ಒತ್ತಡ, ಆತಂಕ, ನಿರೀಕ್ಷೆ ಇತ್ಯಾದಿಗಳು ನಿತ್ಯದ ಬದುಕಿನಲ್ಲಿ ಒಳಗೊಂಡಿವೆ. ದೈಹಿಕ ಆರೋಗ್ಯದಷ್ಟೇ ಮಾನಸಿಕ ಆರೋಗ್ಯವೂ ಪ್ರಮುಖವಾಗಿದ್ದು, ಮಾನಸಿಕವಾಗಿ ಸದೃಢರಾಗಿ ಇರಬೇಕಾಗಿರುವುದು ಇಂದಿನ ಜೀವನದಲ್ಲಿ ಅತ್ಯವಶ್ಯಕವಾಗಿದೆ. ಹಾಗೂ ಮಾನಸಿಕ ಅಸ್ವಸ್ಥರಿಗೆ ಹಕ್ಕುಗಳು ಯಾವುದೆಂದರೆ ಮಾನಸಿಕ ಆರೋಗ್ಯ ರಕ್ಷಣೆಯನ್ನು ಪಡೆಯುವ ಹಕ್ಕು, ಸಮೂದಾಯದಲ್ಲಿ ಜೀವಿಸುವ ಹಕ್ಕು, ಘನತೆಯಿಂದ ಬದುಕುವ ಹಕ್ಕು, ವೈದ್ಯಕೀಯ ದಾಖಲೆಗಳನ್ನು ಪಡೆಯುವ ಹಕ್ಕುಗಳಿವೆ ಎಂದು ಗದಗ ಅಪರ ಜಿಲ್ಲಾ ಮತ್ತು ಸತ್ರ ನ್ಯಾ.ಗಂಗಾಧರ ಸಿ ಎಂ ತಿಳಿಸಿದರು.
ಗದಗ ಜಿಲ್ಲಾ ಆಡಳಿತ, ಜಿಲ್ಲಾ ಪಂಚಾಯತ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಜಿಲ್ಲಾ ಮಾನಸಿಕ ಆರೋಗ್ಯ ಕಾರ್ಯಾಕ್ರಮ ವಿಭಾಗ, ಕೆ.ಎಚ್.ಪಾಟೀಲ್ ವೈದ್ಯಕೀಯ ವಿಜ್ಞಾನಗಳ ಸಂಸ್ಥೆ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಜಿಲ್ಲಾ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ, ಜಿಲ್ಲಾ ಮಾನಸಿಕ ಆರೋಗ್ಯ ಪುನರ್ವಿಮರ್ಶಾ ಮಂಡಳಿ, ತಾಲೂಕಾ ಆರೋಗ್ಯ ಅಧಿಕಾರಿಗಳ ಕಾರ್ಯಾಲಯ ಮತ್ತು ಬಸವೇಶ್ವರ ಕಲಾ ವಾಣಿಜ್ಯ ಹಾಗೂ ವಿಜ್ಞಾನ ಮಹಾವಿದ್ಯಾಲಯ, ಇವರುಗಳ ಸಂಯುಕ್ತ ಆಶ್ರಯದಲ್ಲಿ ಗುರುವಾರದಂದು ನಗರದ ಬಸವೇಶ್ವರ ಕಲಾ ವಾಣಿಜ್ಯ ಹಾಗೂ ವಿಜ್ಞಾನ ಮಹಾವಿದ್ಯಾಲಯ, ಸಭಾಂಗಣದಲ್ಲಿ ಕಾಲೇಜು ಪ್ರಾಂಶುಪಾಲ ಪ್ರೊ. ಎಮ್ ಎಮ್ ಬುರುಡಿಯವರ ಅಧ್ಯಕ್ಷತೆಯಲ್ಲಿ ಹಮ್ಮಿಕೊಂಡಿದ್ದ ʼವಿಶ್ವ ಮಾನಸಿಕ ಆರೋಗ್ಯ ದಿನಾಚರಣೆ-2025ʼ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
“ಮಾನಸಿಕ ಆರೋಗ್ಯವು ಮಾನವನ ಮೂಲಭೂತ ಹಕ್ಕಾಗಿದೆ. ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ಜೀವನವು ಅತ್ಯುತ್ತಮ ಸಮಯವಾಗಿದ್ದು, ಇದರೊಂದಿಗೆ ನಿರಾಶೆ, ಹೋಲಿಕೆ, ಒಂಟಿತನದ ಭಾವನೆಗಳಲ್ಲಿ ತೊಳಲಾಟ ಸಾಮಾನ್ಯವಾಗಿರುತ್ತದೆ. ಮಾನಸಿಕ ಅನಾರೋಗ್ಯ ಎಲ್ಲರನ್ನೂ ಬಾಧಿಸುವಂಥದ್ದಾಗಿದ್ದು, ಅದು ಮಕ್ಕಳಿಂದ ಹಿಡಿದು ಮುಪ್ಪಿನವರೆಗೂ ಬಾಧಿಸಬಹುದು. ಮಾನಸಿಕ ಆರೋಗ್ಯದ ಕುರಿತು ಹೆಚ್ಚಿನ ಕಾಳಜಿ ವಹಿಸುವುದು ಸೂಕ್ತ. ಹಾಗಾಗಿ ಜಾಗೃತಿ ಮೂಡಿಸುವುದು ಮಾತ್ರ ನಮ್ಮ ಕರ್ತವ್ಯವಲ್ಲ. ಸಮಾಜದಲ್ಲಿ ಮಾನಸಿಕ ಆರೋಗ್ಯ ಕಾಪಾಡಿ ಭವಿಷ್ಯದತ್ತ ಒಂದು ಹೆಜ್ಜೆ ಮುಂದು ಹೋಗುವುದು ಒಳಿತು” ಎಂದು ಕಿವಿಮಾತು ಹೇಳಿದರು.
“ಮಾನಸಿಕ ಆರೋಗ್ಯವನ್ನು ಬಲಪಡಿಸಿಕೊಳ್ಳಲು ಅತ್ಯುತ್ತಮವಾದ ಸಂಸ್ಕಾರ, ನೀತಿ, ನೈತಿಕ ಮೌಲ್ಯ, ಒಳ್ಳೆ ಸ್ನೇಹಿತರ ಸಹವಾಸ ಹಾಗೂ ಸಾಮಾಜಿಕ ಮಾಧ್ಯಮಗಳ ಕಡಿಮೆ ಬಳಕೆ ಮಾಡುವುದು ಒಳಿತು. ಒಂದು ಬಿದಿರು, ʼಕಟ್ಟಿಗೆ ಮಾರುವವʼನ ಕೈಗೆ ಸಿಕ್ಕರೆ ಅದು ಬೆಂಕಿಗೆ ಆಹುತಿಯಾಗುತ್ತದೆ. ಅದೇ ಬಿದಿರು ʼಕೊಳಲು ಮಾಡುವವʼನಿಗೆ ಸಿಕ್ಕರೆ ಅದು ಕೃಷ್ಣನ ಕೈ ಸೇರುತ್ತದೆ. ಆದ್ದರಿಂದ ವಿದ್ಯಾರ್ಥಿಗಳು ಉತ್ತಮರ ಸಹವಾಸ ಮಾಡುವುದು ಅವಶ್ಯಕವಾಗಿದೆ. ಮಾನಸಿಕ ಆರೋಗ್ಯವು ಜೀವನದ ಶೈಲಿಯಾಗಬೇಕು” ಎಂದು ವಿದ್ಯಾರ್ಥಿಗಳಿಗೆ ಕರೆಕೊಟ್ಟರು.
ಹಿರಿಯ ದಿವಾನಿ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಸದಸ್ಯ ಕಾರ್ಯದರ್ಶಿ ಸಿ .ಎಸ್ ಶಿವನಗೌಡ್ರ ಮಾತನಾಡಿ, “ಮಾನಸಿಕ ಲಕ್ಷಣಗಳು ಯಾವುದೆಂದರೆ ಅಸಹಜ ನಡುವಳಿಕೆ, ಗುರಿ ಇಲ್ಲದೆ ಅಲೆದಾಡುವುದು, ಗೊಣಗುವುದು ಅಥವಾ ಸ್ವಯಂ ನಗುವುದು, ಮಧ್ಯ, ಮಾದಕ ವಸ್ತು ಅವಲಂಬನೆ, ಅತಿಯಾದ ಚಿಂತೆ, ಚಡಪಡಿಕೆ ಹೀಗೆ ಮೊದಲಾದ ಲಕ್ಷಣಗಳು ಇರುತ್ತವೆ” ಎಂದು ತಿಳಿಸಿದರು.
“ಮಾನಸಿಕ ಆರೋಗ್ಯವು ಪ್ರತಿಯೊಬ್ಬರಿಗೆ ಅವಶ್ಯಕವಾಗಿದ್ದು, ಮಾನಸಿಕ ಆರೋಗ್ಯ ಸಂಬಂಧಿತ ಸಮಸ್ಯೆಗಳಿದ್ದರೆ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸಹಾಯ ಪಡೆಯಬೇಕು. ಹಾಗೂ ಜಿಲ್ಲಾ ಮಾನಸಿಕ ಆರೋಗ್ಯ ಪುನರ್ವಿಮರ್ಶಾ ಮಂಡಳಿಯು ಮಾನಸಿಕ ಅನಾರೋಗ್ಯದಿಂದ ಬಳಲುತ್ತಿರುವ ವ್ಯಕ್ತಿಗಳಿಗೆ ಮೂಲಭೂತ ಹಕ್ಕುಗಳನ್ನು ನೀಡಲು ಸಹಾಯ ಮಾಡುತ್ತದೆ. ಇದರ ಸದುಪಯೋಗ ಪಡೆದುಕೊಳ್ಳಬೇಕು. ಇತ್ತಿಚಿನ ದಿನಗಳಲ್ಲಿ ಪೋಕ್ಸೊ ಪ್ರಕರಣಗಳು ಹೆಚ್ಚಾಗುತ್ತಿದ್ದು, ವಿದ್ಯಾರ್ಥಿಗಳು ಇಂತಹ ಅಪರಾಧಗಳಿಂದ ದೂರವಿರಬೇಕು” ಎಂದು ಎಚ್ಚರಿಕೆ ನೀಡಿದರು.
ಅತಿಥಿಗಳಾಗಿ ಆಗಮಿಸಿದ್ದ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ. ಎಸ್ ಎಸ್ ನೀಲಗುಂದ, ಗುರುರಾಜ ಬಿ. ಗೌರಿ ವಕೀಲರು ಸಹಾಯಕ ಕಾನೂನು ಅಭಿರಕ್ಷಕರು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಗದಗ, ಆರ್ ಎಚ್ ಪಾಟೀಲ್ ಸದಸ್ಯರು ಜಿಲ್ಲಾ ಮಾನಸಿಕ ಆರೋಗ್ಯ ಪುನರ್ವಿಮರ್ಶಾ ಮಂಡಳಿ, ರೂಪಸೇನ ಚೌವ್ಹಾಣ ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿಗಳು, ಗದಗ ಇವರು ಆಗಮಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು.
ಕೆ ಎಚ್ ಪಾಟೀಲ್ ವೈದ್ಯಕೀಯ ವಿಜ್ಞಾನಗಳ ಸಂಸ್ಥೆ, ಮನೋವೈದ್ಯರಾದ ಡಾ. ಸೋಮಶೇಖರ ಬಿಜ್ಜಳ ಇವರು, ಮಾನಸಿಕ ಖಾಯಿಲೆಗಳು ಬರಲು ಕಾರಣ, ಅತಿಯಾದ ಬೇಸರ, ನಿರಾಸಕ್ತಿ, ಸುಸ್ತು ಏಕಾಗೃತೆ ಕೊರತೆ ನಕಾರಾತ್ಮಕ ಹಾಗೂ ಆತ್ಮಹತ್ಯೆ ಆಲೋಚನೆಗಳು ಹೀಗೆ ಹಲವಾರು ಕಾರಣಗಳನ್ನು ಗುರುತಿಸುವುದು ಹಾಗೂ ಮಾನಸಿಕವಾಗಿ ಸಧೃಡರಾಗಲು ಬೇಕಾಗುವ ಕೌಶಲ್ಯಗಳ ಕುರಿತು ಸವಿವರವಾಗಿ ಉಪನ್ಯಾಸ ನೀಡಿದರು.
ಬಸವೇಶ್ವರ ಕಲಾ ವಾಣಿಜ್ಯ ಹಾಗೂ ವಿಜ್ಞಾನ ಮಹಾವಿದ್ಯಾಲಯದ ಪ್ರಾಂಶುಪಾಲರು ಪ್ರೊ. ಎಮ್ ಎಮ್ ಬುರುಡಿ ಅಧ್ಯಕ್ಷೀಯ ಭಾಷಣದಲ್ಲಿ ಮಾತನಾಡಿ, “ವಿದ್ಯಾರ್ಥಿಗಳು ಸೇರಿದಂತೆ ಪ್ರತಿಯೊಬ್ಬರಿಗೂ ಮಾನಸಿಕ ಆರೋಗ್ಯ ಅತ್ಯವಶ್ಯಕವಾಗಿದ್ದು, ಈ ಸದರಿ ಅತ್ಯುತ್ತಮವಾದ ಕಾರ್ಯಕ್ರಮವನ್ನು ನಮ್ಮ ಮಹಾವಿದ್ಯಾಲಯದಲ್ಲಿ ಹಮ್ಮಿಕೊಂಡಿದಕ್ಕೆ ಧನ್ಯವಾದಗಳು. ಹಾಗೂ ವಿದ್ಯಾರ್ಥಿಗಳಿಗೆ ಮಾನಸಿಕ ಆರೋಗ್ಯ ಕಾಪಾಡಿಕೊಂಡು ಸಮಾಜದಲ್ಲಿ ಈ ಕುರಿತು ಜಾಗೃತಿ ಮೂಡಿಸಬೇಕು” ಎಂದು ಕರೆ ನೀಡಿದರು.
ಈ ಸುದ್ದಿ ಓದಿದ್ದೀರಾ? ತುಮಕೂರು | ಎಸ್ಐಆರ್ ಮೂಲಕ ಹಿಂಬಾಗಿಲಿಂದ ಮತಾಧಿಕಾರ ಕಸಿಯುವ ಹುನ್ನಾರ: ಸಿಪಿಐಎಂ ಪ್ರಕಾಶ್
ಕಾರ್ಯಕ್ರಮದಲ್ಲಿ ಜಿಲ್ಲಾ ಕುಷ್ಠರೋಗ ನಿರ್ಮೂಲನ ಅಧಿಕಾರಿ ಡಾ. ರಾಜೇಂದ್ರ ಸಿ. ಬಸರಿಗಿಡದ ಪ್ರಾಸ್ಥವಿಕವಾಗಿ ಮಾತನಾಡಿ, “ಎಲ್ಲ ಮಕ್ಕಳು ತಮ್ಮ ಸಮಸ್ಯೆಗಳು ಇದ್ದರೆ ಕೆ ಎಚ್ ಪಾಟೀಲ್ ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯಲ್ಲಿ ಮಾನಸಿಕ ವೈದ್ಯಾಧಿಕಾರಿಗಳಿದ್ದು, ಮಕ್ಕಳು ತಮ್ಮ ಸಮಸ್ಯೆಗಳನ್ನು ಬಗೆಹರಿಸಿಕೊಳ್ಳಬೇಕು” ಎಂದು ತಿಳಿಸಿದರು.
ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಸಿಬ್ಬಂದಿಗಳು ಮತ್ತು ಬಸವೇಶ್ವರ ಕಲಾ ವಾಣಿಜ್ಯ ಹಾಗೂ ವಿಜ್ಞಾನ ಮಹಾವಿದ್ಯಾಲಯ, ಗದಗದ ಬೊಧಕ ಬೊಧಕೇತರ ಸಿಬ್ಬಂದಿಗಳು ಹಾಗೂ ವಿದ್ಯಾರ್ಥಿಗಳು ಕಾರ್ಯಕ್ರಮದಲ್ಲಿ ಇದ್ದರು.





