ಮಾಜಿ ಉಪಮುಖ್ಯಮಂತ್ರಿ ದಿವಂಗತ ಎಂ.ಪಿ. ಪ್ರಕಾಶ್ ಅವರ ಪತ್ನಿ ಎಂ.ಪಿ. ರುದ್ರಾಂಬಾ ಅವರು ವಯೋಸಹಜ ಕಾಯಿಲೆಯಿಂದಾಗಿ ತಮ್ಮ ಸ್ವಗ್ರಾಮ ಹೂವಿನ ಹಡಗಲಿಯಲ್ಲಿ ಸೋಮವಾರ ನಿಧನರಾಗಿದ್ದಾರೆ.
83 ವರ್ಷದ ರುದ್ರಾಂಬಾ ಅವರು ಮೂವರು ಪುತ್ರಿಯರನ್ನು ಹಾಗೂ ಬಂಧು ಬಳಗವನ್ನು ಅಗಲಿದ್ದು, ಅವರ ಅಂತ್ಯಕ್ರಿಯೆ ಮಂಗಳವಾರ ವೀರಶೈವ ಲಿಂಗಾಯತ ಸಂಪ್ರದಾಯದ ಪ್ರಕಾರವಾಗಿ ನಡೆಯಲಿದೆ ಎಂದು ಕುಟುಂಬಸ್ಥರು ಮಾಹಿತಿ ನೀಡಿದ್ದಾರೆ.
ಹೂವಿನ ಹಡಗಲಿಯಲ್ಲಿ ಮಂಗಳವಾರ ಸಂಜೆ 4.30 ಕ್ಕೆ ಅಂತ್ಯಕ್ರಿಯೆ ನಡೆಸಲು ಸಿದ್ಧತೆ ನಡೆಯುತ್ತಿದೆ. ದಿ. ಎಂ.ಪಿ. ಪ್ರಕಾಶ್ ಅವರ ಸಮಾಧಿ ಪಕ್ಕದಲ್ಲಿ ಅಂತ್ಯಕ್ರಿಯೆ ಮಾಡಲಾಗುತ್ತದೆ.
ಇದನ್ನು ಓದಿದ್ದೀರಾ? ಚಾಮರಾಜನಗರ | ಹಾಲಿ ಬಿಜೆಪಿ ಸಂಸದ ಶ್ರೀನಿವಾಸ್ ಪ್ರಸಾದ್ ನಿಧನ
ರುದ್ರಾಂಬಾ ಅವರಿಗೆ ಮೂರು ಹೆಣ್ಣು ಮಕ್ಕಳು ಮತ್ತು ಓರ್ವ ಪುತ್ರರಿದ್ದು, ಹರಪನಹಳ್ಳ ಕ್ಷೇತ್ರದ ಶಾಸಕರಾಗಿದ್ದ ಅವರ ಪುತ್ರ ಎಂ.ಪಿ.ರವೀಂದ್ರ ಕೆಲ ವರ್ಷದ ಹಿಂದೆಯೇ ತೀರಿಕೊಂಡಿದ್ದಾರೆ. ಎಂ.ಪಿ. ಪ್ರಕಾಶ್ ಅವರೂ ದಶಕಗಳ ಹಿಂದೆಯೇ ವಿಧಿವಶರಾಗಿದ್ದರು.
ಇನ್ನು ರುದ್ರಾಂಬಾ ಅವರಿಗೆ ಲತಾ ಮಲ್ಲಿಕಾರ್ಜುನ, ಸುಮಾ ಹಾಗೂ ವೀಣಾ ಎಂಬ ಮೂವರು ಪುತ್ರಿಯರಿದ್ದಾರೆ. ಪುತ್ರಿಯರಲ್ಲಿ ಲತಾ ಮಲ್ಲಿಕಾರ್ಜುನ ಅವರು ಹರಪನಹಳ್ಳಿ ಕ್ಷೇತ್ರದ ಪಕ್ಷೇತರ ಶಾಸಕಿಯಾಗಿದ್ದಾರೆ.
ರಾಜಕಾರಣಿ ಎಂ.ಪಿ. ಪ್ರಕಾಶ್ ಅವರ ಪತ್ನಿ ಕೂಡಾ ಸಾಮಾಜಿಕ ಚಟುವಟಿಕೆಗಳಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದರು. ಆದರೆ ಇತ್ತೀಚೆಗೆ ಅನಾರೋಗ್ಯದ ಕಾರಣದಿಂದಾಗಿ ಇತರೆ ಚಟುವಟಿಕೆಯಿಂದ ದೂರ ಉಳಿದಿದ್ದರು.
ಮಾಜಿ ಉಪಮುಖ್ಯಮಂತ್ರಿ ದಿವಂಗತ ಎಂ.ಪಿ.ಪ್ರಕಾಶ್ ಅವರ ಪತ್ನಿ ಎಂ.ಪಿ.ರುದ್ರಾಂಬಾ ಅವರ ನಿಧನದ ಸುದ್ದಿ ತಿಳಿದು ನೋವಾಯಿತು.
ರುದ್ರಾಂಬಾ ಅವರು ತಮ್ಮ ಪತಿಯ ಆದರ್ಶಗಳನ್ನು ಪಾಲಿಸುತ್ತಾ ಸಮಾಜಮುಖಿ ಕಾರ್ಯಗಳಲ್ಲಿ ತೊಡಗಿಸಿಕೊಂಡು ನೊಂದ ಜನರ ಬದುಕಿಗೆ ಬೆಳಕಾಗಿದ್ದವರು.ಮೃತರ ಆತ್ಮಕ್ಕೆ ಶಾಂತಿ ದೊರಕಲಿ, ಅವರ ಕುಟುಂಬ ವರ್ಗಕ್ಕೆ ನೋವು ಭರಿಸುವ… pic.twitter.com/zjxgqEZnT4
— Siddaramaiah (@siddaramaiah) April 29, 2024
ಸಿಎಂ ಸಿದ್ದರಾಮಯ್ಯ ಸಂತಾಪ
“ಮಾಜಿ ಉಪಮುಖ್ಯಮಂತ್ರಿ ದಿವಂಗತ ಎಂ.ಪಿ.ಪ್ರಕಾಶ್ ಅವರ ಪತ್ನಿ ಎಂ.ಪಿ.ರುದ್ರಾಂಬಾ ಅವರ ನಿಧನದ ಸುದ್ದಿ ತಿಳಿದು ನೋವಾಯಿತು. ರುದ್ರಾಂಬಾ ಅವರು ತಮ್ಮ ಪತಿಯ ಆದರ್ಶಗಳನ್ನು ಪಾಲಿಸುತ್ತಾ ಸಮಾಜಮುಖಿ ಕಾರ್ಯಗಳಲ್ಲಿ ತೊಡಗಿಸಿಕೊಂಡು ನೊಂದ ಜನರ ಬದುಕಿಗೆ ಬೆಳಕಾಗಿದ್ದವರು. ಮೃತರ ಆತ್ಮಕ್ಕೆ ಶಾಂತಿ ದೊರಕಲಿ, ಅವರ ಕುಟುಂಬ ವರ್ಗಕ್ಕೆ ನೋವು ಭರಿಸುವ ಶಕ್ತಿ ಸಿಗಲಿ ಎಂದು ಪ್ರಾರ್ಥಿಸುತ್ತೇನೆ” ಎಂದು ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರು ಸಂತಾಪ ಸೂಚಿಸಿದ್ದಾರೆ.





