ಗದಗ-ಬೆಟಗೇರಿ ನಗರದ ಗ್ರಾಹಕರನ್ನು ವಂಚಿಸಿ ಎಲ್ಪಿಜಿ ಸಿಲಿಂಡರ್ ಕಾಳಸಂತೆಯಲ್ಲಿ ಮಾರಾಟ ಮಾಡುತ್ತಿರುವ ಹಾಗೂ ಸಾರ್ವಜನಿಕರಿಗೆ ವಿನಾಕಾರಣ ತೊಂದರೆ ನೀಡುತ್ತಿರುವ ಏಜೆನ್ಸಿಗಳ ವಿರುದ್ಧ ಕ್ರಮ ಕೈಗೊಂಡು ಇಂತಹ ಏಜೆನ್ಸಿಗಳ ಪರವಾನಿಗೆ ರದ್ದುಗೊಳಿಸಬೇಕೆಂದು ಒತ್ತಾಯಿಸಿ ಸ್ಲಂ ಜನಾಂದೋಲನ- ಕರ್ನಾಟಕ ಹಾಗೂ ಗದಗ ಜಿಲ್ಲಾ ಸ್ಲಂ ಸಮಿತಿಯಿಂದ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಲಾಗಿದೆ.
ಜಿಲ್ಲಾ ಸ್ಲಂ ಸಮಿತಿ ಅಧ್ಯಕ್ಷ ಇಮ್ತಿಯಾಜ್ ಆರ್ ಮಾನ್ವಿ ಮಾತನಾಡಿ, “ಗೃಹ ಬಳಕೆ ಎಲ್ಪಿಜಿ ಸಿಲಿಂಡರ್ ಕೊರತೆಯಿಂದ ರಾಜ್ಯಾದ್ಯಂತ ಗ್ಯಾಸ್ ಖರೀದಿಗೆ ಜನರು ಮುಗಿಬಿದ್ದಿದ್ದಾರೆ. ಎಲ್ಪಿಜಿ ಸಿಲಿಂಡರ್ಗಳ ಹೆಚ್ಚಿನ ಉತ್ಪಾದನೆಗೆ ಕೇಂದ್ರ ಸರ್ಕಾರದಿಂದ ಆದೇಶ ಮಾಡಲಾಗಿದೆ. 14.5 ಕೆಜಿ ಗೃಹ ಬಳಕೆಯ ಎಲ್ಪಿಜಿ ಸಿಲಿಂಡರ್ ಕಾಳಸಂತೆಯಲ್ಲಿ ಮಾರಾಟವಾಗುತ್ತಿದ್ದು, ಒಂದು ಸಿಲಿಂಡರ್ಗೆ ₹1,500 ತೆಗೆದುಕೊಳ್ಳುತ್ತಿದ್ದಾರೆಂಬ ಹಲವು ವರದಿಗಳು ಬರುತ್ತಿವೆ. ಇದರಿಂದ ಮುಂಬರುವ ದಿನಗಳಲ್ಲಿ ಅನೇಕ ಹಬ್ಬಗಳು ಇರುವುದರಿಂದ ಎಲ್ಪಿಜಿ ಸಿಲಿಂಡರ್ಗೆ ಭಾರೀ ಬೇಡಿಕೆ ಇದೆ” ಎಂದರು.
“ಗಲ್ಫ್ ರಾಷ್ಟ್ರಗಳಿಂದ ಭಾರತಕ್ಕೆ ಬರುತ್ತಿದ್ದ ಎಲ್ಪಿಜಿ ಸಿಲಿಂಡರ್ ಪೊರೈಕೆಯಲ್ಲಿ ವ್ಯತ್ಯಯವಾಗಿದೆ. ಇಂಟರ್ ಬುಕ್ಕಿಂಗ್ ಅನ್ನು 21 ದಿನದಿಂದ 25 ದಿನಕ್ಕೆ ಏರಿಸಲಾಗಿದೆ. ಈ ಮೂಲಕ ದಾಸ್ತಾನು ಕಾಳಸಂತೆಯಲ್ಲಿ ಮಾರಾಟ ಮಾಡುವುದನ್ನು ತಡೆಯಲು ಕೇಂದ್ರ ಸರ್ಕಾರ ಆದೇಶ ಹೊರಡಿಸಿದೆ. ಇಂತಹ ಸಂದರ್ಭದಲ್ಲಿಯೂ ಗದಗ-ಬೆಟಗೇರಿ ಭಾಗದ ಭಾರತ ಗ್ಯಾಸ್ ಏಜೆನ್ಸಿ ಮತ್ತು ಹಲವು ಏಜೆನ್ಸಿಗಳು ಗ್ರಾಹಕರಿಗೆ ನೀಡಬೇಕಾದ ಎಲ್ಪಿಜಿ ಸಿಲಿಂಡರ್ಗಳನ್ನು ಕಾಳಸಂತೆಯಲ್ಲಿ ಮಾರಾಟ ಮಾಡುತ್ತಿದ್ದಾರೆ” ಎಂದು ಆರೋಪಿಸಿದರು.
ಸ್ಲಂ ಸಮಿತಿ ಕಾರ್ಯದರ್ಶಿ ಅಶೋಕ ಕುಸಬಿ ಮಾತನಾಡಿ, “ನಗರದಲ್ಲಿ ಏಜೆನ್ಸಿಗಳಿಂದ ನಿರಂತರವಾಗಿ ಗ್ಯಾಸ್ ಮಾಫಿಯಾ ನಡೆಯುತ್ತಿದ್ದು, ಇದರ ಹಿಂದೆ ಒಂದು ದೊಡ್ಡ ಜಾಲವೇ ಇದೆ ಎಂಬ ಅನುಮಾನ ವ್ಯಕ್ತವಾಗಿದೆ. ಭಾರತ ಗ್ಯಾಸ್ ಏಜೆನ್ಸಿ ಕಚೇರಿಯಲ್ಲಿ ಗ್ರಾಹಕರಿಗೆ ಸರಿಯಾದ ಮಾಹಿತಿ ನೀಡುವುದಿಲ್ಲ. ಗ್ರಾಹಕರು ತಮ್ಮ ಗ್ಯಾಸ್ ಬುಕ್ ಮಾಡಿರುವ ಬಗ್ಗೆ ಹಾಗೂ ಗ್ಯಾಸ್ ವಿತರಿಸಲು ತಡವಾಗಿರುವ ಬಗ್ಗೆ ಇನ್ನು ಹಲವು ಸಮಸ್ಯೆಗಳ ಬಗ್ಗೆ ಕಚೇರಿಯಲ್ಲಿರುವ ಲ್ಯಾಂಡ್ ಲೈನ್ ಫೋನಿಗೆ ಕರೆ ಮಾಡಿದರೆ, ಕಚೇರಿಯ ಸಿಬಂದಿಗಳು ಕರೆಯನ್ನು ಸ್ವಿಕರಿಸದೆ ಗ್ರಾಹಕರಿಗೆ ಸಾಕಷ್ಟು ತೊಂದರೆಗಳನ್ನು ನೀಡುತ್ತಿದ್ದಾರೆ” ಎಂದು ಆಕ್ರೋಶ ವ್ಯಕ್ತಪಡಿಸಿದರು.
“ನಗರದಲ್ಲಿ ಹಗಲು ದರೋಡೆಗೆ ನಿಂತಿರುವ ಭಾರತ ಗ್ಯಾಸ್ ಏಜೆನ್ಸಿ ಸಿಬ್ಬಂದಿಗಳು ಕಂಪನಿಯ ನಿಗದಿತ ಬೆಲೆಗಿಂತ ಹೆಚ್ಚಿನ ಹಣವನ್ನು ವಸೂಲಿ ಮಾಡುತ್ತಿದ್ದಾರೆ. ಇಂತಹ ಏಜೆನ್ಸಿಗಳ ಮೇಲೆ ಕ್ರಮ ಕೈಗೊಂಡು ಏಜೆನ್ಸಿಯ ಪರವಾನಿಗೆ ರದ್ದು ಮಾಡಬೇಕು” ಎಂದು ಆಗ್ರಹಿಸಿದರು.
ಈ ಸುದ್ದಿ ಓದಿದ್ದೀರಾ? ಮಂಗಳೂರು | ಲೈಂಗಿಕ ಕಿರುಕುಳ ಆರೋಪ: ಪೊಲೀಸ್ ಇನ್ಸ್ಪೆಕ್ಟರ್ ವಿರುದ್ಧ ತನಿಖೆಗೆ ಆದೇಶ
ಮಹಿಳಾ ಸಮಿತಿ ಅಧ್ಯಕ್ಷೆ ಪರ್ವೀನ್ ಬಾನು ಹವಾಲ್ದಾರ ಮಾತನಾಡಿ, “ಕೇಂದ್ರ ಸರ್ಕಾರ ಅಡುಗೆ ಅನಿಲ ದರವನ್ನು ಹೆಚ್ಚಿಸುವುದರಿಂದ ನಿರಂತರ ಬೆಲೆ ಏರಿಕೆ ಮತ್ತು ಕುಗ್ಗುತ್ತಿರುವ ನೈಜ್ ಆದಾಯದಿಂದ ತತ್ತರಿಸುತ್ತಿರುವ ಮಧ್ಯಮ ವರ್ಗ ಹಾಗೂ ದುಡಿಯುವ ಜನರ ಮೇಲೆ ಇನ್ನಷ್ಟು ಹೊರೆಗಳನ್ನು ಹೇರಿದಂತಾಗಿದೆ” ಎಂದರು.
ಈ ಸಂದರ್ಭದಲ್ಲಿ ಸ್ಲಂ ಸಮಿತಿ ಕಾರ್ಯದರ್ಶಿ ಅಶೋಕ ಕುಸಬಿ, ಮುಖಂಡರಾದ ಇಬ್ರಾಹಿಂ ಮುಲ್ಲಾ, ಶರಣಪ್ಪ ಸೂಡಿ, ಮೌಲಾಸಾಬ ಗಚ್ಚಿ, ಮೆಹಬೂಬಸಾಬ ಬಳ್ಳಾರಿ, ಪುಷ್ಪಾ ಬಿಜಾಪೂರ, ವಿಶಾಲಕ್ಷಿ ಹಿರೇಗೌಡ್ರ, ಮಕ್ತುಮಸಾಬ ಮುಲ್ಲಾನವರ, ಶಂಕ್ರಪ್ಪ ರೋಣದ, ಆನಂದಪ್ಪ ಮೂಲಿಮನಿ ಸೇರಿದಂತೆ ಇತರರು ಇದ್ದರು.





