ಭ್ರೂಣ ಹತ್ಯೆ ಮಾಡಿಸಿ ತನ್ನ ಪ್ರಿಯಕರ ಪರಾರಿಯಾಗಿದ್ದಾನೆ. ಆತನ ವಿರುದ್ಧ ದೂರು ನೀಡಿದರೂ ಪೊಲೀಸರು ಕ್ರಮ ಕೈಗೊಳ್ಳುತ್ತಿಲ್ಲ. ಆರೋಪಿ ದಯಾನಂದ (ಯುವತಿಯ ಪ್ರಿಯಕರ)ನಿಂದ ಪೊಲೀಸರು ಲಂಚ ಪಡೆದು, ಕ್ರಮ ಕೈಗೊಳ್ಳದೆ ನಿರ್ಲಕ್ಷಿಸುತ್ತಿದ್ದಾರೆ. ದಯಾನಂದ ಮತ್ತು ಪೊಲೀಸರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿ ರಾಮನಗರ ಜಿಲ್ಲೆಯ ಯುವತಿಯೊಬ್ಬರು ಪ್ರಧಾನಿ ಮೋದಿಗೆ ಪತ್ರ ಬರೆದಿದ್ದಾರೆ. ತನಗೆ ನ್ಯಾಯ ದೊರೆಯದಿದ್ದಾರೆ, ಜಿಲ್ಲಾ ವರಿಷ್ಠಾಧಿಕಾರಿ ಕಚೇರಿ ಎದುರು ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಪತ್ರದಲ್ಲಿ ಯುವತಿ ಎಚ್ಚರಿಕೆ ನೀಡಿದ್ದಾರೆ.
ರಾಮನಗರ ಜಿಲ್ಲೆಯ ಮಾಗಡಿ ಮೂಲದ ಯುವತಿ ಪ್ರಧಾನಿ ಮೋದಿಗೆ ಪತ್ರ ಬರೆದಿದ್ದಾರೆ. ಆರೋಪಿ ದಯಾನಂದ ತನ್ನನ್ನು ಪ್ರೀತಿಸಿ, ವಂಚಿಸಿದ್ದಾನೆ. ನಾನು ಗರ್ಭಿಣಿಯಾದ ಬಳಿಕ ಗರ್ಭಪಾತ ಮಾಡಿಸಿ ಪರಾರಿಯಾಗಿದ್ದಾನೆ. ಆತನ ವಿರುದ್ಧ ಕ್ರಮ ಕೈಗೊಳ್ಳದೆ, ನನಗೆ ನ್ಯಾಯ ಕೊಡಿಸದೆ ಪೊಲೀಸರು ವಂಚಿಸಿದ್ದಾರೆ. ಆರೋಪಿ ದಯಾನಂದ ಮತ್ತು ಪೊಲೀಸರು – ಇಬ್ಬರ ವಿರುದ್ಧವೂ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದ್ದಾರೆ.
“ಆರೋಪಿ ವಿರುದ್ಧ ರಾಮನಗರ ಮಹಿಳಾ ಪೊಲೀಸ್ ಠಾಣೆಯಲ್ಲಿ ದೂರು ನೀಡಿದರೂ, ಪೊಲೀಸರು ದೂರು ಸ್ವೀಕರಿಸಿಲ್ಲ. ದಯಾನಂದನ ಸ್ನೇಹಿತ ದೂರು ಕೊಡಿಸುತ್ತೇನೆಂದು ಹೇಳಿ ನನ್ನಿಂದ 1.4 ಲಕ್ಷ ರೂ. ಲಂಚ ಕೊಡಿಸಿದ್ದಾನೆ. ಲಂಚ ಪಡೆದ ಮೇಲೂ ಪೊಲೀಸರು ಕ್ರಮ ಕೈಗೊಂಡಿಲ್ಲ. ನಾಲ್ಕು ತಿಂಗಳುಗಳಿಂದ ಪೊಲೀಸ್ ಠಾಣೆಗೆ ಅಲೆದು ಬೇಸತ್ತಿದ್ದೇನೆ” ಎಂದು ಯುವತಿ ಆರೋಪಿಸಿದ್ದಾರೆ.
ಕಳೆದ ವರ್ಷ ಹೆಣ್ಣು ಭ್ರೂಣ ಹತ್ಯೆಯ ಜಾಲವನ್ನು ಪೊಲೀಸರು ಬೇಧಿಸಿದ್ದರು. ಮಂಡ್ಯ ಬಳಿಯ ಆಲೆ ಮನೆಯಲ್ಲಿ ಭ್ರೂಣ ಹತ್ಯೆ ನಡೆಸುತ್ತಿದ್ದ ಆರೋಪಿಗಳ ತಂಡವನ್ನು ಬೆಂಗಳೂರು, ಮೈಸೂರು ಹಾಗೂ ಮಂಡ್ಯದಲ್ಲಿ 2023ರ ಅಕ್ಟೋಬರ್ನಲ್ಲಿ ಪೊಲೀಸರು ಬಂಧಿಸಿದ್ದರು. ಬೆಂಗಳೂರು-ಮೈಸೂರಿನಲ್ಲಿ ಆಸ್ಪತ್ರೆಯನ್ನು ನಡೆಸುತ್ತಿದ್ದ ಕೆಲವು ವೈದ್ಯರೂ ಸೇರಿದಂತೆ ಹಲವು ಆರೋಪಿಗಳು 2023ರ ಆಗಸ್ಟ್, ಸೆಪ್ಟೆಂಬರ್, ಅಕ್ಟೋಬರ್ – ಮೂರು ತಿಂಗಳಲ್ಲಿಯೇ 242 ಹೆಣ್ಣು ಭ್ರೂಣಹತ್ಯೆ ಮಾಡಿದ್ದಾರೆ. ಪ್ರತಿ ವರ್ಷ ಕನಿಷ್ಟ 1,000 ಭ್ರೂಣಹತ್ಯೆ ಮಾಡಿದ್ದಾರೆಂದು ಬೆಂಗಳೂರು ನಗರ ಪೊಲೀಸ್ ಆಯುಕ್ತ ಬಿ ದಯಾನಂದ ಮಾಹಿತಿ ನೀಡಿದ್ದರು.
ಮೈಸೂರು ಮತ್ತು ಬೆಂಗಳೂರಿನಲ್ಲಿ ಅಕ್ರಮವಾಗಿ ಭ್ರೂಣ ಲಿಂಗ ಪತ್ತೆ ಮಾಡುತ್ತಿದ್ದ ಆಸ್ಪತ್ರೆಗಳ ಮೇಲೆ ದಾಳಿ ನಡೆಸಿದ್ದ ಪೊಲೀಸರು, ಆಸ್ಪತ್ರೆಗಳಿಗೆ ಬೀಗ ಜಡಿದಿದ್ದರು. ಹಲವು ವೈದ್ಯರು, ದಾದಿಯನ್ನು ಬಂಧಿಸಿದ್ದರು.




