷ ಒಳಗಿನ ವಯೋಮಾನದ ಹೆಣ್ಣುಮಕ್ಕಳಿಗೆ ಈ ಲಸಿಕೆಯನ್ನು ನೀಡುವ ಅಭಿಯಾನವಾಗಿದೆ ಎಂದು ತಿಳಿಸಿದರು.
ಜಿಲ್ಲೆಯಲ್ಲಿ ಸುಮಾರು 13500 ಹೆಣ್ಣುಮಕ್ಕಳನದನು ಗುರುತಿಸಿದ್ದು ಎಚ್.ಪಿ.ವಿ ಲಸಿಕೆ ನೀಡಲು ಎಲ್ಲ ವ್ಯವಸ್ಥೆಯನ್ನು ಮಾಡಿಕೊಳ್ಳಲಾಗಿದೆ. ಇಂದಿನಿಂದ ಮೇ 31 ರವರೆಗೆ ಪ್ರತಿ ಬುಧವಾರ ಬೆಳಿಗ್ಗೆ 9 ರಿಂದ ಮಧ್ಯಾಹ್ನ 2 ಗಂಟೆಯವರೆಗೆ ಜಿಲ್ಲೆಯ ಎಲ್ಲ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಲಸಿಕೆಯನ್ನು ನೀಡಲಾಗುತ್ತದೆ. ಸರ್ಕಾರಿ, ಅನುದಾನಿತ, ವಸತಿ ಮತ್ತು ಅನುದಾನರಹಿತ ಶಾಲೆಗಳ ಹೆಣ್ಣುಮಕ್ಖಳ ಪೋಷಕರಿಗೆ ಇಲಾಖೆಯ ಮೂಲಕ ಸ್ವಯಂಪ್ರೇರಿತ ತಿಳುವಳಿಕೆ ಪತ್ರವನ್ನು ಕಳುಹಿಸಲಾಗುವುದು ಎಂದರು.
ರಾಜ್ಯದಲ್ಲಿ ಪ್ರತಿವರ್ಷ ಸುಮಾರು 50 ಸಾವಿರ ಹೆಣ್ಣುಮಕ್ಕಳು ಗರ್ಭಕಂಠಕ ಕ್ಯಾನ್ಸರ್ ಕಾಯಿಲೆಗೆ ತುತ್ತಾಗುತ್ತಿದ್ದಾರೆ.ವಿಶ್ವದ 150 ದೇಶಗಳಲ್ಲಿ ಎಚ್.ಪಿ.ವಿ ಲಸಿಕೆಯನ್ನು ಯಶಸ್ವಿಯಾಗಿ ನೀಡಲಾಗುತ್ತಿದೆ.ಪೋಷಕರು ಯಾವುದೇ ಹಿಂಜರಿಕೆ ಇಲ್ಲದೆ ತಮ್ಮ ಹೆಣ್ಣು ಮಕ್ಕಳನ್ನು ಹತ್ತಿರದ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಕರೆದುಕೊಂಡು ಹೋಗಿ ಲಸಿಕೆಯನ್ನು ಕೊಡಿಸಬೇಕು ಎಂದು ಮನವಿ ಮಾಡಿದರು.
ಇದನ್ನು ಓದಿದ್ದೀರಾ..? ಆನ್ಲೈನ್ ನಲ್ಲಿ ಹಾಲು ಖರೀದಿ ವಿರೋಧಿ ಪ್ರಾಂತ ರೈತ ಸಂಘದಿಂದ ಪ್ರತಿಭಟನೆ
ಜಿಲ್ಲಾ ಆರೋಗ್ಯಾಧಿಕಾರಿ ಡಾ.ಮಹೇಶ್ ಮಾತನಾಡಿ ಪ್ರತಿವರ್ಷ 12 ಮಾರಕ ರೋಗಗಳ ವಿರುದ್ಧ ಲಸಿಕೆಗಳನ್ನು ನೀಡಲಾಗುತ್ತಿದೆ. ಪೋಲಿಯೋ ಮತ್ತು ಸಿಡುಬುಮುಕ್ತ ದೇಶ ಎಂದು ಘೋಷಣೆಯಾಗಿದೆ. 2025-26 ಕ್ಕೆ ದಡಾರಮುಕ್ತ ದೇಶವನ್ನಾಗಿ ಮಾಡಲು ಗುರಿಯನ್ನು ಹೊಂದಲಾಗಿದೆ. ಹೆಣ್ಣುಮಕ್ಕಳ ಸುರಕ್ಷತೆ,ಆರೋಗ್ಯ ಮತ್ತು ಭವಿಷ್ಯವನ್ನು ಉತ್ತಮ ಪಡಿಸುವ ಹಿನ್ನಲೆಯಲ್ಲಿ ಲಸಿಕಾ ಅಭಿಯಾನಕ್ಕೆ ಚಾಲನೆ ನೀಡಲಾಗಿದೆ. ಗರ್ಭಕಂಠಕ ಕ್ಯಾನ್ಸರ್ ಬರದಂತೆ ತಡೆಯಲು ಜಿಲ್ಲೆಯಲ್ಲಿ 13412 ಹೆಣ್ಣುಮಕ್ಕಳಿಗೆ ಎಚ್.ಪಿ.ವಿ ಲಸಿಕೆಯನ್ನು ನೀಡಲಾಗುತ್ತಿದೆ ಎಂದರು.
ಈ ಸಂದರ್ಭದಲ್ಲಿ ಡಾ!ಸಂತೋಷ್ ಡಾ!ರಾಮಚಂದ್ರರೆಡ್ಡಿ.ಡಾ! ಸ್ವಾತಿ,ಸೇರಿದಂತೆ ಮತ್ತಿತರರು ಇದ್ದರು.





