ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆಯವರು ಕಳೆದ ಚುನಾವಣೆಯಲ್ಲಿ ಸೋಲು ಕಂಡಂತೆ ಈ ಬಾರಿಯೂ ಸೋಲು ಖಚಿತ ಎಂಬ ಭಯದಿಂದಲೇ ಚುನಾವಣೆ ಕಣದಿಂದ ದೂರ ಸರಿದಿದ್ದಾರೆ ಎಂದು ವಿಪಕ್ಷ ನಾಯಕ ಆರ್.ಅಶೋಕ್ ಟೀಕಿಸಿದರು.
ಕಲಬುರಗಿ ವಿಮಾನ ನಿಲ್ದಾಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, “ಕಾಂಗ್ರೆಸ್ನಲ್ಲಿ ಅಳಿಯ, ಮಕ್ಕಳು, ಕೋ ಬ್ರದರ್ಸ್, ಸೊಸೆ ಇವರೇ ಅಭ್ಯರ್ಥಿಗಳಾಗಿದ್ದಾರೆ” ಎಂದು ಕುಟುಕಿದರು.
“ಲೋಕಸಭೆ ಚುನಾವಣೆ ಘೋಷಣೆ ಮುನ್ನ ಬಹಳ ಅಭ್ಯರ್ಥಿಗಳು ಮೋದಿ ಹವಾದಲ್ಲಿ ಗೆಲ್ಲುತ್ತೇವೆ ಎಂದು ಅರ್ಜಿ ಹಾಕಿದ್ದರು. ನಂತರ ರಾಜ್ಯ ಮತ್ತು ಕೇಂದ್ರ ನಾಯಕರು ಅಭ್ಯರ್ಥಿಗಳನ್ನು ಆಯ್ಕೆ ಮಾಡಿದ್ದಾರೆ. ಬೀದರ್ ಅಭ್ಯರ್ಥಿ ಬಗ್ಗೆ ಸಾಕಷ್ಟು ಗೊಂದಲ ಸೃಷ್ಟಿಯಾಗಿತ್ತು. ಹಾಗಾಗಿ ಕಳೆದ ವಾರ ಬೀದರ್ಗೆ ಬರುತ್ತೇನೆ ಎಂದು ಹೇಳಿದ್ದೆ. ಶಾಸಕರು ಮತ್ತು ಪದಾಧಿಕಾರಿಗಳ ಜೊತೆ ಮಾತುಕತೆ ನಡೆಸುತ್ತೇನೆ. ಬೀದರ್-ಕಲಬುರಗಿ ಕ್ಷೇತ್ರದಲ್ಲಿ ನಾವೇ ಗೆಲ್ಲುತ್ತೇವೆ” ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಬರ ಪರಿಹಾರದ ವಿಚಾರಕ್ಕೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್ ಮೊರೆ ಹೋದ ವಿಚಾರವಾಗಿ ಮಾತನಾಡಿದ ಅಶೋಕ್, ರಾಜ್ಯದ ಕಾಂಗ್ರೆಸ್ ನಾಯಕರಿಗೆ ನಾಚಿಕೆಗೇಡಿನ ಸಂಗತಿ. ರಾಜ್ಯದ ಕಾಂಗ್ರೆಸ್ ನಾಯಕರು, ಪಕ್ಕದ ತೆಲಂಗಾಣದ ಸಿಎಂ ರೇವಂತ ರೆಡ್ಡಿ ನೋಡಿ ಕಲಿಯಬೇಕು, ಅವರು ಸಹ ಕಾಂಗ್ರೆಸ್ ಪಕ್ಷದವರೇ ಆಗಿದ್ದಾರೆ. ಆದರೆ ಮೊನ್ನೆ ಪ್ರಧಾನಿ ಮೋದಿ ತೆಲಂಗಾಣ ಬಂದ ವೇಳೆ ದೇಶದ ಪ್ರಧಾನಿ ಜೊತೆಗೆ ಯಾವ ರೀತಿ ನಡೆದುಕೊಂಡಿದ್ದಾರೆ ಎಂಬುದು ರಾಜ್ಯದ ಕಾಂಗ್ರೆಸ್ ನಾಯಕರು ನೋಡಿ ಕಲಿತುಕೊಳ್ಳಲಿ ಎಂದರು.
“ಕಳೆದ 30 ವರ್ಷದಿಂದ ಬರ ಇದೆ. ಈ ಹಿಂದೆ ನಮ್ಮ ಬಿಜೆಪಿ ಸರಕಾರ ಇದ್ದಾಗ ಬರ ಬಂದಾಗ ಕೇಂದ್ರ ಸರಕಾರ ಬಂದು ಭೇಟಿ ನೀಡಿದೆ. ಐದು ತಿಂಗಳ ಬಳಿಕ ಅವರು ಹಣ ಬಿಡುಗಡೆ ಮಾಡಿದರು. ನಾವು ಅವರ ಹಣ ಬರುವ ಮುನ್ನವೇ ಪರಿಹಾರ ಕೊಟ್ಟಿದ್ದೆವು. ನಮ್ಮದು ಸಮೃದ್ಧ ಸರಕಾರ ಇತ್ತು. ಒಂದು ತಿಂಗಳಲ್ಲಿ ರೈತರಿಗೆ ಕೊಡಬೇಕಾದ ಪರಿಹಾರ ಕೊಟ್ಟಿದ್ದೆವು.
‘ಸಿಎಂ ಸಿದ್ದರಾಮಯ್ಯಗೆ ಧಮ್ ಇದ್ದರೆ ಬರ ಬಂದಾಗ ನೀವು ಯಾವಾಗ ಕೊಟ್ಟಿದ್ದೀರಿ? ಎಂದು ನಮಗೆ ಕೇಳಲಿ. ನಾನು ಉತ್ತರ ಕೊಡುತ್ತೇನೆ’ ಎಂದು ಸವಾಲು ಹಾಕಿದರು.
ಈ ಸುದ್ದಿ ಓದಿದ್ದೀರಾ? ಬಿಜೆಪಿ ಜೊತೆ ಕೆಆರ್ಪಿಪಿ ವಿಲೀನ; ಸೋಮವಾರ ಜನಾರ್ದನ ರೆಡ್ಡಿ ಬಿಜೆಪಿಗೆ ಸೇರ್ಪಡೆ
“ಬ್ರಹ್ಮ ಯಾವ ಕಾಲಕ್ಕೂ ಭೂ ಲೋಕಕ್ಕೆ ಬರುವುದಿಲ್ಲ. ನಮ್ಮ ಕಾರ್ಯಕರ್ತರು ಕೆ. ಎಸ್. ಈಶ್ವರಪ್ಪರನ್ನು ಮನ ಒಲಿಸುತ್ತಾರೆ. ಬ್ರಹ್ಮ ಬಂದರೂ ಮುಂದಿಟ್ಟ ಹೆಜ್ಜೆ ಹಿಂದೆ ಇಡೋದಿಲ್ಲ ಎಂಬ ಕೆ.ಎಸ್.ಈಶ್ವರಪ್ಪ ಹೇಳಿಕೆಗೆ ಆರ. ಅಶೋಕ್ ಪ್ರತಿಕ್ರಿಯಿಸಿದರು. ಕಾರ್ಯಕರ್ತರೇ ನಮ್ಮ ಪಾಲಿಗೆ ದೇವರು. ಇನ್ನೂ ಸ್ವಲ್ಪ ದಿನದಲ್ಲೇ ಎಲ್ಲವೂ ಸರಿ ಹೋಗುತ್ತದೆ. ಈಶ್ವರಪ್ಪರನ್ನು ಕಾರ್ಯಕರ್ತರು ಮನವೊಲಿಸಲಿದ್ದಾರೆ” ಎಂದರು.





