ಹಮ್ಮಗಿ ಡ್ಯಾಮಿನ ಹಿನ್ನೀರಿನ ಪ್ರದೇಶವಾದ ಗುಮ್ಮಗೋಳದಿಂದ ಲಕ್ಷ್ಮೇಶ್ವರ ನಗರಕ್ಕೆ ಶಾಶ್ವತವಾದ ಕುಡಿಯುವ ನೀರಿನ ಯೋಜನೆಯನ್ನು ಜಾರಿಗೊಳಿಸಬೇಕೆಂದು ಆಗ್ರಹಿಸಿ ಗದಗ ಜಿಲ್ಲೆಯ ಲಕ್ಷ್ಮೇಶ್ವರ ಪಟ್ಟಣದ ಪುರಸಭೆ ಮುಖ್ಯಾಧಿಕಾರಿಯವರ ಮೂಲಕ ಮುಖ್ಯಮಂತ್ರಿಗಳಿಗೆ ಕರ್ನಾಟಕ ರಕ್ಷಣಾ ವೇದಿಕೆ ಸ್ವಾಭಿಮಾನಿ ಸೇನೆ ಮುಖಂಡರು ಮನವಿ ಸಲ್ಲಿಸಿದರು.
ಕರವೇ ಸ್ವಾಭಿಮಾನಿ ಸೇನೆ ಜಿಲ್ಲಾಧ್ಯಕ್ಷ ಶರಣು ಗೋಡಿ ಮಾತನಾಡಿ, “ನಮ್ಮ ಜಿಲ್ಲೆಯಲ್ಲಿ ಹರಿದಿರುವ ತುಂಗಭದ್ರಾ ನದಿಯಿಂದ ಸುಮಾರು 25 ವರ್ಷಗಳ ಹಿಂದೆ ಕುಡಿಯುವ ನೀರಿನ ಯೋಜನೆಯನ್ನು, ಹಾವೇರಿ ಜಿಲ್ಲೆಯ ಮೇವುಂಡಿ ಜಾಕ್ ವೆಲ್ನಿಂದ ಲಕ್ಷ್ಮೇಶ್ವರ ನಗರಕ್ಕೆ ಕುಡಿಯುವ ನೀರಿನ ಯೋಜನೆ ಸಾಕಾರವಾಗಿತ್ತು” ಎಂದರು.
“ಆದರೆ 25 ವರ್ಷಗಳ ನಂತರ ಆ ಪೈಪ್ಲೈನ್ಗಳು ತುಕ್ಕು ಹಿಡಿದು ಹಲವೆಡೆ ಸೋರುತ್ತಿವೆ. ವಿಶೇಷವಾಗಿ ಬೇಸಿಗೆ ಕಾಲದಲ್ಲಿ ಮೇವುಂಡಿ ಜಾಕ್ವೆಲ್ವರೆಗೂ ತುಂಗಭದ್ರ ನದಿಯ ಹಮ್ಮಿಗಿ ಡ್ಯಾಮಿನ ಹಿನ್ನೀರು ಮೇವುಂಡಿ ಹದ್ದಿನವರೆಗೂ ಇರುತ್ತದೆ. ಬೇಸಿಗೆ ಕಾಲದಲ್ಲಿ ನದಿ ನೀರು ಖಾಲಿಯಾಗಿ ಲಕ್ಷ್ಮೇಶ್ವರದ ಜನತೆ ಕುಡಿಯುವ ನೀರಿಗೆ ತುಂಬಾ ಕಷ್ಟ ಅನುಭವಿಸುತ್ತಿದ್ದಾರೆ. ಕೂಡಲೇ ಹಮ್ಮಿಗಿ ಡ್ಯಾಮಿನ ಹಿನ್ನೀರನ್ನು ಗುಮ್ಮಾಗೋಳದಿಂದ ಲಕ್ಷ್ಮೇಶ್ವರ ನಗರಕ್ಕೆ ಶಾಶ್ವತ ಕುಡಿಯುವ ನೀರಿನ ಯೋಜನೆಯನ್ನು ಜಾರಿಗೊಳಿಸಬೇಕು ಎಂಬುದು ನಮ್ಮ ಆಗ್ರಹ” ಎಂದು ಶರಣು ಗೋಡಿ ತಿಳಿಸಿಸಿದರು.
ಇದನ್ನು ಓದಿದ್ದೀರಾ? ಗದಗ | ವಿದ್ಯಾರ್ಥಿಗಳಿಗೆ ಆಗುತ್ತಿರುವ ಅನ್ಯಾಯ ಖಂಡಿಸಿ ಎಸ್ಎಫ್ಐ ಪ್ರತಿಭಟನೆ
ಈ ಸಂದರ್ಭದಲ್ಲಿ ಕರ್ನಾಟಕ ರಕ್ಷಣಾ ವೇದಿಕೆ ಸ್ವಾಭಿಮಾನಿ ಸೇನೆ ಲಕ್ಷ್ಮೇಶ್ವರ ತಾಲೂಕು ಅಧ್ಯಕ್ಷ ನಾಗೇಶ್ ಅಮರಪುರ, ಪ್ರವೀಣ್ ಆಚಾರಿ, ನಾಗರಾಜ್ ಅಣ್ಣಿಗೇರಿ, ಇಸ್ಮಾಯಿಲ್ ಅಡೂರು, ವಿನಾಯಕ್ ಛತ್ರಭಾವಿ, ಮಹಮ್ಮದಾಲಿ ಶಿಗ್ಗಾವಿ, ಮೊಯಿನುದ್ದಿನ್ ಮನಿಯಾರ್ ಹಾಗೂ ಪದಾಧಿಕಾರಿಗಳು ಉಪಸ್ಥಿತರಿದ್ದರು.





