“ಸಮಾಜದ ಸೌಹಾರ್ದ ಕದಡುವ, ಲಾಠಿ ಹಿಡಿದುಕೊಂಡು ಸಮಾಜದಲ್ಲಿ ಭಯ ಹುಟ್ಟಿಸುವ ಸಂಘಟನೆಗಳನ್ನು ನಿಷೇದ ಮಾಡುವಂತ ಕೆಲಸ ಕೇಂದ್ರ ಸರಕಾರಕ್ಕೆ ಇದೆ. ಹಿಂದೆ ಸರ್ದಾರ್ ವಲ್ಲಭಾಯಿ ಪಟೇಲ್ ಅವರು ನಿಷೇದ ಮಾಡಿದ್ದು ಅದರಿಂದ ಪಾರಾಗಿ ಬಂದ ಆರ್ ಎಸ್ ಎಸ್ ಧಾರ್ಮಿಕವಾಗಿ ಏನು ಮಾಡುತ್ತಿಲ್ಲ, ಇವತ್ತು ಸಮಾಜದಲ್ಲಿ ಸೌಹಾರ್ದ ಕದಡುವ ಕೆಲಸ ಮಾಡುತ್ತಿದೆ. ಹೀಗಾಗಿ ರಾಜ್ಯ ಸರಕಾರದ ವ್ಯಾಪ್ತಿಯಲ್ಲಿ ಸಾಧ್ಯತೆಗಳನ್ನು ಬಳಸಿಕೊಂಡು ಆರ್ ಎಸ್ ಎಸ್ ಚಟುವಟಿಕೆಗಳನ್ನು ನಿರ್ಬಂಧಿಸಬೇಕು” ಎಂದು ಪ್ರಗತಿಪರ ಚಿಂತಕ ಬಸವರಾಜ ಸೂಳಿಬಾವಿ ಒತ್ತಾಯಿಸಿದರು.
ಗದಗ ಪಟ್ಟಣದ ಪತ್ರಿಕಾ ಭವನದಲ್ಲಿ ಭಯೋತ್ಪದನಾ ಸಂಘಟನೆ ಆರ್ ಎಸ್ ಎಸ್ ಸಂಘಟನೆಯನ್ನು ಕರ್ನಾಟಕದಲ್ಲಿ ನಿಷೇದ ಮಾಡುವ ಕುರಿತು ಇಂದು ಪತ್ರಿಕಾ ಗೋಷ್ಠಿಯಲ್ಲಿ ಮಾತನಾಡಿದರು.
“ಆರ್ ಎಸ್ ಎಸ್ ಸಂಘಟನೆ ಹುಟ್ಟಿ ನೂರು ವರ್ಷ ಆಗಿದೆ. ನೂರು ವರ್ಷ ಪೂರೈಸಿದ ಈ ಸಂಘಟನೆ ಯಾಕೆ ಇನ್ನೂ ನೋಂದಣಿ ಆಗಿಲ್ಲ ಎಂಬ ಪ್ರಶ್ನೆ ಬರುತ್ತದೆ. ಈ ದೇಶದ ಸಹಕಾರಿ ಇಲಾಖೆ ಕಾಯ್ದೆ ಅನುಗುಣವಾಗಿ ಈ ಸಂಸ್ಥೆ ನೋಂದಣಿ ಆಗಬೇಕಿತ್ತು, ಇದುವರೆಗೂ ಆಗಿಲ್ಲ. ಹಾಗಾಗಿ ಈ ದೇಶದ ಸಹಕಾರಿ ಕಾಯ್ದೆಗಳ ಅಡಿಯಲ್ಲಿ ಈ ಆರ್ ಎಸ್ ಎಸ್ ಸಂಘಟನೆ ಬರುವುದಿಲ್ಲ” ಎಂದು ಹೇಳಿದರು.
“ಈ ದೇಶಕ್ಕಿಂತ ನಾನೇ ಶ್ರೇಷ್ಠ ಅನ್ನೋ ಭಾವನೆ ಆರ್ ಎಸ್ ಎಸ್ ಸಂಘಟನೆ ಹೊಂದಿದೆ. ಹೀಗಾಗಿ ಈ ದೇಶದ ಸಂವಿಧಾನಕ್ಕೆ, ಕಾಯ್ದೆಗಳಿಗೆ ಅಗೌರವ ತೋರುವ ಕಾರಣಕ್ಕೆ ಆರ್ ಎಸ್ ಎಸ್ ಸಂಘಟನೆ ಇಲ್ಲಿವರೆಗೂ ನೋಂದಣಿಯಾಗಿಲ್ಲ. ಸಂಸ್ಥೆಗೆ ಎಲ್ಲಿಂದ ಹಣ ಬರುತ್ತೆ, ಎಲ್ಲಿ ಹೋಗುತ್ತೆ, ಎಷ್ಟು ಖರ್ಚು ಆಯ್ತು ಎಂಬುದನ್ನು ಸಾರ್ವಜನಿಕವಾಗಿ ಬಹಿರಂಗ ಪಡಿಸುವುದಿಲ್ಲ. ಯಾಕೆಂದರೆ ಈ ದೇಶದ ಸಹಕಾರಿ ಇಲಾಖೆ ಕಾಯ್ದೆ ಅಡಿಯಲ್ಲಿ ನೋಂದಣಿ ಆಗಿಲ್ಲ ಎಂಬುದು ಗೊತ್ತಾಗುತ್ತದೆ” ಎಂದು ಹೇಳಿದರು.
“ಈ ದೇಶದ ರಾಷ್ಟ್ರಧ್ವಜವನ್ನೇ ಆರ್ ಎಸ್ ಎಸ್ ಒಪ್ಪಿಕೊಂಡಿಲ್ಲ. ತಮ್ಮದೇ ಆದ ಲಾಂಛನವನ್ನು ಹೊಂದಿದೆ. ಇಡೀ ರಾಜ್ಯದ್ಯಂತ ಪಥಸಂಚಲನ ಮಾಡಿದರೂ ಎಲ್ಲೂ ರಾಷ್ಟ್ರಧ್ವಜ ಕಾಣುವುದಿಲ್ಲ. ರಾಷ್ಟ್ರಧ್ವಜಕ್ಕಿಂತ, ಸಂವಿಧಾನಕ್ಕಿಂತ, ಸರಕಾರಕ್ಕಿಂತ, ಕಾಯ್ದೆಗಳಿಗಿಂತ ದೊಡ್ಡದು ಎಂಬ ಆರ್ ಎಸ್ ಎಸ್ ಧೋರಣೆಯನ್ನು ಪ್ರಶ್ನೆ ಮಾಡಬೇಕಿದೆ” ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.
“ಸಚಿವ ಪ್ರಿಯಾಂಕ ಖರ್ಗೆ ಅವರು ಬರೆದ ಪತ್ರದಲ್ಲಿ ‘ಆರ್ ಎಸ್ ಎಸ್ ನಿಷೇದ ಮಾಡಿ ಎಂಬುದಿಲ್ಲ. ಸಾರ್ವಜನಿಕ ಸ್ಥಳ, ಶಾಲೆ, ಮೈದಾನಗಳಲ್ಲಿ ಚಟುವಟಿಕೆಗಳಿಗೆ ನಿರ್ಬಂಧಿಸಬೇಕು’ ಎಂದಿದ್ದಾರೆ. ಹೀಗೆ ಹೇಳಿದ್ದಕ್ಕೆ ವೈಯಕ್ತಿಕ ದಾಳಿ, ನಿಂದನೆ ಮಾಡುತ್ತಿದ್ದಾರೆ. ಇದು ಸಂವಿಧಾನ ವಿರೋಧಿ ನಡೆಯಾಗಿದೆ” ಎಂದು ಕಿಡಿಕಾರಿದರು.
“ಈ ದೇಶದ ಪ್ರಜೆಗಳಾದ ನಾವು ಈ ದೇಶದ ಎಲ್ಲ ಕಾಯ್ದೆಗಳನ್ನು ಸಂವಿಧಾನಕ್ಕೆ ಒಪ್ಪಿತ ಕೆಲಸ ಮಾಡಬೇಕು. ಎಲ್ಲ ಸಂಘಟನೆಗಳು ಸಂವಿಧಾನದ ಅಡಿಯಲ್ಲಿ ಕಾರ್ಯನಿರ್ವಹಿಸಬೇಕು. ಸರಕಾರದಿಂದ, ಸಂವಿಧಾನದಿಂದ ಆಚೆ ಇರುತ್ತೇನೆ ಎನ್ನುವ ಧೋರಣೆ ದೇಶದ್ರೋಹಿ ಕೆಲಸ ಆಗುತ್ತದೆ. ದೇಶದ್ರೋಹ ಪಟ್ಟ ಹೊರುವುದಾದರೆ ಈ ಆರ್ ಎಸ್ ಎಸ್ ಸಂಘಟನೆ ಮೇಲೆ ಕ್ರಮ ಕೈಗೊಳ್ಳಬೇಕು” ಎಂದು ಕಿಡಿಕಾರಿದರು.
ಈ ಸುದ್ದಿ ಓದಿದ್ದೀರಾ? RSS ನಿಷೇಧ; ಪ್ರಿಯಾಂಕ್ ಖರ್ಗೆ ಹೇಳುವುದರಲ್ಲಿ ತಪ್ಪೇನಿದೆ: ಸಿಎಂ ಸಿದ್ದರಾಮಯ್ಯ
“ರಾಜ್ಯದಾದ್ಯಂತ ಸಾರ್ವಜನಿಕ ಸ್ಥಳಗಳಲ್ಲಿ ಲಾಠಿ ಹಿಡಿದುಕೊಂಡು ಆರ್ ಎಸ್ ಎಸ್ ಪಥಸಂಚಲನ ಮಾಡಿದರೆ ಅಡೆತಡೆ ಆಗುವುದಿಲ್ಲ. ಆದರೆ, ಜನರ ಸಮಸ್ಯೆಗಳಿಗಾಗಿ ಪ್ರಗತಿಪರ ಸಂಘಟನೆಗಳು ಹೋರಾಟ ಮಾಡಿದರೆ ಅಡತಡೆ ಆಗುತ್ತದೆ. ಇದನ್ನು ಹೈಕೋರ್ಟ್ ಗಮನಿಸಬೇಕು. ಕರ್ನಾಟಕದಲ್ಲಿ ಸಾರ್ವಜನಿಕ ಸ್ಥಳಗಳಲ್ಲಿ ಎಲ್ಲ ಸಂಘಟನೆಗಳಿಗೆ ಧಾರ್ಮಿಕ ಪ್ರಚಾರ ಮಾಡಲು ಅವಕಾಶವಿಲ್ಲ ಎಂದು ಆದೇಶ ಹೊರಡಿಸಬೇಕು. ಹೋರಾಟಕ್ಕೆ ಪ್ರೀಡಂಪಾರ್ಕ್ ಸ್ಥಳವನ್ನು ಸೂಚಿಸಿದ್ದಾರೆಯೋ ಹಾಗೆಯೇ ಈ ಸಂಘಟನೆಗಳಿಗೆ ಸ್ಥಳ ನಿಗದಿಪಡಿಸಬೇಕು” ಎಂದು ಬಸವರಾಜ ಸೂಳಿಬಾವಿ ಹೇಳಿದರು.
ಲಿಂಗಾಯುತ ಮುಖಂಡರು ಅಶೋಕ ಬರಗುಂಡಿ ಅವರು ಮಾತನಾಡಿದರು. ಪತ್ರಿಕಾ ಗೋಷ್ಠಿಯಲ್ಲಿ ದಲಿತಪರ ಮುಖಂಡರು ಡಿ. ಕೆ. ಪೂಜಾರ, ಮುತ್ತು ಬಿಳಿಯಲಿ, ಬಾಲರಾಜ್ ಅರಬರ, ಆನಂದ ಶಿಂಗಾಡಿ, ಯಲ್ಲಪ್ಪ ರಾಮಗಿರಿ, ಪರಶು ಕಾಳೆ ಅನಿಲ ಕಾಳೆ, ಶಿವಾನಂದ ತಮ್ಮಣ್ಣವರ, ಬಸು ಬಿಳಿಯಲಿ ಉಪಸ್ಥಿತರಿದ್ದರು.





