“ಹೆಸರಿಗಷ್ಟೇ ಸಹಮಿಲನ ಕಾರ್ಯಕ್ರಮ. ಆದರೆ ಆರ್.ಎಸ್.ಎಸ್ ಸಿದ್ಧಾಂತ ತತ್ವಗಳನ್ನು, ಹಿಂದುತ್ವ ವಿಚಾರಗಳನ್ನು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ದುರ್ಬಳಕೆ ಮಾಡಿಕೊಂಡು ಅಂಗನವಾಡಿ ಶಿಕ್ಷಕಿಯರ ತಲೆಗೆ ತುಂಬಿ, ಆರ್.ಎಸ್.ಎಸ್ ಪ್ರಚಾರ ಮಾಡಲು ಸರ್ಕಾರಿ ಶಿಕ್ಷಕಿಯರನ್ನು ದುರ್ಬಳಕೆ ಮಾಡಿಕೊಳ್ಳುತ್ತಿದ್ದಾರೆ” ಎಂದು ದಲಿತ ಹೋರಾಟಗಾರ ಮುತ್ತು ಬಿಳಿಯಲಿ ಆರೋಪಿಸಿದರು.
ಗದಗ ನಗರದ ಶ್ರೀ ತೋಂಟದಾರ್ಯ ಸಿದ್ದಲಿಂಗೇಶ್ವರ ಕಲ್ಯಾಣ ಮಂಟಪದಲ್ಲಿ ಆರ್.ಎಸ್.ಎಸ್ ಅಂಗ ಸಂಸ್ಥೆ ರಾಷ್ಟ್ರೋತ್ಥಾನ ಪರಿಷತ್ ಹಾಗೂ ಕರ್ನಾಟಕ ಸರ್ಕಾರದ ಭಾಗವಾಗಿರುವ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಸಹಯೋಗದಲ್ಲಿ ಜಿಲ್ಲೆಯ ಸುಮಾರು ಐದುನೂರು ಅಂಗನವಾಡಿ ಶಿಕ್ಷಕಿಯರಿಗೆ ಸಹಮಿಲನ ಕಾರ್ಯಕ್ರಮ ಹಮ್ಮಿಕೊಂಡಿರುವುದನ್ನು ಪ್ರಶಿಸಿದ್ದಾರೆ.
“ಈ ಕಾರ್ಯಕ್ರಮದಲ್ಲಿ ಬಿ.ಜೆ.ಪಿ ಯ ವಿಧಾನ ಪರಿಷತ್ ಸದಸ್ಯರು ಎಸ್ ವಿ ಸಂಕನೂರ ಅವರು ಉದ್ಘಾಟಿಸಿದ್ದಾರೆ. ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಸುಮಾರು ಐದುನೂರು ಅಂಗನವಾಡಿ ಶಿಕ್ಷಕಿಯರು ಹಾಗೂ ಅಧಿಕಾರಿಗಳು ಇದರಲ್ಲಿ ಭಾಗಿಯಾಗಿದ್ದಾರೆ.
“ಅಂಗನವಾಡಿ ಶಿಕ್ಷಕಿಯರಿಗೆ ಸರ್ಕಾರದ ವತಿಯಿಂದ ಅನೇಕ ತರಬೇತಿ ಹಾಗೂ ಮಾಹಿತಿ ಶಿಬಿರಗಳು, ಕಾರ್ಯಾಗಾರಗಳು ಇಲ್ಲಿಯವರೆಗೂ ಸರ್ಕಾರದ ವತಿಯಿಂದಲೇ ನಡೆಯುತ್ತಿದ್ದವು. ನಡೆಯಬೇಕು. ಆದರೆ ಈ ಕಾರ್ಯಕ್ರಮವು ಸರ್ಕಾರಕ್ಕೂ ಸಂಬಂಧ ಇಲ್ಲದ, ದೇಶದಲ್ಲೇ ನೊಂದಣಿಯಾಗದ ಸಂಘಟನೆಯಿಂದ ಸರ್ಕಾರಿ ನೌಕರರಿಗೆ ಈ ಸಹಮಿಲನ ಕಾರ್ಯಕ್ರಮ” ಏರ್ಪಡಿಸಿರುವುದನ್ನು ಪ್ರಶ್ನಿಸಿದ್ದಾರೆ.
“ಈ ಕಾರ್ಯಕ್ರಮದ ಉದ್ದೇಶ ಏನು ಇಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಹಭಾಗಿತ್ವದಲ್ಲಿ ನಡೆದಿದ್ದು, ಈ ಕಾರ್ಯಕ್ರಮಕ್ಕೆ ಜಿಲ್ಲಾಧಿಕಾರಿಗಳ ಪರವಾನಿಗೆ ಕೊಟ್ಟಿದ್ದಾರೆಯೇ? ಸ್ಥಳಿಯ ಶಾಸಕರ ಗಮನಕ್ಕೆ ಈ ಕಾರ್ಯಕ್ರಮದ ಕುರಿತು ಮಾಹಿತಿ ಇದೆಯೇ? ಎಂಬುದನ್ನು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಉಪನಿರ್ದೇಶಕರು ಸ್ಪಷ್ಟಪಡಿಸಬೇಕು” ಎಂದು ಪ್ರಶ್ನಿಸಿದ್ದಾರೆ.
ಈ ರಾಜ್ಯದ ಮುಖ್ಯಮಂತ್ರಿ ಸಿದ್ಧರಾಮಯ್ಯನವರು ‘ಆರ್.ಎಸ್.ಎಸ್ ನಮ್ಮ ಸೈದ್ದಾಂತಿಕ ವಿರೋಧಿ’ ಎಂದು ಬಹಿರಂಗವಾಗಿ ಹೇಳಿಕೆ ಕೊಡುತ್ತಾರೆ. ಆದರೆ ತಮ್ಮದೇ ಸರ್ಕಾರದ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯನ್ನು ಅದೇ ಆರ್.ಎಸ್.ಎಸ್ ದುರ್ಬಳಕೆ ಮಾಡಿಕೊಳ್ಳುತ್ತಿದ್ದಾರೆ”
“ಈ ಕಾರ್ಯಕ್ರಮದ ಕುರಿತು ಗದಗ ಜಿಲ್ಲಾಧಿಕಾರಿಗಳ ಪರವಾನಿಗೆ ಇದೆಯೇ? ಪರವಾನಿಗೆ ತೆಗೆದುಕೊಳ್ಳದೇ ಕಾನೂನು ಬಾಹಿರವಾಗಿ ಸರ್ಕಾರಿ ಇಲಾಖೆಯನ್ನು ದುರ್ಬಳಕೆ ಮಾಡಿಕೊಂಡ ಸಂಘಟನೆ ಹಾಗೂ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಉಪನಿರ್ದೇಶಕರ ವಿರುದ್ಧ ಕ್ರಮ ತೆಗೆದುಕೊಳ್ಳಬೇಕು” ಎಂದು ದಲಿತ ಸಂಘಟನೆಗಳ ಒಕ್ಕೂಟದಿಂದ ಆಗ್ರಹಿಸುತ್ತೇವೆ ಎಂದರು





