ಇತಿಹಾಸವು ಕನ್ನಡಿಯಿದ್ದಂತೆ; ಅದು ಮುಖದ ಅಂದವನ್ನಷ್ಟೇ ಅಲ್ಲ, ವಿಕಾರವನ್ನೂ ತೋರಿಸುತ್ತದೆ. ನಮಗೆ ಬೇಕಾದ್ದನ್ನು ಮಾತ್ರ ನೋಡುತ್ತೇವೆ, ಬೇಡವಾದ್ದನ್ನು ಮರೆಮಾಚುತ್ತೇವೆ ಎನ್ನುವುದು ಬೌದ್ಧಿಕ ಅಪ್ರಾಮಾಣಿಕತೆ. ಲಕ್ಕುಂಡಿ ಮತ್ತು ಕೀಳಡಿ ಎರಡೂ ಭಾರತದ ಎರಡು ಕಣ್ಣುಗಳಾಗಬೇಕೇ ಹೊರತು, ರಾಜಕೀಯದ ದಾಳಗಳಾಗಬಾರದು
ಇತಿಹಾಸವೆಂದರೆ ಕೇವಲ ಗತಿಸಿದ ಕಾಲದ ಪಳೆಯುಳಿಕೆಯಲ್ಲ; ಅದು ವರ್ತಮಾನದ ರಾಜಕೀಯ ಮತ್ತು ಭವಿಷ್ಯದ ಅಸ್ಮಿತೆಯನ್ನು ರೂಪಿಸುವ ಪ್ರಬಲ ಅಸ್ತ್ರ. ಪ್ರಸ್ತುತ ಕರ್ನಾಟಕದ ಗದಗದ ಲಕ್ಕುಂಡಿ ಮತ್ತು ತಮಿಳುನಾಡಿನ ಕೀಳಡಿ ಉತ್ಖನನಗಳು ಈ ಮಾತಿಗೆ ಜ್ವಲಂತ ಸಾಕ್ಷಿಯಾಗಿ ನಿಂತಿವೆ. ಒಂದೆಡೆ ಲಕ್ಕುಂಡಿಯು ಯುನೆಸ್ಕೋ ಪಟ್ಟಿಯತ್ತ ದಾಪುಗಾಲಿಡುತ್ತಾ, ತನ್ನ ಪ್ರಾಗೈತಿಹಾಸಿಕ(ಲಿಖಿತ ದಾಖಲೆಗಳು ಲಭ್ಯವಿಲ್ಲದ, ಕೇವಲ ಪುರಾತತ್ವ ಮತ್ತು ಭೌತಿಕ ಆಧಾರಗಳ ಮೂಲಕ ಅಧ್ಯಯನ ಮಾಡಲಾಗುವ ಮಾನವನ ಇತಿಹಾಸದ ಪೂರ್ವದ ಅವಧಿ) ರೆಕ್ಕೆಗಳನ್ನು ಬಿಚ್ಚಿಕೊಳ್ಳುತ್ತಿದ್ದರೆ, ಇನ್ನೊಂದೆಡೆ ದ್ರಾವಿಡ ಸಂಸ್ಕೃತಿಯ ಹೆಗ್ಗುರುತಾದ ಕೀಳಡಿಯು ಕೇಂದ್ರ ಪ್ರಭುತ್ವದ ಮಲತಾಯಿ ಧೋರಣೆಗೆ ಸಿಲುಕಿ ನಲುಗುತ್ತಿದೆ ಎಂಬ ಗಂಭೀರ ಆರೋಪಗಳು ಕೇಳಿಬರುತ್ತಿವೆ.
ಕಲ್ಯಾಣಿ ಚಾಲುಕ್ಯರ ಶಿಲ್ಪಕಲೆಯ ತೊಟ್ಟಿಲು ಎಂದೇ ಕರೆಯಲ್ಪಡುವ ಲಕ್ಕುಂಡಿ, ಇದೀಗ ಕೇವಲ ಮಧ್ಯಕಾಲೀನ ಇತಿಹಾಸಕ್ಕೆ ಸೀಮಿತವಾಗಿಲ್ಲ. ಇತ್ತೀಚಿನ ಉತ್ಖನನಗಳು ಮತ್ತು ಸಂಶೋಧನೆಗಳು ಲಕ್ಕುಂಡಿಯ ಇತಿಹಾಸವನ್ನು ಪ್ರಾಗೈತಿಹಾಸಿಕ ಕಾಲಘಟ್ಟಕ್ಕೆ ಕೊಂಡೊಯ್ಯುವ ಸಾಧ್ಯತೆಗಳನ್ನು ತೆರೆದಿಟ್ಟಿವೆ. ಅಲ್ಲಿ ದೊರಕುತ್ತಿರುವ ನಾಣ್ಯದ ಟಂಕಸಾಲೆಗಳು, ಶಾಸನಗಳು ಮತ್ತು ಮಣ್ಣಿನ ಪದರಗಳು ಲಕ್ಕುಂಡಿಯು ಒಂದು ಬೃಹತ್ ನಗರ ನಾಗರಿಕತೆಯಾಗಿ ಬೆಳೆದಿತ್ತು ಎಂಬುದನ್ನು ಸಾರಿ ಹೇಳುತ್ತಿವೆ.
ಯುನೆಸ್ಕೋ ವಿಶ್ವ ಪಾರಂಪರಿಕ ತಾಣಗಳ ಪಟ್ಟಿಗೆ ಸೇರ್ಪಡೆಗೊಳ್ಳುವ ಅರ್ಹತೆ ಲಕ್ಕುಂಡಿಗಿದೆ. ಈ ಹಿನ್ನೆಲೆಯಲ್ಲಿ, ವಿಸ್ತೃತ ಉತ್ಖನನಕ್ಕಾಗಿ ಇಡೀ ಲಕ್ಕುಂಡಿ ಹಳ್ಳಿಯನ್ನೇ ಸ್ಥಳಾಂತರ ಮಾಡುವ ಪ್ರಸ್ತಾಪವೂ ಮುನ್ನೆಲೆಗೆ ಬಂದಿದೆ. ಹಂಪಿಯ ಮಾದರಿಯಲ್ಲಿ ಜನವಸತಿಯನ್ನು ಬೇರೆಡೆಗೆ ಸ್ಥಳಾಂತರಿಸಿ, ಇತಿಹಾಸದ ಮೇಲೆ ಬೆಳಕು ಚೆಲ್ಲುವ ಈ ಯೋಜನೆಯು ಸ್ವಾಗತಾರ್ಹವಾದರೂ, ಸ್ಥಳೀಯರ ಬದುಕಿನ ಹಕ್ಕಿನ ಪ್ರಶ್ನೆಯನ್ನೂ ಹುಟ್ಟುಹಾಕಿದೆ. ಆದರೆ, ಈ ಬೆಳವಣಿಗೆಗೆ ಸರ್ಕಾರ ಮತ್ತು ಇಲಾಖೆಗಳು ತೋರುತ್ತಿರುವ ಉತ್ಸಾಹವು ಆಶಾದಾಯಕವಾಗಿದೆ.

ಕೀಳಡಿ: ದ್ರಾವಿಡ ದನಿಯ ದಮನವೇ?
ಲಕ್ಕುಂಡಿಯಲ್ಲಿ ಉತ್ಖನನದ ಉತ್ಸಾಹವಿದ್ದರೆ, ತಮಿಳುನಾಡಿನ ಶಿವಗಂಗೆ ಜಿಲ್ಲೆಯ ‘ಕೀಳಡಿ’ಯಲ್ಲಿ (Keeladi) ಕಂಡುಬರುತ್ತಿರುವುದು ಆತಂಕ ಮತ್ತು ಅಸಮಾಧಾನ. ವೈಗೈ ನದಿ ದಡದ ಕೀಳಡಿ ಉತ್ಖನನವು ಭಾರತದ ಇತಿಹಾಸದ ದಿಕ್ಕನ್ನೇ ಬದಲಿಸುವ ತಾಕತ್ತು ಹೊಂದಿದೆ. ಕ್ರಿ.ಪೂ. 6ನೇ ಶತಮಾನದಲ್ಲೇ ತಮಿಳುನಾಡಿನಲ್ಲಿ ಉನ್ನತ ನಗರ ನಾಗರಿಕತೆ ಇತ್ತು, ಅಲ್ಲಿನ ಜನರಿಗೆ ಲಿಪಿ ಜ್ಞಾನವಿತ್ತು ಮತ್ತು ಮುಖ್ಯವಾಗಿ ಅಲ್ಲಿ ಯಾವುದೇ ದೇವರ ವಿಗ್ರಹಗಳು ದೊರಕಿಲ್ಲ (ಜಾತ್ಯತೀತ ಸಂಸ್ಕೃತಿ) ಎಂಬುದು ಕೀಳಡಿಯ ಫಲಿತಾಂಶ. ಇದು ಉತ್ತರ ಭಾರತದ ಗಂಗಾಬಯಲಿನ ನಾಗರಿಕತೆಗಿಂತ ಭಿನ್ನ ಮತ್ತು ಸಮಾನಾಂತರವಾದ ದ್ರಾವಿಡ ನಾಗರಿಕತೆಯನ್ನು ಎತ್ತಿ ಹಿಡಿಯುತ್ತದೆ.
ಇದನ್ನು ಓದಿದ್ದೀರಾ? ಈ ದಿನ ಸಂಪಾದಕೀಯ | ‘ಬೋರ್ಡ್ ಆಫ್ ಪೀಸ್’ಗೆ ಸೇರದ ಭಾರತದ ನಿಲುವು ಸ್ವಾಗತಾರ್ಹ
ಆದರೆ, ಬಿಜೆಪಿ ಮತ್ತು ಆರೆಸ್ಸೆಸ್ ನೇತೃತ್ವದ ಕೇಂದ್ರ ಸರ್ಕಾರಕ್ಕೆ ಈ ಸತ್ಯಗಳನ್ನು ಅಷ್ಟಾಗಿ ರುಚಿಸಿದಂತಿಲ್ಲ. ಕೀಳಡಿ ಉತ್ಖನನದ ನೇತೃತ್ವ ವಹಿಸಿದ್ದ ಅಮರನಾಥ್ ರಾಮಕೃಷ್ಣ ಅವರ ವರ್ಗಾವಣೆ, ವರದಿ ಸಲ್ಲಿಕೆಯಲ್ಲಿನ ವಿಳಂಬ ಮತ್ತು ಮಂಜೂರಾತಿಯಲ್ಲಿನ ತಾರತಮ್ಯಗಳು ಈ ಅನುಮಾನಕ್ಕೆ ಪುಷ್ಠಿ ನೀಡಿವೆ. ವೈದಿಕ ಅಥವಾ ಆರ್ಯ ಸಂಸ್ಕೃತಿಯೇ ಭಾರತದ ಮೂಲ ಎಂದು ಬಿಂಬಿಸಲು ಹೊರಟಿರುವ ಶಕ್ತಿಗಳಿಗೆ, ಸ್ವತಂತ್ರ ಮತ್ತು ಪ್ರಬಲ ದ್ರಾವಿಡ ಇತಿಹಾಸವು ಒಂದು ರೀತಿಯ ಅಸುರಕ್ಷತೆಯನ್ನು ತಂದೊಡ್ಡಿದೆ ಎಂಬುದು ತಮಿಳು ವಿದ್ವಾಂಸರ ಆರೋಪ.
ಲಕ್ಕುಂಡಿ ಮತ್ತು ಕೀಳಡಿಯನ್ನು ಒಟ್ಟಿಗೆ ಇಟ್ಟು ನೋಡಿದಾಗ, ಇತಿಹಾಸದ ಸಂಶೋಧನೆಯಲ್ಲೂ ರಾಜಕೀಯ ಆಯ್ಕೆಗಳು ಕೆಲಸ ಮಾಡುತ್ತಿವೆಯೇ ಎಂಬ ಪ್ರಶ್ನೆ ಮೂಡುತ್ತದೆ.
ಲಕ್ಕುಂಡಿಯ ಚಾಲುಕ್ಯ ಪರಂಪರೆಯು ಹಿಂದೂ ದೇವಾಲಯಗಳ ವಾಸ್ತುಶಿಲ್ಪದ ವೈಭವವನ್ನು ಸಾರುತ್ತದೆ. ಇದು ಪ್ರಸ್ತುತ ಆಳುವ ವ್ಯವಸ್ಥೆಯ ಸಾಂಸ್ಕೃತಿಕ ಅಜೆಂಡಾಕ್ಕೆ ಪೂರಕವಾಗಿದೆ. ಹೀಗಾಗಿ ಲಕ್ಕುಂಡಿಯ ಬಗ್ಗೆ ಇರುವ ಆಸಕ್ತಿ ಮತ್ತು ಬೆಂಬಲ ಸಹಜವಾಗಿಯೇ ಹೆಚ್ಚಿರಬಹುದು. ಆದರೆ, ಕೀಳಡಿಯು ವೈದಿಕೇತರ, ಲೌಕಿಕ ಜೀವನಶೈಲಿಯನ್ನು ಬಿಂಬಿಸುವುದರಿಂದ ಅದನ್ನು ಹತ್ತಿಕ್ಕುವ ಪ್ರಯತ್ನಗಳು ನಡೆಯುತ್ತಿರಬಹುದು.
ಕೀಳಡಿಯು ಸಿಂಧೂ ಕಣಿವೆ ನಾಗರಿಕತೆಗೂ ದಕ್ಷಿಣ ಭಾರತಕ್ಕೂ ಇರುವ ಕೊಂಡಿಯನ್ನು ಬಲಪಡಿಸುತ್ತದೆ. ಇದು ಆರ್ಯರ ಆಗಮನಕ್ಕೂ ಮುನ್ನವೇ ದಕ್ಷಿಣದಲ್ಲಿ ಪ್ರಬಲ ನಾಗರಿಕತೆ ಇತ್ತು ಎಂಬುದನ್ನು ಸಾಬೀತುಪಡಿಸುತ್ತದೆ. ಈ ಐತಿಹಾಸಿಕ ಸತ್ಯವು ‘ಒಂದೇ ರಾಷ್ಟ್ರ, ಒಂದೇ ಸಂಸ್ಕೃತಿ’ ಎಂಬ ಪ್ರತಿಪಾದನೆಗೆ ಅಡ್ಡಿಯಾಗಬಲ್ಲದು.

ಲಕ್ಕುಂಡಿಯಲ್ಲಿ ಹಳ್ಳಿಯನ್ನೇ ಸ್ಥಳಾಂತರಿಸುವ ಚರ್ಚೆ ನಡೆಯುತ್ತಿದೆ. ಅಂದರೆ ಇತಿಹಾಸವನ್ನು ಹೊರತೆಗೆಯಲು ಜನರನ್ನು ಒಪ್ಪಿಸುವ ವಿಶ್ವಾಸ ಸರ್ಕಾರಕ್ಕಿದೆ. ಆದರೆ, ಕೀಳಡಿಯಲ್ಲಿ ಸಿಕ್ಕ ಫಲಿತಾಂಶಗಳನ್ನೇ ಮುಚ್ಚಿಡುವ ಪ್ರಯತ್ನ ನಡೆಯುತ್ತಿದೆ.
ಲಕ್ಕುಂಡಿಯು ಕರ್ನಾಟಕದ ಹೆಮ್ಮೆ. ಆದರೆ, ಅದೇ ಹೊತ್ತಿನಲ್ಲಿ ಕೀಳಡಿಯ ಕತ್ತು ಹಿಸುಕುವ ಕೆಲಸವಾಗಬಾರದು. ಲಕ್ಕುಂಡಿಯಲ್ಲಿ ಇತಿಹಾಸವನ್ನು ಅಗೆದು ತೆಗೆಯುತ್ತಿರುವ ಕೈಗಳೇ, ಕೀಳಡಿಯಲ್ಲಿ ಇತಿಹಾಸವನ್ನು ಹೂಳಲು ಪ್ರಯತ್ನಿಸುತ್ತಿದ್ದರೆ ಅದು ಸಾಂಸ್ಕೃತಿಕ ದ್ರೋಹವಾಗುತ್ತದೆ.
ಇತಿಹಾಸವು ಕನ್ನಡಿಯಿದ್ದಂತೆ; ಅದು ಮುಖದ ಅಂದವನ್ನಷ್ಟೇ ಅಲ್ಲ, ವಿಕಾರವನ್ನೂ ತೋರಿಸುತ್ತದೆ. ನಮಗೆ ಬೇಕಾದ್ದನ್ನು ಮಾತ್ರ ನೋಡುತ್ತೇವೆ, ಬೇಡವಾದ್ದನ್ನು ಮರೆಮಾಚುತ್ತೇವೆ ಎನ್ನುವುದು ಬೌದ್ಧಿಕ ಅಪ್ರಾಮಾಣಿಕತೆ. ಲಕ್ಕುಂಡಿ ಮತ್ತು ಕೀಳಡಿ ಎರಡೂ ಭಾರತದ ಎರಡು ಕಣ್ಣುಗಳಾಗಬೇಕೇ ಹೊರತು, ರಾಜಕೀಯದ ದಾಳಗಳಾಗಬಾರದು.





