ಮೈಸೂರಿನ ಪತ್ರಕರ್ತರ ಭವನದಲ್ಲಿ ಕರ್ನಾಟಕ ರಾಜ್ಯ ರೈತ ಸಂಘದ ರಾಜ್ಯಾಧ್ಯಕ್ಷರಾದ ಬಡಗಲಪುರ ನಾಗೇಂದ್ರ ಮಾತನಾಡಿ, ಇದೇ ಅಕ್ಟೋಬರ್.18 ರಂದು ಯಾದಗಿರಿಯಲ್ಲಿ ರೈತ ಸಮಾವೇಶ ನಡೆಯಲಿದೆ ಎಂದು ಮಾಹಿತಿ ನೀಡಿದರು.
“ಅತಿವೃಷ್ಟಿ, ಅನಾವೃಷ್ಟಿಯಿಂದ ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ. ರಾಜ್ಯ ಸರ್ಕಾರಕ್ಕಾಗಲಿ, ಕೇಂದ್ರ ಸರ್ಕಾರಕ್ಕಾಗಲಿ ರೈತರ ಕಾಳಜಿಯಿಲ್ಲ. ಇಂತಹ ಸಂದರ್ಭದಲ್ಲಿ ರೈತರ ಪರವಾಗಿ ನಿಲ್ಲಬೇಕಿದೆ. ರೈತರ ಸಾಲ ಮನ್ನಾ ಸೇರಿದಂತೆ, ಹೆಚ್ಚು ಮಳೆಯಿಂದ, ಬರದಿಂದ ನಷ್ಟ ಹೊಂದಿದ ರೈತರಿಗೆ ಪರಿಹಾರ ಕಲ್ಪಿಸುವಂತೆ ಆಗ್ರಹಿಸಿ ‘ರೈತ ಸಮಾವೇಶ’ ನಡೆಸುತ್ತಿರುವುದಾಗಿ” ಹೇಳಿದರು.
ಸತತವಾಗಿ ರೈತರು ಒಂದಲ್ಲಾ ಒಂದು ಸಮಸ್ಯೆಗೆ ಸಿಲುಕುತಿದ್ದಾರೆ. ರಾಜ್ಯದಲ್ಲಿ ಒಂದೊಂದು ಕಡೆ ಮಳೆಯಾಗದೆ ಬರದ ಪರಿಸ್ಥಿತಿ, ಇನ್ನೊಂದು ಕಡೆ ಬರಪೂರ ಮಳೆ. ರೈತ ಬೆಳೆ ಬೆಳೆಯಲು, ಬೆಳೆದ ಬೆಳೆ ಉಳಿಸಿಕೊಳ್ಳಲು ಪರದಾಡುವ ಪರಿಸ್ಥಿತಿ ಎದುರಾಗಿದೆ. ಅದಲ್ಲದೆ, ಇತ್ತೀಚಿಗೆ ವರ್ಷದ ಮಳೆಯಾಗಿ ಪರಿಣಮಿಸಿದ್ದರಿಂದ ರೈತ ಯಾವ ಸಂದರ್ಭದಲ್ಲಿ ಏನು ಮಾಡಬೇಕು ಎನ್ನುವುದೇ ತಿಳಿಯದ ಪರಿಸ್ಥಿತಿಯು ನಿರ್ಮಾಣವಾಗಿದೆ.
ಅಂಕಿ ಅಂಶಗಳ ಪ್ರಕಾರ ಹೇಳುವುದಾದರೆ 2002 ನೇ ಸಾಲಿನಿಂದ ಈಚೆಗೆ 23 ವರ್ಷಗಳ ಅವಧಿಯಲ್ಲಿ 17 ಬಾರಿ ಅತಿವೃಷ್ಟಿ, 4 ಬಾರಿ ಬರ ಕಂಡಿದ್ದೇವೆ. ಹೀಗಾದರೆ ರೈತರ ಕಥೆಯೇನು? ಎನ್ನುವುದು ನಮ್ಮುಂದಿರುವ ಪ್ರಶ್ನೆ.
ಒಂದೆಡೆ ಅತಿಯಾದ ಮಳೆಯಿಂದ ಬೆಳೆ ನೆಲ ಕಚ್ಚಿದೆ, ಇನ್ನೊಂದೆಡೆ ಬರದಿಂದ ಬೆಳೆಯಾಗಿಲ್ಲ, ಕೆಲವು ಕಡೆ ಕಳಪೆ ಬಿತ್ತನೆ ಬೀಜದಿಂದ ರೈತ ನಷ್ಟ ಅನುಭವಿಸಿದ್ದಾನೆ ಇದನ್ನೆಲ್ಲಾ ಪರಿಗಣಿಸಿ ಸರ್ಕಾರ ಸೂಕ್ತವಾದ ಪರಿಹಾರವನ್ನು ಎಕರೆ ಅನುಸಾರ ನೀಡಬೇಕು ಎಂದು ಆಗ್ರಹಿಸಿದರು.
ಈ ಸುದ್ದಿ ಓದಿದ್ದೀರಾ? ಮೈಸೂರು | ಮಾಹಿತಿ ಹಕ್ಕು ಅನುಷ್ಠಾನ ಸಭೆ; ಜಿಲ್ಲಾ ಮಟ್ಟದ ಅಧಿಕಾರಿಗಳು ಭಾಗಿ
ಪತ್ರಿಕಾಗೋಷ್ಠಿಯಲ್ಲಿ ವಿಭಾಗಿಯ ಪ್ರಧಾನ ಕಾರ್ಯದರ್ಶಿ ಹೊಸಕೋಟೆ ಬಸವರಾಜು, ರಾಜ್ಯ ಪ್ರಧಾನ ಕಾರ್ಯದರ್ಶಿ ನೇತ್ರಾವತಿ, ಮೈಸೂರು ಗ್ರಾಮಾಂತರ ಕಾರ್ಯದರ್ಶಿ ಮಂಟಕಳ್ಳಿ ಮಹೇಶ್ ಇದ್ದರು.





