ಗದಗ-ಬೆಟಗೇರಿ ನಗರಸಭೆಯಿಂದ ಸನ್ 2025ನೇ ಸಾಲಿನ ನವೆಂಬರ 26 ದಿನದಂದು ನ್ಯಾಯಮೂರ್ತಿ ನಾಗಮೋಹನ ದಾಸರವರ ‘ಸಂವಿಧಾನ ಓದು’ ಪುಸ್ತಕವನ್ನು ಸುಮಾರು ₹10ಲಕ್ಷ ರೂಪಾಯಿಗಳ, 40 ಸಾವಿರ ಪುಸ್ತಕಗಳನ್ನು ಪ್ರತಿ ಮನೆಗೂ ತಲುಪಿಸುವ ಯೋಜನೆಯನ್ನು ಹಮ್ಮಿಕೊಳ್ಳಲಾಗಿತ್ತು. ಆದರೆ ಪ್ರತಿ ಮನೆ ಮನೆಗೆ ತಲುಪದೇ ಹುಳತಿಂದು ಹಾಳಾಗುತ್ತಿವೆ ಎಂದು ಡಾ.ಬಿ.ಆರ್.ಅಂಬೇಡ್ಕರ್ ದಲಿತ ಸಂಘರ್ಷ ಸಮಿತಿ ಜಿಲ್ಲಾಧ್ಯಕ್ಷ ಶಿವಾನಂದ ತಮ್ಮಣ್ಣವರ ಗದಗ ಲೋಕಾಯುಕ್ತರಿಗೆ ಮನವಿ ಮಾಡಿದ್ದಾರೆ.
“ಅಧಿಕಾರಿಗಳ ವಿಳಂಬ ನೀತಿಯಿಂದ ಇಲ್ಲಿಯವರೆಗೂ ಆ ಪುಸ್ತಕವನ್ನು ಪ್ರತಿ ಮನೆ ಮನೆಗೂ ತಲುಪಿಸಲಾಗಿಲ್ಲ” ಎಂದು ಹೇಳಿದ್ದಾರೆ.
“ನ್ಯಾಯಮೂರ್ತಿ ನಾಗಮೋಹನ ದಾಸರವರು ಬರೆದಿರುವ ‘ಸಂವಿಧಾನ ಓದು’ ಪುಸ್ತಕವನ್ನು ಜನಪ್ರಕಾಶನದಿಂದ ಮೊದಲ ಹಂತದ ₹5 ಲಕ್ಷ ರೂಪಾಯಿಗಳ 20 ಸಾವಿರ ಪುಸ್ತಕಗಳನ್ನು ಎರಡು ವರ್ಷಗಳ ಹಿಂದೆಯೇ ಬೆಂಗಳೂರಿನಿಂದ ಗದಗ ಕಾಮತ್ ಟ್ರಾವಲ್ಸ್ನಲ್ಲಿ ಬಂದು ತಲುಪಿವೆ. ಈ ಪುಸ್ತಕಗಳನ್ನು ಗದಗ-ಬೆಟಗೇರಿ ನಗರಸಭೆ ಇಲ್ಲಿಯವರೆಗೂ ತೆಗೆದುಕೊಂಡು ಬಂದಿಲ್ಲ. ಇದರಿಂದ ಪುಸ್ತಕಗಳನ್ನು, ಇಲಿಗಳು ಕಡಿದು ಸಂಪೂರ್ಣ ಹಾಳಾಗುವ ಪರಿಸ್ಥಿತಿ ತಲುಪಿವೆ” ಎಂದು ತಿಳಿಸಿದ್ದಾರೆ.
“ಈ ಘಟನೆಗೆ ಕಾರಣರಾದ ಅಧಿಕಾರಿಗಳ ಹತ್ತಿರ ಹಾನಿಯಾಗಿರುವ ಪುಸ್ತಕಗಳ ಮೊತ್ತವನ್ನು ಭರಿಸಿಕೊಂಡು ಆ ಅಧಿಕಾರಿಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಜರುಗಿಸಿಬೇಕು. ಪ್ರತಿ ಮನೆಗೂ ಆ ಪುಸ್ತಕ ತಲುಪಿಸಲು ಅಧಿಕಾರಿಗಳಿಗೆ ಸೂಚನೆ ನೀಡಲು” ವಿನಂತಿಸಿದರು.
ಇದನ್ನೂ ಓದಿ: ಗದಗ | ಅಂತ್ಯಸಂಸ್ಕಾರ ಸಿದ್ಧತೆ ನಡೆಸುವಾಗ ಎಚ್ಚರವಾದ ವ್ಯಕ್ತಿ
“ಉಲ್ಲೇಖದನ್ವಯ ದಿನಾಂಕ 09-10-2024 ರಂದು ಈ ಕುರಿತು ಮಾನ್ಯ ಪೊಲೀಸ್ ಉಪ ಅಧೀಕ್ಷಕರು, ಕರ್ನಾಟಕ ಲೋಕಾಯುಕ್ತ, ಗದಗ ಜಿಲ್ಲೆ ಗದಗ ಇವರಿಗೆ ಮನವಿ ನೀಡಲಾಗಿತ್ತು, ಆದರೆ ನಗರಸಭೆಯ ಅಧಿಕಾರಿಗಳು ಇವರ ಆದೇಶಕ್ಕೂ ಯಾವುದೇ ಕ್ರಮವನ್ನು ತೆಗೆದುಕೊಳ್ಳದೇ ಬೇಕಾಬಿಟ್ಟಿಯಾಗಿ ವರ್ತಿಸುತ್ತಿದ್ದಾರೆ” ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಈ ಕುರಿತು ಈದಿನ.ಕಾಮ್ ಗದಗ ಜಿಲ್ಲಾಧಿಕಾರಿ ಸಿ. ಎನ್. ಶ್ರೀಧರ ಅವರಿಗೆ ಕರೆ ಮಾಡಿದಾಗ “ಕಾಮತ್ ಟ್ರಾವೆಲ್ ನಲ್ಲಿ ಇರುವ ಸಂವಿಧಾನ ಓದು ಪುಸ್ತಕಗಳು ಇರುವುದು ನಮ್ಮ ಗಮನಕ್ಕೆ ಬಂದಿರುವುದಿಲ್ಲ. ನಗರಸಭೆಯಿಂದ ಮಾಹಿತಿ ಪಡೆದುಕೊಳ್ಳುವೆ” ಎಂದು ಪ್ರತಿಕ್ರಿಯೆ ನೀಡಿದರು.





