ಅಬ್ರಾಹಿಮ್ ಲಿಂಕನ್ ಹೇಳಿದಂತೆ ಒಂದು ವೋಟಿನ ಶಕ್ತಿಯೂ ಬಂದೂಕಿನ ಬುಲೆಟ್ಗಿಂತಲೂ ಅಧಿಕ ಶಕ್ತಿಯನ್ನು ಹೊಂದಿರುತ್ತದೆ. ನಾವೆಲ್ಲರೂ ಬಲಿಷ್ಠ ಭಾರತ ನಿರ್ಮಾಣಕ್ಕಾಗಿ ತಪ್ಪದೇ ಅರ್ಹರಿಗೆ ನಮ್ಮ ಮತವನ್ನು ಚಲಾಯಿಸೋಣ ಎಂದು ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಅಧ್ಯಕ್ಷರಾದ ಬಸವರಾಜ ಅವರು ಹೇಳಿದರು.
ಗದಗದಲ್ಲಿ ಚುನಾವಣಾ ಆಯೋಗ, ಗದಗ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರಗಳ ಸಂಯುಕ್ತ ಆಶ್ರಯದಲ್ಲಿ ನಡೆದ 14ನೇ ರಾಷ್ಟ್ರೀಯ ಮತದಾರರ ದಿನಾಚರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
“ಈಗಾಗಲೇ ಮತದಾನ ಚೀಟಿಯನ್ನು ಹೊಂದಿರುವರು ಮತದಾನದ ಮಹತ್ವದ ಬಗ್ಗೆ ಜಾಗೃತರಾಗಬೇಕು ಮತ್ತು ಹೊಸದಾಗಿ 18 ವರ್ಷ ತುಂಬಿದವರು ತಮ್ಮ ಹೆಸರನ್ನು ಮತದಾರರ ಪಟ್ಟಿಯಲ್ಲಿ ನೊಂದಾಯಿಸಬೇಕು” ಎಂದರು.
“ಚುನಾವಣಾ ಆಯೋಗದ ಸಂಸ್ಥಾಪನ ದಿನವಾದ ಜನೆವರಿ 25 ರಂದು 2011 ರಿಂದ ಪ್ರತಿ ವರ್ಷ ರಾಷ್ಟ್ರೀಯ ಮತದಾರರ ದಿನಾಚರಣೆಯನ್ನಾಗಿ ಆಚರಿಸುತ್ತಾ ಬಂದಿದೆ. ರಾಷ್ಟವನ್ನು ಮುನ್ನಡೆಸಲು ಮತ್ತು ಜನರ ಸಮಸ್ಯೆಗೆ ಸ್ಪಂದಿಸುವ ನಾಯಕರನ್ನು ಚುನಾಯಿಸಿ ನಮಗೆ ಬೇಕಾದ ಸರ್ಕಾರವನ್ನು ಆಯ್ಕೆ ಮಾಡಿಕೊಳ್ಳುವುದರಲ್ಲಿ ಮತದಾನವು ಭದ್ರಬುನಾದಿಯಾಗಿದೆ. ನಗರದಲ್ಲಿ ವಿದ್ಯಾವಂತರು ಮತದಾನದ ದಿನದಂದೇ ಪ್ರವಾಸಕ್ಕೆ ಹೋಗುವುದರ ಮೂಲಕ ಮತದಾನದಿಂದ ತಪ್ಪಿಸಿಕೊಳ್ಳುತ್ತಿರುವುದು ಸರಿಯಾದ ಕ್ರಮವಲ್ಲ” ಎಂದರು.
“ಕೆಲವು ಕಡೆಗಳಲ್ಲಿ ಬಸ್ಸಿನ ಸೌಕರ್ಯ ಸೇರಿದಂತೆ ಇತರೆ ಸೌಕರ್ಯಗಳಿಲ್ಲವೆಂದು ಮತದಾನ ಬಹಿಷ್ಕಾರ ಮಾಡವುದು ಒಳ್ಳೆಯದಲ್ಲ, ನಮ್ಮ ಹಕ್ಕುಗಳ ಬೇಡಿಕೆಯೇ ಬೇರೆ ಮತ್ತು ಮತದಾನ ಚಲಾಯಿಸುವುದೇ ಬೇರೆ ಹಾಗೂ ವಲಸಿಗರು ಮತ್ತು ನೌಕರರು ಆನ್ಲೈನ್ ಮೂಲಕ ಮತದಾರರ ಪಟ್ಟಿಯಲ್ಲಿ ನೊಂದಾಯಿಸಲು ಅವಕಾಶವಿದೆ. ಅದರ ಸದುಪಯೋಗ ಪಡೆದುಕೊಂಡು ಹಾಗೂ ಮತದಾನಕ್ಕಿಂತ ಇನ್ನೊಂದಿಲ್ಲ, ನಾನು ಖಚಿತವಾಗಿ ಮತದಾನ ಮಾಡುವೆ ಎಂಬುದು ಪ್ರಸಕ್ತ ವರ್ಷದ ವಾಕ್ಯವಾಗಿದ್ದು ಅದರಂತೆ ನಾವೆಲ್ಲರೂ ನಡೆಯೋಣ” ಎಂದು ತಿಳಿಸಿದರು.
“ಕಳೆದ ವಿಧಾನಸಭಾ ಚುನಾವಣೆಯಲ್ಲಿ ಜಿಲ್ಲೆಯಲ್ಲಿ ಒಟ್ಟಾರೆ ಅರ್ಹ ಮತದಾರರ ಪೈಕಿ ಶೇ 73.84 ರಷ್ಟು ಮತದಾನವಾಗಿದೆ. ಈ ಪ್ರಮಾಣವು ಶೇ 100 ರಷ್ಟು ಆಗಬೇಕಿದೆ. ಅರ್ಹ ಮತದಾರರೆಲ್ಲರೂ ಮತ ಚಲಾಯಿಸುವ ಮೂಲಕ ಸದೃಢ ರಾಷ್ಟ್ರ ನಿರ್ಮಾಣದಲ್ಲಿ ಭಾಗಿಯಾಗೋಣ” ಎಂದು ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಅಧ್ಯಕ್ಷ ಬಸವರಾಜ ಹೇಳಿದರು.
ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಗುರುಪ್ರಸಾದ.ಕೆ ಮಾತನಾಡಿ, “ಯುವ ಮತದಾರಲ್ಲಿ ಮತದಾನ ಮಾಡಲು ಪ್ರೋತ್ಸಾಹಿಸಲು 25-01-2011 ರಿಂದ ರಾಷ್ಟ್ರೀಯ ಮತದಾರರ ದಿನಾಚರಣೆಯನ್ನು ಆಚರಿಸಲಾಗುತ್ತಿದೆ. ಮತ ಹಾಕದೇ ಅಧಿಕಾರದಲ್ಲಿರುವ ಸರ್ಕಾರ ಒಳ್ಳೆಯಾಡಳಿತ ನೀಡುತ್ತಿಲ್ಲ ಎಂದು ದೂಷಿಸುವುದು ಸರಿಯಲ್ಲ ಎಂದರು. 1950ರ ಸಂವಿಧಾನ ಜಾರಿಗೆಯಾದ ಮೇಲೆ ಸಾರ್ವತ್ರಿಕ ಮತದಾನದ ಹಕ್ಕನ್ನು ನೀಡಲಾಯಿತು ಹಾಗೂ ನ್ಯಾಯುತವಾದ ಮತ್ತು ಸ್ವಾತಂತ್ರ್ಯ ಮತದಾನವು ಸಂವಿಧಾನದ ಮೂಲಸ್ವರೂಪವಾಗಿದೆ. ಹಾಗಾಗಿ ಎಲ್ಲರೂ ಮತದಾನ ಮಾಡಿ” ಎಂದು ತಿಳಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿ ಬಿ.ಎಸ್. ನೇಮಗೌಡ ಮಾತನಾಡಿ, “ಮೂಲಭೂತ ಕರ್ತವ್ಯವಾದ ಮತದಾನವು ನಮಗೆ ಶಕ್ತಿಯುತವಾದ ಆಯುಧವಿದ್ದಂತೆ ಪ್ರಥಮ ಮತ್ತು ಪ್ರಧಾನವೆಂದು ಭಾವಿಸಿ ಈಗಾಗಲೇ ಮತದಾನ ಚೀಟಿಯನ್ನು ಹೊಂದಿರುವರು ಮತದಾನ ಮಾಡಿದಾಗ ಈ ಕಾರ್ಯಕ್ರಮ ಸಾರ್ಥಕವಾಗುತ್ತದೆ” ಎಂದು ತಿಳಿಸಿದರು.
ಜಿಲ್ಲಾಧಿಕಾರಿಗಳ ಕಾನೂನು ಸಲಹೆಗಾರರಾದ ಎಸ್.ಜಿ.ಪಲ್ಲೇದ ಮಾತನಾಡಿ, “ದಾನದಲ್ಲೇ ಶ್ರೇಷ್ಟದಾನ ಮತದಾನವಾಗಿದ್ದು ಯುವಜನತೆ ತಮ್ಮ ಜ್ಞಾನ ಭಂಢಾರ, ಅನುಭವವನ್ನು ಮತ್ತು ರಾಷ್ಟ್ರಾಭಿಮಾನವನ್ನು ಬೆಳೆಸಿಕೊಂಡು ಮತದಾನ ಮಾಡುವುದರ ಮೂಲಕ ದೇಶವನ್ನು ಸುಭದ್ರಗೊಳಿಸಬೇಕು. ಮತದಾನದ ವೇಳೆಯಲ್ಲಿ ಯಾವ ಅಭ್ಯರ್ಥಿಯೂ ಸೂಕ್ತವೆನಿಸದಿದ್ದಲ್ಲಿ ನೋಟಾ ವನ್ನು ಒತ್ತುವುದರ ಮೂಲಕ ಮತಚಲಾಯಿಸಿ” ಎಂದು ಹೇಳಿದರು.
ಅಪರ ಜಿಲ್ಲಾಧಿಕಾರಿಗಳು ಹಾಗೂ ಅಪರ ಜಿಲ್ಲಾ ಚುನಾವಣಾಧಿಕಾರಿ ಅನ್ನಪೂರ್ಣಾ ಮುದುಕಮ್ಮನವರ ಮತದಾರರ ಪ್ರತಿಜ್ಞಾವಿಧಿಯನ್ನು ಭೋದಿಸಿದರು.
ಇದೇ ವೇಳೆ, ಜಿಲ್ಲೆಯಲ್ಲಿ ಉತ್ತಮ ಚುನಾವಣಾ ಕಾರ್ಯ ನಿರ್ವಹಿಸಿದಕ್ಕೆ ಬಿಎಲ್ಒ, ಉಪ ವಿಭಾಗಧಿಕಾರಿ ವೆಂಕಟೇಶ ನಾಯ್ಕ, ಗ್ರೇಡ್ -2 ತಹಸೀಲ್ದಾರ ಜಯಲಕ್ಷ್ಮಿ ವಸ್ತ್ರದ, ಪ್ರಥಮ ದರ್ಜೆ ಸಹಾಯಕ ಶಿವಾನಂದ ಮೊಗಲಿ, ಡಾಟಾ ಎಂಟ್ರಿ ಆಪರೇಟರ್ ಶಿವಾಜ ಪೇಠೆ ಅವರನ್ನು ಸನ್ಮಾನಿಸಲಾಯಿತು.
ಕಾರ್ಯಕ್ರಮದಲ್ಲಿ ಜಿ.ಪಂ. ಉಪಕಾರ್ಯದರ್ಶಿ ಸಿ.ಆರ್. ಮುಂಡರಗಿ, ವಿವಿಧ ಇಲಾಖೆಯ ಅಧಿಕಾರಿಗಳು ಶಾಲಾ ವಿದ್ಯಾರ್ಥಿ ವಿದ್ಯಾರ್ಥಿನಿಯರು ಹಾಜರಿದ್ದರು. ಉಪವಿಭಾಗಧಿಕಾರಿ ಡಾ. ವೆಂಕಟೇಶ ನಾಯ್ಕ, ಸ್ವಾಗತಿಸಿದರು, ಶಿವಾನಂದ ಗಿಡ್ನಂದಿ ಕಾರ್ಯಕ್ರಮ ನಿರೂಪಿಸಿದರು, ಶಾಲಾ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಎಂ.ಎ.ರೆಡ್ಡೇರ ವಂದಿಸಿದರು.




