ಹಿರಿಯ ಸಹಕಾರಿ ಧುರೀಣ, ಸಹಕಾರ ರತ್ನ ವಿಜೇತ ಶಾಂತಾರಾಮ ಹೆಗಡೆ(ಶೀಗಿಹಳ್ಳಿ) ಅವರ ನಿಧನಕ್ಕೆ ಕಾನೂನು, ನ್ಯಾಯ, ಮಾನವ ಹಕ್ಕುಗಳು, ಸಂಸದೀಯ ವ್ಯವಹಾರ, ಶಾಸನ ರಚನೆ ಹಾಗೂ ಪ್ರವಾಸೋದ್ಯಮ ಇಲಾಖೆ ಮತ್ತು ಗದಗ ಜಿಲ್ಲಾ ಉಸ್ತುವಾರಿ ಸಚಿವ ಡಾ ಎಚ್ ಕೆ ಪಾಟಿಲ್ ಅವರು ಶೋಕ ವ್ಯಕ್ತಪಡಿಸಿದ್ದಾರೆ.
“ಶಿರಸಿಯ ತೋಟಗಾರಿಕೆ ಸೇಲ್ಸ್ ಸೋಸೈಟಿಯ ಅಧ್ಯಕ್ಷರಾಗಿ ಸತತ 25 ವರ್ಷಗಳ ಕಾಲ ಸೇವೆ ಸಲ್ಲಿಸಿ, ರಚನಾತ್ಮಕ ಕೆಲಸಗಳ ಮೂಲಕ ಸಹಕಾರ ಕ್ಷೇತ್ರದ ಗಮನ ಸೆಳೆದು ಮಾದರಿಯಾದವರು. ಉತ್ತರ ಕನ್ನಡ ಜಿಲ್ಲೆಯ ಡಿಸಿಸಿ ಬ್ಯಾಂಕ್ ಅಧ್ಯಕ್ಷರಾಗಿ, ಮಾಡರ್ನ್ ಎಜ್ಯುಕೇಷನ್ ಸೋಸೈಟಿಯ ಅಧ್ಯಕ್ಷರಾಗಿ, ಸಹಕಾರಿ ಬ್ಯಾಂಕುಗಳ ನಿರ್ದೇಶಕರಾಗಿ ಶಾಂತಾರಾಮ ಹೆಗಡೆ ಅವರು ಅಚ್ಚಳಿಯದ ಸೇವೆ ಸಲ್ಲಿಸಿದ್ದಾರೆ. ಅವರ ಈ ಸೇವೆಗೆ ಸರ್ಕಾರ ಅವರಿಗೆ ಸಹಕಾರ ರತ್ನ ಪ್ರಶಸ್ತಿ ಅಲ್ಲದೇ ಗದುಗಿನ ಕೆ ಎಚ್ ಪ್ರತಿಷ್ಠಾನ ನೀಡುವ ಪ್ರತಿಷ್ಠಿತ ಕೆ ಎಚ್ ಪಾಟಿಲ್ ಪ್ರಶಸ್ತಿ ನೀಡಿ ಗೌರವಿಸಿದೆ” ಎಂದರು.
“ಸಹಕಾರ, ಶಿಕ್ಷಣ, ಗ್ರಾಮೀಣಾಭಿವೃದ್ಧಿ, ಧಾರ್ಮಿಕ, ಬ್ಯಾಂಕಿಂಗ್ ಹಾಗೂ ಸಾಮಾಜಿಕ ಕ್ಷೇತ್ರದಲ್ಲಿ ಶಾಂತಾರಾಮ ಹೆಗಡೆ ಅವರು ಅನುಪಮ ಸೇವೆ ಸಲ್ಲಿಸಿದ್ದಾರೆ. ಅವರ ನಿಧನದಿಂದಾಗಿ ನಾನು ಓರ್ವ ಹಿತೈಷಿಯನ್ನು ಹಾಗೂ ಸಮಾಜದ ನಿಷ್ಠಾವಂತ ಸೇವಕನನ್ನು ಕಳೆದುಕೊಂಡಂತಾಗಿದೆ” ಎಂದು ದುಃಖಿಸಿದ್ದಾರೆ.
ಈ ಸುದ್ದಿ ಓದಿದ್ದೀರಾ? ಬೆಂಗಳೂರು ಗ್ರಾಮಾಂತರ | ಸಾರ್ವಜನಿಕರ ಅಹವಾಲು ತ್ವರಿತವಾಗಿ ಇತ್ಯರ್ಥಪಡಿಸಿ: ಸಚಿವ ಕೆ ಹೆಚ್ ಮುನಿಯಪ್ಪ
“ದೇವರು ಅವರ ಆತ್ಮಕ್ಕೆ ಚಿರಶಾಂತಿ ನೀಡಲಿ, ಅವರ ಅಗಲಿಕೆಯ ದುಃಖ ಸಹಿಸುವ ಶಕ್ತಿಯನ್ನು ಅವರ ಕುಟುಂಬ ಸದಸ್ಯರಿಗೆ, ಬಂಧುಗಳಿಗೆ ನೀಡಲಿ” ಎಂದು ದೇವರಲ್ಲಿ ಪ್ರಾರ್ಥಿಸಿದ್ದಾರೆ.





