ಬೆಳೆದ ಬೆಳೆಗೆ ಸೂಕ್ತ ಬೆಲೆ ಇಲ್ಲದೆ ಮನನೊಂದ ರೈತ ತಾನು ಬೆಳೆದ ಉಳ್ಳಾಗಡ್ಡಿ ಬೆಳೆಯನ್ನೇ ಟ್ರ್ಯಾಕ್ಟರ್ ಮೂಲಕ ನಾಶ ಮಾಡಿರುವ ಘಟನೆ ಗದಗ ಜಿಲ್ಲೆಯ ರೋಣ ತಾಲ್ಲೂಕಿನ ಗುಜಮಾಗಡಿ ಗ್ರಾಮದಲ್ಲಿ ನಡೆದಿದೆ.
ಗ್ರಾಮದ ಯುವ ರೈತ ಸಂಗಪ್ಪ ಮರಿತಿಮ್ಮಪ್ಪ ಹೂಗಾರ್ ತಮ್ಮ ಎರಡು ಎಕ್ಕರೆ ಇಪ್ಪತ್ತು ಗುಂಟೆ ಜಮೀನಿನಲ್ಲಿ ಉಳ್ಳಾಗಡ್ಡಿ ಬೆಳೆ ಬೆಳೆದಿದ್ದ. ಮಾರುಕಟ್ಟೆಯಲ್ಲಿ ಉಳ್ಳಾಗಡ್ಡಿ ಬೆಲೆ ಗಣನೀಯವಾಗಿ ಕುಸಿತವಾಗಿದ್ದರಿಂದ ಬೇಸರಗೊಂಡು ಉಳ್ಳಾಗಡ್ಡಿ ಬೆಳೆಯನ್ನು ಟ್ರಾಕ್ಟರ್ ಮೂಲಕ ಹರಗಿದ್ದಾನೆ.
ಈ ಸುದ್ದಿ ಓದಿದ್ದೀರಾ? ಗದಗ | ಸಿ.ಸಿ. ರಸ್ತೆ ಕಳಪೆ ಕಾಮಗಾರಿ: ಎಸ್ ಡಿ ಪಿ ಐ ಆರೋಪ
“ಮಾರುಕಟ್ಟೆಯಲ್ಲಿ ಕ್ವಿಂಟಾಲ್ ಉಳ್ಳಾಗಡ್ಡಿಗೆ 500-600 ರೂ. ಇದೆ. ಎರಡು ಎಕರೆ ಈರುಳ್ಳಿ ಬೆಳೆಯಲು 15-20 ಸಾವಿರ ರೂ.ಗೂ ಅಧಿಕ ಹಣ ಖರ್ಚಾಗಿದೆ. ಸದ್ಯ ಬೆಳೆ ಕಟಾವಿಗೆ ಬಂದಿದ್ದು, ಕಟಾವು ಮಾಡಲು 20 ಸಾವಿರ ರೂ. ವೆಚ್ಚವಾಗಲಿದೆ. ಆದರೆ, ಮಾರುಕಟ್ಟೆಯಲ್ಲಿ ಸೂಕ್ತ ಬೆಲೆ ಇಲ್ಲ. ಇತ್ತ ಚಿಲ್ಲರೆ ವ್ಯಾಪಾರಿಗಳು 25-30 ರೂ.ವರಗೆ ಕೆ.ಜಿ. ಈರುಳ್ಳಿ ಮಾರಾಟ ಮಾಡುತ್ತಿದ್ದು ಲಾಭ ಗಳಿಸುತ್ತಿದ್ದಾರೆ. ಆದರೆ, ರೈತರಿಗೆ ಮಾತ್ರ ಬೆಲೆ ದೊರೆಯುತ್ತಿಲ್ಲ. ಇದರಿಂದ ಈರುಳ್ಳಿ ಬೆಳೆಗಾರರು ಕಂಗಾಲಾಗಿದ್ದಾರೆ. ಬಂದ ಬೆಳೆ ಮಾರಾಟ ಮಾಡಿದರೆ, ಕೂಲಿ ಮೊತ್ತವೂ ದೊರೆಯದ ಪರಿಸ್ಥಿತಿ ನಿರ್ಮಾಣವಾಗಿದೆ. ಹರಗಿದಲ್ಲಿ ಹೊಲಕ್ಕೆ ಗೊಬ್ಬರವಾದರೂ ಆಗಲಿದೆ” ಎಂದು ಬೆಳೆ ನಾಶಪಡಿಸಿರುವುದಾಗಿ ರೈತ ಸಂಗಪ್ಪ ಅಳಲು ತೋಡಿಕೊಂಡಿದ್ದಾರೆ.





