ಮೈಸೂರು ಜಿಲ್ಲೆ, ಹೆಚ್.ಡಿ.ಕೋಟೆ ಪಟ್ಟಣದ ಹಿರಿಯ ಪ್ರಾಥಮಿಕ ಶಾಲೆ ಆವರಣದಲ್ಲಿ, ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆವತಿಯಿಂದ, ತಾಲ್ಲೂಕು ಆರೋಗ್ಯಾಧಿಕಾರಿಗಳ ಕಚೇರಿ ಸಹಯೋಗದೊಂದಿಗೆ ವಿಶೇಷಚೇತನ ಮಕ್ಕಳ ಉಚಿತ ವೈದ್ಯಕೀಯ ತಪಾಸಣೆ ಮತ್ತು ಮೌಲ್ಯಾಂಕನ ಶಿಬಿರವನ್ನು ಏರ್ಪಡಿಸಲಾಗಿತ್ತು.
ಶಿಕ್ಷಣ ಇಲಾಖೆ ಜಿಲ್ಲಾ ಉಪ ಸಮನ್ವಯಾಧಿಕಾರಿ ಶೋಭಾ ಮಾತನಾಡಿ, “ಕಾರ್ಯಕ್ರಮವನ್ನು ಮೊತ್ತ ಮೊದಲ ಬಾರಿಗೆ ಹೆಚ್.ಡಿ.ಕೋಟೆ ತಾಲ್ಲೂಕಿನಲ್ಲಿ ಆಯೋಜಿಸಲಾಗಿದೆ. ಮುಂದಿನ ದಿನಗಳಲ್ಲಿ ಬೇರೆ ತಾಲೂಕಿನಲ್ಲೂ ಸಹ ಈ ರೀತಿ ಶಿಬಿರವನ್ನು ಯೋಜನೆ ಮಾಡುತ್ತೇವೆ. ಎಚ್. ಡಿ. ಕೋಟೆ ತಾಲ್ಲೂಕಿನ ಎಲ್ಲಾ ವಿಶೇಷ ಚೇತನ ಮಕ್ಕಳು ತಪಾಸಣೆಯನ್ನು ಮಾಡಿಸಿಕೊಂಡು, ಅಗತ್ಯವಿರುವ ಸಲಕರಣೆಗಳನ್ನು ಪಡೆದುಕೊಳ್ಳಿ” ಎಂದು ತಿಳಿಸಿದರು.
ಆರೋಗ್ಯಾಧಿಕಾರಿ ಡಾ. ರವಿಕುಮಾರ್ ಮಾತನಾಡಿ, “ತಾಲ್ಲೂಕಿನಲ್ಲಿ ಒಟ್ಟು 352 ವಿಶೇಷ ಚೇತನ ಮಕ್ಕಳು ಇದ್ದಾರೆ. ಇದರಲ್ಲಿ ಎಲ್ಲರಿಗೂ ಯುಡಿಐಡಿ ಕಾರ್ಡ್ ಸಿಕ್ಕಿರುವುದಿಲ್ಲ. ಆದುದರಿಂದ ಪೋಷಕರು ಹೆಚ್ಚಿನ ಗಮನವಹಿಸಿ ಆರೋಗ್ಯ ಇಲಾಖೆಯ ಜೊತೆಗೂಡಿ ಮಕ್ಕಳಿಗೆ ಯುಡಿಐಡಿ ಕಾರ್ಡನ್ನು ಮಾಡಿಸಬೇಕು. ಅದರಿಂದ ಸರ್ಕಾರದಿಂದ ಬರುವಂತಹ ಸವಲತ್ತುಗಳನ್ನು ಪಡೆದುಕೊಳ್ಳಬೇಕು.”

ವಾರದಲ್ಲಿ ಎರಡನೇ ಮಂಗಳವಾರ ಸಾರ್ವಜನಿಕ ಆಸ್ಪತ್ರೆಯಲ್ಲಿ ಯುಡಿಐಡಿ ಕಾರ್ಡ್ ಮಾಡಿಸಲು ತಪಾಸಣೆಯನ್ನು ಮಾಡಲಾಗುತ್ತದೆ. ಜೊತೆಗೆ ಈ ರೀತಿ ವಿಶೇಷ ಶಿಬಿರವನ್ನು ಸಹ ಆಯೋಜನೆ ಮಾಡುತ್ತೇವೆ. ಮಕ್ಕಳಲ್ಲಿ ಹಲವಾರು ನರಗಳಸಮಸ್ಯೆ, ಕಣ್ಣಿನ ದೃಷ್ಟಿದೋಷ ಸಮಸ್ಯೆ, ಅಂಗವಿಕಲತೆ ಸಮಸ್ಯೆಗಳನ್ನು ನೋಡುತ್ತಿದ್ದೇವೆ. ಇದು ಯಾರ ದೇವರಶಾಪವಲ್ಲ. ಹಾಗೆಯೇ, ವಂಶ ಪಾರಂಪರ್ಯವಾಗಿ ಬರುವ ರೋಗ ಅಲ್ಲ, ಹಲವಾರು ಕಾರಣಗಳಿಂದ ಈ ರೀತಿ ಹುಟ್ಟುತ್ತಾರೆ.
ವಿಶೇಷಚೇತನ ಮಕ್ಕಳನ್ನು ಪಾಲನೆ ಮಾಡುವುದು ಅಷ್ಟೊಂದು ಸುಲಭವಲ್ಲ , ಅವರನ್ನು ನೋಡಿಕೊಳ್ಳುತ್ತಿರುವ ತಾಯಿಯವರಿಗೆ ತಾಲ್ಲೂಕಿನ ಪರವಾಗಿ ಧನ್ಯವಾದಗಳು. ಈ ಶಿಬಿರದಲ್ಲಿ ನುರಿತ ತಜ್ಞ ವೈದ್ಯರುಗಳು ಇರುತ್ತಾರೆ. ಎಲ್ಲಾ ವಿಶೇಷಚೇತನ ಮಕ್ಕಳು ತಪಾಸಣೆಯನ್ನು ಮಾಡಿಸಿ ಈ ಶಿಬಿರವನ್ನು ಸದುಪಯೋಗಪಡಿಸಿಕೊಳ್ಳಿ ಎಂದು ತಿಳಿಸಿದರು.
ಕ್ಷೇತ್ರ ಶಿಕ್ಷಣಾಧಿಕಾರಿ ರಾಜು ಮಾತನಾಡಿ, ತಾಲ್ಲೂಕಿನಲ್ಲಿ ಶಿಬಿರವನ್ನು ಆಯೋಜಿಸಿರುವುದು ತುಂಬಾ ಸಂತೋಷಕರವಾದ ವಿಷಯ. ಆರೋಗ್ಯ ಇಲಾಖೆ ವೈದ್ಯಾಧಿಕಾರಿಗಳು ಮತ್ತು ಸಿಬ್ಬಂದಿ ವರ್ಗದವರು ನಮಗೆ ಎಲ್ಲಾ ರೀತಿಯಲ್ಲೂ ಸಹಾಯವನ್ನು ಮಾಡುತ್ತಾ ಇದ್ದಾರೆ.ಈ ಶಿಬಿರವನ್ನು ಎಲ್ಲರೂ ಸದುಪಯೋಗಪಡಿಸಿಕೊಳ್ಳಿ ಎಂದು ತಿಳಿಸಿದರು.
ಈ ಸುದ್ದಿ ಓದಿದ್ದೀರಾ? ಚಾಮರಾಜನಗರ | ಅಂಬೇಡ್ಕರ್ ಭಾವಚಿತ್ರ ವಿರೂಪ, ಬುದ್ಧ ಪ್ರತಿಮೆ ಭಗ್ನಗೊಳಿಸಿರುವ ಕಿಡಿಗೇಡಿಗಳು

ಕಾರ್ಯಕ್ರಮದಲ್ಲಿ ಮಕ್ಕಳ ತಜ್ಞ ಡಾ. ಶಾಂತಕುಮಾರ್, ಕಣ್ಣಿನ ತಜ್ಞ ಡಾ. ರಾಜಶೇಖರ್, ಆರ್ಬಿಎಸ್ಕೆ ವೈದ್ಯಾಧಿಕಾರಿ ಡಾ. ಹೇಮಲತಾ, ಡಾ. ರಮ್ಯಾ, ಶಿಕ್ಷಣ ಇಲಾಖೆಯ ಗಿರೀಶ್ ಮೂರ್ತಿ, ಮಹದೇವ್, ಆರೋಗ್ಯ ಇಲಾಖೆ ಸಿಬ್ಬಂದಿ ವರ್ಗದವರು, ಶಿಕ್ಷಣ ಇಲಾಖೆ ಸಿಬ್ಬಂದಿ ವರ್ಗದವರು, ವಿಶೇಷ ಚೇತನ ಮಕ್ಕಳ ಪೋಷಕರು ಸೇರಿದಂತೆ ಇನ್ನಿತರರು ಇದ್ದರು.





