ವಿಜಯಪುರ ಜಿಲ್ಲೆಯ ಸಿಂದಗಿ ತಾಲೂಕಿನ ಸಾಸಭಾಳ ಗ್ರಾಮದ ಸರ್ವೆ ನಂಬರ್ 14,18 ಸರ್ಕಾರಿ ಭೂಮಿಯನ್ನು ಫಾರೆಸ್ಟಿಗೆ ಹಸ್ತಾಂತರಿಸಲು ಯೋಜಿಸಿರುವುದನ್ನು ಕೈಬಿಡುವಂತೆ ಆಗ್ರಹಿಸಿ ಕರ್ನಾಟಕ ಪ್ರಾಂತ ರೈತ ಸಂಘ ಸಿಂದಗಿ ಘಟಕ ಪ್ರತಿಭಟಿಸಿ ತಹಸೀಲ್ದಾರರಿಗೆ ಮನವಿ ಸಲ್ಲಿಸಿದೆ.
ಸಾಸಭಾಳ ಗ್ರಾಮದ ಸರ್ವೆ ನಂಬರ್ 14ರಲ್ಲಿ ಬಡ ಬಗರ್ ಹುಕುಂ ಸಾಗುವಳಿದಾರರು ನಮೂನೆ 57 ಅರ್ಜಿ ಹಾಕಿಕೊಂಡು ಸಕ್ರಮಕ್ಕಾಗಿ ಕಾಯುತ್ತಿದ್ದಾರೆ. ಡೀಮ್ಡ್ ಅರಣ್ಯ ಹಸ್ತಾಂತರವನ್ನು ಪುನರ್ ಪರಿಶೀಲಿಸಿ ಬಡವರಿಗೆ ನ್ಯಾಯ ಒದಗಿಸಬೇಕಾಗಿ ಪ್ರತಿಭಟನಾಕಾರರು ಮನವಿ ಮಾಡಿಕೊಂಡಿದ್ದಾರೆ.
ಅಕ್ರಮ ಸಕ್ರಮ ಕಮಿಟಿಯಲ್ಲಿ ನಮೂನೆ-57 ಅರ್ಜಿಗಳನ್ನು ಪರಿಗಣಿಸಬೇಕು. ಢವಳಾರ, ಗೋಲಗೇರಿ, ಸಾಸಭಾಳ ಗ್ರಾಮಗಳ ಸಾಗುವಳಿದಾರರ ಭೂಮಿಯನ್ನು ಸಕ್ರಮಗೊಳಿಸಬೇಕು. ಅರಣ್ಯ ಇಲಾಖೆಯ ಅಧಿಕಾರಿಗಳು ರೈತರಿಗೆ ತೊಂದರೆ ಕೊಡಬಾರದು. ಸಾಗುವಳಿದಾರರಿಗೆ ಹೊಸ ಅರ್ಜಿ ಹಾಕಲು ಅವಕಾಶ ಮಾಡಿಕೊಡಬೇಕು ಎಂದು ಒತ್ತಾಯಿಸಿದ್ದಾರೆ.
ಇದನ್ನೂ ಓದಿ: ವಿಜಯಪುರ | ಪಂಚ ಗ್ಯಾರಂಟಿಗಳ ಕುರಿತು ಜನಜಾಗೃತಿ; ಎಲ್ಇಡಿ ಪ್ರದರ್ಶನ ವಾಹನಕ್ಕೆ ಚಾಲನೆ
ಈ ಸಂದರ್ಭದಲ್ಲಿ ಕರ್ನಾಟಕ ಪ್ರಾಂತ ರೈತ ಸಂಘದ ಜಿಲ್ಲಾಧ್ಯಕ್ಷ ಅಣ್ಣಾರಾಯ ಇಳಗೆರಾ, ಡಿವೈಎಫ್ಐ ಜಿಲ್ಲಾಧ್ಯಕ್ಷ ರಮೇಶ ತಳವಾರ, ಬಗರ್ ಹುಕುಂ ಸಾಗುವಳಿದಾರರಾದ ಬಾಬು ರಾಠೋಡ, ಯಲ್ಲಪ್ಪ ತಳವಾರ, ಮನೋಹರ ಜಾಧವ, ಅಶೋಕ ಹಡಪದ, ಕುಪ್ಪಣ್ಣ ತಳವಾರ, ಭೀಮಶಿ ಪವರ ಇದ್ದರು.





