“ಶಿಕ್ಷಕರು, ಪೋಷಕರು ತಮ್ಮ ಮಕ್ಕಳ ಆಸಕ್ತಿ ಅಭಿರುಚಿ ಗುರುತಿಸಿ ಪ್ರೋತ್ಸಾಹ ನೀಡಿದರೇ ಮುಂದೆ ಜೀವನದಲ್ಲಿ ಮಹತ್ತರ ಸಾಧನೆ ಮಕ್ಕಳಿಂದ ಸಾಧ್ಯ” ಎಂದು ಕರ್ನಾಟಕ ವಿಧಾನ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ ಅವರು ಹೇಳಿದರು.
ಗದಗ ಪಟ್ಟಣದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಪುರಾತತ್ವ, ಸಂಗ್ರಹಾಲಯಗಳು ಮತ್ತು ಪರಂಪರೆ ಇಲಾಖೆ, ಪ್ರವಾಸೋದ್ಯಮ ಇಲಾಖೆ, ಶಾಲಾ ಶಿಕ್ಷಣ ಇಲಾಖೆ ಸಹಯೋಗದಲ್ಲಿ ಮಹಾತ್ಮ ಗಾಂಧಿ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ವಿಶ್ವವಿದ್ಯಾಲಯ ಗ್ರಾಮ ಗಂಗೋತ್ರಿಯಲ್ಲಿ “ಪ್ರಾಚ್ಯಪ್ರಜ್ಞೆ” ರಾಜ್ಯ ಮಟ್ಟದ ಸ್ಪರ್ಧೆ ಮತ್ತು ಸ್ಪರ್ಧಾ ವಿಜೇತರಿಗೆ ಬಹುಮಾನ ವಿತರಣೆ ಮಾಡಿ ಅವರು ಮಾತನಾಡಿದರು.
“ಬಾಲ್ಯದಿಂದಲೇ ಮಕ್ಕಳಿಗೆ ಶ್ರದ್ಧೆ ಶಿಸ್ತು ಕಲಿಸಬೇಕು. ಎಲ್ಲಿ ಹೇಗೆ ವರ್ತಿಸಬೇಕು ಎಂಬ ಕುರಿತು ತಿಳುವಳಿಕೆ ನೀಡಬೇಕು. ಅದು ಅವರ ಜೀವನದಲ್ಲಿ ಅಗಾದ ಬದಲಾವಣೆಗೆ ಕಾರಣವಾಗಲಿದೆ” ಎಂದು ಹೇಳಿದರು.
“ಶಿಲ್ಪಕಲೆಗಳು ನಮ್ಮ ದೇಶದ ಪರಂಪರೆಯನ್ನು ಬಿಂಬಿಸುತ್ತವೆ. ಅವುಗಳ ಉಳಿವಿಗೆ ಸರ್ಕಾರ ಸಹ ಪ್ರಯತ್ನ ನಡೆಸಿದ್ದು, ಸಾರ್ವಜನಿಕರ ಸಹಬಾಗಿತ್ವವು ಅಷ್ಟೇ ಪ್ರಮುಖ” ಎಂದರು.
“ಪ್ರಾಚ್ಯ ಪ್ರಜ್ಞೆ ಕಾರ್ಯಕ್ರಮದಲ್ಲಿ ಮಕ್ಕಳು ಭಾಷಣ, ಪ್ರಬಂಧ, ರಸಪ್ರಶ್ನೆ, ಚಿತ್ರಕಲೆ ಸ್ಪರ್ದೇಗಳಲ್ಲಿ ಪಾಲ್ಗೊಂಡು ತಮ್ಮಲ್ಲಿನ ಪ್ರತಿಭೆಯನ್ನು ಪ್ರದರ್ಶಿಸಿದ್ದಾರೆ. ಈ ಮೂಲಕ ಪ್ರಾಚ್ಯ ಶಿಲ್ಪ ಕಲೆಯ ಕುರಿತು ಅರಿವು ಹೊಂದಿದ್ದಾರೆ” ಎಂದು ಹೇಳಿದರು.
ಅವ್ವ ಟ್ರಸ್ಟ್ : ಪ್ರತಿ ವರ್ಷ ನಡೆಸುವ ಈ ಪ್ರಾಚ್ಯ ಪ್ರಜ್ಞೆ ಸ್ಪರ್ಧೆಗಳಲ್ಲಿ ಒಂದಾದ ಚಿತ್ರಕಲಾ ಸ್ಪರ್ಧೆಯಲ್ಲಿ ರಾಜ್ಯಕ್ಕೆ ಪ್ರಥಮ ಸ್ಥಾನ ಪಡೆಯುವ ಹೆಣ್ಣು ಮಗುವಿಗೆ ಪ್ರಶಸ್ತಿ ನೀಡಲು ಅವ್ವ ಟ್ರಸ್ಟ್ ವತಿಯಿಂದ 3 ಲಕ್ಷ ಅನುದಾನ ನೀಡುತ್ತೇನೆ. ಅದನ್ನು ಠೇವಣಿ ಇಟ್ಟು, ಅದರಿಂದ ಬರುವ ಬಡ್ಡಿ ಹಣದಿಂದ ಪ್ರಶಸ್ತಿಯನ್ನು ನೀಡಬೇಕು” ಎಂದು ಇದೆ ವೇಳೆ ಬಸವರಾಜ ಹೊರಟ್ಟಿ ನುಡಿದರು.
ಪುರಾತತ್ವ ಸಂಗ್ರಹಾಲಯಗಳು ಮತ್ತು ಪರಂಪರೆ ಇಲಾಖೆಯ ಆಯುಕ್ತ ದೇವರಾಜ್ ಎ ಮಾತನಾಡಿ, “ಸಚಿವರಾದ ಎಚ್ ಕೆ ಪಾಟೀಲ ಅವರು ಪ್ರವಾಸೋದ್ಯಮ ಇಲಾಖೆ ಸಚಿವರಾದ ಮೇಲೆ ಈ ಪುರಾತತ್ವ ಇಲಾಖೆಗೆ ಹೊಸ ಚೈತನ್ಯ, ರೂಪರೇಶ ನೀಡಿದ್ದಾರೆ. ರಾಜ್ಯದಲ್ಲಿ 25 ಸಾವಿರ ಸ್ಮಾರಕಗಳಿವೆ, ಇವುಗಳನ್ನು ಕೆಲವು ಎನ್ ಜಿ ಒ ದತ್ತು ಪಡೆದು ಅಭಿವೃದ್ಧಿ ಮಾಡಲು ಮುಂದೆ ಬಂದಿವೆ. ಅವರಿಗೆ ಧನ್ಯವಾದಗಳು” ಎಂದರು.
“ಈವರೆಗೆ ರಾಜ್ಯದಲ್ಲಿ 14450 ಗ್ರಾಮಗಳ ಸ್ಮಾರಕ ಶಿಲ್ಪಗಳ ಜಿಯೋ ಟ್ಯಾಗಿಂಗ್ ಮಾಡಲಾಗಿದೆ. ಇನ್ನು ಕಾರ್ಯ ನಿರಂತರ ನಡೆದಿದೆ. ಈ ಕಾರ್ಯ ಶೀಘ್ರದಲ್ಲೇ ಪೂರ್ಣಮಾಡುವ ಬಗ್ಗೆ ಕೆಲಸ ನಡೆದಿದೆ. ಪೂರ್ಣವಾದರೆ ದೇಶದಲ್ಲೇ ಜಿಯೊ ಟ್ಯಾಂಗಿಂಗ್ ಮಾಡಿದ ರಾಜ್ಯ ಕರ್ನಾಟಕ ಆಗುತ್ತದೆ. ಇದು ನಮ್ನ ಹೆಮ್ಮೆ” ಎಂದರು.
“ಜಿಯೊ ಟ್ಯಾಗಿಂಗ್ ಮಾಡಿದಲ್ಲಿ ಆ ಶಿಲ್ಪ ಒಂದು ವೇಳೆ ಹಾಳಾದರೆ ಅದನ್ನು ಪುನಃ ಸಿದ್ದಪಡಿಸಲು ಸಹಕಾರಿ ಆಗಿದೆ” ಎಂದು ಮಾಹಿತಿ ನೀಡಿದರು.
“ಮಕ್ಕಳಲ್ಲಿನ ಪ್ರತಿಭೆಯನ್ನು ಅನಾವರಣ ಮಾಡುವ ವೇದಿಕೆ ಪ್ರಾಚ್ಯ ಪ್ರಜ್ಞೆ ಸ್ಪರ್ಧೆ ಇದಾಗಿದೆ. ಪ್ರತಿ ತಾಲ್ಲೂಕಿಗೆ 20 ಸಾವಿರ ಪ್ರಾಚ್ಯ ಪ್ರಜ್ಞೆ ಸ್ಪರ್ದೆ ನಡೆಸಲು ನೀಡಲಾಗುತ್ತಿದೆ. ನಂತರ ಜಿಲ್ಲಾ ಮಟ್ಟದ ಸ್ಪರ್ದೇಗೆ 25-30 ಸಾವಿರ ನೀಡಿ, ರಾಜ್ಯಮಟ್ಟದ ಜಾಗೃತಿ ಮೂಡಿಸಲಾಗುತ್ತಿದೆ” ಎಂದು ತಿಳಿಸಿದರು.
ವಿವಿ ಕುಲಪತಿ ಪ್ರೊ. ಸುರೇಶ್ ನಾಡಗೌಡರ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರೋಹನ್ ಜಗದೀಶ್, ಆರ್ ಎಸ್ ಬುರಡಿ, ಡಾ. ಡಿ ಸ್ಮಿತಾ, ಡಾ. ಆರ್ ಶೇಜೇಶ್ವರ, ಡಾ. ಸಿ ಎನ್ ಮಂಜುಳಾ, ತಾರಕೇಶ್ ಟಿ ಹಾಜರಿದ್ದರು.
ಪ್ರೊ. ಬಾಹುಬಲಿ ಜೈನರ ಕಾರ್ಯಕ್ರಮ ನಿರ್ವಹಿಸಿದರು. ಲಕ್ಕುಂಡಿ ಪಾರಂಪರಿಕ ಪ್ರದೇಶ ಅಭಿವೃದ್ಧಿ ಪ್ರಾಧಿಕಾರ ಆಯುಕ್ತ ಡಾ. ಶರಣು ಗೊಗೇರಿ ವಂದಿಸಿದರು.





