ಕರ್ನಾಟಕ ರಾಜ್ಯ ರೈತ ಸಂಘದ ನೇತೃತ್ವದಲ್ಲಿ ಕೋಚನಹಳ್ಳಿ ಹಾಗು ಹಿಮ್ಮಾವು ಗ್ರಾಮದ ರೈತರು ಗನ್ ಹೌಸ್ ವೃತ್ತದಿಂದ, ರಾಮಸ್ವಾಮಿ ವೃತ್ತದ ಮಾರ್ಗವಾಗಿ ಪಾದಯಾತ್ರೆ ತೆರಳಿ ಕೆ ಆರ್ ಎಸ್ ರಸ್ತೆಯಲ್ಲಿರುವ ಕೆಐಡಿಬಿ ಕಚೇರಿ ಮುಂಭಾಗದಲ್ಲಿ ರೈತರಿಗೆ ಪರಿಹಾರ ಪಾವತಿ ಮಾಡುವಂತೆ ಆಗ್ರಹಿಸಿ ಅಹೋರಾತ್ರಿ ಧರಣಿ ಆರಂಭಿಸಿದ್ದಾರೆ.
ಜಿಲ್ಲಾ ಸಂಘಟನಾ ಕಾರ್ಯದರ್ಶಿ ಹೊಸಕೋಟೆ ಬಸವರಾಜು ಮಾತನಾಡಿ, ಕೋಚನಹಳ್ಳಿ ಗ್ರಾಮದಲ್ಲಿ ಸುಮಾರು 160 ಎಕರೆ ರೈತರ ಭೂಮಿಯನ್ನು ಗಾಲ್ಫ್ ಕಂಪನಿಯವರು ವಶಕ್ಕೆ ಪಡೆದಿದ್ದಾರೆ. ಮುಖ್ಯವಾಗಿ ಭೂಮಿ ಕಳೆದುಕೊಂಡವರಿಗೆ ಉದ್ಯೋಗ ನೀಡುವ ಭರವಸೆ ನೀಡಲಾಗಿತ್ತು. ಅಂದು ಜಿಲ್ಲಾಧಿಕಾರಿಯಾಗಿದ್ದ ಬಗಾದಿ ಗೌತಮ್ ಭೂ ಸಂತ್ರಸ್ತ ರೈತರು ಹಾಗು ಕಂಪನಿಯವರೊಂದಿಗೆ ಸಭೆ ನಡೆಸಿ ಉದ್ಯೋಗ ಕೊಡುವ ಭರವಸೆ ನೀಡಿ, ಆದೇಶ ಮಾಡಲಾಗಿತ್ತು. ಆದರೆ, ಇದುವರೆಗೆ ಭರವಸೆ ಈಡೇರಿಸದೆ ಮೋಸ ಮಾಡಿದ್ದಾರೆ.

ಹಿಮ್ಮಾವು ಗ್ರಾಮದಲ್ಲಿ ಸರಿ ಸುಮಾರು 1515 ಎಕರೆ ಭೂಮಿಯನ್ನು ಕೆಐಡಿಬಿ ಸ್ವಾಧೀನ ಪಡಿಸಿಕೊಂಡಿದೆ. ಅದರಲ್ಲಿ, 165 ಎಕರೆ ಭೂಮಿಯನ್ನು ಚಿತ್ರನಗರಿಗೆ ನೀಡಿದೆ. ಇದರಲ್ಲಿ ಗಮನಿಸಬೇಕಾದ ವಿಚಾರ ಎಂದರೆ 500 ಎಕರೆ ಭೂಮಿ ಗೋಮಾಳ ಎಂದು ತಿರುಚಿ ರೈತರಿಗೆ ಸಿಗಬೇಕಿದ್ದ ₹18 ಕೋಟಿ ರೂಪಾಯಿ ಪರಿಹಾರ ಹಣ ನೀಡದೆ ವ್ಯವಸ್ಥಿತವಾಗಿ ಮೋಸ ಮಾಡಲಾಗಿದೆ. ಇದೇ ಕಾರಣಕ್ಕಾಗಿ ಮರು ತನಿಖೆ ನಡೆಸಿ ನ್ಯಾಯ ದೊರಕಿಸಿಕೊಡಬೇಕು ಎಂದು ಆಗ್ರಹಿಸಿದರು.
ಈ ಸುದ್ದಿ ಓದಿದ್ದೀರಾ? ಮೈಸೂರು | ಯಾವುದೇ ಹೊಸ ಭರವಸೆ ಹುಟ್ಟು ಹಾಕದ ಬಜೆಟ್: ಬಡಗಲಪುರ ನಾಗೇಂದ್ರ
ಪ್ರತಿಭಟನೆಯಲ್ಲಿ ರಾಜ್ಯ ಕಾರ್ಯದರ್ಶಿ ನೇತ್ರಾವತಿ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಪಿ. ಮರಂಕಯ್ಯ, ಗ್ರಾಮಾಂತರ ತಾಲ್ಲೂಕು ಅಧ್ಯಕ್ಷ ಆನಂದೂರು ಪ್ರಭಾಕರ್, ಚಂದ್ರಶೇಖರ್ ಮೇಟಿ, ಉಗ್ರ ನರಸಿಂಹೆಗೌಡ, ಮಂಡಕಳ್ಳಿ ಮಹೇಶ್, ಯುವ ಘಟಕದ ಪ್ರೇಮ್ ರಾಜ್ ಸೇರಿದಂತೆ ನೂರಾರು ಜನ ಕಾರ್ಯಕರ್ತರು ಇದ್ದರು.






