ಗೋವಿನ ಜೋಳ ಖರೀದಿ ಕೇಂದ್ರ ಆರಂಭಿಸಲು ಒತ್ತಾಯಿಸಿ ಗದಗ ಜಿಲ್ಲೆಯ ಶಿರಹಟ್ಟಿ ತಾಲೂಕಿನ ಲಕ್ಷ್ಮೇಶ್ವರ ಪಟ್ಟಣದಲ್ಲಿ ರೈತ ಸಂಘಟನೆ ಹಾಗೂ ಪ್ರಗತಿಪರ ರೈತರು ಅಹೋರಾತ್ರಿ ಧರಣಿ ಸತ್ಯಾಗ್ರಹ ಆರಂಭಿಸಿದ್ದಾರೆ.
ನಗರದ ಸೋಮನಾಥ ದೇವಸ್ಥಾನದಿಂದ ಪಾದಯಾತ್ರೆ ಮುಖಾಂತರ ಅಹೋರಾತ್ರಿ ಹೋರಾಟಕ್ಕೆ ಚಾಲನೆ ನೀಡಿದ ರೈತರು, ಭಜಾರ ಲೈನ್ ಮುಖಾಂತರ ಲಕ್ಷ್ಮೇಶ್ವರ ಪಟ್ಟಣದ ಶಿಗ್ಲಿ ಕ್ರಾಸ್ ಬಳಿ ಸಾಂಕೇತಿಕವಾಗಿ ಗದಗ-ಲಕ್ಷ್ಮೇಶ್ವರ ರಸ್ತೆ ತಡೆ ನಡೆಸಿ ಪ್ರತಿಭಟನೆಗೆ ಮುಂದಾದರು.
ಈ ಭಾಗದ ರೈತರ ಗೋವಿನ ಜೋಳದ ಫಸಲು ಆರಂಭವಾಗಿ ಎರಡು ತಿಂಗಳು ಕಳೆದರೂ ಇನ್ನು ಖರೀದಿ ಕೇಂದ್ರ ಪ್ರಾರಂಭವಾಗಿಲ್ಲ, ಇದರಿಂದ ಈ ಭಾಗದ ರೈತರು ಸಂಕಷ್ಟಕ್ಕೆ ಸಿಲುಕುವಂತಾಗಿದೆ ಎಂದು ಆರೋಪಿಸಿದರು.
ರೈತ ಮುಖಂಡ ಟಾಕಪ್ಪ ಸಾತಪತಿ ಮಾತನಾಡಿ, “ಶಿರಹಟ್ಟಿ ಭಾಗದಲ್ಲಿ ಅತಿ ಹೆಚ್ಚು ಗೋವಿನ ಜೋಳ ಬೆಳೆಯನ್ನು ಬೆಳೆದಿದ್ದು ಖರೀದಿ ಕೇಂದ್ರ ಪ್ರಾರಂಭದ ನಿರೀಕ್ಷೆಯಲ್ಲಿದ್ದೇವೆ. ಮನೆಯಲ್ಲಿ ಸಂಗ್ರಹಿಸಿಟ್ಟ ಗೋವಿನ ಜೋಳಕ್ಕೆ ಕೀಟ ಕಾಟ ಪ್ರಾರಂಭವಾಗುವ ಮೊದಲು ಸರಕಾರ ಎಚ್ಚೆತ್ತುಕೊಂಡು ಖರೀದಿ ಕೇಂದ್ರ ಪ್ರಾರಂಭ ಮಾಡಬೇಕು. ರೈತರ ಆರ್ಥಿಕ ಸಂಕಷ್ಟಗಳನ್ನು ಬಂಡವಾಳ ಮಾಡಿಕೊಂಡ ಖಾಸಗಿ ವರ್ತಕರು ಹಾಗೂ ದಲ್ಲಾಳಿಗಳು ಗೋವಿನಜೋಳವನ್ನು 1,500ರೂ ಗಳಿಂದ 1.600 ರೂ. ಗಳವರೆಗೆ ಬೆಲೆ ನಿಗದಿ ಮಾಡಿ ರೈತರಿಗೆ ಮೋಸ ಮಾಡುತ್ತಿದ್ದಾರೆ. ಸರಕಾರ ಈ ಕೂಡಲೇ ಖರೀದಿ ಕೇಂದ್ರ ಪ್ರಾರಂಭ ಮಾಡುವವರೆಗೂ ನಾವು ಹೋರಾಟವನ್ನು ನಿಲ್ಲಿಸುವುದಿಲ್ಲ” ಎಂದು ಆಕ್ರೋಶ ವ್ಯಕ್ತಪಡಿಸಿದರು.
ಇದನ್ನೂ ಓದಿ: ಗದಗ | ಮಕ್ಕಳ ಆರೋಗ್ಯ, ಶಿಕ್ಷಣ ಪಾಲಕರ ಮೊದಲ ಆದ್ಯತೆಯಾಗಲಿ: ಡಾ. ಗೋಣೇಶ
ಇನ್ನು ಧರಣಿ ಸ್ಥಳಕ್ಕೆ ಶಿರಹಟ್ಟಿ-ಲಕ್ಷ್ಮೇಶ್ವರ ತಹಶೀಲ್ದಾರರು ಆಗಮಿಸಿ ರೈತರ ಮನವೊಲಿಸಲು ಪ್ರಯತ್ನ ಮಾಡಿದರು. ಆದರೆ ರೈತರು ಸರಕಾರದಿಂದ ಬೆಂಬಲ ಬೆಲೆಯಡಿ ಖರೀದಿ ಕೇಂದ್ರ ಪ್ರಾರಂಭವಾದ ನಂತರ ನಾವು ಮನೆಗೆ ಹೋಗುತ್ತೇವೆ, ಇಲ್ಲವಾದರೆ ಮುಂದಿನ ದಿನಗಳಲ್ಲಿ ಉಗ್ರ ಹೋರಾಟ ಮಾಡಬೇಕಾಗುತ್ತದೆ ಎಂದು ಎಚ್ಚರಿಸಿದರು.
ಧರಣಿಯಲ್ಲಿ ರೈತ ಮುಖಂಡರಾದ ಮಂಜುನಾಥ ಮಾಗಡಿ, ರವಿಕಾಂತ ಅಂಗಡಿ, ನಾಗಪ್ಪ ಚಂಚಲಿ, ಚನ್ನಪ್ಪ ಸಣ್ಣಕ್ಕಿ, ಬಸಪ್ಪ ಬೆಂಡಿಗೇರಿ, ಹೊನಪ್ಪ ಒಡ್ಡರ ಹಾಗೂ ಹಲವು ಮಂದಿ ರೈತರು ಭಾಗಿಯಾಗಿದ್ದರು.





