ಪರಿಶಿಷ್ಟ ಜಾತಿ/ಪರಿಶಿಷ್ಟ ಪಂಗಡಗಳ ಕಾಲೋನಿಗಳು ಅಂದ್ರೇನೆ ಅಧಿಕಾರಿಗಳಿಗೆ ಬೇಜವಾಬ್ದಾರಿ… ಶೌಚಾಲಯ ಇಲ್ಲದ ಕಾಲೋನಿಯಲ್ಲಿ ಮಹಿಳೆಯರು ತಮ್ಮ ಸುರಕ್ಷತೆಗಾಗಿ ತಗಡುಗಳನ್ನೇ ಆಸರೆಯಾಗಿ ಅವಲಂಬಿಸಿದ್ದಾರೆ. ಇಲ್ಲಿಯ ಜನರ ಸಮಸ್ಯೆಗಳು ಕಣ್ಣಿಗೆ ಕಂಡರೂ ನೋಡದ ಹಾಗೆ, ಕೇಳಿದರೂ ಕೇಳದ ಹಾಗೆ ವರ್ತಿಸುವ ಜನಪ್ರತಿನಿಧಿಗಳಿಗೆ, ಅಧಿಕಾರಿಗಳಿಗೆ ಜನರ ಮೇಲೆ ಕಿಂಚಿತ್ತೂ ಕಾಳಜಿ ಇಲ್ಲದೇ, ಬೇಜವಾಬ್ದಾರಿಯಿಂದ ವರ್ತಿಸುತ್ತಿರುವುದು ನಾಚಿಕೆಗೇಡಿನ ಸಂಗತಿ.
ಗದಗ ಜಿಲ್ಲೆಯಲ್ಲಿ ಗಜೇಂದ್ರಗಡ ಪಟ್ಟಣದ ಡಾ. ಬಿ ಆರ್ ಅಂಬೇಡ್ಕರ್ ನಗರದಲ್ಲಿ ಪರಿಶಿಷ್ಟ ಜಾತಿ/ಪರಿಶಿಷ್ಟ ಪಂಗಡಗಳ ಸುಮಾರು 150ರಿಂದ 200 ಮನೆಗಳಿವೆ. ಎರಡು ಸಾವಿರಕ್ಕೂ ಹೆಚ್ಚು ಜನರು ವಾಸವಿದ್ದು, ಸುಮಾರು ವರ್ಷಗಳಿಂದ ವಾಸ ಮಾಡುತ್ತಿದ್ದಾರೆ. ಇಲ್ಲಿ ಸರಿಯಾದ ಮೂಲಭೂತ ಸೌಕರ್ಯಗಳ ಕೊರತೆಯಿಂದ ಜನರು ನರಕಯಾತನೆ ಅನುಭವಿಸುತ್ತಿದ್ದಾರೆ. ಸಮಸ್ಯೆಗಳಿಗೆ ತುತ್ತಾಗುತ್ತಿದ್ದಾರೆ. ಸ್ವಚ್ಛತೆ ಮರೀಚಿಕೆಯಾಗಿದೆ. ಚರಂಡಿಯ ಗಬ್ಬುನಾತ, ಶೌಚಾಲಯ ಇಲ್ಲದೇ ಮಹಿಳೆಯರ ಪಾಡು ಹೇಳದಂತಾಗಿದೆ. ಈ ಎಲ್ಲ ಸಮಸ್ಯೆಗಳ ಕುರಿತು ಅಧಿಕಾರಿಗಳ ಗಮನಕ್ಕೆ ತಂದರೂ ಕೂಡ ಯಾವುದೇ ಪ್ರಯೋಜನವಾಗಿಲ್ಲವೆಂದು ಸ್ಥಳೀಯರು ಹೇಳುತ್ತಾರೆ.
“ಈ ಪ್ರದೇಶದಲ್ಲಿ ದೊಡ್ಡದಾದ ಚರಂಡಿ ಇದ್ದು, ಸ್ವಚ್ಛಗೊಳಿಸದೇ ಎಷ್ಟೋ ವರುಷಗಳಾಗಿವೆ. ನಿತ್ಯ ಬೆಳಗಾದರೆ ಕಾಲೋನಿಯ ಜನರು ಗಬ್ಬುನಾತ ತಾಳಲಾರದೆ ಮೂಗು ಮುಚ್ಚಿಕೊಂಡು ನಡೆದಾಡುವ ಪರಿಸ್ಥಿತಿ ಎದುರಾಗಿದೆ. ಚರಂಡಿಯ ಗಬ್ಬುನಾತದ ಜತೆಗೆ ಹಂದಿಯ ಕಾಟ, ಸೊಳ್ಳೆಗಳು ಕಾಟ ಅಧಿಕವಾಗಿದ್ದು, ಇದರಿಂದಾಗಿ ಅನಾರೋಗ್ಯದಲ್ಲಿ ಏರುಪೇರಾಗಿತ್ತಿದೆ. ಮಳೆಗಾಲದಲ್ಲಿ ಶಿವಾಜಿಪೇಟೆಯಿಂದ ಬರುವ ಸಾಕಷ್ಟು ನೀರು ಈ ಚರಂಡಿಗೆ ಸೇರುವುದರಿಂದ ಚರಂಡಿಯಲ್ಲಿದ್ದ ನೀರು, ಹೊಲಸು ರಸ್ತೆಯ ಮೇಲೆ ಹರಿಯತ್ತದೆ. ಇದರಿಂದ ಇಲ್ಲಿಯ ಜನರು ಹಲವಾರು ಸಮಸ್ಯೆ ಎದುರಿಸುತ್ತಿದ್ದಾರೆ. ಇಷ್ಟಾದರೂ ಯಾರೊಬ್ಬ ಅಧಿಕಾರಿಗಳೂ ಕೂಡ ಈ ಬಗ್ಗೆ ಕಾಳಜಿ ವಹಿಸಿಲ್ಲ” ಎಂದು ಜನರು ಆಕ್ರೋಶ ವ್ಯಕ್ತಪಡಿಸಿದರು.

ಮಹಿಳೆಯರ ಸುರಕ್ಷತೆಗೆ ತಗಡುಗಳೇ ಆಸರೆ: ಶೌಚಾಲಯ ಇಲ್ಲದೇ ಕಾಲೋನಿಯ ಮಹಿಳೆಯರು ಚರಂಡಿಯ ದಡದಲ್ಲಿಯೇ ಶೌಚಕ್ಕೆ ಹೋಗುವ ಪರಿಸ್ಥಿತಿ ಎದುರಾಗಿದ್ದು, ಸಾರ್ವಜನಿಕರಿಂದ ಮುಜುಗರಕ್ಕೆ ಒಳಗಾಗುತ್ತಿದ್ದರು. ಈ ಹಿನ್ನೆಲೆಯಲ್ಲಿ ಕಾಲೋನಿಯ ಮಹಿಳೆಯರು ತಮ್ಮ ಸುರಕ್ಷತೆಗೆ ತಾವೇ ಒಟ್ಟುಗೂಡಿ ಹಣ ಸೇರಿಸಿ ಸುತ್ತಲೂ ತಗಡುಗಳನ್ನು ಹಾಕಿದ್ದಾರೆ. ಈಗ ಮಹಿಳೆಯರ ಸುರಕ್ಷತೆಗೆ ತಗಡುಗಳೇ ಆಸರೆಯಾಗಿವೆ.
ಪುರಸಭೆಯಿಂದ ಎರಡು ಶೌಚಾಲಯ ಇದ್ದು, ಶಿಥಲೀಕರಣಗೊಂಡು ಬಂದ್ ಆಗಿವೆ. ಪಕ್ಕದಲ್ಲಿಯೇ ಮೂರು ವರ್ಷಗಳ ಹಿಂದೆ ಹೊಸ ಶೌಚಾಲಯ ನಿರ್ಮಾಣ ಮಾಡಿದ್ದು, ಸಿಬ್ಬಂದಿ ಇಲ್ಲವೆಂಬ ನೆಪವೊಡ್ಡಿ ಆರಂಭಿಸಿಯೇ ಇಲ್ಲ, ಹಾಗಾಗಿ ಕಾಲೋನಿಯ ಮಹಿಳೆಯರು, “ಶೌಚಾಲಯಕ್ಕೆ ಮೂಲಸೌಕರ್ಯಗಳನ್ನು ಒದಗಿಸಿ ಸಮಾಧಾನದಿಂದ ಶೌಚಕ್ಕೆ ಅವಕಾಶ ಮಾಡಿಕೊಡಬೇಕು” ಎಂದು ಒತ್ತಾಯಿಸಿದ್ದಾರೆ.

ಶುದ್ಧ ನೀರಿನ ಘಟನೆ ಆರಂಭಗೊಂಡಿಲ್ಲ: ಕಾಲೋನಿಯಲ್ಲಿ ಸುಮಾರು ಎಂಟು ವರ್ಷಗಳ ಹಿಂದೆಯೇ ಶುದ್ಧ ನೀರಿಗಾಗಿ ಶುದ್ಧ ಕುಡಿಯುವ ನೀರಿನ ಘಟಕ ನಿರ್ಮಾಣ ಮಾಡಿದರು. ಅಲ್ಲಿಂದ ಇಲ್ಲಿಯವರೆಗೂ ಆರಂಭವೇ ಆಗಿಲ್ಲ. ಇನ್ನೊಂದು ಕಾಲೋನಿಗೆ ಹೋಗಿ ಕುಡಿಯುವ ನೀರನ್ನು ತರುವಂತಾಗಿದೆ ಎಂಬುದು ಸ್ಥಳೀಯರ ಅಳಲಾಗಿದೆ.
ಹದಗೆಟ್ಟ ರಸ್ತೆ: ಅಂಬೇಡ್ಕರ್ ನಗರದ ರಸ್ತೆಗಳು ಹದಗೆಟ್ಟಿವೆ. ಮಳೆಯಾದರೆ ರಸ್ತೆಯುದ್ಧಕ್ಕೂ ಕೆಸರಾಗುತ್ತೆ. ವಾಹನ ಸವಾರರು ಬೀಳುವ ಭಯದಲ್ಲಿಯೇ ಸಂಚಾರ. ಇಲ್ಲಿಯ ಜನರು ಕೂಡಲೇ ರಸ್ತೆಗೆ ಕಾಂಕ್ರೀಟ್ ರಸ್ತೆ ಹಾಕಬೇಕು ಎಂದು ಮನವಿ ಮಾಡಿದರು.

ಈ ಕುರಿತು ಈದಿನ.ಕಾಮ್ ಜೊತೆಗೆ ಮಾತನಾಡಿದ ಡಾ. ಬಿ ಆರ್ ಅಂಬೇಡ್ಕರ್ ನಗರದ ನಿವಾಸಿ ಸಂಕಮ್ಮ ಕಂದಗಲ್ ಮಾತನಾಡಿ, “ನಮಗೆ ಮನೆ ಇಲ್ಲ. ಗಟಾರ ದಂಡೆಯ ಮೇಲೆಯೇ ಗುಡಿಸಲು ಹಾಕಿಕೊಂಡು ವಾಸ ಮಾಡ್ತಿದ್ದೀವಿ. ಗಟಾರ ಗಬ್ಬುನಾರುತ್ತಿದೆ. ಮಕ್ಕಳಿಗೆ ಅನಾರೋಗ್ಯ ತಪ್ಪುತ್ತಿದೆ. ನಮಗ ಗಟಾರ, ಶೌಚಾಲಯ ಮಾಡಿಸಿ ಕೊಡ್ರಿ ಪುಣ್ಯ ಬರತೈತಿ” ಎಂದು ಕೋರಿದರು.
ಈ ದಿನ.ಕಾಮ್ ಜತೆಗೆ ಸಿಐಟಿಯು ಸದಸ್ಯ ಕನಕರಾಯ ಹಾದಿಮನಿ ಮಾತನಾಡಿ, “ಸುಮಾರು ವರ್ಷಗಳಿಂದ ನಮ್ಮ ನಗರದಲ್ಲಿ ಮೂಲಭೂತ ಸಮಸ್ಯೆಗಳು ಅದಾವ್. ಚರಂಡಿ, ಮಹಿಳೆಯರಿಗೆ ಶೌಚಾಲಯ ಸಮಸ್ಯೆ, ರಸ್ತೆ ಸಮಸ್ಯೆಗಳಿವೆ. ಯಾವ ಅಧಿಕಾರಿಯೂ ನಮ್ಮ ಸಮಸ್ಯೆ ಕೇಳುತ್ತಿಲ್ಲ. ಬರ್ತಾರ ಹೋಗ್ತಾರ, ಸಮಸ್ಯೆಗಳನ್ನು ಬಗೆಹರಿಸುತ್ತಿಲ್ಲ” ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಇದನ್ನೂ ಓದಿದ್ದೀರಾ? ಚಾಮರಾಜನಗರ | ಸರ್ವರ ಸಹಕಾರದೊಂದಿಗೆ ಸ್ವಾತಂತ್ರ್ಯ ದಿನಾಚರಣೆ : ಟಿ ಜವರೇಗೌಡ
ಈ ಕುರಿತು ಈದಿನ.ಕಾಮ್ ಫೋನ್ ಮೂಲಕ ಗಜೇಂದ್ರಗಡ ಪುರಸಭೆ ಮುಖ್ಯ ಅಧಿಕಾರಿ ಬಸವರಾಜ ಬಳಗಾನೂರು ಅವರನ್ನು ಸಂಪರ್ಕಿಸಿದಾಗ, “ಚರಂಡಿ ದುರಸ್ಥಿಗೊಳಿಸಲು ಅನುದಾನ ಬಂದಿದ್ದು, ಕೂಡಲೇ ಸರಿಪಡಿಸುತ್ತೇವೆ. ಶುದ್ಧ ನೀರಿನ ಘಟಕ ಹಾಗೂ ಮಹಿಳೆಯರಿಗೆ ಶೌಚಾಲಯಗಳು ಈಗಾಗಲೇ ನಿರ್ಮಾಣವಾಗಿದ್ದು, ಅವುಗಳನ್ನು ಕೂಡಲೇ ಆರಂಭಿಸುತ್ತೇವೆ” ಎಂದು ಹೇಳಿದರು.
ಡಾ. ಬಿ ಆರ್ ಅಂಬೇಡ್ಕರ್ ನಗರದ ಕಾಲೋನಿಯಲ್ಲಿ ವಾಸಿಸುವ ಪರಿಶಿಷ್ಟ ಜಾತಿ/ಪರಿಶಿಷ್ಟ ಪಂಗಡ ಜನರ ಸಮಸ್ಯೆಗಳನ್ನು ಅಧಿಕಾರಿಗಳು, ಜನಪ್ರತಿನಿದಿನಗಳು ಬಗೆಹರಿಸುತ್ತಾರೋ ಇಲ್ಲವೋ ಕಾದು ನೋಡಬೇಕಿದೆ.

ಶರಣಪ್ಪ ಎಚ್ ಸಂಗನಾಳ
ಗದಗ ಜಿಲ್ಲೆಯ ರೋಣ ತಾಲೂಕಿನ ಸವಡಿ ಗ್ರಾಮದವರು. ಕರ್ನಾಟಕ ವಿಶ್ವವಿದ್ಯಾಲಯದಿಂದ ಸ್ನಾತಕೋತ್ತರ ಪದವಿ. ಧ್ವನಿ ಶೈಕ್ಷಣಿಕ ಸಂಪನ್ಮೂಲ ಕೇಂದ್ರದಲ್ಲಿ ಒಂದಷ್ಟು ಕಾಲ ಕೆಲಸ. ಸದ್ಯ 'ಈ ದಿನ.ಕಾಮ್'ನಲ್ಲಿ ಮೀಡಿಯಾ ಕೋಆರ್ಡಿನೇಟರ್. ಓದು, ಪಕ್ಷಿ ವೀಕ್ಷಣೆ, ಕೃಷಿಯಲ್ಲಿ ಆಸಕ್ತಿ.




