ಮಂಡ್ಯ ಜಿಲ್ಲೆ ಕೃಷ್ಣರಾಜಪೇಟೆ ತಾಲ್ಲೂಕಿನ ಕಾಪನಹಳ್ಳಿ ಗವಿಮಠದ ಮುರಾರ್ಜಿ ದೇಸಾಯಿ ವಸತಿ ಶಾಲೆಗೆ ಸೇರಿದ ಆಹಾರ ದಾಸ್ತಾನು, ಪಟ್ಟಣದ ವಿಜಯಲಕ್ಷ್ಮಿ ರೈಸ್ ಮಿಲ್ ನಲ್ಲಿ ಇಳಿಸುವುದನ್ನು ಕರ್ನಾಟಕ ರಾಜ್ಯ ರೈತ ಸಂಘದ ಕರೋಟಿ ತಮ್ಮೆಗೌಡ ಅವರು ಪತ್ತೆ ಮಾಡಿ ಲಾರಿ ಸಮೇತ ಪೊಲೀಸರ ಸುಪರ್ದಿಗೆ ಒಪ್ಪಿಸಿದ್ದಾರೆ.
ದಿನಾಂಕ-17-03-2026ರಂದು ಸಂಜೆ 4ರ ಸುಮಾರಿನಲ್ಲಿ ರೈತ ಮುಖಂಡ ತಮ್ಮೆಗೌಡರವರು ಜಾನುವಾರುಗಳಿಗೆ ರೈಸ್ ಮಿಲ್ ನಿಂದ ತೌಡು ತರಳು ತೆರಳಿದ್ದ ಸಮಯದಲ್ಲಿ, KA54-2631 ನಂಬರಿನ ಲಾರಿಯಿಂದ ವಸತಿ ಶಾಲೆಗೆ ಸೇರಿದ ಅಕ್ಕಿ ಮತ್ತು ಗೋದಿ ಇಳಿಸುತ್ತಿರುವುದನ್ನು ಕಂಡು ವಿಚಾರಿಸಿದಾಗ ಭ್ರಷ್ಟಾಚಾರ ಬೆಳಕಿಗೆ ಬಂದಿದೆ.

ತಕ್ಷಣವೇ ರೈತ ಮುಖಂಡರಾದ ಕರೋಟಿ ತಮ್ಮೆಗೌಡ ಹಾಗು ಮರುವಿನಹಳ್ಳಿ ಶಂಕರ್ ಜಿಲ್ಲಾಧಿಕಾರಿ ಡಾ. ಕುಮಾರ ಅವರಿಗೆ ಕರೆ ಮಾಡಿ ಈ ಬಗ್ಗೆ ತಿಳಿಸಿದಾಗ, ಪರಿಶೀಲನೆ ನಡೆಸಿ, ಸೂಕ್ತಕ್ರಮ ಕೈಗೊಳ್ಳುವುದಾಗಿ ತಿಳಿಸಿದ್ದಾರೆ. ಅದರಂತೆ, ಸ್ಥಳಕ್ಕೆ ಭೇಟಿ ನೀಡಿದ ಶಿರಸ್ತೆದಾರ್ ಈ ಬಗ್ಗೆ ವಿಚಾರಣೆ ನಡೆಸಿದಾಗ ಗವಿಮಠ ವಸತಿ ಶಾಲೆಗೆ ಸೇರಿದ ಆಹಾರ ದಾಸ್ತಾನು ಎಂಬುದು ಖಚಿತವಾಗಿದೆ.
ಈ ಸುದ್ದಿ ಓದಿದ್ದೀರಾ? ಕೊಡಗು | ಸಾಹಿತಿಗಳು ಮನರಂಜನೆಗಾಗಿ ಬರಹ ಸೀಮಿತಗೊಳಿಸದೆ ಸಮಾಜದ ಮಾರ್ಗದರ್ಶಕರಾಗಬೇಕು: ಸಿ ಕೆ ಕಾವೇರಿ

ವಸತಿ ಶಾಲೆಗೆ ತೆರಳಬೇಕಿದ್ದ ಆಹಾರ ದಾಸ್ತಾನು ರೈಸ್ ಮಿಲ್ ಗೆ ಬಂದುದರ ವಿಚಾರವಾಗಿ ನೀಡಿರುವ ದೂರಿನ ಅನುಸಾರ 210 ಚೀಲ ಅಕ್ಕಿ-ಗೋದಿ, ಲಾರಿ ಹಾಗು ಸಂಬಂಧಪಟ್ಟವರನ್ನು ಪೊಲೀಸರು ವಶಕ್ಕೆ ಪಡೆದು ತನಿಖೆ ಆರಂಭಿಸಿದ್ದಾರೆಂದು ತಿಳಿದುಬಂದಿದೆ.





