ಶಿಶುಪಾಲನಾ ಕೇಂದ್ರ ಮಕ್ಕಳಿಗೆ ಪೂರಕ ವಾತಾವರಣ ನಿರ್ಮಿಸುವುದರ ಜೊತೆಗೆ ಸಮಾಜಿಕ ಹಾಗೂ ಬೌದ್ಧಿಕ ಬೆಳವಣಿಗೆಗೆ ಸಹಕಾರಿಯಾಗಬೇಕು ಎಂದು ಗದಗ ಜಿಲ್ಲಾ ಪಂಚಾಯತ್ ಐಇಸಿ ಸಂಯೋಜಕ ವಿ ಎಸ್ ಸಜ್ಜನ ಹೇಳಿದರು.
ರೋಣ ತಾಲೂಕ ಪಂಚಾಯತ್ ಸಭಾಂಗಣದಲ್ಲಿ ರೋಣ, ಗಜೇಂದ್ರಗಡ ಹಾಗೂ ನರಗುಂದ ತಾಲೂಕಿನ ಶಿಶುಪಾಲನಾ ಕೇಂದ್ರದ ಆರೈಕೆ ಸಿಬ್ಬಂದಿಗಳ ಮೂರನೇ ದಿನದ ತರಬೇತಿ ಕಾರ್ಯಾಗಾರದಲ್ಲಿ ಮಾತನಾಡಿದರು.
“ಮೊಬೈಲ್ ಕ್ರೆಚೆಸ್ ಸಂಸ್ಥೆಯು ದೆಹಲಿಯಲ್ಲಿ ಸುಮಾರು 54 ವರ್ಷಗಳ ಹಿಂದೆ ಸ್ಥಾಪಿತವಾದ ಒಂದು ಸ್ವಯಂ ಸೇವಾ ಸಂಸ್ಥೆಯಾಗಿದ್ದು, ದೇಶದಾದ್ಯಂತ ಎಲ್ಲ ರಾಜ್ಯಗಳಲ್ಲಿ ಮಕ್ಕಳ ಬಾಲ್ಯದ ಬೆಳವಣಿಗೆ, ಸಮಾಜದ ಅಂಚಿನಲ್ಲಿರುವ ಮಕ್ಕಳ ಹಕ್ಕುಗಳ ಕುರಿತಾಗಿ ಕೆಲಸ ಮಾಡುತ್ತಿದೆ. ಸಂಸ್ಥೆಯು ಸಮುದಾಯ ಮಟ್ಟದಿಂದ ರಾಷ್ಟ್ರ ಮಟ್ಟದಲ್ಲಿ ಸ್ಥಳೀಯ ಸರ್ಕಾರ, ಹಲವಾರು ಸಂಘ ಸಂಸ್ಥೆಗಳೊಡನೆ ಮಕ್ಕಳ ಬಾಲ್ಯದ ಬೆಳವಣಿಗೆಯ ಕುರಿತು ಕೆಲಸ ಮಾಡುತ್ತಿದೆ” ಎಂದರು.
“ಕರ್ನಾಟಕ ಸರ್ಕಾರದ ಪಂಚಾಯತ್ ರಾಜ್ ಇಲಾಖೆಯೊಂದಿಗೆ ಗ್ರಾಮ ಪಂಚಾಯತಿ ಮಟ್ಟದಲ್ಲಿ 4,000 ಶಿಶುಪಾಲನಾ ಕೇಂದ್ರಗಳನ್ನು ಪ್ರಾರಂಭಿಸಲು ಒಪ್ಪಂದ ಮಾಡಿಕೊಂಡಿರುತ್ತದೆ. ಮೊಬೈಲ್ ಕ್ರೆಚಸ್ ಸಂಸ್ಥೆಯು ಕೇಂದ್ರದ ಆರೈಕೆ ಸಿಬ್ಬಂದಿಗಳು ಹೇಗೆ ಕಾರ್ಯ ನಿರ್ವಹಿಸಬೇಕು ಎಂಬುದರ ಕುರಿತಾಗಿ ಪಂಚಾಯತ್ ರಾಜ್ ಹಾಗೂ ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆಯ ಅಧಿಕಾರಿಗಳಿಗೆ ರಾಜ್ಯ ಮಟ್ಟದ ತರಬೇತಿ ನೀಡಲಾಗಿತ್ತು. ಅಂತಹ ನುರಿತ ತರಬೇತುದಾರರಿಂದ ತಾಲೂಕು ಮಟ್ಟದಲ್ಲಿ ತರಬೇತಿ ನೀಡಲಾಗುತ್ತಿದೆ” ಎಂದು ತಿಳಿಸಿದರು.
ಈ ಸುದ್ದಿ ಓದಿದ್ದೀರಾ? ಯಾದಗಿರಿ | ಸರ್ವ ಧರ್ಮೀಯರಿಂದ ಉರುಸ್ ಆಚರಣೆ
ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಹಿರಿಯ ಮೇಲ್ವಿಚಾರಕರು ಹಾಗೂ ತರಬೇತಿದಾರರಾಗಿರುವ ಮಂಜುಳಾ ಗುನಾರಿ, ರಾಜೇಶ್ವರಿ ಮೇಟಿ ತರಬೇತಿ ನೀಡುವುದರ ಜೊತೆಗೆ ಇತರೆ ಗ್ರೂಪ್ ಚಟುವಟಿಕೆಗಳನ್ನು ಮಾಡಿಸಿದರು. ಈ ತರಬೇತಿಯಲ್ಲಿ 54 ಆರೈಕೆ ಸಿಬ್ಬಂದಿಗಳು ಇದ್ದರು.





