“ಭೈರಪ್ಪನವರ ಸಾಹಿತ್ಯವೆಂದರೆ ಅದು ಒಂದು ಉನ್ನತ ಅಧ್ಯಯನದ ಮೊತ್ತ. ಅವರೆಂದೂ ಓಲೈಕೆಗಾಗಿ ಸಾಹಿತ್ಯ ಬರೆದವರಲ್ಲ. ಕಟುವಾದರೂ ಸರಿ, ಸತ್ಯ ಮತ್ತೂ ವಾಸ್ತವದ ಹೊರತೂ ಮತ್ತೇನನ್ನೂ ಬರೆಯಲಾರೆ ಎಂಬಂತೆ ಬೈರಪ್ಪನವರು ಬದುಕಿದ್ದರು” ಎಂದು ಹಿರಿಯ ನ್ಯಾಯವಾದಿಗಳು ಸುಧೀರಸಿಂಹ ಘೋರ್ಪಡೆಯವರು ತಿಳಿಸಿದರು.
ಗದಗ ಪಟ್ಟಣದ ಕೆ.ಎಲ್.ಇ ಸಂಸ್ಥೆಯ ಕಲಾ ಮತ್ತು ವಾಣಿಜ್ಯ ಮಹಾವಿದ್ಯಾಲಯದ ಕನ್ನಡ ವಿಭಾಗವು ʻಬಹುರೂಪಿ ಡಾ. ಎಸ್. ಎಲ್. ಬೈರಪ್ಪʼ ಎನ್ನುವ ವಿಶಿಷ್ಟ ಕಾರ್ಯಕ್ರಮದಲ್ಲಿ ವಿಶೇಷ ಉಪನ್ಯಾಸ ವಿದ್ಯಾರ್ಥಿಗಳೊಂದಿಗೆ ಸಂವಾದ ಮತ್ತು ಸಾಕ್ಷ್ಯಚಿತ್ರ ಪ್ರದರ್ಶನವನ್ನು ಹಮ್ಮಿಕೊಳ್ಳಲಾಗಿತ್ತು.
ಕಾರ್ಯಕ್ರಮದ ಪ್ರಾರಂಭದಲ್ಲಿ ಮಹಾವಿದ್ಯಾಲಯದ ಕನ್ನಡ ವಿಭಾಗದ ಮುಖ್ಯಸ್ಥರಾದ ಡಾ. ಅಂದಯ್ಯ ಅರವಟಗಿಮಠರವರು ಪ್ರಾಸ್ತಾವಿಕವಾಗಿ ಮಾತನಾಡಿ, “ಭೈರಪ್ಪನವರು ಕೆಲ ವರ್ಷಗಳ ಕಾಲ ಕೆ.ಎಲ್.ಇ ಸಂಸ್ಥೆಯ ಉಪನ್ಯಾಸಕರಾಗಿದ್ದರು ಎನ್ನುವುದು ನಮಗೆಲ್ಲ ಹೆಮ್ಮೆಯ ಸಂಗತಿ. ಒಂದು ಕೃತಿ ರಚನೆಗೂ ಮುನ್ನ ಆ ಕುರಿತು ಸಂಶೋಧನೆ ಹಾಗೂ ಕ್ಷೇತ್ರಕಾರ್ಯ ಮಾಡುತ್ತಿದ್ದಂತಹ ಅಪರೂಪದ ಸಾಹಿತಿ ಭೈರಪ್ಪನವರು. ಅವರ ನಾಯಿನೆರಳು, ಧರ್ಮಶ್ರೀ, ಗೃಹಭಂಗ, ಗ್ರಹಣ, ದೂರ ಸರಿದವರು, ಮತದಾನ ಸೇರಿದಂತೆ ನಾನಾ ಕಾದಂಬರಿಗಳು ನಲವತ್ತು ಬಾರಿ ಮರು ಮುದ್ರಣವಾಗಿವೆ. ಹಿಂದಿ, ಮರಾಠಿ, ತೆಲುಗು ಸೇರಿದಂತೆ ನಾನಾ ಭಾಷೆಗಳಿಗೆ ಭಾಷಾಂತರಗೊಂಡಿವೆ. ದೇಶವ್ಯಾಪ್ತಿ ಖ್ಯಾತರಾಗಿರುವ ಭೈರಪ್ಪನವರಿಗೆ ಬಹಳ ಹಿಂದೆಯೇ ಜ್ಞಾನಪೀಠ ಪ್ರಶಸ್ತಿ ಸಲ್ಲಬೇಕಿತ್ತು. ಮರಣೋತ್ತರವಾಗಿಯಾದರೂ ಜ್ಞಾನಪೀಠ ಪ್ರಶಸ್ತಿ ಬಂದರೆ ಆ ಪ್ರಶಸ್ತಿಗೆ ಹೆಚ್ಚಿನ ಗೌರವ, ಮಹತ್ವ ಬರುತ್ತದೆ” ಎಂದರು.
“ಭೈರಪ್ಪನವರದ್ದು ಮಹಿಳಾ ವಿರೋಧಿ ಧೋರಣೆ ಎಂಬ ಅಪವಾದವಿದೆ. ಆದರೆ, ಅವರ ಕೃತಿಗಳನ್ನು ಹೆಚ್ಚು ಓದುವವರು ಮಹಿಳೆಯರೇ ಎನ್ನುವುದು ವಿಶೇಷ. ಸಿದ್ಧಾಂತಗಳಾಚೆ ಸಾಹಿತ್ಯವನ್ನು ನೋಡುವ ಅಗತ್ಯತೆ ಇದೆ. ಭೈರಪ್ಪ ಕನ್ನಡ ಲೇಖಕರಾದರೂ ಕನ್ನಡ ಮಾತ್ರವಲ್ಲದೇ ಚೀನಿ, ಜಪಾನಿ ಸೇರಿದಂತೆ ಇತರೆ ಭಾಷೆಗಳಿಗೂ ಅವರ ಕಾದಂಬರಿಗಳು ಅನುವಾದಗೊಂಡಿದ್ದು ಕನ್ನಡ ಹೆಮ್ಮೆಯೇ ಸರಿ” ಎಂದು ಡಾ. ಅಂದಯ್ಯ ಅರವಟಗಿಮಠ ಅಭಿಪ್ರಾಯ ವ್ಯಕ್ತಪಡಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಪ್ರಾಚಾರ್ಯರಾದ ಡಾ. ಎ.ಕೆ.ಮಠ ಮಾತನಾಡಿ, “ಭೈರಪ್ಪ ಸಾಹಿತ್ಯವು ಕೇವಲ ಪಠ್ಯಪುಸ್ತಕದ ವಿಷಯವಲ್ಲ, ಅದು ಜೀವನದ ಪಾಠ. ವಿದ್ಯಾರ್ಥಿಗಳು ಸಾಹಿತ್ಯಾಭ್ಯಾಸದ ಜತೆಗೆ ಕಥೆ, ಕಾದಂಬರಿ, ವಿಮರ್ಶಾತ್ಮಕ ಕೃತಿಗಳ ಅಧ್ಯಯನಕ್ಕೂ ಸಮಯ ಮೀಸಲಿಡಬೇಕು. ಯಾವುದೇ ವಯೋಮಾನದ ವ್ಯಕ್ತಿ ಸಾಹಿತ್ಯದ ಬಗ್ಗೆ ಅಭಿರುಚಿ ಹೊಂದಿರುತ್ತಾನೋ ಆತನ ಜೀವನದಲ್ಲಿ ಶಿಸ್ತು, ಸಂತೋಷ ಮತ್ತು ತೃಪ್ತಿಯ ನಡೆ ಸಾಧ್ಯ” ಎಂದರು.
ಕಾರ್ಯಕ್ರಮದ ಪ್ರಾರಂಭದಲ್ಲಿ ಕೇಂದ್ರ ಸಾಹಿತ್ಯ ಅಕಾಡೆಮಿ ನಿರ್ಮಿಸಿದ, ಪಿ ಶೇಷಾದ್ರಿ ನಿರ್ದೇಶಿಸಿದ `ಡಾ. ಎಸ್. ಎಲ್. ಭೈರಪ್ಪನವರ ಜೀವನ ಮತ್ತು ಕೃತಿಗಳುʼ ಸಾಕ್ಷ್ಯಚಿತ್ರವನ್ನು ಪ್ರದರ್ಶಿಸಲಾಯಿತು. ಕಾರ್ಯಕ್ರಮದ ನಿರ್ವಹಣೆಯನ್ನು ಡಾ. ರಾಮಚಂದ್ರ ಪಡೇಸೂರ ನೆರವೇರಿಸಿದರು. ಪ್ರೊ. ಗೌರ ಯಳಮಲಿ ವಂದಿಸಿದರು. ಪ್ರೊ. ಜಿ.ಟಿ.ನಾಯಕ, ಡಾ. ವಿಠ್ಠಲ ಕೋಳಿ, ಪ್ರೊ. ಶ್ವೇತಾ ರಾಚಯ್ಯನವರ ಒಳಗೊಂಡಂತೆ ಮಹಾವಿದ್ಯಾಲಯದ ಎಲ್ಲ ಬೋಧಕ ಮತ್ತು ಬೋಧಕೇತರ ಸಿಬ್ಬಂದಿ, ವಿದ್ಯಾರ್ಥಿಗಳು ಹಾಜರಿದ್ದು ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು.





