“ಗಾಂಧಿ ಕೊಂದ ವಂಶಜರು ಇಂದು ಅಧಿಕಾರಕ್ಕೆ ಬಂದಿರುವರು. ಇವರನ್ನು ಸತ್ಯ, ಅಹಿಂಸಾ, ಸೌಹಾರ್ದ ಮಾರ್ಗದ ಮೂಲಕವೇ ತೊಲಗಿಸಬೇಕು” ಎಂದು ಬಾಲು ರಾಠೋಡ ಹೇಳಿದರು.
ಗದಗ ಜಿಲ್ಲೆಯ ಗಜೇಂದ್ರಗಡ ನಗರದ ಸೇವಾಲಾಲ್ ಕಲ್ಯಾಣ ಮಂಟಪದಲ್ಲಿ ಇಂದು ಸೌಹಾರ್ದ ಕರ್ನಾಟಕ ಸಮಿತಿ ವತಿಯಿಂದ ಗಾಂಧಿಯವರ ಹುತಾತ್ಮ ದಿನವನ್ನು ಸೌಹಾರ್ದ, ಸಂಕಲ್ಪ ದಿನವನ್ನಾಗಿ ಗಾಂಧಿಜೀಯವರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ ಮಾಡಲಾಯಿತು.
“ದೇಶದ ಸ್ವತಂತ್ರ ಚಳುವಳಿಗೆ ದೊಡ್ಡ ಕೊಡುಗೆಯನ್ನು ನೀಡಿದ ಗಾಂಧೀಜಿಯವರನ್ನು ದೇಶ ವಿಭಜನೆಯ ನೆಪದಲ್ಲಿ ಛಿದ್ರಕಾರಿ ಶಕ್ತಿಗಳು ಗಾಂಧೀಜಿಯನ್ನ ಕೊಂದವು. ಆ ಮೂಲಕ ದೇಶದ ಸಂವಿಧಾನಕ್ಕೆ ಸೌಹಾರ್ದತೆಗೆ ಧಕ್ಕೆ ತರುವ ಕೆಲಸ ಮಾಡಿದವು. ಆದರೆ ನಾವುಗಳು ಈ ದೇಶದ ಸೌಹಾರ್ದತೆ ರಕ್ಷಣೆಗಾಗಿ ಗಾಂಧೀಜಿ ನೀಡಿದ ತತ್ವಗಳನ್ನು ಜೊತೆಗೂಡಿಸಿಕೊಂಡು ಸೌಹಾರ್ದತೆಯನ್ನು ಎತ್ತಿ ಹಿಡಿಯುವ ಕೆಲಸ ಮಾಡಬೇಕಿದೆ” ಎಂದರು.
ಎಸ್ ಎಫ್ ಐ ನ ರಾಜ್ಯ ಉಪಾಧ್ಯಕ್ಷರು ಗಣೇಶ ರಾಠೋಡ ಮಾತನಾಡಿ, “ಕಳೆದ ಹಲವಾರು ವರ್ಷಗಳಿಂದ ಸೌಹಾರ್ದ ಸಂಕಲ್ಪ ದಿನವನ್ನು ಆಚರಣೆ ಮಾಡಲಾಗುತ್ತಿದೆ. ಜನವರಿ 30ನ್ನು ಗಾಂಧಿಯವರನ್ನು ಹತ್ಯೆ ಮಾಡಲಾದ ದಿನ ಎಂಬುದು ಕಣ್ಣಂಚಿಗೆ ಬಂದು ಹೋಗುತ್ತದೆ. ದೆಹಲಿಯ ಬಿರ್ಲಾ ಭವನದ ಮುಂದೆ ಪ್ರಾರ್ಥನೆ ಮಾಡಿ ಬರುತ್ತಿರುವಾಗ ಗೋಡ್ಸೆ ಎಂಬ ದೇಶದ ಮೊದಲ ಭಯೋತ್ಪಾದಕ ಗುಂಡು ಹಾರಿಸಿ ಕೊಂದನು. ಅವನು ಕೊಂದಿದ್ದು ಕೇವಲ ಗಾಂಧಿಯವರನ್ನು ಮಾತ್ರವಲ್ಲ, ಗಾಂಧಿಯ ಮೂಲಕ ಬಹು ಜನರು ಪ್ರತಿಪಾದಿಸಿದ ಸತ್ಯ, ಅಹಿಂಸೆಯನ್ನು, ಒಂದು ಬಹುತ್ವದ ಸಾಂಸ್ಕೃತಿಕತೆಯ ಸೌಹಾರ್ದತೆಯ ವಿಚಾರಗಳನ್ನು ಕೊಲ್ಲಲಾಯಿತು. ಯಾವ ಶಕ್ತಿಗಳು ಗಾಂಧಿಯವರನ್ನು ಕೊಂದವೊ ಅದೇ ಶಕ್ತಿಗಳು ಅಧಿಕಾರದ ಮದ ತುಂಬಿಕೊಂಡಿವೆ. ಅದನ್ನು ನಾವು ಸತ್ಯ ಹಿಂಸೆಯ ಸೌಹಾರ್ದತೆಯ ಸಂದೇಶಗಳ ಮೂಲಕವೇ ತೊಲಗಿಸಬೇಕಿದೆ” ಎಂದರು.
ಎಸ್. ಎ. ಬಿಂಡವಾಡ ಅವರು ಮಾತನಾಡಿ, “ದೇಶದ ರಾಷ್ಟ್ರಪಿತ ಗಾಂಧಿಯವರನ್ನು ಒಂದು ಸಮುದಾಯದ ವಿರೋಧಿ ಎಂದು ಬಿಂಬಿಸುವ ಮೂಲಕ ಒಂದು ಸಮುದಾಯವೇ ಕೊಂದಿದೆ ಎನ್ನುವ ರೀತಿಯಲ್ಲಿ ಪ್ರತಿಬಿಂಬಿಸಲಾಗಿತ್ತು. ಆದರೆ ಜನತೆಗೆ ಸತ್ಯ ತಿಳಿಯಿತು. ಭಾರತ ಜಾತ್ಯತೀತ ರಾಷ್ಟ್ರವಾಗಿ ಉಳಿಯಲು ಸಹಕಾರಿಯಾಗಿದೆ. ನಾವೆಲ್ಲ ಗಾಂಧೀಜಿಯವರ ಸೌಹಾರ್ದತೆಯ ಭಾರತವನ್ನು ರಕ್ಷಿಸಿಕೊಳ್ಳಬೇಕಿದೆ” ಎಂದರು.
ನಂತರ ಪೀರು ರಾಥೋಡ್ ಅವರು ಮಾತನಾಡಿ, “ಸೌಹಾರ್ದತೆ ಕುರಿತು ನಾವೆಲ್ಲ ತಿಳಿದುಕೊಳ್ಳಬೇಕು. ಮನುಷ್ಯರನ್ನು ಪ್ರೀತಿಸುವುದೇ ನಿಜವಾದ ಸೌಹಾರ್ದತೆ. ಆದರೆ ಇಂದು ಅಧಿಕಾರದಲ್ಲಿರುವ ಶಕ್ತಿಗಳು ಮನುಷ್ಯರನ್ನ ಜಾತಿ, ಧರ್ಮ, ಮತ, ಸಮುದಾಯಗಳ ಹೆಸರಿನಲ್ಲಿ ಒಡೆದಾಳುವ ಮೂಲಕ ತಾರತಮ್ಯವನ್ನು ಹುಟ್ಟಿಸಿ ಸಮಾಜದ ಸ್ವಾಸ್ಥವನ್ನ ಹಾಳು ಮಾಡುತ್ತಿದ್ದಾರೆ. ಹಾಗಾಗಿ ನಾವೆಲ್ಲರೂ ಕೂಡ ಸೌಹಾರ್ದತೆಯನ್ನು ಎತ್ತಿ ಹಿಡಿಯುವುದು ಅನಿವಾರ್ಯವಾಗಿದೆ” ಎಂದು ಹೇಳಿದರು.
ಕಾರ್ಯಕ್ರಮವನ್ನು ಎಸ್ ಎಫ್ ಐ ನ ಜಿಲ್ಲಾಧ್ಯಕ್ಷರಾದ ಚಂದ್ರು ರಾಠೋಡ ನಿರ್ವಹಿಸಿದರು. ಎಸ್ ಎಫ್ ಐ ನ ತಾಲೂಕು ಅಧ್ಯಕ್ಷರು ಅನಿಲ್ ರಾಠೋಡ ರಾಹುಲ್, ಗುರು ವಿಶ್ವರ್, ಹಾಗೂ ಕರ್ನಾಟಕ ಪ್ರಾಂತ ರೈತ ಸಂಘದ ತಾಲೂಕ ಅಧ್ಯಕ್ಷರು ರೂಪೇಶ್ ಮಾಳೋತ್ತರ, ಚೆನ್ನಪ್ಪ ಅಂಗನವಾಡಿ ಸಂಘಟನೆಯ ತಾಲೂಕು ಅಧ್ಯಕ್ಷರಾದ ನೀಲಮ್ಮ ಹಿರೇಮಠ್, ಶರಣಂ ವಾಲಿ, ಜನವಾದಿ ಸಂಘಟನೆಯ ಅಕ್ಕಮ್ಮ ರಾಠೋಡ್, ಕಟ್ಟಡ ಕಾರ್ಮಿಕರ ಸಂಘಟನೆಯ ಮೈಬು ಹವಾಲ್ದಾರ್ ರೇವಣಪ್ಪ ರಾಥೋಡ್ ಕೃಷ್ಣಪ್ಪ, ಕನಕಪ್ಪ, ಬೀದಿಬದಿ ವ್ಯಾಪಾರಸ್ಥರ ಸಂಘದ ಅಂಬರೀಶ್ ಚೌವ್ಹಾಣ, ಕೆ ಸಿ ಗೋಡೆಕಾರ್, ರಾಜು ಮಾಂಡ್ರೆ ಹಾಗೂ ಇತರರು ಉಪಸ್ಥಿತರಿದ್ದರು.





