ಮೆಕ್ಕೆಜೋಳ ಖರೀದಿ ಕೇಂದ್ರದಿಂದ ರೈತರಿಗೆ ಯಾವುದೇ ಉಪಯೋಗವಾಗಿಲ್ಲ. ಸರ್ಕಾರವು ಕಾಟಾಚಾರಕ್ಕೆ ಮೆಕ್ಕೆಜೋಳ ಖರೀದಿ ಕೇಂದ್ರ ಆರಂಭಿಸುವುದಾಗಿ ಹೇಳಿದೆ. ಆದರೆ ಸಮರ್ಪಕವಾಗಿ ಅನುಷ್ಠಾನವಾಗಿಲ್ಲ ಎಂದು ಸಮಗ್ರ ರೈತಪರ ಹೋರಾಟ ವೇದಿಕೆ ಅಧ್ಯಕ್ಷ ಮಂಜುನಾಥ ಮಾಗಡಿ ಆರೋಪಿಸಿದರು.
ಗದಗ ಜಿಲ್ಲೆಯ ಲಕ್ಷ್ಮೇಶ್ವರ ಪಟ್ಟಣದ ಪೂರ್ಣಾಜಿ ಕರಾಟೆ ಅವರ ಮಿಲ್ಲಿನಲ್ಲಿ ನಡೆದ ರೈತಪರ ಹೋರಾಟದ ಸಭೆಯಲ್ಲಿ ಮಾತನಾಡಿದ ಅವರು, “ರೈತರು ಬೆಳೆದ ಎಲ್ಲ ಮೆಕ್ಕೆಜೋಳವನ್ನು ಖರೀದಿಸಲು ಜಿಲ್ಲಾಧಿಕಾರಿ ಕ್ರಮ ವಹಿಸದಿದ್ದರೆ ರೈತರು ಮತ್ತೆ ಬೀದಿಗಿಳಿದು ಹೋರಾಟ ಮಾಡಬೇಕಾಗುತ್ತದೆ” ಎಂದು ಎಚ್ಚರಿಕೆ ನೀಡಿದರು.
ರೈತ ಮುಖಂಡ ರವಿಕಾಂತ ಅಂಗಡಿ ಮಾತನಾಡಿ, “ರೈತರು ಬೆಳೆದ ಬೆಳೆಗೆ ಯೋಗ್ಯ ಬೆಲೆ ಸಿಗಬೇಕೆಂಬ ಉದ್ದೇಶದಿಂದ ಕೇಂದ್ರ ಸರ್ಕಾರ ಬೆಂಬಲ ಬೆಲೆ ನಿಗದಿಪಡಿಸಿದೆ. ರಾಜ್ಯದಲ್ಲಿ ಈ ವರ್ಷ ರೈತರು ಅತಿ ಹೆಚ್ಚಿನ ಪ್ರಮಾಣದಲ್ಲಿ ಮೆಕ್ಕೆಜೋಳ ಬೆಳೆದಿದ್ದಾರೆ. ಹೀಗಾಗಿ, ಬೆಲೆ ಕುಸಿತವಾಗಿದೆ” ಎಂದರು.
“ಲಕ್ಷ್ಮೇಶ್ವರ ಪಟ್ಟಣದಲ್ಲಿ ಬೆಂಬಲ ಬೆಲೆಯೊಂದಿಗೆ ಮೆಕ್ಕೆಜೋಳ ಖರೀದಿ ಕೇಂದ್ರ ಆರಂಭಿಸುವಂತೆ ಆಗ್ರಹಿಸಿ 18 ದಿನಗಳ ಹೋರಾಟ ನಡೆಸಲಾಯಿತು. ಸರ್ಕಾರದ ಗಮನ ಸೆಳೆದ ನಂತರ ಖರೀದಿ ಕೇಂದ್ರ ಆರಂಭಿಸಲು ಅನುಮತಿ ದೊರೆಯಿತು. ಆದರೆ, ಈ ವ್ಯವಸ್ಥೆ ಸಮರ್ಪಕವಾಗಿಲ್ಲ” ಎಂದು ಕಿಡಿಕಾರಿದರು.
“ಸರ್ಕಾರದ ದೋರಣೆಯಿಂದಾಗಿ ಸಾವಿರಾರು ರೈತರು ಬೆಳೆದಿರುವ ಬೆಳೆಗೆ ಬೆಂಬಲ ಬೆಲೆ ಸಿಗುತ್ತಿಲ್ಲ. ಹೋರಾಟ ನಿಲ್ಲಿಸಿದ ನಂತರ ಸರ್ಕಾರಿ ಅಧಿಕಾರಿಗಳು ಹಾಗೂ ಖರೀದಿ ಕೇಂದ್ರದ ಅಧಿಕಾರಿಗಳು ಇಷ್ಟಬಂದಂತೆ ಮೆಕ್ಕೆಜೋಳ ಖರೀದಿ ರೈತರಿಗೆ ಅನ್ಯಾಯ ಮಾಡುತ್ತಿದ್ದಾರೆ” ಎಂದು ರವಿಕಾಂತ ಅಂಗಡಿ ಹೇಳಿದರು.
“ಮೆಕ್ಕೆಜೋಳ ಖರೀದಿಗೆ ನೋಂದಣಿ ಮಾಡಿಸುವುದನ್ನು ಸ್ಥಗಿತಗೊಳಿಸಲಾಗಿದ್ದು, ಇದನ್ನು ಪುನರಾರಂಭಿಸಬೇಕು. ಈಗಾಗಲೇ ನೋಂದಣಿ ಮಾಡಿರುವ ಎಲ್ಲ ರೈತರ ಪೂರ್ತಿ ಮೆಕ್ಕೆಜೋಳವನ್ನು ಖರೀದಿಸಬೇಕು. ಈ ಬಗ್ಗೆ ಸರ್ಕಾರ ಆದೇಶ ಹೊರಡಿಸಬೇಕು” ಎಂದು ಆಗ್ರಹಿಸಿದರು.
ಈ ವೇಳೆ ಮುಖಂಡರಾದ ಪೂರ್ಣಾಜಿ ಕರಾಟೆ, ನಾಗರಾಜ ಚಿಂಚಲಿ, ಚನ್ನಪ್ಪ ಷಣ್ಮುಖಿ, ಸೋಮಣ್ಣ ಡಾಣಗಲ್ಲ, ಹೊನ್ನಪ್ಪ ವಡ್ಡರ, ಸುರೇಶ ಹಟ್ಟಿ, ಟಾಕಪ್ಪ ಸಾತಪೂತೆ, ಗುರಪ್ಪ ಮುಳಗುಂದ. ಖಾನಸಾಬ್ ಸೂರಣಗಿ, ಪ್ರಕಾಶ ಕೊಂಚಿಗೇರಿಮಠ ಇದ್ದರು.
ಈ ಸುದ್ದಿ ಓದಿದ್ದೀರಾ? ಚಿಕ್ಕಮಗಳೂರು l ಮಲೆನಾಡಿನಲ್ಲಿ ಮಂಗಗಳ ಹಾವಳಿ; ಬೇಸತ್ತ ರೈತರು
ಕೇಂದ್ರ ಸರ್ಕಾರ ಘೋಷಿಸಿದ ಕನಿಷ್ಠ ಬೆಂಬಲ ಬೆಲೆ (MSP ₹2,400/ಕ್ವಿಂಟಲ್)ಯನ್ನು ಖಾತರಿಪಡಿಸಲು ರಾಜ್ಯ ಸರ್ಕಾರ ಖರೀದಿ ಕೇಂದ್ರಗಳನ್ನು ತೆರೆಯುವುದಾಗಿ ಘೋಷಿಸಿದ್ದರೂ, ಅನುಷ್ಠಾನದಲ್ಲಿ ತೀವ್ರ ವಿಳಂಬ, ಮಿತಿ ನಿಯಮಗಳು ಮತ್ತು ಸ್ಥಳೀಯ ಮಟ್ಟದಲ್ಲಿ ಕೇಂದ್ರಗಳು ಸರಿಯಾಗಿ ಕಾರ್ಯಾರಂಭ ಮಾಡದಿರುವುದು ರೈತರನ್ನು ಆತಂಕಕ್ಕೆ ದೂಡಿದೆ. ಅಲ್ಲದೆ ಮಾರುಕಟ್ಟೆಯಲ್ಲಿ ಕಡಿಮೆ ಬೆಲೆಗೆ(₹1,800-1,900) ಮಾರಾಟ ಮಾಡುವಂತಾಗಿದೆ. ಸರ್ಕಾರಿ ಯೋಜನೆಗಳು ಕಾಗದದ ಮೇಲೆಯೇ ಸೀಮಿತವಾಗಿ ಉಳಿದಿರುವುದು ರೈತರ ನಿರಾಶೆಗೆ ಮೂಲ ಕಾರಣವಾಗಿದೆ. ಇದರಿಂದ ರೈತರು ಮತ್ತೊಮ್ಮೆ ಹೋರಾಟ ಮಾಡುವಂತಾಗಿದ್ದು, ತುರ್ತಾಗಿ ಪೂರ್ಣ ಪ್ರಮಾಣದ ಖರೀದಿ, ಮಿತಿ ತೆರವು ಮತ್ತು ಸಮಯೋಚಿತ ಅನುಷ್ಠಾನದ ಅಗತ್ಯವಿದೆ. ಇಲ್ಲದಿದ್ದರೆ ರೈತರ ಸಂಕಷ್ಟ ಇನ್ನಷ್ಟು ಉಲ್ಬಣಗೊಳ್ಳಲಿದೆ. ಬೆಂಬಲ ಬೆಲೆಯಲ್ಲಿ ಖರೀದಿ ಕೇಂದ್ರ ತೆರೆಯುವ ಸರ್ಕಾರದ ಉದ್ದೇಶ ಉತ್ತಮವಾಗಿದ್ದರೂ, ಕಾರ್ಯರೂಪಕ್ಕೆ ಬಾರದಿರುವುದು ದುರದೃಷ್ಟಕರ.





