‘ಶಿರಹಟ್ಟಿ ಕ್ಷೇತ್ರದ ಶಾಸಕ ಡಾ.ಚಂದ್ರು ಲಮಾಣಿ ಅವರ ಮೇಲೆ ಲೋಕಾಯುಕ್ತರ ದಾಳಿ ಕಾಂಗ್ರೆಸ್ ಪ್ರಬಲ ನಾಯಕರ ಷಡ್ಯಂತ್ರ. ಶಾಸಕರ ಅಭಿವೃದ್ಧಿ ಕೆಲಸ ಅವರ ಮುಗ್ಧತೆಯನ್ನ ಹಾಗೂ ಅವರ ಜನಮೆಚ್ವುಗೆ ಕಾರ್ಯ ಸರಕಾರ ಸಹಿಸದೇ ಉದ್ದೇಶಪೂರ್ವಕವಾಗಿ ಲೋಕಾಯುಕ್ತ ಇಲಾಖೆಯನ್ನು ದುರ್ಬಳಕೆ ಮಾಡಿಕೊಂಡಿದ್ದಾರೆ’ ಎಂದು ಆರೋಪಿಸಿದರು.
ಗದಗ ಜಿಲ್ಲೆಯ ಲಕ್ಷ್ಮೇಶ್ವರ ಪಟ್ಟಣದಲ್ಲಿ ಶಿರಹಟ್ಟಿ ಬಿಜೆಪಿ ಶಾಸಕ ಡಾ.ಚಂದ್ರು ಲಮಾಣಿ ಅವರ ಮೇಲೆ ಲೋಕಾ ದಾಳಿ ಹಿಂದೆ ಕಾಂಗ್ರೆಸ್ ಪ್ರಬಲ ರಾಜಕಾರಣಿಗಳ ಕೈವಾಡ ಮತ್ತು ಷಡ್ಯಂತ್ರ ಅಡಗಿದೆ” ಎಂಬುದನ್ನು ಖಂಡಿಸಿ ಬೆಂಬಲಿಗರು ಬೃಹತ್ ಪ್ರತಿಭಟನೆ ನಡೆಸಿದರು.
ಪ್ರತಿಬಟನೆಯಲ್ಲಿ ಬಂಜಾರ ಸಂಘದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಬಾಲಚಂದ್ರ ತುಳಸಿಮನಿ ಮಾತನಾಡಿ, “ಶಿರಹಟ್ಟಿ ಶಾಸಕ ಡಾ. ಚಂದ್ರು ಲಮಾಣಿ ಅವರ ಮೇಲೆ ನಡೆದಿರುವ ಲೋಕಾ ದಾಳಿ ಹಿಂದೆ ಷಡ್ಯಂತ್ರ ಅಡಗಿದೆ. ದಾಳಿಗೂ ಮುನ್ನ ದೊಡ್ಡ ಸಂಚು ನಡೆಸಿ, ಅವರನ್ನು ವ್ಯವಸ್ಥಿತ ರೀತಿಯಲ್ಲಿ ಪ್ರಕರಣದಲ್ಲಿ ಸಿಲುಕಿಸಿ, ಜೈಲಿಗೆ ಕಳುಹಿಸಿದ್ದಾರೆ’ ಎಂದು ಆರೋಪ ಮಾಡಿದರು.
“ಒಬ್ಬ ದಲಿತ ಶಾಸಕನ ಏಳ್ಗೆ ಸಹಿಸದ ಕಾಂಗ್ರೆಸ್ ನಾಯಕರು ಶಾಸಕರ ವಿರುದ್ಧ ಸಂಚು ಹೆಣೆದಿದ್ದಾರೆ. ಆದರೆ, ದಲಿತ ಶಾಸಕರ ಜನಪರ ಏಳ್ಗೆ ಸಹಿಸದವರ ಬಗ್ಗೆ ಡಾ. ಚಂದ್ರು ಲಮಾಣಿಯವರು ಹೆದರುವ ಜರೂರು ಇಲ್ಲ. ಅವರ ಬೆನ್ನಿಗೆ ಕರ್ನಾಟಕ ಬಂಜಾರ ಸಮಾಜ ಸದಾ ಇರಲಿದೆ” ಎಂದು ಹೇಳಿದರು.
“ಶಾಸಕ ಚಂದ್ರು ಅವರು ಬಡತನದಿಂದ ಮೇಲೆ ಬಂದ ವ್ಯಕ್ತಿ. ಇದನ್ನು ಕೆಲವರಿಗೆ ಸಹಿಸಲು ಆಗಲಿಲ್ಲ. ಹಾಗಾಗಿ, ಅವರನ್ನು ರಾಜಕೀಯವಾಗಿ ಮುಗಿಸಬೇಕು ಎಂಬ ಉದ್ದೇಶದಿಂದ ದುಷ್ಟರೆಲ್ಲಾ ಒಂದಾಗಿ ಈ ಪ್ರಕರಣದಲ್ಲಿ ಸಿಲುಕಿಸಿದ್ದಾರೆ”ಎಂದು ಕಿಡಿಕಾರಿದರು.
“ಲೋಕಾಯುಕ್ತ ಪೊಲೀಸರಿಗೆ ದೂರು ನೀಡಿದ ಗುತ್ತಿಗೆದಾರ ವಿಜಯ್ ಪೂಜಾರ ಕಾಂಗ್ರೆಸ್ ಪಕ್ಷದ ಸಕ್ರಿಯ ಕಾರ್ಯಕರ್ತ. ಆತ ಕೂಡ ದಲಿತ ಸಮಾಜಕ್ಕೆ ಸೇರಿದ ವ್ಯಕ್ತಿ. ಒಬ್ಬ ದಲಿತ ಶಾಸಕನನ್ನು ಹಣಿಯಲು ದಲಿತ ಗುತ್ತಿಗೆದಾರ, ಸ್ವಾಮೀಜಿಯನ್ನೇ ಬಳಕೆ ಮಾಡಿಕೊಂಡಿದ್ದಾರೆ” ಎಂದು ಆರೋಪಿಸಿದರು.
“ಆದರಹಳ್ಳಿ ಮಠದ ಕುಮಾರ ಮಹಾರಾಜರು ಡಾ. ಚಂದ್ರು ಲಮಾಣಿ ಅವರನ್ನು ಶಾಸಕ ಸ್ಥಾನದಿಂದ ಇಳಿಸುವವರೆಗೆ ಹೋರಾಟ ಬಿಡುವುದಿಲ್ಲ ಎಂದು ಹೇಳಿದ್ದಾರೆ. ಒಬ್ಬ ಸ್ವಾಮೀಜಿಯಾಗಿ ಈ ರೀತಿ ಹೇಳಿಕೆ ಕೊಡಬಹುದೇ? ನಮ್ಮಲ್ಲಿ ಮಠ ಪರಂಪರೆ ಇಲ್ಲ. ಆ ವ್ಯಕ್ತಿ ತಾನು ಬಂಜಾರ ಸಮಾಜದ ಸ್ವಾಮೀಜಿ ಎಂದು ಅವರೇ ಹೇಳಿಕೊಂಡು ಅಡ್ಡಾಡುತ್ತಿದ್ದಾರೆ. ಜನರು ಆರಿಸಿ ಕಳಿಸಿದ ಜನಪ್ರತಿನಿಧಿ ವಿರುದ್ಧ ದ್ವೇಷ ಕಾರುತ್ತಿದ್ದಾರೆ” ಎಂದು ಕಿಡಿಕಾರಿದರು.
ಪಿಜೆಪಿ ಕಾರ್ಯಕರ್ತ ಶಿವಾನಂದ ಮಾತನಾಡಿ “ಶಾಸಕ ಚಂದ್ರು ಲಮಾಣಿ ಅವರ ತೇಜೋವಧೆ ಮಾಡಲು ದಲಿತ ಶಾಸಕರಿಗೆ ತೊಂದರೆ ಕೊಡಬೇಕು ಅಂತಲೇ ಕೆಲವರು ಷಡ್ಯಂತ್ರ ನಡೆಸಿ ಲೋಕಾಯುಕ್ತ ಬಲೆಗೆ ಸಿಕ್ಕಿಸಿದ್ದಾರೆ” ಎಂದು ದೂರಿದರು.
ಈ ಪ್ರಕಣದಲ್ಲಿ ಬಂಜಾರ ಸಮುದಾಯ ಸ್ವಾಮೀಜಿ ಕುಮಾರ ಮಹಾರಾಜ ಹಾಗೂ ಬೇರೆ ಪಕ್ಷದ ನಾಯಕರ ಕೈವಾಡವೂ ಇದೆ. ಗುತ್ತಿಗೆದಾರ ವಿಜಯ್ ಪೂಜಾರ ಕಾಮಗಾರಿಗೆ ಡಿಸೆಂಬರ್ನಲ್ಲಿ ಪೂಜೆ ಮಾಡಿದ್ದು ಫೆಬ್ರವರಿವರೆಗೂ ಕೆಲಸ ಆರಂಭಿಸಲಿಲ್ಲ. ಕೆಲಸ ವಿಳಂಬ ಆಗಿದ್ದಕ್ಕೆ ಶಾಸಕರು ಪ್ರಶ್ನಿಸಿದ್ದರು. ಅದಕ್ಕೆ ಷಡ್ಯಂತ್ರ ಮಾಡಿ ಲೋಕಾ ಬಲೆಗೆ ಬೀಳಿಸಿದ್ದಾರೆ” ಎಂದು ಆಪಾದಿಸಿದರು.
ಕರ್ನಾಟಕ ಬಂಜಾರ ಮಹಾಸಭಾದ ಜಿಲ್ಲಾ ಘಟಕದ ಅಧ್ಯಕ್ಷ ಶಿವಪ್ಪ ನಾಯ್ಕ, ಪದಾಧಿಕಾರಿಗಳು, ಶಾಸಕ ಚಂದ್ರು ಲಮಾಣಿ ಅಭಿಮಾನಿಗಳು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.





