“ದೇಶಕ್ಕೆ SIR ಅಪಾಯಕಾರಿ ಎಂದು ಸಾಬೀತು ಪಡಿಸುತ್ತಲೇ ಬರುತ್ತಿದೆ. ಇತ್ತ ಗುಜರಾತ್ ಹಾಗೂ ಲಕ್ಷದ್ವೀಪ ಮತ್ತು ಪಾಂಡಿಚೇರಿಯಲ್ಲಿ SIR ಬಳಿಕ 69 ಲಕ್ಷ ಮತದಾರರನ್ನು ಪಟ್ಟಿಯಿಂದ ತೆಗೆದುಹಾಕಲಾಗಿದೆ. ಹೀಗೆ ತೆಗೆದು ಹಾಕಲಾದ ಮತದಾರರು ಯಾರು…? ಯಾವ ಧರ್ಮದವರು ಎಂಬುದು ಗೊತ್ತಾಗಿಲ್ಲ. ಅವೆಲ್ಲವೂ ದೊಡ್ಡ ಪ್ರಮಾಣದ ಅಲ್ಪಸಂಖ್ಯಾತರ ಮತದಾರರೇ ಆಗಿರುತ್ತಾರೆ” ಎಂದು ದಲಿತ ಹೋರಾಟಗಾರ ಮುತ್ತು ಬಿಳಿಯಲಿ ಆರೋಪಿಸಿದರು.
ಗದಗ ಪಟ್ಟಣದಲ್ಲಿ ಮಾತನಾಡಿದ ಅವರು, “ಇತ್ತ ಪಶ್ಚಿಮ ಬಂಗಾಳದದಲ್ಲಿ ಏನಾದರೂ ಮಾಡಿ SIR ಜಾರಿಗೆ ಕುರಿತು ಕೇಂದ್ರ ಸರ್ಕಾರದ ಅಣತಿಯಂತೆ ನಡೆದುಕೊಳ್ಳುತ್ತಿರುವ ಕೇಂದ್ರ ಚುನಾವಣಾ ಆಯೋಗ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ್ದಾರೆ. ಸ್ವತ ಮುಖ್ಯಮಂತ್ರಿಯಾದ ಮಮತಾ ಬ್ಯಾನರ್ಜಿ ಅವರು ತಮ್ಮ ರಾಜ್ಯದ ಅಹಿಂದ ಮತದಾರರನ್ನು ರಕ್ಷಿಸಿಕೊಳ್ಳಲು ಸುಪ್ರೀಂ ಕೋರ್ಟ್ ನಲ್ಲಿ ವಾದ ಮಾಡಿದ್ದಾರೆ” ಎಂದರು.
“ಶುಕ್ರವಾರ ಸುಪ್ರೀಂಕೋರ್ಟ್ ಪಶ್ಚಿಮ ಬಂಗಾಳದಲ್ಲಿ SIR ಜಾರಿಗಾಗಿ ಚುನಾವಣೆ ಆಯೋಗಕ್ಕೆ ನೆರವಾಗಲು ಹೈಕೋರ್ಟ್ ನಿವೃತ್ತ ನ್ಯಾಯಮೂರ್ತಿ ಹಾಗೂ ಹಾಲಿ ನ್ಯಾಯಾಧೀಶರನ್ನು ನಿಯೋಜಿಸುವಂತೆ ಅಪರೂಪದ ತೀರ್ಪು ನೀಡಿದೆ” ಎಂದು ಹೇಳಿದರು.
“ಇತ್ತ ನಮ್ಮ ಕರ್ನಾಟಕ ರಾಜ್ಯದಲ್ಲಿ SIR ಕುರಿತು ಮೃದು ಧೋರಣೆ ತೋರಿದ್ದ ಕಾಂಗ್ರೆಸ್ ನೇತೃತ್ವದ ರಾಜ್ಯ ಸರ್ಕಾರ ಕಳೆದ ಸಚಿವ ಸಂಪುಟದಲ್ಲಿ SIR ಕುರಿತು ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ. ಈ ಕುರಿತು ಅಧ್ಯಯನ ನಡೆಸಿ ವರದಿ ನೀಡುವಂತೆ ಕಾನೂನು ಇಲಾಖೆಗೆ ಸೂಚಿಸಲು ಸಚಿವ ಸಂಪುಟ ಸಭೆಯಲ್ಲಿ ತೀರ್ಮಾನ ಕೈಗೊಳ್ಳಲಾಗಿದೆ” ಎಂದು ತಿಳಿಸಿದರು.
“ಒಟ್ಟಾರೆ ದೇಶದ ವಿವಿಧ ರಾಜ್ಯಗಳಲ್ಲಿ ನಡೆದ SIR ಪ್ರಕ್ರಿಯೆ ನೋಡಿಕೊಂಡು ನಮ್ಮ ರಾಜ್ಯ ಸರ್ಕಾರ ಅಸಲಿ ಮತದಾರರನ್ನು ಪಟ್ಟಿಯಿಂದ ತೆಗೆದು ಹಾಕದ ಹಾಗೆ ನೋಡಿಕೊಳ್ಳಬೇಕು” ಎಂದು ಸರಕಾರಕ್ಕೆ ಮನವಿ ಮಾಡಿದ್ದಾರೆ.





