“ಬಹುತ್ವವೇ ಜೀವಾಳ ಆಗಿರುವ ಭಾರತವನ್ನು ಹಿಂದುತ್ವವಾದದ ಮೂಲಕ ಏಕ ಧರ್ಮವನ್ನು ಹೇರುವ ಕನಸಿನಲ್ಲಿ ಮುನ್ನಡೆಯುತ್ತಿರುವ ಆರ್ಎಸ್ಎಸ್ ಗೆ ಈಗ ಶತಮಾನ. ಈ ಹೊತ್ತಿನಲ್ಲಿ ಅದು ತಾನು ಮತ್ತು ತನ್ನ ಅಂಗ ಸಂಸ್ಥೆಗಳ ಮೂಲಕ ನಡೆಸಿಕೊಂಡು ಬಂದಿರುವ ಚಟುವಟಿಕೆಗಳನ್ನು ಅವಲೋಕಿಸಿದರೆ ಜನರನ್ನು ಭಾವನಾತ್ಮಕವಾಗಿ ಸೆಳೆದು ಧರ್ಮಾಧಾರಿತ ವಿಭಜನೆಯನ್ನು ನಿರಂತರವಾಗಿ ನಡೆಸಿಕೊಂಡು ಬರುತ್ತಿದೆ. ಸರಕಾರ ಸಾರ್ವಜನಿಕ ಸ್ಥಳಗಳಲ್ಲಿ ಆರ್ ಎಸ್ ಎಸ್ ಚಟುವಟಿಕೆಗಳಿಗೆ ನಿರ್ಬಂಧ ಮಾಡಿರುವ ಪ್ರಸ್ತಾಪ ಸಿಪಿಐಎಂ ಸ್ವಾಗತಸುತ್ತದೆ” ಸಿಪಿಐಎಂ ಪಕ್ಷದ ಜಿಲ್ಲಾ ಕಾರ್ಯದರ್ಶಿ ಬಾಲು ರಾಠೋಡ ಹೇಳಿದ್ದಾರೆ.
ಗದಗ ಜಿಲ್ಲೆಯ ಗಜೇಂದ್ರಗಡ ಪಟ್ಟಣದಲ್ಲಿ ಅವರು ಪತ್ರಿಕಾ ಹೇಳಿಕೆ ನೀಡಿದ್ದು, “ಎಳೆ ಮಕ್ಕಳನ್ನು ಕೇಂದ್ರೀಕರಿಸಿಕೊಂಡು ಅವರು ನಡೆಸುವ ಚಟುವಟಿಕೆಗಳು ಭವಿಷ್ಯದ ಭಾರತವನ್ನು ಕೋಮುದ್ವೇಷದ ಜ್ವಾಲಾಮುಖಿಯಾಗಿ ಮಾರ್ಪಡಿಸುವುದರಲ್ಲಿ ಸಂಶಯವಿಲ್ಲ” ಎಂದು ಹೇಳಿದ್ದಾರೆ.
“ಜನರ ಮನಸ್ಸಿನಲ್ಲಿ ಕೋಮುವಿಷಬೀಜ ಬಿತ್ತುವ ಉದ್ದೇಶದಿಂದಲೇ ಆಡಳಿತದ ಎಲ್ಲ ವಿಭಾಗಗಳಲ್ಲಿ ತನ್ನ ಸಿದ್ದಾಂತವನ್ನು ಅಂತರಂಗದಲ್ಲಿ ಬೆಂಬಲಿಸುವವರನ್ನು ತೂರಿಸಿರುವ ಸಂಘ ನೆಲದ ಕಾನೂನನ್ನು ಕಾಲಕಸದಂತೆ ಪರಿಗಣಿಸುತ್ತಿದೆ. ತಾನೊಂದು ಸಾಂಸ್ಕೃತಿಕ ಸಂಘಟನೆ ಎಂದು ಕರೆದುಕೊಳ್ಳುವ ಆದರೆ ದೇಶದ ರಾಜಕಾರಣವನ್ನು ತನಗೆ ಬೇಕಾದ ಹಾಗೆ ನಿಯಂತ್ರಿಸುವ ಮತ್ತು ದ್ವೇಷ ರಾಜಕಾರಣವನ್ನು ಮುಂದೊತ್ತುತ್ತಿರುವ ಸಂಗತಿ ಜಗಜ್ಜಾಹಿರವಾಗಿದೆ” ಎಂದು ಹೇಳಿದ್ದಾರೆ.
“ಬೆಂಗಳೂರಿನಲ್ಲಿ ಸಾರ್ವಜನಿಕ ಸ್ಥಳಗಳಲ್ಲಿ ಪ್ರತಿಭಟನೆ, ಮೆರವಣಿಗೆಗಳನ್ನು ನಡೆಸಲು ನಿರ್ಬಂಧವಿದೆ. ಇದಕ್ಕೆ ತಡೆ ಒಡ್ಡುವ, ಪ್ರಕರಣ ದಾಖಲಿಸುವ ನಗರ ಪೊಲೀಸ್ ಇಲಾಖೆ ಆರ್ಎಸ್ಎಸ್ಗೆ ಪಥಸಂಚಲನಕ್ಕೆ ಅನುಮತಿ ನೀಡಿ ಸಂಚಾರ ನಿರ್ಬಂಧ ಹೇರಿ ಪೊಲೀಸ್ ಬಂದೋಬಸ್ತಿನಲ್ಲಿ ನಡೆಸಿಕೊಟ್ಟ ಘಟನೆ ನಡೆದಿದೆ.
ರಾಜ್ಯದಲ್ಲಿ ಸರಕಾರ ಇದೆಯೋ, ಇಲ್ಲವೋ ಎಂಬಂತಹ ಸ್ಥಿತಿ ಇದೆ” ಎಂದು ಕಿಡಿಕಾರಿದರು.
“ಈ ಮೊದಲೂ ಪೆಹಲ್ಗಾಮ್ ದುರಂತದ ವಿರುದ್ಧ ಇತರ ಸಂಘಟನೆಗಳಿಗೆ ಖಂಡನಾ ಸಭೆ ಶಾಂತಿ ಸಭೆ ನಡೆಸಲು ಅವಕಾಶ ನಿರಾಕರಿಸಿ ಸಂಘದ ಸದಸ್ಯರೂ ಇರುವ ಭಾರತೀಯ ಜನತಾ ಪಕ್ಷದ ನಾಯಕರುಗಳೇ ಭಾಗವಹಿಸಿ ಪ್ರಚೋದನಕಾರಿ ಹೇಳಿಕೆಗಳನ್ನು ಮಾಡಿದ ಘಟನೆಯೂ ನಡೆದಿದೆ” ಎಂದಿದ್ದಾರೆ.
“ಇವೆಲ್ಲವನ್ನೂ ಸರಕಾರ ಮತ್ತು ಸಮಾಜ ಗಂಭೀರವಾಗಿ ಪರಿಗಣಿಸಿ ರಾಷ್ಟ್ರೀಯ ಸ್ವಯಂ ಸೇವಕ ಸಂಘ ಪ್ರತಿಪಾದಿಸುವ ದ್ವೇಷ ರಾಜಕಾರಣವನ್ನು ಹಿಮ್ಮೆಟ್ಟಿಸಲು ಕಂಕಣಬದ್ಧವಾಗಬೇಕು. ಸಹಬಾಳ್ವೆಯ ಸಾಮರಸ್ಯದ ಮೌಲ್ಯಗಳನ್ನು ಸ್ಥಿರವಾಗಿಸಲು ಜನರನ್ನು ಅಣಿನೆರೆಸಬೇಕೆಂದು ಕರೆ ನೀಡುತ್ತದೆ” ಎಂದು ಪತ್ರಿಕಾ ಹೇಳಿಕೆ ತಿಳಿಸಿದ್ದಾರೆ.





