ಹುಬ್ಬಳ್ಳಿ ನಗರದ ಆರ್ ಎನ್ ಶೆಟ್ಟಿ ರಸ್ತೆಯಲ್ಲಿ ದೊಡ್ಡ ಗುಂಡಿಗಳು ಬಿದ್ದಿರುವ ಪರಿಣಾಮ ವಾಹನ ಸವಾರರಿಗೆ ಮತ್ತು ಶಾಲಾ ಮಕ್ಕಳಿಗೆ, ವೃದ್ಧರಿಗೆ ಓಡಾಡಲು ಬಹಳ ಸಮಸ್ಯೆ ಉಂಟಾಗಿತ್ತು. ಈ ಬಗ್ಗೆ ಆಗಸ್ಟ್ 29ರಂದು ‘ಗುಂಡಿಗಳಿಂದ ತುಂಬಿ ಹೋದ ಆರ್ ಎನ್ ಶೆಟ್ಟಿ ರಸ್ತೆ: ಜನಪ್ರತಿನಿಧಿಗಳ ವಿರುದ್ಧ ಸಾರ್ವಜನಿಕರ ಆಕ್ರೋಶ’ ಎಂಬ ಶೀರ್ಷಿಕೆಯಡಿಯಲ್ಲಿ ಈ ದಿನ.ಕಾಮ್ ವಿಡಿಯೋ ವರದಿ ಮಾಡಿತ್ತು.
ಈದಿನ.ಕಾಮ್ ವರದಿಯಿಂದ ಎಚ್ಚೆತ್ತುಕೊಂಡ ಮಹಾನಗರ ಪಾಲಿಕೆ ಅಧಿಕಾರಿಗಳು, ಅಪಘಾತದ ಕೂಪಗಳಂತಿದ್ದ ರಸ್ತೆ ಗುಂಡಿಗಳಿಗೆ ಮಣ್ಣು ಹಾಕಿಸಿ ತಾತ್ಕಾಲಿಕವಾಗಿ ರಸ್ತೆ ಸಮಸ್ಯೆಗೆ ಪರಿಹಾರ ಕಂಡುಕೊಂಡಿದ್ದಾರೆ.
ಹುಬ್ಬಳ್ಳಿಯ ಸಿದ್ಧಾರೂಢ ಸ್ವಾಮಿ ಮಠಕ್ಕೆ ತಲುಪುವ ಆರ್ ಏನ್ ಶೆಟ್ಟಿ ರಸ್ತೆಯಲ್ಲಿ ಬೃಹತ್ ರಸ್ತೆ ಗುಂಡಿಗಳು ಬಿದ್ದಿದ್ದ ಪರಿಣಾಮ ಸಾರ್ವಜನಿಕರ ಸಂಚಾರಕ್ಕೆ ಬಹಳಷ್ಟು ಸಮಸ್ಯೆ ಉಂಟಾ ಮಾಡುತ್ತಿತ್ತು. ಹಲವು ಬಾರಿ ಸಂಬಂಧಪಟ್ಟ ಪಾಲಿಕೆ ಸದಸ್ಯರು, ಶಾಸಕರ ಗಮನಕ್ಕೆ ತಂದರೂ ಉಪಯೋಗವಾಗಿಲ್ಲ ಎಂದು ಸ್ಥಳಿಯರು ಆಕ್ರೋಶ ವ್ಯಕ್ತಪಡಿಸಿದ್ದರು.
ಈ ಕುರಿತು ಈದಿನ ಆಗಸ್ಟ್ 29 ರಂದು ಪ್ರತ್ಯಕ್ಷ ವರದಿ ಮಾಡಿದ್ದು, ಅಧಿಕಾರಿಗಳ ಗಮನಸೆಳೆಯುವ ಕೆಲಸ ಮಾಡಿತ್ತು. ಈ ದಿನ ವರದಿಯ ಮರುದಿನವೇ ವರದಿಗೆ ಎಚ್ಚೆತ್ತುಕೊಂಡ ಅಧಿಕಾರಿಗಳು, ತೆರೆದುಕೊಂಡಿದ್ದ ಗುಂಡಿಗಳಿಗೆ ಮಣ್ಣು ಹಾಕಿಸಿದ್ದಾರೆ.
ಈ ಬಗ್ಗೆ ಸಾಮಾಜಿಕ ಹೋರಾಟಗಾರ ರಾಜು ನಾಯಕವಾಡಿ ಈ ದಿನ.ಕಾಮ್ ಜೊತೆಗೆ ಮಾತನಾಡಿ, “ಈ ದಿನ.ಕಾಮ್ನ ಸುದ್ಧಿಯಿಂದ ಜನರಿಗೆ ಅನುಕೂಲ ಆಯಿತು, ನಿಮ್ಮ ವರದಿಯಿಂದ ಪಾಲಿಕೆ ಎಚ್ಚೆತ್ತುಕೊಂಡು ತಾತ್ಕಾಲಿಕವಾಗಿ ಸಮಸ್ಯೆ ಬಗೆಹರಿಸಿದೆ. ಆದರೆ ಸಂಪೂರ್ಣ ಉತ್ತಮ ರಸ್ತೆ ನಿರ್ಮಿಸಲು ಶ್ರಮಿಸಬೇಕು. ಮಳೆಗಾಲ ಮುಗಿದ ಕೂಡಲೇ ರಸ್ತೆ ಕಾಮಗಾರಿ ನಡೆಸಬೇಕು” ಎಂದು ಆಗ್ರಹಿಸಿದರು.





