ಕೃಷಿ ಮಾರುಕಟ್ಟೆಯಲ್ಲಿ ಶನಿವಾರ ಕ್ವಿಂಟಲ್ ಹೆಸರುಕಾಳಿಗೆ 12,679 ರೂ. ದರದಲ್ಲಿ ಮಾರಾಟವಾಗಿದ್ದು, ರೈತರಲ್ಲಿ ಮುಖದಲ್ಲಿ ಕೊಂಚ ಸಂತಸ ಮೂಡಿದೆ.
ಪ್ರಸ್ತುತ ವರ್ಷದಲ್ಲಿ ಮುಂಗಾರು ಕೈಕೊಟ್ಟಿದ್ದು, ಅನಾವೃಷ್ಟಿ ಉಂಟಾಗಿದೆ. ಈ ನಡುವೆ ಹೆಸರುಕಾಳಿನ ಬೆಲೆ ಏರಿಕೆಯಾಗಿರುವುದರಿಂದ ಹೆಸರುಕಾಳು ಬೆಳೆಗಾರರಲ್ಲಿ ಮಂದಹಾಸ ಮೂಡಿದೆ.
ಗದಗ ಜಿಲ್ಲೆಯ ಲಕ್ಷ್ಮೇಶ್ವರ ತಾಲೂಕಿನ ಮಾಡಳ್ಳಿ ಗ್ರಾಮದ ರೈತ ರಾಮಣ್ಣ ನಾಯಕರ ಅವರು ಗದಗ ಕೃಷಿ ಮಾರುಕಟ್ಟೆ(ಎಪಿಎಂಸಿ)ಗೆ ಹೆಸರು ಕಾಳನ್ನು ಮಾರಾಟ ಮಾಡಲು ತಂದಿದ್ದು, ಕೃಷಿ ಮಾರುಕಟ್ಟೆಯಲ್ಲಿ ಕವಿತಾ ಟ್ರೇಡರ್ಸ್ ಖರೀದಿದಾರರು ಕ್ವಿಂಟಲ್ಗೆ ₹12,679ಕ್ಕೆ ಖರೀದಿ ಮಾಡಿದ್ದಾರೆ. ಇದು ಕೃಷಿ ಮಾರುಕಟ್ಟೆ (ಎಪಿಎಂಸಿ)ಯಲ್ಲಿಯೇ ಅತಿ ಹೆಚ್ಚು ಬೆಲೆಗೆ ಮಾರಾಟವಾಗಿದೆ.
ರೈತ ರಾಮಣ್ಣ ನಾಯಕರ ಈ ದಿನ.ಕಾಮ್ನೊಂದಿಗೆ ಮಾತನಾಡಿ, “ನಾಲ್ಕೈದು ದಿನಗಳ ಹಿಂದೆ ಕ್ವಿಂಟಾಲ್ಗೆ 15,001 ರೂಪಾಯಿ ಇತ್ತು. ಈಗ ಸ್ವಲ್ಪ ಕಡಿಮೆಯಾಗಿದೆ. ಆದರೂ ಈ ಬೆಲೆ ಖುಷಿ ತಂದಿದೆ” ಎಂದು ಸಂತಸ ವ್ಯಕ್ತಪಡಿಸಿದರು.
“ಕಳೆದ ಶನಿವಾರ ಕ್ವಿಂಟಾಲ್ ಹೆಸರುಕಾಳು ₹15,001ಕ್ಕೆ ಮಾರಾಟವಾಗಿತ್ತು. ಈ ವಾರ ಕೃಷಿ ಮಾರುಕಟ್ಟೆಯಲ್ಲಿ ಕ್ವಿಂಟಾಲ್ಗೆ ₹12,679ಕ್ಕೆ ಮಾರಾಟವಾಗಿದ್ದು, ಹೆಸರುಕಾಳಿನ ಬೆಲೆ ಸ್ವಲ್ಪ ಇಳಿಕೆಯಾಗಿದೆ” ಎಂದು ತಿಳಿಸಿದರು.
ಖರೀದಿದಾರರು ಈ ದಿನ.ಕಾಮ್ನೊಂದಿಗೆ ಮಾತನಾಡಿ, “ಹೆಸರುಕಾಳಿನ ಬೆಲೆ ಕಡಿಮೆಯಾಗಿಲ್ಲ. ನಾಲ್ಕೈದು ದಿನಗಳಿಂದ ಮೋಡ ಕವಿದ ವಾತಾವರಣ ಆವರಿಸಿ ಮಳೆಯಾಗಿದ್ದರಿಂದ ಹೆಸರು ಕಾಳು ಹಸಿ ಆಗಿದ್ದರಿಂದ ಮಾರಾಟ ಕಡಿಮೆಯಾಗಿದೆ. ಹಾಗಾಗಿ ಬೆಲೆಯಲ್ಲಿ ವ್ಯತ್ಯಾಸವಾಗಿದೆ” ಎಂದು ಹೇಳಿದರು.
ಇದನ್ನೂ ಓದಿದ್ದೀರಾ? ಗದಗ | ಈ ದಿನ.ಕಾಮ್ ಫಲಶ್ರುತಿ: ಅಲೆಮಾರಿ ಸಮುದಾಯ ಸ್ಥಳಕ್ಕೆ ಸಮಾಜ ಕಲ್ಯಾಣ ಇಲಾಖೆ ಅಧಿಕಾರಿಗಳ ಭೇಟಿ
“ಗದಗ, ಕೊಪ್ಪಳ ಹಾಗೂ ಹಲವು ಜಿಲ್ಲೆಗಳಿಂದ ಇಲ್ಲಿಯ ಕೃಷಿ ಮಾರುಕಟ್ಟೆಗೆ 2,173 ಕ್ವಿಂಟಾಲ್ ಹೆಸರುಕಾಳು ಆವಕವಾಗಿತ್ತು(ಹೊರಗಿನಿಂದ ಬಂದ ಮಾಲು). ಹಾಗಾಗಿ ಬೆಲೆಯಲ್ಲಿ ಏರಿಳಿತವುಂಟಾಗಿತ್ತು” ಎಂದರು.
ಕಳೆದ ವರ್ಷಕ್ಕಿಂತ ಈ ವರ್ಷ ಹೆಸರುಕಾಳಿಗೆ ಉತ್ತಮ ಬೆಲೆ
ಕಳೆದ ವರ್ಷದಲ್ಲಿ ರೈತರು ಬೆಳೆದ ಹೆಸರುಕಾಳು ಗದಗ ಹಾಗೂ ಹೆಚ್ಚು ಬಿತ್ತನೆಯಾಗಿ, ಹೆಚ್ಚು ಇಳುವರಿ ಆಗಿತ್ತು. ಆಗ ಕೃಷಿ ಮಾರುಕಟ್ಟೆಯಲ್ಲಿ ಕ್ವಿಂಟಾಲಿಗೆ ₹5,000 ದಿಂದ ₹6,000 ಇತ್ತು. ಆದರೆ ಈ ವರ್ಷ ಮುಂಗಾರು ಮಳೆ ಕೈಕೊಟ್ಟಿದ್ದರಿಂದ ಹೆಸರು ಬಿತ್ತುವ ಅವಧಿ ಮುಗಿಯುವ ಹಂತದಲ್ಲಿ ಜಿಲ್ಲೆಯಲ್ಲಿ ಕೆಲ ರೈತರು ಧೈರ್ಯ ಮಾಡಿ ಭಿತ್ತನೆ ಮಾಡಿದ್ದಾರೆ. ಮಳೆ ಕೊರತೆಯಿಂದ ಹೇಳಿಕೊಳ್ಳುವಷ್ಟು ಇಳುವರಿ ಬಂದಿಲ್ಲ. ಆಗೊಮ್ಮೆ ಈಗೊಮ್ಮೆ ಬಂದ ಮಳೆಗೆ ಅಲ್ಪಸ್ವಲ್ಪ ಬೆಳೆ ಉಳಿದಿದ್ದು, ಅದಕ್ಕೀಗ ಮಾರುಕಟ್ಟೆಯಲ್ಲಿ ಉತ್ತಮ ಬೆಲೆ ಸಿಕ್ಕಿರುವುದು ರೈತರಲ್ಲಿ ಸಂತಸ ತಂದಿದೆ.

ಶರಣಪ್ಪ ಎಚ್ ಸಂಗನಾಳ
ಗದಗ ಜಿಲ್ಲೆಯ ರೋಣ ತಾಲೂಕಿನ ಸವಡಿ ಗ್ರಾಮದವರು. ಕರ್ನಾಟಕ ವಿಶ್ವವಿದ್ಯಾಲಯದಿಂದ ಸ್ನಾತಕೋತ್ತರ ಪದವಿ. ಧ್ವನಿ ಶೈಕ್ಷಣಿಕ ಸಂಪನ್ಮೂಲ ಕೇಂದ್ರದಲ್ಲಿ ಒಂದಷ್ಟು ಕಾಲ ಕೆಲಸ. ಸದ್ಯ 'ಈ ದಿನ.ಕಾಮ್'ನಲ್ಲಿ ಮೀಡಿಯಾ ಕೋಆರ್ಡಿನೇಟರ್. ಓದು, ಪಕ್ಷಿ ವೀಕ್ಷಣೆ, ಕೃಷಿಯಲ್ಲಿ ಆಸಕ್ತಿ.




