ಒಳ ಮೀಸಲಾತಿ ಜಾರಿಗೆ ಒತ್ತಾಯಿಸಿ ಮಾದಿಗ ಮತ್ತು ಮಾದಿಗ ಸಂಬಂಧಿತ ಜಾತಿಗಳ ಒಕ್ಕೂಟದಿಂದ ಬಂಡಾಯದ ನಾಡು ನರಗುಂದದಲ್ಲಿ ರಾಜ್ಯ ಹೆದ್ದಾರಿಯನ್ನು ತಡೆದು, ತಮಟೆ ಬಾರಿಸುವುದರ ಮೂಲಕ ಬೃಹತ್ ಪ್ರತಿಭಟನೆಯನ್ನು ಹಮ್ಮಿಕೊಂಡಿದ್ದು, ತಹಶಿಲ್ದಾರ ಮೂಲಕ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಿದರು.
ಈ ಸಂದರ್ಭದಲ್ಲಿ ಮಾದಿಗ ಸಮಾಜದ ಹಿರಿಯ ನಾಯಕ ವಸಂತ ಜೋಗಣ್ಣವರ್ ಮಾತನಾಡಿ, ಕೂಡಲೆ ಸರಕಾರ ಒಳ ಮೀಸಲಾತಿಯನ್ನು ಸಂಪೂರ್ಣ ಪ್ರಮಾಣದಲ್ಲಿ ಜಾರಿ ಮಾಡಬೇಕು. ಸದನದಲ್ಲಿ 56 ಸಾವಿರಕ್ಕೂ ಹೆಚ್ಚು ಹುದ್ದೆಗಳು ಭರ್ತಿಗೆ ಅನುಮೋದನೆ ಸಿಕ್ಕಿದ್ದು ಆ ಹುದ್ದೆಗಳನ್ನು ಒಳ ಮೀಸಲಾತಿಗೆ ಅನುಗುಣವಾಗಿ ತುಂಬಬೇಕು ಎಂದು ಹೇಳಿದರು.
ಮಾದಿಗ ಯುವ ಸೇನೆಯ ರಾಜ್ಯಾಧ್ಯಕ್ಷ ಸುರಕೋಡ್ ಮಾತನಾಡಿ, ಮಾದಿಗ ಮತ್ತು ಮಾದಿಗ ಸಂಬಂಧಿತ ಜಾತಿಗಳ ಜನರು ಅನಾದಿ ಕಾಲದಿಂದ ಅನ್ಯಾಯಕ್ಕೆ ಒಳಗಾಗುತ್ತಾ ಬಂದಿದ್ದಾರೆ. ರಾಜ್ಯದಲ್ಲಿ ಆಡಳಿತಕ್ಕೆ ಬರುವ ಸರ್ಕಾರಗಳು ಒಳ ಮೀಸಲಾತಿ ಜಾರಿ ಮಾಡುವಲ್ಲಿ ಧೋರಣೆಯನ್ನು ತೋರುತ್ತಿವೆ. ಆದ್ದರಿಂದ ಆಡಳಿತ ಪಕ್ಷ ಬೇಗನೆ ಎಚ್ಚೆತ್ತುಕೊಂಡು ಒಳ ಮೀಸಲಾತಿ ಅನುಗುಣವಾಗಿ ಹುದ್ದೆಗಳನ್ನು ಭರ್ತಿ ಮಾಡಬೇಕು ಎಂದು ಆಗ್ರಹಿಸಿದರು.
ಇದೇ ಸಂದರ್ಭದಲ್ಲಿ ದಲಿತ ಯುವ ಮುಖಂಡ ದತ್ತಾತ್ರೇಯ ಜೋಗಣ್ಣವರ್ ಮಾತನಾಡಿ, ಸರ್ಕಾರ ಒಳ ಮೀಸಲಾತಿಯಲ್ಲಿ ಮಾಡುತ್ತಿರುವ ಅನ್ಯಾಯವನ್ನು ಸರಿಪಡಿಸದೆ ಹೋದರೆ ಮುಂದಿನ ದಿನಮಾನಗಳಲ್ಲಿ ಸರ್ಕಾರದ ವಿರುದ್ಧ ತಮಟೆ ಚಳುವಳಿ ಮತ್ತು ಉಗ್ರ ಹೋರಾಟವನ್ನು ಹಮ್ಮಿಕೊಳ್ಳಲಾಗುದೆಂದು ಆಕ್ರೋಶ ಹೊರಹಾಕಿದರು.
ಇದನ್ನೂ ಓದಿ ಧಾರವಾಡ | ಮಾರ್ಚ್ 12ರಂದು ಡಾ. ದ.ರಾ.ಬೇಂದ್ರೆ ಗೀತೆಗಳ ಸಿಂಚನ ಕಾರ್ಯಕ್ರಮ
ಈ ಪ್ರತಿಭಟನೆಯಲ್ಲಿ ದುರ್ಗಪ್ಪ ಜೋಗನ್ನವರ್, ಸಣ್ಣದುರುಗಪ್ಪ ದಂಡಾಪುರ, ಲಕ್ಷ್ಮಣ್ ಮ್ಯಾಗೇರಿ, ಕಿರಣ್ ಜೋಗನ್ನವರ್, ಪ್ರಶಾಂತ್ ತಡಸಿ, ನವೀನ್ ಜೋಗನೂರ್, ಮಹಾಂತೇಶ ಪೂಜಾರ್, ಮಂಜುನಾಥ್ ಜೋಗನ್ನವರ್ , ದೇವರಾಜ್ ಮಾದರ್, ವೆಂಕಟೇಶ್ ಖಾನ್ ಪೇಟೆ, ಮಂಜುನಾಥ್ ದುತ್ತರಗಿ, ಸೋಮು ಮಾದರ, ಹಣಮಂತ್ ಮಾದರ್, ಅರ್ಜುನ್ ಮಾದರ್, ಈಶ್ವರ್ ಮ್ಯಾಗೇರಿ, ರಂಜಿತ್ ಹೊನಕೇರಿ ಹಾಗೂ ನರಗುಂದ ತಾಲೂಕಿನ ಮಾದಿಗ ಮತ್ತು ಮಾದಿಗ ಸಂಬಂಧಿತ ಸಮಾಜದ ಯುವಕರು, ಹಿರಿಯರು, ವಿದ್ಯಾರ್ಥಿಗಳು ಭಾಗಿಯಾಗಿದ್ದರು.
ವರದಿ: ಗುರುನಾಥ ಕೆಂಗಾರಕರ





