ಶೈಕ್ಷಣಿಕ ಸಂಸ್ಥೆಗಳಲ್ಲಿ ಮತ ಧರ್ಮದ ಧಾರ್ಮಿಕತೆ ಬಿತ್ತರಿಸುವ ಯಾವುದೇ ಚಟುವಟಿಕೆಯನ್ನು ನಡೆಸಬಾರದು. ಆದರೆ ತೋಂಟದಾರ್ಯ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಹಿಂದೂ ಸಮ್ಮೇಳನ ನಡೆಸುತ್ತಿರುವುದನ್ನ ಎಸ್ ಎಫ್ ಐ ಖಂಡಿಸಿದೆ.
ಗದಗ ಜಿಲ್ಲೆಯ ಗಜೇಂದ್ರಗಡ ಪಟ್ಟಣದ ಶ್ರೀ ಜಗದ್ಗುರು ತೋಂಟದಾರ್ಯ ಆಂಗ್ಲ ಮಾಧ್ಯಮ ಶಾಲೆಯಲ್ಲಿ ನಾಳೆ ಫೆ 14ರಂದು ಹಿಂದೂ ಸಮ್ಮೇಳನ ಹಮ್ಮಿಕೊಂಡಿದ್ದು, ಇದು ಶಿಕ್ಷಣ ಸಂಸ್ಥೆಗಳ ಸಂವಿಧಾನ ಉಲ್ಲಂಘನೆ ಕಾರ್ಯಕ್ರಮವಾಗಿದ್ದು, ಕ್ರಮಕ್ಕೆ ಎಸ್ಎಫ್ಐ ಆಗ್ರಹಿಸಿದೆ.
ಈ ಸಂದರ್ಭದಲ್ಲಿ ಎಸ್ ಎಫ್ ಐ ಜಿಲ್ಲಾಧ್ಯಕ್ಷ ಚಂದ್ರು ರಾಠೋಡ್ ಮಾತನಾಡಿ, “ಭಾರತ ಸಂವಿಧಾನವು ವಿಧಿ 28ರಲ್ಲಿ ತಿಳಿಸಿರುವಂತೆ ವಿದ್ಯಾರ್ಥಿಗಳಿಗೆ ಜಾತ್ಯಾತೀತ ಶಿಕ್ಷಣ ನೀಡುವಂತೆ ನಿರ್ದೇಶಿಸುತ್ತದೆ. ಆದರೆ ನಗರದ ತೋಂಟದಾರ್ಯ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಹಿಂದೂ ಸಮ್ಮೇಳನ ಹಮ್ಮಿಕೊಂಡಿದ್ದು, ಇದರಲ್ಲಿ ವಿದ್ಯಾರ್ಥಿಗಳಿಗೆ ಕೋಮುದ್ವೇಷ ವಿಷಬೀಜ ಬಿತ್ತುವ ಸಂದೇಶವನ್ನು ನೀಡುತ್ತದೆ. ಆದರಿಂದ ವಿದ್ಯಾರ್ಥಿಗಳ ಮಧ್ಯೆ ಜಾತ್ಯತೀತ ಸೌಹಾರ್ದ ಭಾವನೆಯನ್ನು ಚಿದ್ರಗೊಳಿಸುವ ಹುನ್ನಾರವಾಗಿದೆ” ಎಂದು ಕಿಡಿಕಾರಿದರು.
ನಂತರ ಎಸ್ ಎಫ್ ರಾಜ್ಯ ಉಪಾಧ್ಯಕ್ಷರಾದ ಗಣೇಶ್ ರಾಥೋಡ್ ಮಾತನಾಡಿ, “ಕ್ರೀಡಾಂಗಣದಲ್ಲಿ ನಾಳೆ ಪ್ರಥಮ ಪಿಯುಸಿ ಅಂತಿಮ ಪರೀಕ್ಷೆ ಹಾಗೂ ದ್ವಿತೀಯ ಪಿಯುಸಿ ಪೂರಕ ಪರೀಕ್ಷೆ ನಡೆಯುತ್ತಿದ್ದರೂ ಕೂಡ ಶಾಲಾ ಶಿಕ್ಷಣ ಇಲಾಖೆ ಹಾಗೂ ಪದವಿ ಪೂರ್ವ ಶಿಕ್ಷಣ ಇಲಾಖೆಗಳು ಇಂತಹ ಕೋಮು ಪ್ರಚೋದನೆಗೆ ಒಳಗಾಗುವ ಕಾರ್ಯಕ್ರಮಕ್ಕೆ ಅವಕಾಶ ಕಲ್ಪಿಸಿದೆ. ಇದು ಸಂವಿಧಾನ, ಶಿಕ್ಷಣ ನೀತಿ ವಿರೋಧಿ ಕಾರ್ಯಕ್ರಮಕ್ಕೆ ಅವಕಾಶ ಕಲ್ಪಿಸಿದೆ. ಪರೀಕ್ಷೆ ಇದ್ದರೂ ಕೂಡ ಇತಂಹ ಸಂವಿಧಾನ ವಿರೋಧಿ ಕಾರ್ಯಕ್ರಮಕ್ಕೆ ಅವಕಾಶ ಕಲ್ಪಿಸಿದ ಅಧಿಕಾರಿಗಳ ಮೇಲೆ ಸೂಕ್ತ ಕ್ರಮ ಕೈಗೊಳ್ಳಬೇಕು” ಎಂದು ಒತ್ತಾಯಿಸಿದರು.
ಎಸ್ಎಫ್ಐ ತಾಲೂಕ ಅಧ್ಯಕ್ಷ ಅನಿಲ್ ಆರ್ ಮಾತನಾಡಿ, “ಶಾಲೆಗಳು ವಿದ್ಯಾರ್ಥಿಗಳಿಗೆ ವಿದ್ಯೆ ಕಲಿಸುವ ಕೇಂದ್ರಗಳೇ ವಿನಃ ಧರ್ಮ ಬೋಧನೆಯ ಪಾಠ ಶಾಲೆಗಳಲ್ಲ” ಎಂದು ಆಕ್ರೋಶ ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ಗಣೇಶ ರಾಥೋಡ್, ಚಂದ್ರು, ಅನಿಲ್, ಶರಣು, ರಾಹುಲ್, ಗುರು, ಈಶ್ವರ್ ಗುಡ್ಡದೇವಲಾಪುರ, ವೀರೇಶ್, ತುಕಾರಾಂ, ಆನಂದ್ ಹಾಗೂ ಇತರರು ಹಾಜರಿದ್ದರು.





