ವಿದ್ಯುತ್ ಕ್ಷೇತ್ರದ “ಹೆಚ್ಚು ಆಕ್ರಮಣಕಾರಿ” ಖಾಸಗೀಕರಣದ ಗುರಿಯನ್ನು ಹೊಂದಿರುವ ಸರ್ಕಾರದ ಹೊಸ ಕರಡು ವಿದ್ಯುತ್ ಮಸೂದೆಯನ್ನು ತಕ್ಷಣವೇ ಹಿಂಪಡೆಯಬೇಕು. ಉತ್ಪಾದನೆ ಮತ್ತು ವಿತರಣೆಯಲ್ಲಿ ಎಲ್ಲಾ ರೀತಿಯ ಖಾಸಗೀಕರಣ ಮತ್ತು ಫ್ರ್ಯಾಂಚೈಸಿಂಗ್ ಅನ್ನು ಕೂಡಲೇ ನಿಲ್ಲಿಸಬೇಕು. ರೈತ ಕೃಷಿ ಕೂಲಿಕಾರರ ಹಿತವನ್ನು ಕಾಯುವ ಮೂಲಕ ಜನವಿರೋಧಿ ಮಸೂದೆಯನ್ನು ಸಂಪೂರ್ಣವಾಗಿ ಹಿಂತೆಗೆದುಕೊಳ್ಳುವಂತೆ ಕರ್ನಾಟಕ ಪ್ರಾಂತ ಕೃಷಿಕೂಲಿಕಾರರ ಸಂಘಧ ಜಿಲ್ಲಾ ಮುಖಂಡ ಬಾಲು ರಾಠೋಡ ಒತ್ತಾಯಿಸಿದರು.
ಕೇಂದ್ರ ಸರ್ಕಾರದ ಸಂಹಿತೆಗಳ ರದ್ಧತಿಗೆ ಕಾರ್ಮಿಕ ಸಂಘಟನೆಗಳು ಫೆಬ್ರವರಿ ೧೨, ರಂದು ದೇಶವ್ಯಾಪಿ ಮುಷ್ಕರಕ್ಕೆ ಕರೆ ನೀಡಿದ್ದರ ಹಿನ್ನೆಲೆಯಲ್ಲಿ ನಗರದ ತಹಶೀಲ್ದಾರ ಕಚೇರಿ ಮುಂಭಾಗದಲ್ಲಿ ನಡೆದ ಕಾರ್ಮಿಕ ಸಂಘಟನೆಗಳ ಜಂಟಿ ಸಮಿತಿಯ ನೇತೃತ್ವದಲ್ಲಿ ನಡೆದ ಮುಷ್ಕರವನ್ನು ಉದ್ದೇಶಿಸಿ ಮಾತನಾಡಿ, ರೈತರು ಬೆಳೆಯುವ ಬೆಳೆಗಳಿಗೆ ಬೆಂಬಲ ಬೆಲೆ ನೀಡದೇ, ಕಂಪನಿ ಕೃಷಿಯನ್ನು ಉತ್ತೇಜಿಸಿ ಬಲವಂತದ ಭೂಸ್ವಾಧೀನ ಕಾಯ್ದೆಗೆ ತಿದ್ದುಪಡಿ ತಂದು ರೈತರ ಭೂಮಿಯನ್ನು ವಶಪಡಿಕೊಳ್ಳುತ್ತಿದೆ. ಇದರಿಂದ ರೈತರು ಕೂಲಿಕಾರರಾಗಿ ಮತ್ತು ನಿರುದ್ಯೋಗಸ್ಥರಾಗಿ ಮಾರ್ಪಾಡಾಗುತ್ತಿದ್ದಾರೆ. ಮೇಡ್ ಇನ್ ಇಂಡಿಯಾ ಹೆಸರಿನಲ್ಲಿ ಸ್ಟಾರ್ಟ್ ಅಪ್ ಯೋಜನೆಗಳನ್ನು ತಂದು ಮಾಲೀಕರನ್ನು ಪ್ರೋತ್ಸಾಹಿಸಲಾಗುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ದೇವದಾಸಿ ಮಹಿಳೆಯರಿಗೆ ನಿವೇಶನ ವಸತಿ ಮಾಶಾಸನ ಹೆಚ್ಚಳ ಉಪಜೀವನಕ್ಕಾಗಿ ಭೂಮಿ ಸೇರಿದಂತೆ ಸರಕಾರದ ನೇಮಕಾತಿಯಲ್ಲಿ ವಿಶೇಷ ಆದ್ಯತೆ ಕಲ್ಪಿಸುವಂತೆ ದೇವದಾಸಿ ಪಟ್ಟಿಯಲ್ಲಿ ಹೊರಗೂಳಿದ 1 ಸೇರ್ಪಡೆಗೊಳಿಸುವುದು ಅಂತಹ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ಉದ್ಯೋಗ ಕಲ್ಪಿಸುವುದು ಹಾಗೆ ದೇವದಾಸಿ ಮಕ್ಕಳ ವಿವಾಹಕ್ಕೆ ಮುಂದಾಗುವವರಿಗೆ ಪ್ರೋತ್ಸಾಹ ಧನ ನೀಡುವಿಕೆ ಸೇರಿದಂತೆ ಪ್ರಮುಖ ಬೇಡಿಕೆಗಳ ಈಡೇರಿಕೆಗಾಗಿ ಒತ್ತಾಯಿಸಿದರು.
ಗ್ರಾಮ ಪಂಚಾಯತ ನೌಕರರ ಸಂಘದ ಮುಖಂಡ ಬಸವರಾಜ ಮಂತೂರ ಮಾತನಾಡಿ, ಕಾಂಗ್ರೆಸ್ ಸರ್ಕಾರ ರಾಜ್ಯದಲ್ಲಿ ಕಾರ್ಮಿಕರ ಹಿತಾಸಕ್ತಿ ರಕ್ಷಿಸಲು ಕೇಂದ್ರದ ಬಿಜೆಪಿ ಸರ್ಕಾರ ರೂಪಿಸಿರುವ 4 ಕಾರ್ಮಿಕ ಸಂಹಿತೆಗಳನ್ನು ತಿರಸ್ಕರಿಸುವ, ಮಾರ್ಪಡಿಸುವ, ಹೊಸದಾಗಿ ಪರ್ಯಾಯ ಕಾರ್ಮಿಕ ಕಾನೂನು ರೂಪಿಸುವ ಸಂವಿಧಾನಬದ್ಧ ಅಧಿಕಾರ ಬಳಸುವ ಹೊಣೆಗಾರಿಕೆ ಇದ್ಯಾವುದನ್ನು ಪ್ರದರ್ಶಿಸಿಲ್ಲ. ಬದಲಿಗೆ ರಾಜ್ಯದ ಸಿದ್ದರಾಮಯ್ಯ ಸರ್ಕಾರ ಕಾರ್ಮಿಕ ಸಂಹಿತೆಗಳ ಜಾರಿಗೆ ಕರಡು ನಿಯಮಗಳನ್ನು ಪ್ರಕಟಿಸುವ ಮೂಲಕ ಕಾರ್ಮಿಕ ವಿರೋಧಿ ನೀತಿಗಳಲ್ಲಿ ಬಿಜೆಪಿಗೂ ತನಗೂ ಯಾವುದೇ ವ್ಯತ್ಯಾಸವಿಲ್ಲ, ತಾನು ಸಹ ಮೋದಿ ಸರ್ಕಾರದಂತೆ ಬಂಡವಾಳಗಾರರ ಪರ ಎಂಬುದನ್ನು ಮತ್ತೊಮ್ಮೆ ಸಾಬೀತು ಪಡಿಸಿದೆ ಎಂದು ಕಿಡಿಕಾರಿದರು.
ರೈತ ಮುಖಂಡರಾದ ಎಂ ಬಿ ಚೌಡರೆಡ್ಡಿ ಮಾತನಾಡಿ, ನರೇಗಾ ಕಾಯ್ದೆಯಡಿಯಲ್ಲಿ ಖಾತರಿ ಪಡಿಸಲಾದ ಕೆಲಸ, ಕೆಲಸದ ಹಕ್ಕನ್ನು ಕಸಿದುಕೊಳ್ಳುವುದರ ಜೊತೆಗೆ ಗ್ರಾಮೀಣ ಶ್ರಮ ಜೀವಿಗಳ ಕೊಂಡುಕೊಳ್ಳುವ ಸಾಮಾರ್ಥ್ಯ ಕಡಿಮೆ ಮಾಡುವುದು ಮತ್ತು ಕೃಷಿ ಕಾರ್ಮಿಕರ ಮತ್ತು ಇತರೆ ಗ್ರಾಮೀಣ ಕಾರ್ಮಿಕರ ವೇತನವನ್ನು ನಿಗ್ರಹಿಸುತ್ತಿದೆ. ವಿದ್ಯುತ್ಚಕ್ತಿಯನ್ನು ಖಾಸಗೀಕರಿಸಿ ವಿದ್ಯುತ್ ಪ್ರಸರಣ, ವಿತರಣಾ ವ್ಯವಸ್ಥೆಯ ಅನುಷ್ಠಾನ ಮತ್ತು ನಿರ್ವಹಣೆಯನ್ನು ಖಾಸಗಿ ಬಂಡವಾಳಗಾರರಿಗೆ ಕೊಡುವ ಮುಖಾಂತರ ಇದುವರೆಗೂ ವಿದ್ಯುತ್ ರೈತರಿಗೆ ಮತ್ತು ಜನಸಾಮಾನ್ಯರಿಗೆ ಸಬ್ಸಿಡಿ ದರದಲ್ಲಿ ಸಿಗುತ್ತಿದ್ದ ಪ್ರಮುಖ ಸೇವೆಯಿಂದ ಸರ್ಕಾರ ತನ್ನ ಸಾಮಾಜಿಕ ಹೊಣೆಗಾರಿಕೆಯಿಂದ ತಪ್ಪಿಸಿಕೊಳ್ಳುತ್ತಿದೆ ಎಂದರು.
ಇದನ್ನೂ ಓದಿ ಹಾವೇರಿ | ಅಖಿಲ ಭಾರತ ಮುಷ್ಕರ ಬೆಂಬಲಿಸಿ ಬೀದಿಗಿಳಿದು ಕಾರ್ಮಿಕರ ಬೃಹತ್ ಪ್ರತಿಭಟನೆ
ಮುಷ್ಕರದಲ್ಲಿ ಸಂಗಣ್ಣ ದಂಡಿನ್, ಸಾವಿತ್ರಿ ಸೋಮನಕಟ್ಟಿ, ಶರಣಪ್ಪ ಹುಲ್ಲೂರ್, ಅಶೋಕ್ ಸಜ್ಜನ್, ಸಿದ್ದು ಕಂಠಿ, ರುದ್ರಯ್ಯ ಸಾಲಿಮಠ, ಕಾರ್ಮಿಕ ಮುಖಂಡ ಗೂರಪ್ಪ ಕಣ್ಣೂರ್, ಹನುಮಂತ ತಾಳಿ, ನಿಂಗಪ್ಪ ಅರಹುಣಸಿ, ಮುತ್ತಪ್ಪ ಅರುಹುಣಸಿ, ಗಂಗಮ್ಮ ದ್ಯಾವರೆಡ್ಡಿ, ನೀಲಾಂಬಿಕಾ ಬೀರನೂರ ಸೇರಿದಂತೆ ಬಿಸಿಯೂಟ ನೌಕರರ ಸಂಘ, ಆಶಾ ನೌಕರರ ಸಂಘ, ಕಟ್ಟಡ ಕಾರ್ಮಿಕರ, ಗ್ರಾಪಂ ನೌಕರರು, ಅಂಗನವಾಡಿ, ವಿದ್ಯಾರ್ಥಿ-ಯುವಜನ ಸಂಘಟನೆ, ದೇವದಾಸಿ ಮಹಿಳಾ ಸಂಘಟನೆ, ಕೆ.ಪಿಆರ್ಎಸ್ ಸೇರಿದಂತೆ 500 ಕ್ಕೂ ಹೆಚ್ಚು ಸಾಮೂಹಿಕ ಸಂಘಟನೆ ಮುಖಂಡರು ಪಾಲ್ಗೊಂಡಿದ್ದರು.





