ಮೈಸೂರು ಜಿಲ್ಲೆ, ನಂಜನಗೂಡು ತಾಲ್ಲೂಕು ಇಮ್ಮಾವು ಗ್ರಾಮದ ಸರ್ವೇ ನಂ.390 ರಿಂದ 430ರ ವರೆಗಿನ ಜಮೀನಿನ ಮೂಲ ಗೇಣಿದಾರರಿಗೆ ಪರಿಹಾರ ಪಾವತಿಸುವಂತೆ ಹಾಗೂ ಕಾನೂನು ಬಾಹಿರವಾಗಿ ಪರಿಹಾರ ಪಡೆದಿರುವ ಅರ್ಹರಲ್ಲದವರ ವಿರುದ್ಧ ಕಾನೂನು ರೀತ್ಯಾ ಸೂಕ್ತ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿ ಕರ್ನಾಟಕ ರಾಜ್ಯ ರೈತ ಸಂಘದ ರಾಜ್ಯಾಧ್ಯಕ್ಷ ಬಡಗಲಪುರ ನಾಗೇಂದ್ರ ಅವರ ನೇತೃತ್ವದಲ್ಲಿ ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ಅನಿರ್ಧಿಷ್ಟಾವಧಿ ಧರಣಿ ಕೈಗೊಂಡಿದೆ.
ಇಮ್ಮಾವು ಗ್ರಾಮದ ಸರಿ ಸುಮಾರು 500 ಎಕರೆಯಷ್ಟು ಸರ್ಕಾರಿ ಭೂಮಿಯಲ್ಲಿ 80-90 ವರ್ಷಗಳಿಂದ ಗೇಣಿದಾರರಾಗಿ ಉಳುಮೆ ಮಾಡಿಕೊಂಡು ಜೀವನ ನಡೆಸುತ್ತಿರುವವರು ಸ್ಥಳೀಯ ರೈತರು. ಈ ಸಂಬಂಧಿತವಾಗಿ ಸರ್ಕಾರಕ್ಕೆ ಅರ್ಜಿ ಸಲ್ಲಿಸಿ ವ್ಯವಸಾಯ ಮಾಡಿಕೊಂಡು ಬಂದಿದ್ದಾರೆ. 2008ರಲ್ಲಿ ಸರ್ಕಾರ ಕೈಗಾರಿಕಾ ಉದ್ದೇಶಕ್ಕಾಗಿ ಭೂ ಸ್ವಾಧೀನ ಪಡಿಸಿಕೊಂಡು ಖಾತೆದಾರರಿಗೆ ಎಕರೆಗೆ ತಲಾ ₹21 ಲಕ್ಷ ರೂಪಾಯಿ ಪರಿಹಾರ ನೀಡಿದೆ.
ಸರ್ಕಾರಿ ಕರಾಬಿನಲ್ಲಿರುವ ಸಾಗುವಳಿ ರೈತರಿಗೆ ಸರ್ಕಾರ ₹18 ಕೋಟಿ ರೂಪಾಯಿ ಬಿಡುಗಡೆ ಮಾಡಿದ್ದು, ಅರ್ಹ ರೈತರಿಗೆ ಹಂಚಿಕೆ ಮಾಡದೆ ಅರ್ಹರಲ್ಲದವರಿಗೆ ನೀಡಿರುವುದು ಕಂಡುಬಂದಿದೆ ಎಂದು ಆರೋಪಿಸಿದರು. ಈ ಸಂಬಂಧ ಕೆಐಎಡಿಬಿ ಎದುರು ಫೆಬ್ರವರಿ.2ರಂದು ಪ್ರತಿಭಟನೆ ನಡೆಸಿ ಸಮಸ್ಯೆ ಪರಿಹರಿಸುವಂತೆ 15 ದಿನಗಳ ಗಡುವು ನೀಡಲಾಗಿತ್ತು. ಆದರೆ, ಇದುವರೆಗೆ ಯಾವುದೇ ರೀತಿಯ ಕ್ರಮಕೈಗೊಂಡಿಲ್ಲ ಎಂದು ಪ್ರತಿಭಟನೆ ನಿರತರು ದೂರಿದ್ದಾರೆ.
ಈ ಸುದ್ದಿ ಓದಿದ್ದೀರಾ? ಮೈಸೂರು | ಮಾರ್ಚ್.4ರಂದು ಬೆಂಗಳೂರಿನ ಫ್ರೀಡಂ ಪಾರ್ಕಿನಲ್ಲಿ ಪ್ರತಿಭಟನೆ: ದೇವಗಳ್ಳಿ ಸೋಮಶೇಖರ್
ಪ್ರತಿಭಟನೆಯಲ್ಲಿ ರಾಜ್ಯ ವಿಭಾಗೀಯ ಸಂಘಟನಾ ಕಾರ್ಯದರ್ಶಿ ಹೊಸಕೋಟೆ ಬಸವರಾಜು, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಪಿ. ಮರಂಕಯ್ಯ, ಯುವ ಘಟಕದ ಪ್ರೇಮ್ ರಾಜ್, ಮೈದನಹಳ್ಳಿ ಮಹೇಶ್, ಸಂತೋಷ್, ರಾಜಣ್ಣ, ಬಸವರಾಜು, ಪ್ರಕಾಶ್, ರಂಗಸ್ವಾಮಿ, ಕಾಳೆಗೌಡ, ರಂಗಪ್ಪ, ಬಸಪ್ಪ, ಮಂಜಮ್ಮ, ಕಳಸಮ್ಮ, ಲಕ್ಷ್ಮಿ ಸೇರಿದಂತೆ ನೂರಾರು ಸಂಖ್ಯೆಯಲ್ಲಿ ಕಾರ್ಯಕರ್ತರು ಇದ್ದರು.





