ದಲಿತ ಸಮುದಾಯದ ಜಕ್ಕಲಿ ಗ್ರಾಮದ ಅಂದಪ್ಪ ಮಾದರ ಮತ್ತು ಅವರ ಸ್ನೇಹಿತರ ಮೇಲೆ ನಡೆದಿರುವ ಅಮಾನವೀಯ ಹಲ್ಲೆ ಮತ್ತು ಜಾತಿ ನಿಂದನೆಯ ಘಟನೆಯನ್ನು ದಲಿತ ಮುಖಂಡರು ತೀವ್ರವಾಗಿ ಖಂಡಿಸಿದ್ದಾರೆ.
ಘಟನೆಯ ಹಿನ್ನೆಲೆಯಲ್ಲಿ ಗದಗ ಜಿಲ್ಲೆಯ ರೋಣ ಪಟ್ಟಣದ ಪೋಲಿಸ್ ಠಾಣೆ ಎದುರು ಅಂದಪ್ಪ ಮಾದರ ಮತ್ತು ಅವರ ಸ್ನೇಹಿತರ ಮೇಲೆ ನಡೆದಿರುವ ಅಮಾನವೀಯ ಹಲ್ಲೆ ಮತ್ತು ಜಾತಿ ನಿಂದನೆಯ ಘಟನೆಯನ್ನು ಖಂಡಿಸಿ ದಲಿತ ಮುಖಂಡರು ಪ್ರತಿಭಟನೆ ನಡೆಸಿದರು.
“ದಿನಾಂಕ 20/03/2026 ರಂದು ರಾತ್ರಿ ಅಂದಪ್ಪ ಮಾದರ ಅವರು ರೋಣದಿಂದ ಜಕ್ಕಲಿಗೆ ಬರುತ್ತಿದ್ದಾಗ, ಸಾರ್ವಜನಿಕ ರಸ್ತೆಯಲ್ಲಿ ಲಾರಿಗಳನ್ನು ಅಡ್ಡಗಟ್ಟಿ ಗಲಾಟೆ ಮಾಡಿದ್ದಲ್ಲದೆ, ಸ್ಥಳೀಯರಾದ ಸಂದೇಶ ಮೇಟಿ ಮತ್ತು ವೀರಭದ್ರಪ್ಪ ಗಾಣಿಗೇರ ಎಂಬುವವರು ಸೇರಿಕೊಂಡು ದಲಿತ ಯುವಕರನ್ನು ಜಾತಿ ಹಿಡಿದು ಅವಾಚ್ಯವಾಗಿ ನಿಂದಿಸಿ, ಕೊಲೆ ಬೆದರಿಕೆ ಹಾಕಿರುವುದು ಅತ್ಯಂತ ಖಂಡನೀಯ ಮತ್ತು ಕಾನೂನುಬಾಹಿರ ಕೃತ್ಯವಾಗಿದೆ” ಎಂದು ದಲಿತ ಮುಖಂಡರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
“ನರೇಗಲ್ ಪೊಲೀಸ್ ಠಾಣೆಯಲ್ಲಿ ಈ ಸಂಬಂಧ SC/ST ದೌರ್ಜನ್ಯ ತಡೆ ಕಾಯ್ದೆಯಡಿ FIR ದಾಖಲಾಗಿ ಮೂರು ದಿನಗಳಾಗುತ್ತಾ ಬಂದರೂ, ಪೊಲೀಸರು ಈವರೆಗೂ ಪ್ರಮುಖ ಆರೋಪಿಗಳನ್ನು ಬಂಧಿಸದೆ ಇರುವುದು ಹಲವು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ. ಆರೋಪಿಗಳ ಹಿಂದೆ ಎಷ್ಟೇ ಪ್ರಭಾವಿ ವ್ಯಕ್ತಿಗಳಿದ್ದರೂ ಪೊಲೀಸರು ಮುಲಾಜಿಲ್ಲದೆ ಕ್ರಮ ಕೈಗೊಳ್ಳಬೇಕು” ಎಂದು ಅವರು ಆಗ್ರಹಿಸಿದ್ದಾರೆ.
“FIR ನಲ್ಲಿ ಹೆಸರಿಸಲಾದ ಎಲ್ಲಾ ಆರೋಪಿಗಳನ್ನು ಮತ್ತು ಆ ಐದು ಲಾರಿಗಳನ್ನು ತಕ್ಷಣವೇ ವಶಕ್ಕೆ ಪಡೆಯಬೇಕು. ಸಂತ್ರಸ್ತ ಅಂದಪ್ಪ ಮಾದರ ಮತ್ತು ಸಾಕ್ಷಿಗಳಿಗೆ ಸೂಕ್ತ ಪೊಲೀಸ್ ರಕ್ಷಣೆ ನೀಡಬೇಕು. ಸಮಾಜ ಕಲ್ಯಾಣ ಇಲಾಖೆಯು ಕೂಡಲೇ ಸಂತ್ರಸ್ತರಿಗೆ ನಿಯಮಾನುಸಾರ ಪರಿಹಾರ ಧನ ಬಿಡುಗಡೆ ಮಾಡಲು ಕ್ರಮ ಕೈಗೊಳ್ಳಬೇಕು” ಎಂದು ಒತ್ತಾಯಿಸಿದರು.
ಒಂದು ವೇಳೆ ಪೊಲೀಸರು ವಿಳಂಬ ಧೋರಣೆ ಅನುಸರಿಸಿದರೆ, ಜಿಲ್ಲೆಯ ಎಲ್ಲಾ ದಲಿತ ಸಂಘಟನೆಗಳನ್ನು ಒಗ್ಗೂಡಿಸಿ ರೋಣ ತಾಲ್ಲೂಕು ಕಚೇರಿ ಹಾಗೂ ಪೊಲೀಸ್ ಠಾಣೆಯ ಮುಂದೆ ಬೃಹತ್ ಪ್ರತಿಭಟನೆ ಹಮ್ಮಿಕೊಳ್ಳಲಾಗುವುದು” ಎಂದು ಎಚ್ಚರಿಕೆ ನೀಡಿದ್ದಾರೆ.
ಪ್ರತಿಭಟನಾ ಸ್ಥಳಕ್ಕೆ ಎಡಿಷನಲ್ ಎಸ್ಪಿ ಬೇಟಿ ನೀಡಿದ್ದು ದಲಿತ ಮುಖಂಡರ ಮನವಿ ಸ್ವೀಕರಿಸಿ, “ಬೇಡಿಕೆ ಈಡೇರಿಸುವುದಾಗಿ ಭರವಸೆ ನೀಡಿದ್ದಾರೆ ಎಂದು ಪ್ರತಿಭಟನಾಕಾರರು ತಿಳಿಸಿದ್ದಾರೆ.
ಪ್ರತಿಭಟನೆಯಲ್ಲಿ ದಲಿತ ಸಂಘಟನೆಗಳ ಮುಖಂಡರು ರಮೇಶ ಕಡೆಮನಿ, ಡಿ.ಜೆ ಕಟ್ಟಿಮನಿ, ಅಭಿಷೇಕ್, ಸೋಮು ನಾಗರಾಜ, ಮಾರುತಿ ಹಾದಿಮನಿ, ಚಂದ್ರು ಹಂಚಿನಾಳ, ಮಲ್ಲು ಮಾದರ, ಸುರೇಶ ನಡುವಿನಮನಿ ನಿಂಗಪ್ಪ ಚಿಕ್ಕಮನ್ನೂರು, ಶರಣಪ್ಪ ದೊಡ್ಡಮನಿ, ಹನಮಂತ ದಾಸಲ ಸೇರೊದಂತೆ ಇನ್ನೂ ಅನೇಕರು ಪ್ರತಿಭಟನೆಯಲ್ಲಿ ಉಪಸ್ಥಿತರಿದ್ದರು.





