ಧ್ವನಿ ಇಲ್ಲದ ಸಮಾಜಕ್ಕೆ ರಾಜಕೀಯ ನಾಯಕತ್ವ ನೀಡಿದರೆ ಪ್ರಜಾಪ್ರಭುತ್ವ ಪ್ರಬುದ್ಧವಾಗುತ್ತದೆ ಎಂಬುದು ದೇವರಾಜ ಅರಸು ಅವರ ಆಶಯವಾಗಿತ್ತು. ಆ ಆಶಯದಂತೆ ರಾಜ್ಯದಲ್ಲಿ ಸಿದ್ಧರಾಮಯ್ಯ ಅವರ ನೇತೃತ್ವದ ಸರ್ಕಾರ ಮುನ್ನಡೆಯುತ್ತಿದೆ ಎಂದು ರಾಜ್ಯದ ಕಾನೂನು, ನ್ಯಾಯ ಮತ್ತು ಮಾನವ ಹಕ್ಕುಗಳು ಹಾಗೂ ಪ್ರವಾಸೋದ್ಯಮ ಇಲಾಖೆ ಸಚಿವ ಡಾ.ಎಚ್.ಕೆ ಪಾಟೀಲ ಹೇಳಿದ್ದಾರೆ.
ಗದಗದಲ್ಲಿ ನಡೆದ ದಿ. ಡಿ.ದೇವರಾಜು ಅರಸು ಅವರ 108ನೇ ಜನ್ಮದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು. “ಸಾಹುಕಾರರ ಹಿಡಿತದಲ್ಲಿ ಸಮಾಜ ಇರಬಾರದು. ಸ್ವಾಭಿಮಾನದ ಬದುಕು ಪ್ರತಿಯೊಬ್ಬರು ನಡೆಸಬೇಕು. ಈ ಸ್ವಾಭಿಮಾನದ ಬದುಕಿಗೆ ಶಿಕ್ಷಣವೇ ಮೂಲ ಮಂತ್ರವಾಗಿದೆ ಎಂಬುದನ್ನು ಅರಿತ ಪ್ರಗತಿಪರ ಸಾಧನೆಗಳ ಸರದಾರ, ಸಾಮಾಜಿಕ ಪರಿವರ್ತನೆಯ ಹರಿಕಾರ, ನಾಡು ಕಂಡ ಧೀಮಂತ ನಾಯಕ ಅರಸು” ಎಂದು ಬಣ್ಣಿಸಿದರು.
“ಹಿಂದುಳಿದ ವರ್ಗಗಗಳ ಧ್ವನಿಯಾಗಿ ನಿರಂತರ ಶ್ರಮಿಸಿದವರು ಡಿ.ದೇವರಾಜ ಅರಸು ಅವರು. ಇಂದು ಅನೇಕ ಹಿಂದುಳಿದ ವರ್ಗದ ಯುವ ಜನತೆಯು ಉನ್ನತ ಹುದ್ದೆ ಅಲಂಕರಿಸಲು ಡಿ.ದೇವರಾಜ ಅರಸು ಅವರ ಆಲೋಚನೆಗಳು ದಾರಿದೀಪವಾಗಿವೆ. ಅರಸು ರವರ ಚಿಂತನೆ ಗದಗ ಜಿಲ್ಲೆಯ ಚಿಂತನೆಗೆ ಏನೂ ವ್ಯತ್ಯಾಸ ಇಲ್ಲ. ಇಲ್ಲಿ ನೆರದಿರುವ ವಿಧ್ಯಾರ್ಥಿಗಳ ಹುಮ್ಮಸ್ಸು ನೋಡಿದರೆ ನಾಳಿನ ಭವಿಷ್ಯ ಕಾಣಲಾಗುತ್ತಿದೆ” ಎಂದರು.
“ಜಿಲ್ಲೆಯ ವಸತಿ ನಿಲಯಗಳಲ್ಲಿ ಶಿಸ್ತು, ಸ್ವಚ್ಛತೆಗೆ ನಮ್ಮ ಜಿಲ್ಲೆ ಮಾದರಿಯಾಗಿದ್ದು, ಉತ್ತಮ ಊಟ ಒದಗಿಸುವದರ ಮೂಲಕ ದೈಹಿಕ ಸಾಮರ್ಥ್ಯ ವೃದ್ಧಿಗಾಗಿ ಸಹಕಾರಿಯಾಗಲಿದೆ. ಜಿಲ್ಲೆಯಲ್ಲಿನ ವಸತಿ ನಿಲಯಗಳನ್ನು ವ್ಯವಸ್ಥಿತವಾಗಿ ಮುನ್ನೆಡುಸುತ್ತಿರುವ ಅಧಿಕಾರಿಗಳಿಗೆ ಸಚಿವರು ಅಭಿನಂದಿಸಿದರು. ಇಂದು ಸರ್ಕಾರ ಜಾರಿಗೊಳಿಸಿರುವ ಯೋಜನೆಗಳ ಜಾರಿಯಿಂದಾಗಿ ರಾಜ್ಯ ಪ್ರತಿಯೊಬ್ಬ ಬಡತನ ರೇಖೆಗಿಂತ ಕೆಳಗಿದ್ದವರ ತಮ್ಮ ಜಿವನ ಗುಣಮಟ್ಟವನ್ನು ಏರಿಸುವ ಪ್ರಯತ್ನಿಸಲಾಗುತ್ತಿದೆ” ಎಂದು ಹೇಳಿದರು.
“ಹಿಂದುಳಿದ ವರ್ಗಗಳದ ಜನರು ಶಿಕ್ಷಣಕ್ಜೆ ಹೆಚ್ಚು ಒತ್ತು ನೀಡಿದಲ್ಲಿ ಮಾತ್ರ ತಾವು ಹಿಂದುಳಿದ ವರ್ಗದಿಂದ ಮೆಲೆರಲು ಸಾಧ್ಯವಾಗುತ್ತದೆ. ವಸತಿ ನಿಲಯಗಳಲ್ಲಿ ವ್ಯಾಸಂಗ ಮಾಡುತ್ತಿರುವ ವಿಧ್ಯಾರ್ಥಿಗಳು ಕಠಿಣ ಪರಿಶ್ರಮದಿಂದ ವಿಧ್ಯಾಬ್ಯಾಸ ಮಾಡಲು ಸರ್ಕಾರದಿಂದ ಪೂರಕ ವಾತಾವರಣ ನಿರ್ಮಾಣ ಮಾಡಲಾಗಿದೆ. ಶೋಷಿತರಿಗೆ ನ್ಯಾಯ ಒದಗಿಸುವ ಕಾರ್ಯ ಸರ್ಕಾರ ಮಾಡುತ್ತಿದ್ದು ಬಡತನವನ್ನು ಹೋಗಲಾಡಿಸಲು ನಮ್ಮ ಸರ್ಕಾರ ಜಾರಿಗೊಳಿಸಿರುವ ಗ್ಯಾರಂಟಿ ಯೋಜನೆಗಳಿಂದ 1 ಕೋಟಿಗೂ ಅಧಿಕ ಕುಟುಂಬಗಳು ಬಡತನ ರೇಖೆಗಿಂತ ಮೇಲೆರಲಿವೆ” ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಮಾತನಾಡಿದ ಜಿಲ್ಲಾ ಹಿಂದುಳಿದ ವರ್ಗಗಳ ಕಲ್ಯಾ ಇಲಾಖೆ ಜಿಲ್ಲಾ ಅಧಿಕಾರಿ ರವಿ ಗುಂಜಿಕರ, “ಹಿಂದುಳಿದ ಜನಾಂಗದವರಿಗೆ ಸಾಕಷ್ಟು ಕಾರ್ಯಕ್ರಮಗಳನ್ನು ಜಾರಿಗೊಳಿಸಿದ್ದಾರೆ. ಜಿಲ್ಲೆಯಲ್ಲಿ 62 ವಸತಿ ನಿಲಯಗಳು ಕಾರ್ಯನಿರ್ವಹಿಸುತ್ತಿವೆ. ವಸತಿ ನಿಲಯಗಳಲ್ಲಿ ಮನೆಯ ವಾತಾವರಣವನ್ನು ಸೃಷ್ಠಿ ಮಾಡುವದರ ಜೊತೆಗೆ ಪಠ್ಯ ಹಾಗೂ ಪಠ್ಯೇತರ ಚಟುವಟಿಕೆಗಳನ್ನು ಆಯೋಜಿಸಲಾಗುತ್ತಿದೆ. ಹಿಂದುಳಿದ ವರ್ಗದವರ ಕಲ್ಯಾಣಕ್ಕಾಗಿ ನಿಗಮಗಳ ಮೂಲಕ ಅನೇಕ ಯೋಜನೆಗಳನ್ನು ಜಾರಿಗೊಳಿಸಲಾಗುತ್ತಿದೆ. ಈ ಯೋಜನೆಗಳ ಜಾರಿಯಲ್ಲಿ ಜಿಲ್ಲೆಯೂ ಮುಂಚೂಣಿಯಲ್ಲಿದ್ದು ವಸತಿ ನಿಲಯದ ವಿಧ್ಯಾರ್ಥಿಗಳ ಶೈಕ್ಷಣಿಕ ವಲಯದಲ್ಲಿ ಉನ್ನತ ಸಾಧನೆ ಮಾಡುವಲ್ಲಿ ನಿಲಯ ಪಾಲಕರು, ಶಿಕ್ಷಕರು ಶ್ರಮ ವಹಿಸುವುದರ ಮೂಲಕ ಜಿಲ್ಲೆಯ ವಸತಿ ನಿಲಯಗಳನ್ನು ಮಾದರಿ ವಸತಿ ನಿಲಯಗಳನ್ನಾಗಿ ಮಾಡಲು ಪ್ರಯತ್ನಿಸಲಾಗುತ್ತಿದೆ” ಎಂದರು.
ಪ್ರಾಧ್ಯಾಪಕರಾದ ಆರ್.ಎಚ್. ಜಂಗಣ್ಣವರ ಉಪನ್ಯಾಸ ನೀಡಿದರು. ಕಾರ್ಯಕ್ರಮದಲ್ಲಿ ಗದಗ-ಬೆಟಗೇರಿ ನಗರ ಸಭೆ ಉಪಾಧ್ಯಕ್ಷೆ ಸುನಂದಾ ಬಾಕಳೆ, ಅಪರ ಜಿಲ್ಲಾಧಿಕಾರಿ ಅನ್ನಪೂರ್ಣ, ಜಿಲ್ಲಾ ಪಂಚಾಯತ ಮಾಜಿ ಅಧ್ಯಕ್ಷ ವಾಸಣ್ಣ ಕುರಡಗಿ, ಮಾಜಿ ಶಾಸಕರಾದ ಎಸ್.ಜಿ. ನಂಜಯ್ಯನಮಠ ಸೇರಿದಂತೆ, ಜನಪ್ರತಿನಿಧಿಗಳು, ಮುಖಂಡರು, ಗಣ್ಯರು, ಸಾರ್ವಜನಿಕರು, ವಿಧ್ಯಾರ್ಥಿಗಳು ಉಪಸ್ಥಿತರಿದ್ದರು. ಜೈ ಕಿಸಾನ ಕಲಾ ತಂಡದವರು ನಾಡಗೀತೆ ಪ್ರಚುರ ಪಡಿಸಿದರು. ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ತಾಲೂಕು ಅಧಿಕಾರಿ ಬಸವರಾಜ ಬಳ್ಳಾರಿ ಸ್ವಾಗತಿಸಿದರು. ಬಾಹುಬಲಿ ಜೈನರ ಕಾರ್ಯಕ್ರಮ ನಿರೂಪಿಸಿದರು.
ಇದೇ ಸಂದರ್ಭದಲ್ಲಿ 2022-23ನೆ ಸಾಲಿನ ನೀಟ್ ಪರೀಕ್ಷೆಯಲ್ಲಿ ಉತ್ತಮ ಸಾಧನೆ ಮಾಡಿದ ವಸತಿ ಕಾಲೇಜಿನ ವಿಧ್ಯಾರ್ಥಿಗಳಿಗೆ, ವಸತಿ ನಿಲಯಗಳಲ್ಲಿ ವ್ಯಾಸಂಗ ಮಾಡಿದ ಎಸ್.ಎಸ್.ಎಲ್.ಸಿ ಹಾಗೂ ಪಿ.ಯು.ಸಿ.ಯಲ್ಲಿ ಅಧಿಕ ಅಂಕ ಪಡೆದ ವಿಧ್ಯಾರ್ಥಿಗಳಿಗೆ ಸಚಿವರು, ಗಣ್ಯರುಗಳು ಸನ್ಮಾನಿಸಿದರು.
ಕಾರ್ಯಕ್ರಮಕ್ಕೂ ಮುನ್ನ ಚನ್ನಮ್ಮ ವೃತ್ತದಿಂದ ಮುಳಗುಂದ ನಾಕಾ ಮಾರ್ಗವಾಗಿ ಕನಕ ಭವನದ ವರೆಗೆ ಡಿ.ದೇವರಾಜ ಅರಸು ಅವರ ಭಾವಚಿತ್ರದ ಮೆರವಣಿಗೆ ಆಯೋಜಿಸಲಾಗಿತ್ತು. ಜಿಲ್ಲಾಧಿಕಾರಿ ವೈಶಾಲಿ ಎಂ.ಎಲ್. ಅವರು ಮೆರವಣಿಗೆಗೆ ಚಾಲನೇ ನೀಡಿದರು.




