ಉತ್ತಮ ಭಾರತದ ಭವಿಷ್ಯಕ್ಕಾಗಿ ಮತ ಚಲಾಯಿಸುವ ಮೂಲಕ ನಾವು ನಮ್ಮ ಸ್ವಾತಂತ್ರ್ಯ ಹೋರಾಟಗಾರರನ್ನು ಮತ್ತು ನಮ್ಮ ಹಿಂದಿನ ತಲೆಮಾರುಗಳ ಹಿರಿಯರನ್ನು ಗೌರವಿಸಬಹುದು ಎಂದು ಸಹಾಯಕ ನಿರ್ದೇಶಕ (ಗ್ರಾ.ಉ) ಕುಮಾರ ಪೂಜಾರ ಹೇಳಿದರು.
ಗದಗ ಜಿಲ್ಲೆಯ ಗದಗ ತಾಲೂಕಿನ ಲಕ್ಕುಂಡಿ ಗ್ರಾ.ಪಂ ವ್ಯಾಪ್ತಿಯಲ್ಲಿ ಆರಂಭಗೊಂಡ ಸಮುದಾಯ ಕಂದಕ ಬದು ನಿರ್ಮಾಣ ಕಾಮಗಾರಿ ಸ್ಥಳಕ್ಕೆ ಸಹಾಯಕ ನಿರ್ದೇಶಕ (ಗ್ರಾ.ಉ) ಕುಮಾರ ಪೂಜಾರ ಭೇಟಿ ನೀಡಿ, ಹಾಜರಿದ್ದ ಕೂಲಿಕಾರರಿಗೆ ನರೇಗಾ ಯೋಜನೆಯ ಮಹತ್ವ, ಉದ್ದೇಶ, ಎನ್ಎಂಎಂಎಸ್ ಹಾಜರಾತಿ, ಅಳತೆ ಪ್ರಮಾಣ, ಜಾಬ್ ಕಾರ್ಡ ಅಪ್ಡೇಟ, ಮಹಿಳಾ ಭಾಗವಹಿಸುವಿಕೆ, ವಿಶೇಷ ವರ್ಗದವರ ಭಾಗವಹಿಸುವಿಕೆ ಕುರಿತಂತೆ ಮಾಹಿತಿ ಪಡೆದು, ನಂತರ ಹಾಜರಿದ್ದ ಕೂಲಿಕಾರರೊಂದಿಗೆ ಅವರು ಮಾತನಾಡಿದರು
ಮತದಾನ ಮಾಡುವುದು ನಮ್ಮ ನಾಗರಿಕ ಜವಾಬ್ದಾರಿ. ಇದು ನಮ್ಮ ರಾಷ್ಟ್ರದ ಮೂಲಭೂತ ಹಕ್ಕುಗಳಲ್ಲಿ ಒಂದಾಗಿದೆ. ಭಾರತೀಯರು ನಮ್ಮ ಸ್ವಾತಂತ್ರ್ಯವನ್ನು ಗೆಲ್ಲಲು ಹೋರಾಡಿದರು ಮತ್ತು ಅದರ ಕಾರಣದಿಂದಾಗಿ ನಾವು ಮತದಾನದ ಹಕ್ಕನ್ನು ಹೊಂದಿದ್ದೇವೆ ಎಂದರು.
ಚುನಾವಣೆಯಲ್ಲಿ ಮತ ಹಾಕುವ ಸ್ವಾತಂತ್ರ್ಯ ನಿಮಗಿದೆ. ಮತ ಹಾಕಲು ಯಾರೂ ಯಾವುದೇ ಆಮಿಷಕ್ಕೆ ಒಳಗಾಗಬೇಡಿ ಉತ್ತಮ ನಾಳೆಗಳು ನಮಗೆ ಬೇಕಾದರೆ ಮತದಾನ ಮಾಡುವ ಮೂಲಕ ಆ ಒಳ್ಳೆಯ ನಾಳೆಗಳನ್ನು ಪಡೆಯೋಣ. ಎಲ್ಲಾ ಅರ್ಹ ನಾಗರಿಕರು ಮತದಾನದ ಹಕ್ಕು ಚಲಾಯಿಸಬೇಕು. ಮತದಾರ ದೇಶದ ಉತ್ತಮ ಭವಿಷ್ಯಕ್ಕೆ ಬುನಾದಿ. ಮತದಾನ ಮಾಡುವ ಮೂಲಕ ಆ ಬುನಾದಿಯನ್ನು ಸದೃಢಗೊಳಿಸಿ ಎಂದರು.
ಈ ಸಂದರ್ಭದಲ್ಲಿ ಪಂಚಾಯತಿ ಅಭಿವೃದ್ಧಿ ಅಧಿಕಾರಿ ರಾಜಕುಮಾರ ಭಜಂತ್ರಿ, ತಾಲೂಕ ಐಇಸಿ ಸಂಯೋಜಕ, ತಾಂತ್ರಿಕ ಸಹಾಯಕ, ಡಿಇಒ, ಬಿ.ಎಫ್.ಟಿ, ಗ್ರಾ.ಕಾ.ಮೀ ಹಾಗೂ ನರೇಗಾ ಕೂಲಿಕಾರರು ಹಾಜರಿದ್ದರು.





