ಅಂಗನವಾಡಿ ಹೊರವಲಯದಲ್ಲಿ ಇರುವದರಿಂದ ಅಂಗನವಾಡಿ ಸುತ್ತಲೂ ಮುಳ್ಳು ಕಂಟಿಗಳು ಹಾಗೂ ಹುಲ್ಲುಗಾವಲು ಬೆಳೆದು ಅಂಗನವಾಡಿ ಸುತ್ತಲೂ ಕ್ರಿಮಿ- ಕೀಟಗಳು, ವಿಷಜಂತೂಗಳು ಹಗಲು ರಾತ್ರಿ ಎನ್ನದೆ ಓಡಾಡುತ್ತಿವೆ ಇದರಿಂದ ಮಕ್ಕಳಿಗೆ ಸಮಸ್ಯೆ ಆಗುತ್ತಿದೆ ಎಂದು ಪೋಷಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಗದಗ ಜಿಲ್ಲೆಯ ಲಕ್ಷ್ಮೇಶ್ವರ ತಾಲೂಕಿನ ಸಂಕಧಾಳ ಗ್ರಾಮದ ಅಂಗನವಾಡಿ ಆವರಣ ಹಾಗೂ ಸುತ್ತಲೂ ಇರುವ ಜಾಗವನ್ನು ಅಭಿವೃದ್ಧಿ ಮಾಡದೇ ಪಂಚಾಯತ್ ಅಭಿವೃದ್ದಿ ಅಧಿಕಾರಿಗಳು ಹಾಗೂ ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳು ನಿರ್ಲಕ್ಷ್ಯ ವಹಿಸಿದ್ದಾರೆ. ಸುಮಾರು 4 ವರ್ಷಗಳ ಹಿಂದೆಯೇ ಗ್ರಾಮದ ಹೊರವಲಯದಲ್ಲಿ ನೂತನ ಅಂಗನವಾಡಿ ಕಟ್ಟಡ ನಿರ್ಮಾಣ ಮಾಡಿದ್ದಾರೆ. ಪೂರ್ಣ ಪ್ರಮಾಣದಲ್ಲಿ ಕಾಂಪೌಂಡ್ ಗೋಡೆ ನಿರ್ಮಾಣ ಆಗಿರುವುದಿಲ್ಲ. ಅಲ್ಲದೆ ಅಂಗನವಾಡಿ ಆವರಣದಲ್ಲಿ ಹಾಗೂ ಅದರ ಸುತ್ತಲೂ ಮುಳ್ಳು-ಕಂಟೆಗಳು ಬೆಳೆದುಕೊಂಡಿವೆ. ಇದರಿಂದ ಮಕ್ಕಳು ಅಲ್ಲಿ ಓಡಾಡಲು ಹಾಗೂ ಆಟ ಆಡಲು ಸಹ ಆಗುತ್ತಿಲ್ಲ. ಅಲ್ಲದೆ ಕ್ರಿಮಿ ಕೀಟಗಳು ಓಡಾಡುವ ಕಾರಣಕ್ಕಾಗಿ ಮಕ್ಕಳು ಸಹ ಶಾಲೆಗೆ ಬರಲು ಹಿಂಜರಿಯುತ್ತಿದ್ದಾರೆ” ಎಂದು ಆರೋಪಿಸಿದರು.
ಈ ವಿಚಾರವಾಗಿ ಆದರಹಳ್ಳಿ ಗ್ರಾಮ ಪಂಚಾಯತ ಹಿಂದಿನ ಅಭಿವೃದ್ಧಿ ಅಧಿಕಾರಿಗಳಾದ ಶ್ರೀ ಹಂದಿಗನೂರು ಹಾಗೂ ತಾಲೂಕ ಹಾಗೂ ಜಿಲ್ಲಾ ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳು ಇವರಿಗೆ ಹಲವಾರು ಭಾರಿ ನೇರವಾಗಿ ಹಾಗೂ ಫೋನ್ ಮುಖಾಂತರ ಮನವಿ ಮಾಡಿದರು ಯಾವುದೇ ಅಭಿವೃದ್ಧಿ ಕಾರ್ಯಗಳನ್ನು ಮಾಡದೇ ಸರ್ಕಾರದಲ್ಲಿ ದುಡ್ಡು ಇಲ್ಲಾ ನೋಡೋಣ, ಮಾಡೋಣ ಎಂಬ ಉಡಾಫೆಯ ಮಾತುಗಳನ್ನು ಆಡುತ್ತಾರೆ” ಎಂದು ಮೈಲಾರಪ್ಪ ಅವರು ಅಸಮಾಧಾನ ವ್ಯಕ್ತಪಡಿಸಿದರು.
ಇದನ್ನೂ ಓದಿ: ಗದಗ | ಸಂವಿಧಾನ ಕುರಿತು ರಸಪ್ರಶ್ನೆ ಸ್ಪರ್ಧೆ
ಈ ಕೂಡಲೇ ಸಂಬಂಧಪಟ್ಟ ಅಧಿಕಾರಿಗಳು ಆದ್ಯತೆ ಮೇರೆಗೆ ಸಮಸ್ಯೆಗೆ ಶಾಶ್ವತ ಪರಿಹಾರ ಕಲ್ಪಿಸಬೇಕು. ಅಂಗನವಾಡಿ ಸುತ್ತ ಬೆಳೆದಿರುವ ಅನಗತ್ಯ ಕಳೆಯನ್ನು ತೆರವುಗೊಳಿಸಿ, ಚಿಕ್ಕ ಮಕ್ಕಳು ನಿರ್ಭಯವಾಗಿ ಓಡಾಡಲು ಅನುಕೂಲ ಮಾಡಿಕೊಡಬೇಕು ಎಂದು ಗ್ರಾಮಸ್ಥರು ಮನವಿ ಮಾಡಿದ್ದಾರೆ.





