ಭಾರತದ ಮುಖ್ಯ ನ್ಯಾಯಮೂರ್ತಿ ಬಿ ಆರ್ ಗವಾಯಿ ಅವರ ಮೇಲೆ ಚಪ್ಪಲಿ ಎಸೆದ ಕೃತ್ಯವು ಸಂವಿಧಾನಕ್ಕೆ ಎಸಗಿದ ಅವಮಾನ ಎಂದು ನ್ಯಾಯವಾದಿ ಬಾಲು ರಾಠೋಡ ಹೇಳಿದರು.
ಗದಗ ಜಿಲ್ಲೆಯ ಗಜೇಂದ್ರಗಡ ನಗರದ ಅಖಿಲ ಭಾರತ ವಕೀಲರ ಒಕ್ಕೂಟ, ವಿದ್ಯಾರ್ಥಿ ಯುವಜನ, ಬೀದಿಬದಿ ವ್ಯಾಪಾರಸ್ಥರ ಹಾಗೂ ರೈತ ಕಾರ್ಮಿಕ ಸಂಘಟನೆಗಳ ಜಂಟಿ ಹೋರಾಟ ಸಮಿತಿ ನೇತೃತ್ವದಲ್ಲಿ ನಡೆದ ಪ್ರತಿಭಟನೆಯಲ್ಲಿ ಅವರು ಮಾತನಾಡಿದರು.
“ಮುಖ್ಯ ನ್ಯಾಯಮೂರ್ತಿ ಗವಾಯಿ ಅವರ ಮೇಲೆ ಬಹಿರಂಗ ನ್ಯಾಯಾಲಯದೊಳಗೆ ಚಪ್ಪಲಿ ಎಸೆದು, ಸನಾತನ ಧರ್ಮದ ಪರ ಘೋಷಣೆ ಕೂಗಿದ ಘಟನೆಯು ಅತ್ಯಂತ ಆಘಾತಕಾರಿ ಮತ್ತು ಖಂಡನೀಯವಾಗಿದೆ. ಬಿಜೆಪಿ ಮುಖ್ಯಮಂತ್ರಿಗಳು, ಸಚಿವರು ಹಾಗೂ ನಾಯಕರು ಇತ್ತೀಚೆಗೆ ಮಾಡಿದ ಜಾತಿವಾದಿ, ಮನುವಾದಿ ಮತ್ತು ಸಮುದಾಯ ವಿರೋಧಿ ಹೇಳಿಕೆಗಳು ಇಂತಹ ಕೃತ್ಯಗಳಿಗೆ ಧೈರ್ಯ ನೀಡಿವೆ. ಈ ಘಟನೆ, ಹಿಂದುತ್ವದ ಸಂಪ್ರದಾಯಪರ ಶಕ್ತಿಗಳು ಸಮಾಜದಲ್ಲಿ ಬಿತ್ತಿರುವ ಮನುವಾದಿ ಮತ್ತು ದ್ವೇಷಪೂರಿತ ವಿಷದ ಮತ್ತೊಂದು ಉದಾಹರಣೆಯಾಗಿದೆ. ಇದು ಸಂಘ ಪರಿವಾರದ ಅಸಹಿಷ್ಣುತೆ ಮತ್ತು ತಮ್ಮ ಸಿದ್ಧಾಂತಕ್ಕೆ ವಿರುದ್ಧವಾದ ಯಾವುದೇ ಅಭಿಪ್ರಾಯವನ್ನು ಸಹಿಸಲಾರದ ಸ್ವಭಾವವನ್ನು ಕೂಡ ತೋರಿಸುತ್ತದೆ” ಎಂದರು.
ಸಿಐಟಿಯು ಜಿಲ್ಲಾ ಮುಖಂಡ ಪೀರು ರಾಠೋಡ ಮಾತನಾಡಿ, “ಮುಖ್ಯ ನ್ಯಾಯಮೂರ್ತಿ ಗವಾಯಿ ಅವರಿಗೆ ಸೂಕ್ತ ರಕ್ಷಣೆ ನೀಡಬೇಕು. ಅಸಹಿಷ್ಣುತೆಯನ್ನು ಹರಡುವ ವ್ಯಕ್ತಿಗಳು ಮತ್ತು ಸಂಘಟನೆಗಳ ವಿರುದ್ಧ ಸರ್ಕಾರ ದೃಢವಾದ ಕ್ರಮ ಕೈಗೊಳ್ಳಬೇಕು. ಜೊತೆಗೆ, ಅಭಿವ್ಯಕ್ತಿ ಸ್ವಾತಂತ್ರ್ಯ ಮತ್ತು ಭಿನ್ನಾಭಿಪ್ರಾಯ ವ್ಯಕ್ತಪಡಿಸುವ ಹಕ್ಕನ್ನು ಕಾಪಾಡಬೇಕು” ಎಂದು ಒತ್ತಾಯಿಸಿದರು.
ಇದನ್ನೂ ಓದಿ: ಗದಗ | ಲಿಂ. ಡಾ. ಎಂ.ಎಂ. ಕಲಬುರ್ಗಿ ಅವರಿಗೆ ಮರಣೋತ್ತರ ‘ಸ್ಮಾರಕ ರಾಷ್ಟ್ರೀಯ ಪ್ರಶಸ್ತಿ’
ಯುವ ವಕೀಲ ದಾವಲಸಾಬ ತಾಳಿಕೋಟಿ ಮಾತನಾಡಿ, “ಸಂವಿಧಾನ ಎತ್ತಿಹಿಡಿಯುವಲ್ಲಿ ಶ್ರಮಿಸುತ್ತಿರುವ ಸಿಜೆಐ ಬಿ ಆರ್ ಗವಾಯಿ ಅವರ ಮೇಲೆ ಸನಾತನವಾದಿ ವಕೀಲನೊಬ್ಬನ ಮೂಲಕ ಮಾಡಿಸಲಾದ ದಾಳಿ ಅತ್ಯಂತ ಖಂಡನೀಯ. ಸಂಘ ಪರಿವಾರದ ಉದ್ರೇಕಕಾರಿ ಮಾತುಗಳೇ ಇದರ ಹಿಂದಿನ ಕರಾಳ ಕೈವಾಡಗಳು. ಹಾಗಾಗಿ ಸುಪ್ರೀಂ ಕೋರ್ಟ್ ಬಾರ್ ಅಸೋಸಿಯೇಷನ್ನಲ್ಲಿ ನೋಂದಾಯಿಸಿಕೊಂಡಿರುವ ಮತ್ತು ಬಂಧಿಸಲ್ಪಟ್ಟಿರುವ ವಕೀಲನ ವಿರುದ್ಧ ತಕ್ಷಣ ಕಠಿಣ ಕ್ರಮ ಕೈಗೊಳ್ಳಬೇಕು” ಎಂದರು.
ಈ ವೇಳೆ ಫಯಾಜ್ ತೋಟದ, ಬೀದಿ ಬದಿ ವ್ಯಾಪಾರಸ್ಥರ ಸಂಘದ ಅಧ್ಯಕ್ಷ ಶಾಮೀದಸಾಬ ದಿಂಡವಾಡ ಮೆಹಬೂಬ್ ಹವಾಲ್ದಾರ್, ಚಂದ್ರು ರಾಠೋಡ, ರೂಪೇಶ ಮಾಳೋತ್ತರ, ಅನ್ವರ್ ಮಾಲ್ದಾರ , ಕಳಕಪ್ಪ ಮಾಳೋತ್ತರ, ಮಹೇಶ್, ವೀರೇಶ್ ರಾಠೋಡ, ರುದ್ರಪ್ಪ ರಾಠೋಡ, ಭೀಮವ್ವ ಲಮಾಣಿ, ರಾಮವ್ವ ಪೂಜಾರ ಸೇರಿದಂತೆ ಇತರರು ಇದ್ದರು.





