ಹತ್ತು ವರ್ಷ ಅಧಿಕಾರ ನಡೆಸಿದರೂ ದೇಶದಲ್ಲಿ ಪ್ರಧಾನಿ ಮೋದಿ ಪರ ಅಲೆ ಇದ್ದು, ದೇಶದ ಶೇ.75ರಷ್ಟು ಜನರು ಮೋದಿಯವರನ್ನು ಬೆಂಬಲಿಸುತ್ತಿದ್ದಾರೆ ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಹಾವೇರಿ-ಗದಗ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಬಸವರಾಜ ಬೊಮ್ಮಾಯಿ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಗದಗ ಜಿಲ್ಲೆ ರೋಣ ತಾಲೂಕಿನ ಸವಡಿ, ಚಿಕ್ಕಮಣ್ಣೂರು, ಕುರಹಟ್ಟಿ ಗ್ರಾಮಗಳಲ್ಲಿ ಚುನಾವಣಾ ಪ್ರಚಾರ ನಡೆಸಿ ಮಾತನಾಡಿದರು.
“ಈ ಚುನಾವಣೆ ರಾಜ್ಯಕ್ಕೆ ಸಂಬಂಧಿಸಿದ್ದಲ್ಲ. ಇಡೀ ದೇಶದ ಅಭಿವೃದ್ಧಿ ಮತ್ತು ಭವಿಷ್ಯದ ಬಗ್ಗೆ ಚಿಂತಿಸುವ ಚುನಾವಣೆ. ಮೋದಿಯವರು ಪ್ರಧಾನಿಯಾಗಿ ಹತ್ತು ವರ್ಷ ಅಧಿಕಾರ ನಡೆಸಿದ್ದಾರೆ. ಆದರೂ, ಅವರ ಪರ ಅಲೆ ಇದೆ. ಈ ದೇಶದ ಶೇ.75ರಷ್ಟು ಜನರು ನರೇಂದ್ರ ಮೋದಿಯವರ ಪರವಾಗಿದ್ದಾರೆ. ಶೇ.25ರಷ್ಟು ಜನರು ಅವರನ್ನು ವಿರೋಧಿಸುತ್ತಿದ್ದಾರೆ” ಎಂದರು.
“ಮೋದಿಯವರು ತಮ್ಮ ತಾಯಿ ತೀರಿ ಹೋದಾಗ ಕೇವಲ ಎರಡು ತಾಸಿನಲ್ಲಿ ಅವರ ಅಂತ್ಯಸಂಸ್ಕಾರ ಮುಗಿಸಿ ಮತ್ತೆ ದೇಶದ ಕರ್ತವ್ಯಕ್ಕೆ ಹಾಜರಾದರು. ದೇಶದ ಸಫಾಯಿ ಕರ್ಮಚಾರಿಗಳ ಪಾದಪೂಜೆ ಮಾಡಿದರು. ಇಡೀ ದೇಶದ ಜನಸಂಖ್ಯೆಯನ್ನು ಆಸ್ತಿಯನ್ನಾಗಿ ಪರಿಗಣಿಸಿ ದೇಶದ ಅಭಿವೃದ್ಧಿಗೆ ಜನಸಂಖ್ಯೆ ಕಾರಣವೆಂದು ಜಗತ್ತಿಗೆ ತೊರಿಸಿಕೊಟ್ಟರು. ಬಡತನ ದೊಡ್ಡ ಸಮಸ್ಯೆ ಎಂದು ಎಲ್ಲರೂ ಹೇಳುತ್ತಿದ್ದರು. ಮೋದಿಯವರು 15 ಕೋಟಿ ಮಂದಿಯನ್ನು ಬಡತನ ರೇಖೆಗಿಂತ ಮೇಲೆ ತಂದರು” ಎಂದರು.
“ಜನರು ಕಷ್ಟದಲ್ಲಿದ್ದಾಗ ಸರ್ಕಾರ ಹೇಗೆ ಸ್ಪಂದಿಸುತ್ತದೆ ಎನ್ನುವುದರ ಮೇಲೆ ಸರ್ಕಾರ ಜೀವಂತ ಇದಿಯೊ ಇಲ್ಲವೋ ಎನ್ನುವುದು ತಿಳಿಯುತ್ತದೆ. ಮೋದಿಯವರು ಹತ್ತು ವರ್ಷ ಅಧಿಕಾರ ಮಾಡಿದರೂ ಕೂಡಾ ಅವರ ಜನಪ್ರಿಯತೆ ಕಡಿಮೆಯಾಗಿಲ್ಲ. ಅದರೆ, ಕಾಂಗ್ರೆಸ್ನವರಿಗೆ ಜನಪ್ರಿಯತೆ ಮುಖ್ಯವಲ್ಲ. ಗಾಂಧಿ ಕುಟುಂಬದ ಕೃಪೆ ಇದ್ದರೆ ಮಾತ್ರ ಪ್ರಧಾನಿಯಾಗಲು ಸಾಧ್ಯ” ಎಂದರು.
ಈ ಸುದ್ದಿ ಓದಿದ್ದೀರಾ? ತುಮಕೂರು | ಸಂಭ್ರಮದ ರಂಜಾನ್ ಆಚರಣೆ; ಸಾಮೂಹಿಕ ಪ್ರಾರ್ಥನೆ
“ಈ ಕ್ಷೇತ್ರದ ಅಭಿವೃದ್ಧಿಗೆ ಅಗತ್ಯ ಯೋಜನೆಗಳನ್ನು ತರಲು ಎಲ್ಲ ಪ್ರಯತ್ನ ಮಾಡುತ್ತೇನೆ” ಎಂದು ಹೇಳಿದರು.
ಈ ಸಂದರ್ಭದಲ್ಲಿ ಮಾಜಿ ಸಚಿವ ಕಳಕಪ್ಪ ಬಂಡಿ ಇದ್ದರು.





