“ಸರ್ಕಾರಿ ಶಾಲೆಗಳಲ್ಲಿ ಓದಿದವರು ವೈವಿಧ್ಯತೆ ಯೋಚನೆ ಯುಳ್ಳವರಾಗಿರುತ್ತಾರೆ. ಅದು ಜೀವನದಲ್ಲಿ ಅವರನ್ನು ಬಲಿಷ್ಟವಾಗಿ ನಿಲ್ಲುವಂತೆ ಹಾಗೂ ದೃಢನಿರ್ಧಾರ ಕೈಗೊಳ್ಳುವ ಸಂಕಲ್ಪ ಮೈಗೂಡಿಸುತ್ತದೆ. ಮಕ್ಕಳು ವಿದ್ಯೆಯ ಜೊತೆಗೆ ಬುದ್ಧಿವಂತರಾಗಬೇಕು. ವಿದ್ಯೆ ಮಕ್ಕಳಿಗೆ ಪುಸ್ತಕದ ಜ್ಞಾನ ನೀಡಿದರೆ, ಬುದ್ಧಿ ಜೀವನದಲ್ಲಿ ಎಡವದಂತೆ ಮುನ್ನಡೆಸುತ್ತದೆ” ಎಂದು ಜಿಲ್ಲಾಧಿಕಾರಿ ಸಿ.ಎನ್.ಶ್ರೀಧರ್ ಹೇಳಿದರು.
ಗದಗ ಪಟ್ಟಣದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ , ಶಾಲಾ ಶಿಕ್ಷಣ ಇಲಾಖೆ, ಕ್ಷೇತ್ರ ಶಿಕ್ಷಣಾಧಿಕಾರಿಗಳು ಹಾಗೂ ಕ್ಷೇತ್ರ ಸಮನ್ವಯಾಧಿಕಾರಿಗಳ ಕಾರ್ಯಾಲಯ ಶಹರ ವಲಯ ಗದಗ ಸಹಯೋಗದಲ್ಲಿ ಬಸವರಾಜ ಹೊರಟ್ಟಿ ದಂಪತಿಗಳು ದತ್ತು ಪಡೆದ ಸಿದ್ದಲಿಂಗನಗರದ ಸರ್ಕಾರಿ ಪ್ರೌಢಶಾಲೆಯಲ್ಲಿ ಶುಕ್ರವಾರ ಪ್ರಸಕ್ತ ಸಾಲಿನ ಮಕ್ಕಳ ದಿನಾಚರಣೆ ನಿಮಿತ್ತ ಏರ್ಪಡಿಸಿದ ಪೋಷಕರ ಶಿಕ್ಷಕರ ಮಹಾಸಭೆಯನ್ನು ಉದ್ಘಾಟಿಸಿ ಅವರು ಮಾತನಾಡಿದರು.
“ಪಂಡಿತ ಜವಾಹರಲಾಲ ನೆಹರು ಹಾಗೂ ಡಾ. ಸರ್ವಪಲ್ಲಿ ರಾಧಾಕೃಷ್ಣನ್ ಅವರಿಬ್ಬರ ಕೊಡುಗೆ ಅನನ್ಯ. ಮಾಜಿ ಪ್ರಧಾನಿ ನೆಹರೂ ಅವರು ತಮ್ಮ ಜನ್ಮ ದಿನಾಚರಣೆಯನ್ನು ಮಕ್ಕಳ ದಿನಾಚರಣೆಯನ್ನಾಗಿ ಆಚರಿಸಲು ಬಯಸಿದರು. ಅದೇ ರೀತಿ ಡಾ.ಸರ್ವಪಲ್ಲಿ ರಾಧಾಕೃಷ್ಣನ್ ಅವರು ಶಿಕ್ಷಕರ ದಿನಾಚರಣೆಯನ್ನಾಗಿ ಆಚರಿಸುವಂತೆ ತಿಳಿಸುವ ಮೂಲಕ ಸಮಾಜಕ್ಕೆ ತಮ್ಮದೇ ಆದ ಅನನ್ಯ ಕೊಡುಗೆ ನೀಡಿದ್ದಾರೆ ಎಂದು ಹೇಳಿದರು.
“ಮಕ್ಕಳು ವಿದ್ಯಾಭ್ಯಾಸದ ಸಮಯದಲ್ಲಿ ದುಶ್ಚಟಗಳಿಗೆ ಬಲಿಯಾಗಬಾರದು. ಧೂಮಪಾನ , ಮದ್ಯಪಾನದಂತಹ ಸಮಾಜದ ಸ್ವಾಸ್ಥ್ಯ ಹಾಳು ಮಾಡುವ ಚಟಗಳಿಗೆ ದಾಸರಾಗದೇ ವಿದ್ಯಾರ್ಜನೆಯೊಂದೇ ಗುರಿಯಾಗಿಸಿಕೊಂಡು ಮುನ್ನಡೆಯಬೇಕು. ವಿದ್ಯಾರ್ಜನೆಯಲ್ಲಿ ಉತ್ಸಾಹ, ಶ್ರದ್ಧೆಯಿಂದ ಅಭ್ಯಸಿಸುವ ದೃಢ ನಿರ್ಧಾರ ನಿಮ್ಮದಾದಲಿ. ನಿಮ್ಮ ಮುಂದಿನ ಜೀವನ ಉತ್ತಮವಾಗಿ ಇರಲಿದೆ” ಎಂದು ಜಿಲ್ಲಾಧಿಕಾರಿ ಸಿ.ಎನ್.ಶ್ರೀಧರ್ ಅವರು ಹೇಳಿದರು.
ಶಾಲಾ ಶಿಕ್ಷಣ ಇಲಾಖೆ ಉಪನಿರ್ದೇಶಕ ಆರ್.ಎಸ್.ಬುರುಡಿ ಮಾತನಾಡಿ, “ಮಕ್ಕಳ ದಿನಾಚರಣೆ ಅಂಗವಾಗಿ ಪಾಲಕರ ಶಿಕ್ಷಕರ ಮಹಾಸಭೆಯನ್ನು ಈ ವರ್ಷ ಎಲ್ಲ ಶಾಲೆಗಳಲ್ಲಿ ರಾಜ್ಯಾದ್ಯಂತ ಏಕರೂಪದಲ್ಲಿ ನಡೆಸಲಾಗುತ್ತಿದೆ. ಇದರ ಉದ್ದೇಶ ಇಷ್ಟೇ ವಿದ್ಯಾರ್ಥಿಗಳ ವಿದ್ಯಾಭ್ಯಾಸದ ಪ್ರಗತಿಯನ್ನು ಪೋಷಕರಿಗೆ ತಿಳಿಸುವುದು. ತಮ್ಮ ಮಕ್ಕಳ ಕುರಿತು ಪೋಷಕರು ಹಲವು ವಿಷಯಗಳ ಕುರಿತು ಚರ್ಚಿಸಬಹುದು. ಉತ್ತಮ ಫಲಿತಾಂಶ ಹಾಗೂ ಸಾಧನೆಗೈದ ವಿದ್ಯಾರ್ಥಿಗಳಿಗೆ ಅಭಿನಂದಿಸುವ ಉದ್ದೇಶ ಈ ಸಭೆ ಹೊಂದಿದೆ” ಎಂದರು.
ಮಕ್ಕಳ ಹಕ್ಕುಗಳಿಗೆ ಸಂಬಂಧಿಸಿದಂತೆ ವಿವಿಧ ಕಾಯ್ದೆಗಳ ಬಗ್ಗೆ ಪೋಷಕರಿಗೆ ಅರಿವು ಮೂಡಿಸುವುದು, ಆರ್.ಟಿ.ಐ, ಪೋಸ್ಕೋ, ಮಕ್ಕಳ ರಕ್ಷಣಾ ನೀತಿ, ಬಾಲ್ಯ ವಿವಾಹ ನಿಷೇಧ, ಬಾಲ ಕಾರ್ಮಿಕ ಪದ್ಧತಿ ಕುರಿತು ತಿಳಿಸಿಕೊಡುವ ಸಂಗಮ ಈ ಮಹಾಸಭೆಯಾಗಿದೆ” ಎಂದು ನುಡಿದರು.
ಈ ಸಂದರ್ಭದಲ್ಲಿ ಅವ್ವ ಟ್ರಸ್ಟ್ ರಾಜ್ಯ ಸಂಚಾಲಕ ಡಾ.ಬಸವರಾಜ ಧಾರವಾಡ, ಎಸ್.ಡಿ.ಎಂ.ಸಿ. ಅಧ್ಯಕ್ಷೆ ನಂದಾ ಕಟವಟಿ, ನಗರಸಭೆ ಸದಸ್ಯೆ ವಿದ್ಯಾವತಿ ಗಡಗಿ, ವಯಸ್ಕರ ಶಿಕ್ಷಣಾಧಿಕಾರಿ ಶಿವಕುಮಾರ ಕುರಿಯವರ, ಬಿ.ಇ.ಒ ರವಿಂದ್ರ ಶೆಟ್ಟೆಪ್ಪನವರ, ವಾರ್ತಾಧಿಕಾರಿ ವಸಂತ ಮಡ್ಲೂರ, ರವಿ, ಶಾಲೆಯ ಮುಖ್ಯೋಪಾಧ್ಯಾಯಿನಿ ಜೆ.ಬಿ.ಅಣ್ಣಿಗೇರಿ, ನಗರಸಭೆಯ ಪರಿಸರ ಅಧಿಕಾರಿ ಆನಂದ ಬದಿ, ಶಾಲಾ ವಿದ್ಯಾರ್ಥಿ ಸಂಘಗಳ ಪ್ರಧಾನಿ ಕು. ರುತ್ತೂರ ಗೌಡ, ಉಪಪ್ರಧಾನಿ ಕು.ತೇಜಸ್ವಿನಿ ಕಟಗಿ ಸೇರಿದಂತೆ ಶಾಲಾ ಶಿಕ್ಷಕರು, ವಿದ್ಯಾರ್ಥಿಗಳು, ಪೋಷಕರು ಹಾಜರಿದ್ದರು.
ಕ್ರೀಡಾ ಸಾಧನೆ ಹಾಗೂ ಅತೀ ಹೆಚ್ಚು ಅಂಕ ಪಡೆದ ಶಾಲಾ ವಿದ್ಯಾರ್ಥಿಗಳಿಗೆ ಅತಿಥಿಗಳು ಸತ್ಕರಿಸಿ ಗೌರವಿಸಿದರು. ಜೊತೆಗೆ ತಾರೆ ಜಮೀನ್ ಪರ್ ಸಂಸ್ಥೆಯಿಂದ ವಿದ್ಯಾರ್ಥಿಗಳಿಗೆ ವಿಜ್ಞಾನ ಕಿಟ್ ವಿತರಿಸಲಾಯಿತು. ವಿದ್ಯಾರ್ಥಿಗಳು ನೃತ್ಯ, ಗೀತೆ ಭಾಷಣ ಮುಂತಾದ ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ತೊಡಗುವ ಮೂಲಕ ಕಾರ್ಯಕ್ರಮಕ್ಕೆ ಕಳೆ ತಂದರು.





